ಶ್ರೀಲಂಕಾದ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಭಾರತಕ್ಕೆ ಪಾಠವಿದೆ ಎಂಬರ್ಥದಲ್ಲಿ ಕಾಂಗ್ರೆಸ್ ವಕ್ತಾರ, ಎಂಎಲ್ಸಿ ಪ್ರಕಾಶ್ ರಾಥೋಡ್ ಹೇಳಿದ್ದಾರೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ ಎಂದು ಹೇಳಿದ ರಾಥೋಡ್, ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಥೋಡ್, “ಕೇವಲ 2 ವರ್ಷದಲ್ಲಿ ದೇಶದ ಸ್ಥಿತಿ ಉಲ್ಟಾ ಆಗಿದೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ. ಭಾರತವೂ ಹಣದುಬ್ಬರ-ಬೆಲೆ ಏರಿಕೆಯ ಪಾತಾಳಕ್ಕೆ ಜಾರುತ್ತಾ ಕೋಮುದಳ್ಳುರಿ ಹೆಚ್ಚುತ್ತಿದೆ.” ಎಂದು ಟ್ವೀಟ್ ಮಾಡಿದ್ದಾರೆ.
“ದೇಶ ಬೆಲೆ ಏರಿಕೆ-ಹಣದುಬ್ಬರ-ಉದ್ಯಮಗಳ ಪಲಾಯನ-ದೇಶದ ಆಸ್ತಿಗಳ ಮಾರಾಟ-ಆದಾಯಕ್ಕಿಂತ ಸಾಲದ ಮೊತ್ತ ಹೆಚ್ಚಳ-ದೇಶದ ಜನ ಬಡವರಾಗುತ್ತಾ ಕೆಲವೇ ಉದ್ಯಮಿಗಳು ದೇಶದ ಆಸ್ತಿ ಖರೀದಿಸುತ್ತಾ ವಿಶ್ವ ಶ್ರೀಮಂತರ ಪಟ್ಟಿಗೆ ಸೇರುತ್ತಾ ಹೋದರು. ಆಡಳಿತ ಪಕ್ಷ ಆರ್ಥಿಕವಾಗಿ ಶ್ರೀಲಂಕಾ ದೇಶವನ್ನು ದಿವಾಳಿ ಮಾಡಿದ ಪರಿಣಾಮ ಇದು…” ಎಂದು ಅವರು ಬರೆದಿದ್ದಾರೆ.
ಶ್ರೀಲಂಕಾ ಆರ್ಥಿಕ ದುಸ್ಥಿತಿಯ ಆರಂಭಿಕ ಸೂಚನೆಗಳು ಕಂಡು ಬಂದಾಗಲೇ, ಭಾರತಕ್ಕೂ ಇದೇ ರೀತಿಯ ಪರಿಸ್ಥಿತಿ ಬರಬಹುದು ಎಂಬ ಆತಂಕಗಳು ವ್ಯಕ್ತವಾಗುತ್ತಲೇ ಇದೆ. ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಗತ್ಯ ವಸ್ತುಗಳ ಬೆಲೆಗಳಲ್ಲಿ ವಿಪರೀತ ಏರಿಕೆ ಆಗುತ್ತಿದ್ದರೂ, ದೇಶದಲ್ಲಿ ಕೋಮು ವಿಭಜನೆ ವಿಪರೀತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆತಂಕ ವ್ಯಕ್ತವಾಗುತ್ತಿದೆ. ಅದರಲ್ಲೂ, ಈ ಹಿಂದೆ ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಹಾಗೂ ತಮಿಳರ ವಿರುದ್ಧ ನಡೆದ ದೌರ್ಜನ್ಯವನ್ನು ಉಲ್ಲೇಖಿಸಿ ಭಾರತದ ಪರಿಸ್ಥಿತಿಯೊಂದಿಗೆ ಸಮೀಕರಿಸಲಾಗಿತ್ತು.