-ರೂಪ ಹಾಸನ
ಇದೇ ಜನವರಿ 6 ಮತ್ತು 7ರಂದು ದಾವಣಗೆರೆಯಲ್ಲಿ ನಡೆದ ‘ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ’ಯ ೭ನೆಯ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಆಡಿದ ಮಾತುಗಳ ಬರಹ ರೂಪ] ನಾವಿಂದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದಾಟಿ ಮುಂದೆ ಹೋಗುತ್ತಿದ್ದೇವೆ. ಈ ಎಪ್ಪತ್ತೊಂದು ವರ್ಷಗಳಲ್ಲಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಾವು ರೂಪಿಸಿಕೊಂಡಿರುವ ಸಂವಿಧಾನಕ್ಕೆ ನಿಜವಾಗಿಯೂ ಹತ್ತಿರವಾಗಿದ್ದೇಯೇ ಅಥವಾ ದೂರವಾಗುತ್ತಿದ್ದೇವೆಯೇ ಎನ್ನುವ ಪ್ರಶ್ನೆ ನಮಗಿಂದು ಮುಖ್ಯವಾಗಬೇಕು.
ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅದೂ ಹೆಣ್ಣನ್ನೂ ಒಳಗೊಂಡು! ಇದನ್ನು ನಮ್ಮ ವ್ಯವಸ್ಥೆಗೆ, ಸಮಾಜಕ್ಕೆ ನೆನಪಿಸಬೇಕಾದ ಅನಿವಾರ್ಯತೆಯೇ ವಿಷಾದನೀಯ. ಹೀಗಾಗಿಯೇ ನಿಜವಾದ ಪ್ರಜಾಪ್ರಭುತ್ವದ ಹಾದಿನಲ್ಲಿ ನಾವಿದ್ದೇವೆಯೇ? ಬಹುತ್ವ ಭಾರತದ ಆಶಯಗಳಿಂದ ನಾವು ಏಕೆ ಮತ್ತು ಹೇಗೆ ದೂರವಾಗುತ್ತಿದ್ದೇವೆ? ಇದರಲ್ಲಿ ಹೆಣ್ಣುಮಕ್ಕಳನ್ನು ಸಮಾನವಾಗಿ ಒಳಗೊಳ್ಳದಿರುವ ಕೊರತೆಯ ಕಾರಣವೆಷ್ಟು? ಎನ್ನುವಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿರುವ ತುರ್ತು ಇಂದು ನಮ್ಮ ಮುಂದಿದೆೆ. ಈ ಉತ್ತರದಲ್ಲಿಯೇ ಹೆಣ್ಣು ಸಂಕುಲದ ಘನತೆಯ ಬದುಕಿನ ಹಾಗೂ ಅಳಿವು ಉಳಿವಿನ ಪ್ರಶ್ನೆ ಕೂಡ ಅಡಗಿರುವುದು ಗಮನಾರ್ಹ. ಪ್ರಜಾತಂತ್ರಕ್ಕೆ ಕಡು ವಿರುದ್ಧವಾದ ಸರ್ವಾಧಿಕಾರ, ದೇಶದೆಲ್ಲ ಜನರಿಗೆ ಹಲವು ಏಕರೂಪದ ನಿಯಮಾವಳಿಗಳ ಹೇರಿಕೆ, ಫ್ಯಾಸಿಸಂನ ಕರಾಳತೆಗಳು, ಬಕಾಸುರ ಬಂಡವಾಳಶಾಹಿಯ ಕಪಿಮುಷ್ಟಿ, ಅಭಿವೃದ್ಧಿಯ ಹೆಸರಿನ ಅಪಸವ್ಯಗಳು, ಮಿತಿಮೀರಿದ ಬಡವ/ಶ್ರೀಮಂತರ ನಡುವಿನ ಅಂತರ, ಎಲ್ಲೆ ಮೀರಿದ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಚುನಾವಣಾ ಅಕ್ರಮಗಳು, ಜೊತೆಗೆ ಹವಾಮಾನ ವೈಪರಿತ್ಯದ ಕರಾಳತೆಗಳು, ಮತೀಯ ದ್ವೇಷ, ಮಹಿಳೆ ಮತ್ತು ತಳಸಮುದಾಯಗಳ ಮೇಲಿನ ಅವಿರತ ಹಿಂಸೆ/ಕ್ರೌರ್ಯದ ಪರಾಕಾಷ್ಠೆಯಲ್ಲಿ ನಲುಗುತ್ತಾ, ನೈತಿಕವಾಗಿ ಹಾಗೂ ಮೌಲ್ಯಯುತವಾಗಿ ಕುಗ್ಗಿ ಹೋಗುತ್ತಿರುವ ಪ್ರಸ್ತುತ ನಮ್ಮ ದೇಶದ ಪ್ರಜಾತಂತ್ರ ಹಿಮ್ಮುಖವಾಗಿ ಹೆಜ್ಜೆ ಇಡುತ್ತಿದೆ ಎನ್ನುವ ಭೀತಿ ನಮ್ಮನ್ನಿಂದು ಕಾಡುತ್ತಿದೆ. ಈ ಸ್ಥಿತಿನಲ್ಲಿ ಹೆಣ್ಣು ಸಂಕುಲದ ಅಸ್ಮಿತೆಯನ್ನು ಹುಡುಕಿಕೊಂಡು, ಕಳೆದುಹೋಗುತ್ತಿರುವ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯನ್ನು ಮರು ಸ್ಥಾಪಿಸಿಕೊಳ್ಳುವುದಷ್ಟೇ ಅಲ್ಲ, ಈ ಅಪಸವ್ಯಗಳಿಂದ ದೇಶವನ್ನು ಹೊರತಂದು ಸರಿಯಾದ ದಿಕ್ಕಿನ ಕಡೆಗೆ ಕರೆದುಕೊಂಡುಹೋಗುವ ನಿಟ್ಟಿನಲ್ಲಿ ಇಂತಹ ಮಹಿಳಾ ಸಮ್ಮೇಳನಗಳು ಒಂದು ದಿಕ್ಸೂಚಿ ಆಗಬೇಕು. ಇದು ಸಮಾಜದ ತಾಯ್ತನದ ಜವಾಬ್ದಾರಿಯನ್ನು ಹೊತ್ತ ಹೆಣ್ಣುಸಂಕುಲದ ಜವಾಬ್ದಾರಿಯೂ ಹೌದು. ಇಂದು ಸಮಗ್ರ ರಾಜಕೀಯ ಪ್ರಜ್ಞೆ ಇಲ್ಲದ ಯಾವುದೇ ಮೇಲುಮೇಲಿನ ನಿಲುವಿನಿಂದ, ಕೇವಲ ಘೋಷಣೆ, ವಾದ/ಪ್ರತಿವಾದಗಳಿಂದ ಹೆಚ್ಚಿನ ಪ್ರಯೋಜನ ಇಲ್ಲ ಎನ್ನುವಂತಹ ಎಚ್ಚರ ಮೊದಲಿಗೆ ನಮಗಿರಬೇಕು.
ನಮ್ಮ ಪ್ರತಿಯೊಂದು ಸಮಸ್ಯೆಯನ್ನೂ ಪೊಲಿಟಿಸೈಸ್[ರಾಜಕೀಯ]ಗೊಳಿಸದ ಹೊರತೂ, ನಮ್ಮ ಸಮಸ್ಯೆಗಳಿಗೆ ಸಮರ್ಪಕ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲದಿರುವುದು ವಾಸ್ತವ. ಈ ಎಚ್ಚರದ ಅರಿವಿನಲ್ಲಿ ದೇಶದ ಮಹಿಳಾ ಸಂಕುಲವನ್ನು ಪ್ರಜಾತಂತ್ರದ ಒಳಗೆ ಒಳಗೊಳ್ಳುವ ಪ್ರಯತ್ನ ಎಷ್ಟು ಪ್ರಮಾಣದಲ್ಲಿ ಆಗಿದೆÉ ಎನ್ನುವುದನ್ನು ಮೊದಲಿಗೆ ಪರಿಶೀಲನೆ ಮಾಡಬೇಕಿದೆ. ಇಷ್ಟೂ ವರ್ಷಗಳಲ್ಲಿ ಮಹಿಳೆಯರ ಸ್ಥಿತಿಗತಿಯಲ್ಲಿ ಹೇಗೆಲ್ಲಾ ಬದಲಾವಣೆಗಳಾಗಿವೆ ಎಂದು ನೋಡಿದರೆ- ಮೇಲ್ನೋಟಕ್ಕೆ ಹೆಣ್ಣುಮಕ್ಕಳ ಶಿಕ್ಷಣ, ಉದ್ಯೋಗ ಪ್ರಮಾಣ, ಅವರ ಸಮುದಾಯದೆಡೆಗಿನ ಚಲನೆ, ಎಲ್ಲ ಕ್ಷೇತ್ರದಲ್ಲೂ ಪಾಲ್ಗೊಳ್ಳುತ್ತಿರುವಂತಹ ಧನಾತ್ಮಕ ಬದಲಾವಣೆಗಳೇನೋ ಎದ್ದು ಕಾಣುತ್ತಿವೆ. ಆದರೆ ದೇಶದ ಜನಸಂಖ್ಯೆಯ ಅಂದಾಜು ಅರ್ಧದಷ್ಟಿರುವ ಮಹಿಳೆಯರು, ಈ ಸಮಾಜದಲ್ಲಿ ತಮ್ಮ ಸಾಮಾಜಿಕ/ರಾಜಕೀಯ ಅಸ್ತಿತ್ವವನ್ನು, ನಾಯಕತ್ವದ ಗುಣವನ್ನು ಸಶಕ್ತವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆಯೇ ಎಂದು ಆಳಕ್ಕಿಳಿದು, ಬಹುಮುಖಗಳಲ್ಲಿ, ಬಹು ಆಯಾಮಗಳಲ್ಲಿ ವಿಶ್ಲೇಷಿಸಿದರೆ ಮಾತ್ರ ಮುಚ್ಚಿಟ್ಟ ಕಟು ಸತ್ಯಗಳು ನಮಗೆ ಅರಿವಾಗಲು ಸಾಧ್ಯ. ಆಗ ಮಾತ್ರ, ನಾವು ಗೂಟಕ್ಕೆ ಕಟ್ಟಿದ ಹಸುವಿನಂತೆ ನಿಂತಲ್ಲೇ ಪ್ರದಕ್ಷಿಣೆ ಹಾಕುತ್ತಿದ್ದೇವೆ, ಮುಂದಕ್ಕೆ ಚಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವಂತಹ ಸತ್ಯ ಅರ್ಥವಾಗುತ್ತದೆ. ನಮ್ಮ ಹೆಚ್ಚಿನ ಹೆಣ್ಣುಮಕ್ಕಳು ಇಂದಿಗೂ ದೇಶದ ಪ್ರಮುಖ ನಿರ್ಧಾರಗಳನ್ನು, ನಿರ್ಣಯಗಳನ್ನು ತೆಗೆದುಕೊಳ್ಳುವಂತಹಾ, ಕಾಯ್ದೆ, ನೀತಿ, ನಿಯಮ ರೂಪಿಸುವಂತಹ ಉನ್ನತ ಸ್ಥಾನಗಳನ್ನು ತಲುಪಲು ಸಾಧ್ಯವಾಗಿಲ್ಲದಿರುವುದು ನಿಖರವಾಗಿ ಗೋಚರಿಸುತ್ತಿದೆ.
ಅದು ನಮ್ಮ ಸಂಸತ್ತು, ವಿಧಾನಸಭೆ, ರಾಜಕೀಯ ಕ್ಷೇತ್ರ, ಸರ್ಕಾರದ ಆಡಳಿತಾತ್ಮಕ ಹಂತಗಳಲ್ಲಿ, ಯಾವುದೇ ಬೃಹತ್ ಸಂಸ್ಥೆಗಳಲ್ಲಿ, ನ್ಯಾಯಾಂಗದಲ್ಲಿ, ಸಾಮಾಜಿಕವಾಗಿ… ಹೀಗೆ ಎಲ್ಲ ಕ್ಷೇತ್ರಗಳ ಉನ್ನತ ಹಂತಗಳಲ್ಲೂ ಇಂದಿಗೂ ಬೆರಳೆಣಿಕೆಯಷ್ಟು ಮಹಿಳೆಯರನ್ನು ಮಾತ್ರ ಕಾಣಲು ಸಾಧ್ಯವಾಗಿದೆ. ಹಾಗೆ ಉನ್ನತ ಸ್ಥಾನವನ್ನು ಅಲಂಕರಿಸಿರುವ ಮಹಿಳೆಯರೂ ಕೂಡ ಎಷ್ಟರ ಮಟ್ಟಿಗೆ ನಮ್ಮ ಸನಾತನ ಪಿತೃಪ್ರಧಾನ ಮೌಲ್ಯಗಳಿಂದ ಬಿಡಿಸಿಕೊಂಡು, ಸಂವಿಧಾನದ ಸಮಾನತೆಯ ಆಶಯಕ್ಕೆ ಬದ್ಧವಾಗಿ ಸ್ವಾಯತ್ತತೆ ಮತ್ತು ಆತ್ಮಾಭಿಮಾನದಿಂದ ಕೆಲಸ ಮಾಡಲು ಸಾಧ್ಯವಾಗಿದೆ ಎನ್ನುವುದು ಮತ್ತೊಂದು ಪ್ರಶ್ನೆ. ಇದೆಲ್ಲದರ ನಡುವೆ ಕೂಡ ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಮಟ್ಟಕ್ಕೆ ಏರಬೇಕು, ದೊಡ್ಡದನ್ನು ಸಾಧಿಸಬೇಕು ಎನ್ನುವಂತಹ ಹೆಣ್ಣುಮಕ್ಕಳ ಛಲ ಕೂಡ ಮುಕ್ಕಿಲ್ಲದೇ ಮುಂದುವರಿಯುತ್ತಿದೆ. ಹೆಣ್ಣಿನ ಈ ಧೀಮಂತಿಕೆಯೇ ನಮ್ಮ ಪುರುಷ ಪ್ರಧಾನ, ಪುರುಷಾಳ್ವಿಕೆಯ ಸಮಾಜಕ್ಕೆ ನುಂಗಲಾಗದ ತುತ್ತಾಗಿದೇ. ಇದೇ ಪುರುಷ ಅಹಮಿಕೆಯ ಕಾರಣದಿಂದಲೇ ಹೆಣ್ಣನ್ನು ಹೇಗಾದರೂ ಸರಿ ದಮನಿಸಬೇಕು, ಅಂಚಿಗೆ ನೂಕಬೇಕು, ಅವಳನ್ನು ತಾನು ಹೇಳಿದ ಹಾಗೆ ಕೇಳುವಂತೆ- ಅಧೀನದಲ್ಲಿ ಇಟ್ಟುಕೊಂಡು ಆಳಬೇಕು ಎನ್ನುವಂತಹ ಕ್ರೂರ, ಹಿಂಸಾತ್ಮಕ ಪ್ರಯತ್ನಗಳು ವರ್ಷದಿಂದ ವರ್ಷಕ್ಕೆ ವ್ಯಾಪಕವಾಗುತ್ತಿದೆ. ನಮ್ಮ ನಡುವೆ ಹೆಣ್ಣುಮಕ್ಕಳ ಅತ್ಯಾಚಾರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಾಬರಿ ಹುಟ್ಟಿಸುತ್ತಿದೆ. ಕಳೆದೊಂದು ದಶಕದಲ್ಲಿ ಶೇಕಡ 1200ರಷ್ಟು ಅತ್ಯಾಚಾರಗಳು ಹೆಚ್ಚಾಗಿವೆ ಎಂದು ಸರ್ಕಾರಿ ದಾಖಲೆಗಳೇ ಹೇಳುತ್ತಿವೆ! ಅದರಲ್ಲೂ ಸಾಮೂಹಿಕ ಅತ್ಯಾಚಾರಗಳು, ಪುಟ್ಟ ಪುಟ್ಟ ಕಂದಮ್ಮಗಳ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಇನ್ನಿಲ್ಲದಷ್ಟು ವ್ಯಾಪಕವಾಗುತ್ತಿದೆ. ಹದಿನೈದು ನಿಮಿಷಕ್ಕೆ ಒಬ್ಬ ಹೆಣ್ಣುಮಗಳು ಈ ದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗುವಂತಹ, ಪ್ರತಿ ಎರಡು ನಿಮಿಷಕ್ಕೆ ಒಬ್ಬ ಹೆಣ್ಣುಮಗಳು ದೌರ್ಜನ್ಯಕ್ಕೆ ಒಳಗಾಗುವಂತಹ ಸ್ಥಿತಿಗೆ ಹೆಣ್ಣು ಸಂಕುಲ ತಲುಪಿರುವುದು ಅತ್ಯಂತ ಆತಂಕಕಾರಿಯಾಗಿದೆ.
ಇವೆಲ್ಲ ಕೂಡ ದಾಖಲಾದ ದೌರ್ಜನ್ಯಗಳು. ಮರ್ಯಾದೆಗೆ ಅಂಜಿ- ದಾಖಲಾಗದ ಅತ್ಯಾಚಾರಗಳು, ದೌರ್ಜನ್ಯಗಳ ಪ್ರಮಾಣ ಅದಿನ್ನೆಷ್ಟಿದೆಯೋ ಗೊತ್ತಿಲ್ಲ! ಇದರ ಜೊತೆಗೆ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಕೊಲೆ, ಆಸಿಡ್ ದಾಳಿ, ಬೆತ್ತಲೆಗೊಳಿಸಿ ಅಪಮಾನಿಸುವ ಘಟನೆಗಳು, ಮರ್ಯಾದಾಹೀನ ಹತ್ಯೆಗಳು, ಕದ್ದೊಯ್ದು ಮಾರಾಟ ಮಾಡಿ ವೇಶ್ಯಾವಾಟಿಕೆಗೆ ನೂಕುವುದು… ಒಂದೇ ಎರಡೇ? ಈ ಪ್ರತಿಯೊಂದು ಕ್ರೂರ ಘಟನೆಗಳಿಗೂ ಸಾವಿರಾರು ಜ್ವಲಂತ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಇದ್ಯಾವುದೂ ನಮ್ಮ ರಾಜಕೀಯ ನಾಯಕರಿಗೆ, ಆಡಳಿತಶಾಹಿಗೆ ಮುಖ್ಯವಾದ ವಿಷಯವಾಗಿಯೇ ಇಲ್ಲವಲ್ಲ? ನಮ್ಮ ಬಹಳಷ್ಟು ಪ್ರಜ್ಞಾವಂತ ಜನಸಮೂಹದ ಆತ್ಮಸಾಕ್ಷಿಯನ್ನೂ ಇವು ಕಲಕುತ್ತಿಲ್ಲವಲ್ಲಾ? ನಾವೇನು ಬದುಕಿದ್ದಿವೋ ಸತ್ತು ಹೋಗಿದ್ದೀವೋ ಎಂದು ಚಿವುಟಿ ನೋಡಿಕೊಳ್ಳಬೇಕಿದೆ! ನಮಗೂ ಈ ಅಪಸವ್ಯಗಳಿಗೂ ಏನೂ ಸಂಬಂಧವೇ ಇಲ್ಲ ಎಂದು ಹೆಚ್ಚಿನ ಯುವಜನರೂ ತಟಸ್ಥರಾಗಿಬಿಟ್ಟಿದ್ದಾರಲ್ಲಾ ಆ ನೋವು ತೀವ್ರವಾಗಿ ಕಂಗೆಡಿಸುತ್ತದೆ. ನಿಜಕ್ಕೂ ಈ ದೇಶಕ್ಕೆ ಭವಿಷ್ಯ ಇದೆಯೇ? ಇದಿಷ್ಟೇ ಅಲ್ಲ! ಹೆಣ್ಣು ಹುಟ್ಟಿದರೆ ತಾನೆ ಈ ಎಲ್ಲ ಸಮಸ್ಯೆ? ಅವಳನ್ನು ಹುಟ್ಟಲಿಕ್ಕೇ ಬಿಡಬಾರದು ಎಂದು ನಿರ್ಧರಿಸಿ, ಹೆಣ್ಣನ್ನು ಗರ್ಭದಲ್ಲೇ ಹೊಸಕಿ ಕೊಲ್ಲುವಂತಹ ಆಧುನಿಕ ತಂತ್ರಗಳನ್ನೂ ಎಷ್ಟು ನಾಜೂಕಾಗಿ ಈ ಆಧುನಿಕ ಸಮಾಜ ರೂಪಿಸಿಕೊಂಡು ಬಿಟ್ಟಿದೆ? ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇದುವರೆಗೆ ಅಂದಾಜು 600 ಲಕ್ಷ ಹೆಣ್ಣುಮಕ್ಕಳನ್ನು ಹುಟ್ಟುವ ಮೊದಲೇ ಕೊಲ್ಲಲಾಗಿದೆಯಂತೆ! ಇದು ಹೆಣ್ಣು ಸಂಕುಲದ ಮೇಲೆ ನಡೆಸುತ್ತಿರುವ ಸಾಂಸ್ಕೃತಿಕ ಅತ್ಯಾಚಾರವಲ್ಲದೇ ಬೇರೇನು! ಈ ಘೋರ ಅಪರಾಧಕ್ಕೆ ಶಿಕ್ಷೆಯೇ ಇಲ್ಲವೇ? ಎಂದು ಮನಸು ಕೂಗಿ ರೋಧಿಸುತ್ತದೆ. ಇದರಿಂದಾಗೇ ಹೆಣ್ಣುಮಕ್ಕಳು ಜನಿಸುವ ಪ್ರಮಾಣದಲ್ಲಿ ಅಗಾಧ ಕುಸಿತ ಉಂಟಾಗಿ, ಮದುವೆಗೆ ಸಿದ್ಧವಾಗಿ ನಿಂತಿರುವ ವರಗಳಿಗೆ, ವಧುಗಳೇ ಸಿಗದಂತಹಾ ಪರಿಸ್ಥಿತಿ ಸೃಷ್ಟಿಯಾಗಿದೆ.
ಮುಂದುವರೆಯುತ್ತದೆ…