ದೆಹಲಿಯಲ್ಲಿ ಚುನಾಯಿತ ಪ್ರತಿನಿಧಿಗಳಿಗಿಂತ ಲೆಫ್ಟಿನೆಂಟ್ ಗೌರ್ನರ್ ಗೆ ಪರಮಾಧಿಕಾರ ನೀಡಿರುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 11) ತಿರಸ್ಕರಿಸಿದೆ.
ಈಗಾಗಲೇ ದೆಹಲಿ ಸರ್ಕಾರ ಈ ಕುರಿತು ಅರ್ಜಿ ಸಲ್ಲಿಸಿದೆ. ಹೊಸ ಪಿಐಎಲ್ನ ಅವಶ್ಯಕತೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾ.ಪಿ.ಎಸ್.ನರಸಿಂಹ, ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಈಗಾಗಲೇ ದೆಹಲಿ ಸರ್ಕಾರ ಅರ್ಜಿ ಸಲ್ಲಿಸಿದೆ ಈಗ ನೀವೇಕೆ ಬಂದಿದ್ದು? ಎಂದು ಪ್ರಶ್ನಿಸಿ ಅರ್ಜಿದಾರರಿಗೆ ದಂಡ ಹಾಕುವುದನ್ನು ಪರಿಗಣಿಸುವುದಾಗಿ ಕೋರ್ಟ್ ಹೇಳಿದ್ದು, ಅರ್ಜಿದಾರರಾದ ವಕೀಲ ಮುಖೇಶ್ ಕುಮಾರ್ ಪಿಐಎಲ್ ಅನ್ನು ಹಿಂಪಡೆಯಲಾಗಿದೆ.
ಕೇಂದ್ರ ಸರ್ಕಾರದ ಹೊಸ ಕಾನೂನನ್ನು ಪ್ರಶ್ನಿಸಿ ಆಗಸ್ಟ್ 25 ರಂದು ದೆಹಲಿ ಸರ್ಕಾರದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವುದಾಗಿ ಹೇಳಿತ್ತು.
ದೆಹಲಿಯಲ್ಲಿ ವರ್ಗಾವಣೆ ಸೇರಿದಂತೆ ಅನೇಕ ಆಡಳಿತಾತ್ಮಕ ವಿಚಾರದಲ್ಲಿ ಕೇಂದ್ರ ಸರ್ಕಾರ ಚುನಾಯಿತ ಸರ್ಕಾರಕ್ಕಿಂತ ಲೆಫ್ಟಿನೆಂಟ್ ಗೌರ್ನರ್ಗೆ ಹೆಚ್ಚಿನ ಅಧಿಕಾರ ನೀಡುವ ಸುಗ್ರೀವಾಜ್ಞೆಯನ್ನು ಮೇ.19 ರಂದು ಹೊರಡಿಸಿತ್ತು.