ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಮೇದಾಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ನೇರ ರಾಜ್ಘಾಟ್ಗೆ ಭೇಟಿ ನೀಡಿ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿದ್ದಾರೆ.

ಬಳಿಕ ಮಾಧ್ಯಮ ಜೊತೆ ಮಾತನಾಡಿ, “ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸ್ವಾಗತಿಸುತ್ತೇನೆ. ಆದರೆ ಇದು ಕೇವಲ ಒಂದು ಆರಂಭವಷ್ಟೇ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಶೀಘ್ರವೇ ಪ್ರತಿಭಟನಾಕಾರರ ಮೇಲಿನ ಕೇಸ್ಗಳನ್ನು ಹಿಂಪಡೆಯುವ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ.

ಕಳೆದ ಇಪ್ಪತ್ತಾರು ದಿನಗಳ ಉಪವಾಸ ಸತ್ಯಾಗ್ರಹ ನಂತರ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಲು ರಾಜಘಾಟ್ಗೆ ಭೇಟಿ ನೀಡುವುದಾಗಿ ಕೇಳಿಕೊಂಡಿದ್ದೆ. ಕಳೆದ ಐದಾರು ವರ್ಷಗಳಿಂದ ನಾವು ಲಡಾಖ್ನಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಅನುಸರಿಸಿಕೊಂಡು ಬಂದಿದ್ದೇವೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬ ಖಚಿತತೆ ಇರಲಿಲ್ಲ. ಆದರೆ ಈ ಬಾರಿ, ನೂರು ವರ್ಷಗಳ ಬಳಿಕವೂ ಗಾಂಧೀಜಿಯವರ ಮಾರ್ಗ ರಾಷ್ಟ್ರ ಮಟ್ಟದಲ್ಲಿ ಅಷ್ಟೇ ಪ್ರಸ್ತುತ ಎಂಬುದನ್ನು ಕಂಡು ನನಗೆ ಧೈರ್ಯ, ನೆಮ್ಮದಿ ಸಿಕ್ಕಿದೆ. ಈ ಅಹಿಂಸಾ ಮಾರ್ಗ ಮುಂದಿನ ನೂರು ಅಥವಾ ಸಾವಿರ ವರ್ಷಗಳವರೆಗೂ ದೇಶದಲ್ಲಿ ಮುಂದುವರಿಯಲಿದೆ ಎಂದಿದ್ದಾರೆ.

ಯಾವುದೇ ಸಮಸ್ಯೆಗಳಿಗೆ ಪರಿಹಾರ ಅಥವಾ ಯಶಸ್ಸು ಸಿಕ್ಕಿದ್ದರೆ, ಅದು ಬಂದೂಕಿನ ಬಲದಿಂದಾಗಲಿ ಅಥವಾ ಲಾಠಿ-ಕಲ್ಲುಗಳ ಬಳಕೆಯಿಂದಾಗಲಿ ಸಿಕ್ಕಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿಯೇ ನಾನು ಭಾರತೀಯರಿಗೆ ತಮ್ಮ ಕುಂದುಕೊರತೆ, ಬೇಡಿಕೆಗಳನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟ ಶಾಂತಿ ಮಾರ್ಗ ಮೂಲಕವೇ ವ್ಯಕ್ತಪಡಿಸಬೇಕು ಎಂದು ವಿನಂತಿಸುತ್ತೇನೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗದಿರಬಹುದು, ಆದರೆ ಶಾಂತಿ ಹೋರಾಟಕ್ಕೆ ಗೆಲುವು ಸಿಗುತ್ತದೆ ಎಂದು ಹೇಳಿದ್ದಾರೆ.







