-ಕೃಷ್ಣಮಣಿ
ಕಾಂಗ್ರೆಸ್ ಪಕ್ಷ ರಾಜ್ಯಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದ ಬಳಿಕ ಸಂಭ್ರಮ ಮನೆ ಮಾಡಿತ್ತು. ಅಷ್ಟರಲ್ಲಿ ಶುರುವಾಗಿದ್ದು, ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ ಎನ್ನುವ ಘೋಷಣೆ. ಅದನ್ನು ನಾಸೀರ್ ಹುಸೇನ್ ಅವರನ್ನು ಸ್ಥಳದಲ್ಲೇ ಪ್ರಶ್ನಿಸಿದಾಗ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ನಡೆದುಕೊಂಡ ರೀತಿ ಮಾಧ್ಯಮದವರನ್ನು ಕಿಚ್ಚು ಹೊತ್ತಿಸಿತ್ತು. ನಾಸೀರ್ ಹುಸೇನ್ ಹೇಳಿಕೆ ಬಳಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದಾಯ್ತು. ಬಿಜೆಪಿ ನಾಯಕರು ದೊಡ್ಡ ಮಟ್ಟದ ಹೋರಾಟಕ್ಕೆ ಇಳಿದ್ರು. ವಿಧಾನಸೌಧದ ಎದುರು ಘಟಾನುಘಟಿ ನಾಯಕರು ಪ್ರತಿಭಟನೆ ಬಳಿಕ ಕೆಪಿಸಿಸಿ ಕಚೇರಿ ಮುಂದೆಯೂ ಪ್ರತಿಭಟನೆಗೆ ಮುಂದಾದ್ರು ಕಾರ್ಯಕರ್ತರು. ಈ ವೇಳೆ ಎಲ್ಲರನ್ನೂ ವಶಕ್ಕೆ ಪಡೆದು ಕರೆದೊಯ್ಯಲಾಯ್ತು.
ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲೇ ಈ ಘೋಷಣೆ ಮೊಳಗಿದೆ ಎಂದರೆ, ಕಾಂಗ್ರೆಸ್ ಇನ್ನೆಷ್ಟು ದೇಶ ಸುಡುವ ವಿಷ ಜಂತುಗಳನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡಿರಬಹುದು ಎಂದು ಅಂದಾಜಿಸಲು ಇದು ಸಾಕ್ಷಿ ಒದಗಿಸಿದೆ ಎಂದಿದ್ದಾರೆ. ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ಸೈಯದ್ ನಾಸೀರ್ ಹುಸೇನ್, ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು! ‘ತನ್ನನು ರಕ್ಷಿಸಲು ತಮ್ಮ ಮನಃಸ್ಥಿತಿಯ ಕಾಂಗ್ರೆಸ್ ಸರ್ಕಾರ ಇರುವಾಗ ನಾವ್ಯಾರಿಗೆ ಹೆದರಬೇಕು ಅನ್ನೋ ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿದ್ದಾರೆ ಎಂದು ಕಿಡಿಕಾರಿದ್ದಾರೆ. ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಸಾಕ್ಷಿಗಳೆಲ್ಲವೂ ಕಣ್ಣೆದುರಿಗೇ ಇರುವಾಗ ರಕ್ಷಿಸಲು ಯತ್ನಿಸುವ ಪ್ರಯತ್ನ ನಡೆದರೆ ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವುದೇ ಗೊತ್ತಾಗ್ತಿಲ್ಲ, ಕಾಂಗ್ರೆಸ್ನ ಮಾನಸಿಕತೆ ಪಾಕಿಸ್ತಾನದ ಪರವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ಚಿಕ್ಕಮಗಳೂರಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ನ ಮೆಂಟಾಲಿಟಿ ಏನೆಂದು ಈಗ ಗೊತ್ತಾಗಿದೆ. ದೇಶ ದ್ರೋಹಿಗಳನ್ನು ತಕ್ಷಣ ಬಂಧಿಸಬೇಕು. ಸಿದ್ದರಾಮಯ್ಯನವರೇ ನಿಮಗೆ ದೇಶದ ಸಾರ್ವಭೌಮತೆ, ಸಂವಿಧಾನದ ಮೇಲೆ ನಂಬಿಕೆ ಇದ್ರೆ ಕೂಡಲೇ ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಅವರ ಬೆಂಬಲಕ್ಕೆ ನಿಂತ ನಾಸೀರ್ ಹುಸೇನ್ ಮೇಲೂ ಕೇಸ್ ದಾಖಲಿಸಿ, ನಿಮಗೆ ಶಕ್ತಿ ಇದೆಯೋ, ಇಲ್ವೋ ಗೊತ್ತಿಲ್ಲ. ಆ ಶಕ್ತಿಯನ್ನ ಸಿದ್ದರಾಯ್ಯನವರು ತೋರಿಸಬೇಕು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದರೆ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಪಾಕಿಸ್ತಾನ ಜಿಂದಾಬಾದ್ ಅಂದಿರೋದು ಮಹಾ ಅಪರಾಧ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿದ್ದಾರೆ. ಇದನ್ನ ನಾವು ಖಂಡಿಸುತ್ತೇವೆ, ಮೂರು ಜನ ಗೆದ್ದ ಬಳಿಕ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಹುಟ್ಟಿದ್ದೇ ಭಾರತದ ಮೇಲೆ ದ್ವೇಷ ಮಾಡಿಕೊಂಡು. ಪಾಕಿಸ್ತಾನ ಹಿಂದೂಗಳ ಮಾರಣ ಹೋಮದಿಂದಲೇ ಹುಟ್ಟಿದ್ದು. ಕಾಲು ಕೆರೆದು ಪಾಕಿಸ್ತಾನ 1948, 1965, 1973 ರಲ್ಲಿ ದಾಳಿ ಮಾಡಿದೆ ಎಂದು ಕಿಡಿಕಾರಿದ್ದಾರೆ ಮಾಜಿ ಮಿನಿಸ್ಟರ್ ಸಿ.ಟಿ ರವಿ. ಇನ್ನು ಕೋಲಾರದ ಬಸ್ ನಿಲ್ದಾಣ ವೃತ್ತದಲ್ಲಿ ಶ್ರೀರಾಮ ಸೇನಾ ಸಂಘಟನೆ ಪ್ರತಿಭಟನೆ ನಡೆಸಿದೆ. ರಾಜ್ಯಸಭಾ ಸದಸ್ಯ ನಾಸಿನ್ ಹುಸೇನ್ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡಿ, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಾಸಿರ್ ಹುಸೇನ್ ಭಾವಚಿತ್ರಗಳನ್ನ ಸುಟ್ಟು ರಾಜಿನಾಮೆಗೆ ಒತ್ತಾಯ ಮಾಡಿದ್ದಾರೆ.
ನಾಸೀರ್ ಹುಸೇನ್ ಕೂಡ ನಾನು ನೇರವಾಗಿ ಕೇಳಿಸಿಕೊಂಡಿಲ್ಲ. ಆದರೆ ನಾನು ವಿಡಿಯೋಗಳಲ್ಲಿ ನೋಡಿದ್ದೇನೆ. ಯಾರಾದರೂ ಆ ರೀತಿ ಕೂಗಿದ್ರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಥವಾ ಮಾರ್ಪಿಂಗ್ ಆಗಿದ್ದರೆ ಅವರ ಮೇಲೂ ಕ್ರಮ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ. ಬೇರೆ ಪಕ್ಷದವರು ಬಂದು ಘೋಷಣೆ ಕೂಗಿರುವ ಸಾಧ್ಯತೆಯೂ ಇದೆ ಎಂದಿದ್ದಾರೆ.