ಉಕ್ರೇನ್ ಮತ್ತು ರಷ್ಯಾದ ನಡುವೆ ಅಪಾಯಕಾರಿ ಹಂತಕ್ಕೆ ತಲುಪಿರುವ ಯುದ್ಧಕ್ಕೆ ರಾಜ್ಯದ ಹಾವೇರಿಯ ನವೀನ್ ಗ್ಯಾನಗೌಡರ ಬಲಿಯಾಗಿದ್ದಾರೆ. ಉಕ್ರೇನಿನ ಕಾರ್ಕೀವ್ ನಗರದ ಮೇಲೆ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ರಾಣಬೆನ್ನೂರು ತಾಲೂಕಿನ ಚಳಗೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಸಾವು ಕಂಡಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಗುವಿನ ವಾತಾವರಣ ಅಕ್ಷರಶಃ ಯುದ್ಧದ ಆಯಾಮ ತೆಗೆದುಕೊಂಡು ರಷ್ಯಾ ಪಡೆಗಳು ನಾಗರಿಕ ಪ್ರದೇಶಗಳ ಮೇಲೂ ಅಮಾನುಷ ದಾಳಿ ನಡೆಸಲು ಆರಂಭಿಸಿದಂದಿನಿಂದಲೇ ಶಿಕ್ಷಣಕ್ಕಾಗಿ ಅಲ್ಲಿ ಹೋದ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಅವರನ್ನು ವಾಪಸು ಕರೆಸಿಕೊಳ್ಳುವ ಕುರಿತು ದೇಶಾದ್ಯಂತ ವ್ಯಾಪಕ ಆತಂಕ ವ್ಯಕ್ತವಾಗಿತ್ತು. ಅದೇ ಹೊತ್ತಿಗೆ ಕೆಲವು ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಹೆಸರಿನಲ್ಲಿ ಭಾರತಕ್ಕೆ ವಾಪಸು ಕರೆತರಲಾಗಿದೆ. ಒಟ್ಟು ಉಕ್ರೇನಿನಲ್ಲಿರುವ 19 ಸಾವಿರ ಭಾರತೀಯ ವಿದ್ಯಾರ್ಥಿಗಳ ಪೈಕಿ ಈವರೆಗೆ ಕೇವಲ 1500 ಮಂದಿಯನ್ನು ಆಪರೇಷನ್ ಗಂಗಾ ದ ಅಡಿಯಲ್ಲಿ ವಾಪಸು ಕರೆತರಲಾಗಿದೆ.
ಇನ್ನುಳಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ಅಲ್ಲಿನ ಯುದ್ಧದ ಭೀಕರ ಪರಿಸ್ಥಿತಿಯ ನಡುವೆ ಸಹಾಯಕ್ಕಾಗಿ ಅಂಗಾಲಾಚುತ್ತಿದ್ದಾರೆ. ಭೀಕರ ಬಾಂಬ್ ದಾಳಿ ಮತ್ತು ಕ್ಷಿಪಣಿ ದಾಳಿಗಳ ನಡುವೆ ವಿದ್ಯಾರ್ಥಿಗಳು ಬಂಕರು, ಭೂಗತ ರೈಲು ನಿಲ್ದಾಣಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯುತ್ತಿದ್ದರೆ, ಇನ್ನೂ ಕೆಲವರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಬಹುತೇಕ ದೇಶಗಳು ರಷ್ಯಾದ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಿಲವು ತೆಗೆದುಕೊಂಡು ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ರಾಷ್ಟ್ರಗಳ ಬಿಗಿ ಕ್ರಮಗಳಿಗೆ ಬೆಂಬಲವಾಗಿ ನಿಂತಿರುವಾಗ ತಟಸ್ಥ ನಿಲುವು ತೆಗೆದುಕೊಳ್ಳುವ ಮೂಲಕ ಭಾರತ, ಪರೋಕ್ಷವಾಗಿ ದಾಳಿಕೋರ ರಷ್ಯಾದ ಪರ ನಿಂತಿದೆ ಎಂಬ ಉಕ್ರೇನಿ ಯೋಧರು ಮತ್ತು ಸಾರ್ವಜನಿಕರ ಆಕ್ರೋಶಕ್ಕೂ ಭಾರತೀಯ ವಿದ್ಯಾರ್ಥಿಗಳು ಈಡಾಗುತ್ತಿದ್ದು, ಜನಾಂಗೀಯ ನಿಂದನೆ, ಕಿರುಕುಳಕ್ಕೂ ಈಡಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
![](https://pratidhvani.com/wp-content/uploads/2022/03/RU-2.jpg)
ಅಂದರೆ ಭಾರತ ಸರ್ಕಾರ ಉಕ್ರೇನ್ ಮತ್ತು ರಷ್ಯಾ ಯುದ್ಧದ ವಿಷಯದಲ್ಲಿ ತೆಗೆದುಕೊಂಡ ರಾಜತಾಂತ್ರಿಕ ನಿಲುವು ಮತ್ತು ಅಮೆರಿಕ ಸೇರಿದಂತೆ ನ್ಯಾಟೋ ರಾಷ್ಟ್ರಗಳು ರಷ್ಯಾದ ಮೇಲೆ ಹೇರಿರುವ ಆರ್ಥಿಕ ದಿಗ್ಬಂಧನಕ್ಕೆ ಕೈಜೋಡಿಸದೇ ಇರುವ ನಿರ್ಧಾರಗಳು ಇದೀಗ ಯುದ್ಧ ಭೂಮಿಯಲ್ಲೂ ಮತ್ತು ಅಂತಾಷ್ಟ್ರೀಯ ಸಮುದಾಯದ ನಡುವೆಯೂ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ. ಒಂದು ಕಡೆ ಯುದ್ಧಗ್ರಸ್ತ ದೇಶದಿಂದ ತನ್ನ ನಾಗರಿಕರನ್ನು ವಾಪಸು ಕರೆಸಿಕೊಳ್ಳುವ ವಿಷಯದಲ್ಲಿ ಭಾರತ ಸರ್ಕಾರ ಉದಾಸೀನ ಧೋರಣೆಗೆ ವಿದ್ಯಾರ್ಥಿಗಳ ಜೀವ ಬಲಿಯಾಗುತ್ತಿದ್ದರೆ ಮತ್ತೊಂದು ಕಡೆ ತಟಸ್ಥ ನಿಲುವಿನ ಕಾರಣಕ್ಕೆ ದೇಶ ಭವಿಷ್ಯದಲ್ಲಿ ಎದುರಿಸಬೇಕಾಗುವ ಬಿಕ್ಕಟ್ಟುಗಳ ಕುರಿತ ಚರ್ಚೆಯೂ ನಡೆಯುತ್ತಿದೆ.
ಸರ್ಕಾರದ ವಿಳಂಬ ಮತ್ತು ಉದಾಸೀನ ಧೋರಣೆಯ ಕಾರಣಕ್ಕೆ ತಮ್ಮ ಮಕ್ಕಳು ಉಕ್ರೇನಿನ ನೆಲದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಕ್ರೋಶ ಆತಂಕಗೊಂಡಿರುವ ಪೋಷಕರಿಂದ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ರಾಷ್ಟ್ರಪತಿಗಳಿಗೆ ಆಪರೇಷನ್ ಗಂಗಾದ ಕುರಿತು ವಿವರ ನೀಡಿ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ ಎಂಬ ಭರವಸೆ ನೀಡಿದ್ದಾರೆ. ನತದೃಷ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಸಾವಿನ ಬೆನ್ನಲ್ಲೇ ಮಂಗಳವಾರ ಸಂಜೆ ಪ್ರಧಾನಿ ಮೋದಿ ಪ್ರಮುಖ ಸಚಿವರ ಸಭೆ ಕರೆದು ಉಕ್ರೇನಿನ ನೆರೆ ರಾಷ್ಟ್ರಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಕುರಿತು ಚರ್ಚಿಸಿದ್ದಾರೆ.
ಈ ನಡುವೆ ಉಕ್ರೇನ್ ಬಿಕ್ಕಟ್ಟಿನ ವಿಷಯದಲ್ಲಿ ಮೋದಿಯವರ ನಿಲುವಿನ ಬಗ್ಗೆ ಸ್ವತಃ ಅವರದೇ ಪಕ್ಷ ಬಿಜೆಪಿಯ ಹಲವು ನಾಯಕರಿಂದಲೇ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಸುಬ್ರಮಣಿಯನ್ ಸ್ವಾಮಿಯವರಂತೂ ಕಟು ವ್ಯಂಗ್ಯದ ಮಾತುಗಳಲ್ಲಿ ಮೋದಿಯವರ ವಿದೇಶಾಂಗ ನೀತಿ ಮತ್ತು ಸದ್ಯದ ಬಿಕ್ಕಟ್ಟಿನ ವಿಷಯದಲ್ಲಿ ತೆಗೆದುಕೊಂಡಿರುವ ನಿಲುವನ್ನು ಟೀಕಿಸಿದ್ದಾರೆ.
![](https://pratidhvani.com/wp-content/uploads/2022/03/RU-1.jpg)
“ಭಾರತೀಯ ನೀತಿ ನಿರೂಪಕರು ಪುಟಿನ್ ಜೊತೆ ಸತಿಸಹಗಮನ ಮಾಡಲು ತೀರ್ಮಾನಿಸಿದ್ದಾರೆಯೇ? ಪೈಶಾಚಿಕ ಶಕ್ತಿಗಳು ಹೊರಗಿನಿಂದ ದಾಳಿ ಮಾಡುತ್ತಿದ್ದ ಕಾಲದಲ್ಲಿ ಸತಿ ಸಹಗಮನವನ್ನು ಒಂದು ಮಹಾನ್ ಕಾರ್ಯವಾಗಿ ನೋಡಲಾಗುತ್ತಿತ್ತು. ಆದರೆ ಈಗ ಹಾಗಲ್ಲ. ಈಗಿನ ಮಹಿಳೆಯರು ದುರ್ಗೆ, ಸರಸ್ವತಿ, ಲಕ್ಷ್ಮಿಯರಾಗಿದ್ದಾರೆ. ಅವರು ಈಗ ಸರಿಸಮಾನರು; ಸೊತ್ತಲ್ಲ. ಹಾಗಾಗಿ ಭಾರತಮಾತೆಗೆ ಸತಿ ಸಹಗಮನ ಬೇಕಾಗಿಲ್ಲ” ಎಂದು ಮೋದಿಯವರ ನೀತಿಯನ್ನು ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದರು.
ಅಲ್ಲದೆ, “ಈಗ ಉಕ್ರೇನಿನಲ್ಲಿ ರಷ್ಯಾ ನಡೆಸುತ್ತಿರುವುದು ಸ್ಪಷ್ಟವಾಗಿ ಕಳೆದ ವರ್ಷದ ಬ್ರಿಕ್ಸ್ ರಾಷ್ಟ್ರಗಳ ದೆಹಲಿ ಘೋಷಣೆಯ ಉಲ್ಲಂಘನೆ. ಇದನ್ನು ಪುಟಿನ್ ಗೆ ಹೇಳಿ ಉಕ್ರೇನಿನಿಂದ ಕಾಲ್ತೆಗೆ ಎಂದು ಹೇಳುವ ಎದೆಗಾರಿಕೆ ಮೋದಿಯವರಿಗೆ ಇದೆಯೇ?” ಎಂದು ಸ್ವಾಮಿ ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. ಜೊತೆಗೆ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಉಕ್ರೇನ್- ರಷ್ಯಾ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ನಿಲವುಗಳನ್ನು ವಿಮರ್ಶಿಸಿದ್ದಾರೆ.
ಈ ನಡುವೆ, ಉಕ್ರೇನಿನ ನೆಲದಲ್ಲಿ ಭಾರತದ ವಿದ್ಯಾರ್ಥಿಗಳು ಜೀವ ಬಿಡುತ್ತಿದ್ದರೆ, ವಿದೇಶಾಂಗ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಕೊಯಮತ್ತೂರಿನ ವಿವಾದಿತ ಧಾರ್ಮಿಕ ಮುಖಂಡ ಸದ್ಗುರು ಅವರ ಇಷಾ ಫೌಂಡೇಷನ್ ನ ಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿರುವ ಬಗ್ಗೆಯೂ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯರ ರಕ್ಷಣೆಯ ವಿಷಯದಲ್ಲಿ ಸಕಾಲಿಕ ಮತ್ತು ಜಾಣ್ಮೆಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದ ಮತ್ತು ಅಂತಹ ಯಡವಟ್ಟಿನ ಕಾರಣಕ್ಕೆ ಅಮಾಯಕ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಹಾಗೇ ಚುನಾವಣಾ ಪ್ರಚಾರದಲ್ಲಿ ಮೈಮರೆತ ಮೋದಿ ಮತ್ತು ಅವರ ಸರ್ಕಾರವೇ ಈ ವಿದ್ಯಾರ್ಥಿಗಳ ಸಾವು ಮತ್ತು ನೋವಿಗೆ ಕಾರಣ. ಆದರೆ, ಅಂತಹ ತನ್ನ ಹೊಣೆಗೇಡಿತನವನ್ನು ಮರೆಮಾಚಲು ಒಂದೆರಡು ಸಾವಿರ ವಿದ್ಯಾರ್ಥಿಗಳನ್ನು ವಾಪಸು ಕರೆತಂದಿರುವುದನ್ನೇ ಐತಿಹಾಸಿಕ ಸಾಧನೆ ಎಂಬಂತೆ ಬಿಂಬಿಸುವ ನಾಚಿಕೆಗೇಡಿನ ಪ್ರಚಾರಪ್ರಿಯತೆ ತೋರುತ್ತಿರುವ ಬಗ್ಗೆಯೂ ಪ್ರಶ್ನೆಗಳು, ಆಕ್ರೋಶ ಕೇಳಿಬರತೊಡಗಿದೆ.