ಉಡುಪಿ ಕಾಲೇಜಿನಲ್ಲಿ ತಮ್ಮ ಸಾಂವಿಧಾನಿಕ ಹಿಜಾಬ್ ಹಕ್ಕನ್ನು ಕೇಳುತ್ತಿರುವ ವಿದ್ಯಾರ್ಥಿನಿಯರಿಗೆ ಬಲಪಂಥೀಯರಿಂದ ನಿಂದನಾತ್ಮಕ ಕರೆಗಳು ಬರುತ್ತಿರುವುದಾಗಿ ವರದಿಯಾಗಿದೆ. ಹಿಜಾಬ್ ಧರಿಸಬಾರದೆಂದು ಕೇಸರಿ ಶಾಳುಗಳು ಕಾಲೆಜು ಆವರಣದೊಳಗೆ ಪ್ರತ್ಯಕ್ಷವಾದ ಬಳಿಕ ಹಿಜಾಬ್ ಹಕ್ಕು ಕೇಳಿದ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನು ವಾಟ್ಸಾಪು ಗ್ರೂಪುಗಳಲ್ಲಿ ಹಂಚುತ್ತಿರುವುದ ಬೆಳಕಿಗೆ ಬಂದಿದೆ. ಇದು ಆ ವಿದ್ಯಾರ್ಥಿನಿಯರ ಹಾಗೂ ಅವರ ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಫೆಬ್ರವರಿ 9, ಬುಧವಾರದಿಂದ ತನಗೆ ಹಲವು ಅಪರಿಚಿತ ನಂಬರ್ಗಳಿಂದ ನಿರಂತರವಾಗಿ ಫೋನ್ ಕರೆಗಳು ಬರುತ್ತಿರುವುದಾಗಿ ಹಿಜಾಬ್ ಹಕ್ಕಿನ ಪರ ಹೋರಾಟ ಮಾಡುತ್ತಿರುವ 17 ರ ಹರೆಯದ ಆಲಿಯಾ ಅಸ್ಸಾದಿ ಹೇಳಿದ್ದಾರೆ. ನಿರಂತರವಾಗಿ ಕರೆ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳಿಗೆ ತನ್ನ ಮನೆಯ ವಿಳಾಸ, ತಂದೆ-ತಾಯಿ ಹೆಸರು ಎಲ್ಲವೂ ತಿಳಿದಿದೆ. ನಮ್ಮ ವೈಯಕ್ತಿಕ ಮಾಹಿತಿಗಳನ್ನು ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಬುಧವಾರ, ಎಲ್ಲಾ ಆರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಪದವಿ ಪೂರ್ವ ಕಾಲೇಜಿನಿಂದ ಸೋರಿಕೆಯಾಗಿದ್ದವು ಎಂದು The Quint ವರದಿ ಮಾಡಿದೆ. ವಾಟ್ಸಾಪುಗಳಲ್ಲಿ ಹರಿದಾಡುತ್ತಿರುವ ವಿದ್ಯಾರ್ಥಿನಿಯರ ಕುರಿತ ಮಾಹಿತಿಗಳನ್ನು ಪರಿಶೀಲಿಸಲಾಗಿದ್ದು ಅದು ಹುಡುಗಿಯರ ಹೆಸರುಗಳು ಮತ್ತು ಫೋಟೋಗಳನ್ನು ಹೊಂದಿದೆ. ಈಗಾಗಲೇ ಹಂಚಲ್ಪಡುತ್ತಿರುವ ಪಿಡಿಎಸಫ ಮತ್ತಿತರ ಅಂಶಗಳು ಈ ಮಾಹಿತಿಗಳು ಕಾಲೇಜಿನೊಳಗಿನಿಂದಲೇ ಸೋರಿಕೆಯಾಗಿದೆ ಎಂದು ಸೂಚಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರವೇಶ ದಾಖಲೆಗಳನ್ನು ಕಾಲೇಜಿಗೆ ಮಾತ್ರ ಸಲ್ಲಿಸಲಾಗಿದೆ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ದಿ ಕ್ವಿಂಟ್ಗೆ ಸ್ಪಷ್ಟಪಡಿಸಿದ್ದಾರೆ.

ನಮ್ಮ ಮನೆಗಳಿಗೆ ಆಕ್ರಮಣ ನಡೆಯಬಹುದೇ?
ತಮ್ಮ ಮನೆಯ ವಿಳಾಸ ಹಾಗೂ ವೈಯಕ್ತಿಕ ವಿವರಗಳು ಹಂಚಿಕೆಯಾಗುತ್ತಿರುವುದರಿಂದ ಧೃತಿಗೆಟ್ಟಿರುವ ವಿದ್ಯಾರ್ಥಿನಿಯರು, ತಮ್ಮ ಮನೆಗಳಿಗೆ ದಾಳಿಯಾಗಬಹುದೇ ಎಂದ ಆತಂಕಿತರಾಗಿದ್ದಾರೆ.
ನನ್ನ ಮುಖವನ್ನು ಬಹಿರಂಗಪಡಿಸುವುದು ನನಗೆ ಸಮಾಧಾನಕರವಲ್ಲ. ಈಗಾಗಲೇ ನನ್ನ ಮುಖ ಪರಿಚಯ ಎಲ್ಲರಿಗೆ ಸಿಕ್ಕಿದೆ. ನನ್ನ ಮನೆಯ ವಿಳಾಸವೂ ಗೊತಾಗಿದೆ. ಯಾರಾದರೂ ನನ್ನನ್ನು ಗುರಿ ಮಾಡಿದರೆ ಏನುಮಾಡುವುದು ಎಂದು ಆಲಿಯಾ ಪ್ರಶ್ನಿಸಿದ್ದಾರೆ.
ಹಿಜಾಬ್ ಧರಿಸುವುದನ್ನು ಮುಂದುವರಿಸುವ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಹಜ್ರಾ ಶಿಫಾ, “ನನ್ನ ಹೆತ್ತವರಿಗೂ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುತ್ತಿವೆ. ಕರೆಗಳಿಗೆ ಉತ್ತರಿಸದಂತೆ ನಾನು ಅವರನ್ನು ಕೇಳಿದ್ದೇನೆ” ಎಂದು ತಿಳಿಸಿದ್ದಾರೆ. ಗೌಪ್ಯ ವಿವರಗಳು ಸಾರ್ವಜನಿಕರಿಗೆ ಹೇಗೆ ತಲುಪಿದವು ಎಂಬುದನ್ನು ವಿವರಿಸಬೇಕೆಂದು ವಿದ್ಯಾರ್ಥಿಗಳು ಕಾಲೇಜು ಆಡಳಿತವನ್ನು ಒತ್ತಾಯಿಸಿದ್ದಾರೆ.
ನನಗೆ ಹಾವುಗಳೆಂದರೆ ಇಷ್ಟ. ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಬೇಕೆಂಬುದು ನನ್ನ ಬಯಕೆ. ನನಗೆ ಅನಿಸುತ್ತದೆ, ಇನ್ಯಾರು ನನ್ನ ಮಹಾತ್ವಾಕಾಂಕ್ಷೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಯಾಕೆ ನಮ್ಮನ್ನು ಇಷ್ಟು ಗುರಿ ಮಾಡಲಾಗುತ್ತಿದೆ ಎಂದು ಆಲಿಯಾ ಅಸಾದಿ ಪ್ರಶ್ನಿಸಿದ್ದಾರೆ.
ಸ್ಥಳೀಯ ಶಾಸಕ ರಘುಪತಿ ಭಟ್ ವಿರುದ್ಧ ಆರೋಪ ಹೊರಿಸಿದ ಆಲಿಯಾ , ಬಿಜೆಪಿ ಶಾಸಕ ರಘುಪತಿ ಭಟ್ ಕಾಲೇಜು ಅಧಿಕಾರಿಗಳಿಗೆ ಮತ್ತು ಕೇಸರಿ ಶಾಲು ಹಾಕುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ಕೇಸರಿ ಸ್ಕಾರ್ಫ್ ಪ್ರತಿಭಟನೆಗಳನ್ನು ಬೆಂಬಲಿಸುವ ಮೂಲಕ ಹಿಜಾಬ್ಗಾಗಿ ನಮ್ಮ ಹೋರಾಟವನ್ನು ಕೋಮುವಾದಿಯಾಗಿ ಮಾಡಿದರು. ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕುವಂತೆ ಪ್ರೇರೇಪಿಸಿದರು. ಈಗ ಅವರು ಕಾಲೇಜು ಮಾತ್ರವಲ್ಲದೆ ನಮ್ಮ ಮನೆಗಳನ್ನೂ ಅಸುರಕ್ಷಿತಗೊಳಿಸಿದ್ದಾರೆ ಎಂದು ಅಸ್ಸಾದಿ ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳು ಸೋರಿಕೆಯಾದ ಕುರಿತು ಸಂಸ್ಥೆಯನ್ನು ದಿ ಕ್ವಿಂಟ್ ತಂಡ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ಸಂಸ್ಥೆಯು ನಿರಾಕರಿಸಿದೆ.
ಇನ್ನು, ಅಂಕಪಟ್ಟಿಗಳನ್ನು ಮತ್ತು ಪೋಷಕರ ಆದಾಯ ಪ್ರಮಾಣ ಪತ್ರವನ್ನು ಇಟ್ಟುಕೊಂಡು ವಿದ್ಯಾರ್ಥಿನಿಯರನ್ನು ಗುರಿ ಮಾಡಲಾಗುತ್ತಿದ್ದು, ಅದರ ಆಧಾರದ ಮೇಲೆ ಅವರನ್ನು ಅಪಮಾನಿಸಲಾಗುತ್ತಿದೆ.
ನಾವೆಲ್ಲರೂ 60% ಕ್ಕಿಂತ ಹೆಚ್ಚಿನ ಮಾರ್ಕ್ ಪಡೆದಿದ್ದರೂ ನಮ್ಮನ್ನು ಈಗ ಕಲಿಕೆಯಲ್ಲಿ ಹಿಂದೆ ಇರುವವರು ಎಂದು ಬಿಂಬಿಸಿ ಗುರಿ ಮಾಡಲಾಗುತ್ತಿದೆ. 10 ನೇ ತರಗತಿಯಲ್ಲಿ ನಾವು ಕಳಪೆ ಪ್ರದರ್ಶನ ನೀಡಿದ್ದೇವೆ ಎಂದು ನಕಲಿ ಅಂಕಪಟ್ಟಿಯನ್ನು ಹಂಚಲಾಗುತ್ತಿದೆ. ನಮ್ಮ ತರಗತಿ ಮೊಟಕುಗೊಳ್ಳುತ್ತಿರುವ ಕುರಿತು ಅವರು ಯಾಕೆ ಚಿಂತಿಸುತ್ತಿಲ್ಲ ಎಂದು ಆಲಿಯಾ ಪ್ರಶ್ನಿಸುತ್ತಾರೆ.
ವಿದ್ಯಾರ್ಥಿಗಳು ತಮ್ಮ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂದು ದಿ ಕ್ವಿಂಟ್ ಕಂಡುಹಿಡಿದಿದೆ. ಉದಾಹರಣೆಗೆ, ಮುಸ್ಕಾನ್ ಝೈನಾಬ್ ಹತ್ತನೇ ತರಗತಿಯಲ್ಲಿ 87.52 ಶೇಕಡಾವನ್ನು ಪಡೆದುಕೊಂಡಿದ್ದಾರೆ. ರೇಶಮ್ ಸಮಾಜ ವಿಜ್ಞಾನದಲ್ಲಿ 80 ಪ್ರತಿಶತ ಮತ್ತು ಒಟ್ಟಾರೆಯಾಗಿ 67.52 ಶೇಕಡಾವನ್ನು ಪಡೆದಿದ್ದಾರೆ. ಅಲಿಯಾ ಅಸ್ಸಾದಿ ಸಮಾಜ ವಿಜ್ಞಾನದಲ್ಲಿ ಶೇಕಡಾ 83 ಮತ್ತು ಒಟ್ಟಾರೆ ಶೇಕಡಾ 66.72 ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರ ಆದಾಯದ ವಿವರಗಳನ್ನು ಕೂಡಾ ಸೋರಿಕೆ ಮಾಡಲಾಗಿದೆ. ಇದು ಕಾಲೇಜಿನ ಒಳಗಿನ ಕೈವಾಡ ಇಲ್ಲದೆ ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ.
“ನನ್ನ ತಂದೆ ಒಬ್ಬರು ಆಟೋ ಚಾಲಕರು. ಮೊದಲು ಅವರು ನನ್ನನ್ನು ಶ್ರೀಮಂತಳು ಎಂದು ದೂಷಿಸಿದರು. ಈಗ ಅವರು ನಾನು ಬಡವಿ ಮತ್ತು ತೊಂದರೆ ಕೊಡುವವಳು ಎಂದು ಹೇಳುತ್ತಾರೆ,” ಅಸ್ಸಾದಿ ಹೇಳಿದ್ದಾರೆ.

ವಾರ್ಷಿಕವಾಗಿ ರೂ 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪೋಷಕರ ವಿದ್ಯಾರ್ಥಿಗಳನ್ನು ವಾಟ್ಸಾಪ್ ಫಾರ್ವರ್ಡ್ಗಳಲ್ಲಿ ನಿರ್ದಿಷ್ಟವಾಗಿ ಗುರಿಪಡಿಸಲಾಗಿದೆ. ಅವರು ನಾವು ಹಣಕ್ಕಾಗಿ ಇದನ್ನು ಮಾಡುತ್ತಿದ್ದೇವೆ ಎಂದು ಪ್ರಚಾರಿಸುತ್ತಿದ್ದಾರೆ. ನಾವು ನಮ್ಮ ನಂಬಿಕೆಗಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆಯೇ ಹೊರತು ಹಣಕ್ಕಾಗಿ ಅಲ್ಲ ಎಂದು ಶಿಫಾ ಹೇಳಿದ್ದಾರೆ.
ಈ ದ್ವೇಷ ಅಭಿಯಾನದಿಂದ ಮಾನಸಿಕವಾಗಿ ಕುಗ್ಗಿರುವುದಾಗಿ ವಿದ್ಯಾರ್ಥಿನಿಯರು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವಾಗ ಸಾಕಷ್ಟು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ನಾನು ಕಳೆದುಕೊಂಡ ಮೊದಲ ವಿಷಯವೆಂದರೆ ನನ್ನ ಮಾನಸಿಕ ಶಾಂತಿ. ನಾವು ಮಾನಸಿಕವಾಗಿ ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದೇವೆ … ನಾನು ಸಮಯವನ್ನು ಕಳೆದುಕೊಂಡೆ, ಬಹಳಷ್ಟು ಮಾಧ್ಯಮಗಳ ಬೈಟ್ಗಳನ್ನು ನೀಡಿದೆ. ನನಗೂ ನರ್ವಸ್ ಆಗಿದೆ. ಇದು ನಿಜವಾಗಿಯೂ ಕಠಿಣವಾಗಿದೆ, ” ಅಸ್ಸಾದಿ ಹೇಳಿದ್ದಾರೆ.
ಪ್ರತಿ ಬಾರಿ ಸಾರ್ವಜನಿಕವಾಗಿ ಮಾತನಾಡುವಾಗ, ಹೆಚ್ಚಿನ ವಿವಾದವನ್ನು ತಪ್ಪಿಸಲು ತನ್ನ ಮಾತುಗಳನ್ನು ಅಳೆಯುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಹೇಳುತ್ತಾಳೆ. ಆದರೆ ಕಾಲೇಜಿನಿಂದ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದು ಆಕೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
“ಈ ಸಮಸ್ಯೆಯಿಂದಾಗಿ ನಾನು ನನ್ನ ಅನೇಕ ಮುಸ್ಲಿಮೇತರ ಸ್ನೇಹಿತರನ್ನು ಕಳೆದುಕೊಂಡೆ. ಅವರು ನಮ್ಮನ್ನು ವಿರೋಧಿಸುವಂತೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅಸ್ಸಾದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನನ್ನ ಮುಸ್ಲಿಮೇತರ ಸ್ನೇಹಿತರು ನಮ್ಮನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ” ಎಂದು ಶಿಫಾ ಹೇಳಿದ್ದಾರೆ. ಅಧ್ಯಯನ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಆಕೆಗೆ ಏಕಾಗ್ರತೆ ಕಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಿಜಾಬ್ಗಾಗಿ ಹೋರಾಟದಲ್ಲಿ, ಬಹುಶಃ, ಮನೆಯಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುವುದು ವಿದ್ಯಾರ್ಥಿನಿಯರು ಅನುಭವಿಸಿದ ಅತ್ಯಂತ ಕೆಟ್ಟ ಸಂಗತಿಯಾಗಿದೆ. “ನಾನು ಬಹಳಷ್ಟು ಕಳೆದುಕೊಂಡಿದ್ದೇನೆ. ಆದರೆ ನಾನು ನನ್ನ ಹೆತ್ತವರನ್ನು ಹೆಮ್ಮೆ ಪಡಿಸಲು ಬಯಸುತ್ತೇನೆ. ನನಗೆ ಸಾಕಷ್ಟು ಮಹತ್ವಾಕಾಂಕ್ಷೆಗಳಿವೆ, ”ಎಂದು ಶಿಫಾ ಹೇಳಿದ್ದಾರೆ.
(ಮೂಲ: The Quint)