~ಡಾ. ಜೆ ಎಸ್ ಪಾಟೀಲ
ಕಳೆದ ಆರೇಳು ವರ್ಷಗಳಿಂದ ಅಂದರೆ ೨೦೧೭ ರಲ್ಲಿ ಲಿಂಗಾಯತರಿಗೆ (Lingayat) ಅಲ್ಪಸಂಖ್ಯಾತ ಧರ್ಮದ ಸೌಲಭ್ಯಗಳ ಬೇಡಿಕೆಯ ಹೋರಾಟ ಆರಂಭವಾದ ನಂತರ ಲಿಂಗಾಯತರ ಕುರಿತು ಸಮಾಜದಲ್ಲಿ ಅನೇಕ ಬಗೆಯ ಚರ್ಚೆಗಳು ನಡೆಯುತ್ತಿವೆ. ಲಿಂಗಾಯತ ಧರ್ಮಿಯರಲ್ಲಿ ಕೆಲವರು ತಮ್ಮನ್ನು ತಾವು ವೀರವೈವರೆಂತಲುˌ ಇನ್ನೂ ಕೆಲವರು ವೀರಶೈವ-ಲಿಂಗಾಯತರೆಂತಲು ಕರೆದುಕೊಳ್ಳುತ್ತಾರೆ. ವಿಚಿತ್ರವೆನ್ನುವಂತೆ ಇನ್ನೂ ಕೆಲವು ಅಜ್ಞಾನಿಗಳು ತಾವು ಹಿಂದೂ ವೀರಶೈವ-ಲಿಂಗಾಯತರು ಅಥವಾ ಕೇವಲ ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತಾವು ಕೇವಲ ಲಿಂಗಾಯತ ಧರ್ಮಿಯರು ಮಾತ್ರ ಎಂದು ಹೇಳಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಕಲ್ಯಾಣದ ರಕ್ತಪಾತˌ ಶರಣರ ಕಗ್ಗೊಲೆ ಹಾಗು ವಚನ ಕಟ್ಟುಗಳ ನಾಶಗೊಳಿಸುವ ಪ್ರಯತ್ನಗಳ ನಂತರ ಎರಡು ಶತಮಾನಗಳ ವರೆಗೆ ಲಿಂಗಾಯತ ಧರ್ಮ ಭೂಗತವಾಗಿ ಭಯದ ನೆರಳಿನಲ್ಲಿ ಬದುಕುಳಿಯಬೇಕಾಯಿತು. ಆನಂತರದ ಕಾಲಘಟ್ಟದಲ್ಲಿ ಆಂಧ್ರ ಮೂಲದ ವೀರಶೈವ ಆರಾಧ್ಯ ಬ್ರಾಹ್ಮಣರು ಲಿಂಗಾಯತಕ್ಕೆ ಮತಾಂತರ ಹೊಂದಿ ಲಿಂಗಾಯತ ಧರ್ಮವನ್ನು ಅಶುದ್ಧಗೊಳಿಸಿದರು. ಲಿಂಗಾಯತ ಧರ್ಮ ತತ್ವಗಳಿಗೆ ವಿರುದ್ಧವಾಗಿರುವ ವೈದಿಕ ಮತ್ತು ಆಗಮಿಕ ಆಚರಣೆಗಳು ಲಿಂಗಾಯತ ಧರ್ಮಿಯರ ಮನೆಗಳೊಳಗೆ ನುಸುಳಿಸಿದ್ದು ಇದೇ ವೀರಶೈವ ಆಗಮಿಕ ಆರಾಧ್ಯರು. ಆ ಕಾರಣದಿಂದ ಇಂದು ಲಿಂಗಾಯತ ಧರ್ಮಿಯರಲ್ಲಿ ಅಜ್ಞಾನˌ ಮೌಢ್ಯ ˌ ವೈದಿಕ ಆಚರಣೆಗಳು ತಾಂಡವವಾಡುತ್ತಿರುವುದಷ್ಟೆ ಅಲ್ಲದೆ ಲಿಂಗಾಯತರು ತಾವು ಯಾರು ಎನ್ನುವ ಪ್ರಜ್ಞೆಯಿಲ್ಲದೆ ಬದುಕುವ ಸ್ಥಿತಿ ತಲುಪಿದ್ದಾರೆ.
ಹಾಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಲಿಂಗಾಯತರಿಗೆ ಬಡಿದೆಬ್ಬಿಸುವ ಕೆಲಸ ಆಗಬೇಕಿದೆ. ಆದ್ದರಿಂದ ಈ ಲೇಖನದ ಮೂಲಕ ಆ ದಿಶೆಯಲ್ಲಿ ಒಂದು ಚಿಕ್ಕ ಪ್ರಯತ್ನ ಮಾಡಲಾಗಿದೆ. ತಾವು ಲಿಂಗಾಯತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರನ್ನು ಹೊರತು ಪಡಿಸಿ ಉಳಿದಂತೆ ವೀರಶೈವˌ ವೀರಶೈವ-ಲಿಂಗಾಯತ ಹಾಗು ಹಿಂದೂ ವೀರಶೈವ-ಲಿಂಗಾಯತರು ಹಾಗು ಹಿಂದೂಗಳೆಂದು ಹೇಳಿಕೊಳ್ಳುವ ಅಜ್ಞಾನಿ ಲಿಂಗಾಯತರು ತಮ್ಮನ್ನು ತಾವು ಈ ಕೆಳಗಿನ ಹಲವಾರು ಪ್ರಶ್ನೆಗಳು ಕೇಳಿಕೊಂಡರೆ ಬಹುಶಃ ಅವರಿಗೆ ಸ್ಪಷ್ಟವಾದ ಉತ್ತರ ಸಿಗುತ್ತದೆ ಹಾಗು ತಾವು ಯಾರು ಎನ್ನುವ ಸತ್ಯ ಅರಿವಿಗೆ ಬರುತ್ತದೆ.

೧. ೧೨ ನೇ ಶತಮಾನಕ್ಕೆ ಮುಂಚೆ ಭಾರತದ ಸಾಮಾಜಿಕ ವ್ಯವಸ್ಥೆ ಹೇಗಿತ್ತು?
೨. ಬಸವಣ್ಣವನರು ೧೨ ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪಿಸಲು ಆಗಿನ ಸಾಮಾಜಿಕ ವ್ಯವಸ್ಥೆ ಹೇಗೆ ಪ್ರಭಾವ ಬೀರಿತು?
೩. ಅಂದಿನ ಶೊಷಿತ ಸಮುದಾಯದ ಜನರು ಏಕೆ ಮತ್ತು ಹೇಗೆ ಲಿಂಗಾಯತರಾದರು? ಬಸವಪೂರ್ವದಲ್ಲಿ ಲಿಂಗಾಯತ ಧರ್ಮ ಇತ್ತು ಎಂದು ವಾದಿಸುವವರು ಆಗ ಲಿಂಗಾಯತೇತರ ಶೂದ್ರರು ಬಸವಯುಗದಲ್ಲಾದಂತೆ ಸಾಮೂಹಿಕವಾಗಿ ಲಿಂಗಾಯತರಾಗಿ ಪರಿವರ್ತನೆಯಾಗಿರುವ ದಾಖಲೆಗಳಿವೆಯೆ?
೪. ಈ ದೇಶದಲ್ಲಿ ಹಿಂದೂಗಳು ಎಂದರೆ ಯಾರು? ಯಾವ ಆಧಾರದಲ್ಲಿ ಅವರನ್ನು ಹಿಂದೂಗಳೆಂದು ಗುರುತಿಸಲಾಗುತ್ತಿದೆ? ಹಿಂದೂ ಒಂದು ಜಾತಿಯೆ ಅಥವಾ ಧರ್ಮವೇ?
೫. ೧೨ ನೇ ಶತಮಾನಕ್ಕೆ ಮೊದಲು ಜನರು ಇಷ್ಟಲಿಂಗ ಧಾರಣೆ ಏಕೆ ಮಾಡಿಕೊಳ್ಳುತ್ತಿರಲಿಲ್ಲ?
೬. ಕೆಲವರು ಪ್ರತಿಪಾದಿಸುವಂತೆ ಬಸವಾದಿ ಶಿವಶರಣರು ಭೋದಿಸಿದ ಲಿಂಗಾಯತ ಧರ್ಮದ ತತ್ವಗಳು ೧೨ ನೇ ಶತಮಾನಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದರೆ, ಬಸವಪೂರ್ವದಲ್ಲಿ ಇಷ್ಟಲಿಂಗ ಆರಾಧನೆಯ ಪುರಾವೆಗಳಿಲ್ಲ ಏಕೆ?
ಅಂದಿನ ಶೈವರು ಪ್ರಯಾಣದ ಸಮಯದಲ್ಲಿ ಗುಡಿಯಲ್ಲಿರುವ ಸ್ಥಾವರ ಲಿಂಗದ ಪ್ರತಿರೂಪವಾದ ಚರಲಿಂಗವನ್ನು ಶಿಖೆಯಲ್ಲಿ ಮತ್ತು ತೋಳಿನಲ್ಲಿ ಕಟ್ಟಿಕೊಳ್ಳುತ್ತಿದ್ದದ್ದು ಇಷ್ಟಲಿಂಗ ಎಂದು ಆಗಮಿಕ ವೀರಶೈವ ಆರಾಧ್ಯರು ವಾದಿಸುವುದು ಹಸಿ ಸುಳ್ಳು. ಆದ್ದರಿಂದ ಬಸವಪೂರ್ವದಲ್ಲಿ ಇಷ್ಟಲಿಂಗ ಇತ್ತು ಎನ್ನುವುದು ಒಂದು ಟೊಳ್ಳುವಾದ ಮಾತ್ರ ಅಲ್ಲವೆ?
೭. ಲಿಂಗಾಯತ ಧರ್ಮಿಯರ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಬ್ರಾಹ್ಮಣರ ಧರ್ಮ ಗ್ರಂಥಗಳಾದ ವೇದಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಇಟ್ಟುಕೊಳ್ಳುವುದಿಲ್ಲ ಮತ್ತು ಪೂಜಿಸುವುದಿಲ್ಲ ಏಕೆ?
೮. ಇಂದಿನ ಲಿಂಗಾಯತರ ಪೂರ್ವಜರಾಗಲಿ ಅವರ ತಾತˌ ಮುತ್ತಾತˌ ಅಜ್ಜ-ಅಜ್ಜಿ ಮತ್ತು ತಂದೆ-ತಾಯಂದಿರು ತಮ್ಮ ಮನೆಗಳಲ್ಲಿ ವೇದಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತವನ್ನು ಏಕೆ ಪಠಿಸುತ್ತಿರಲಿಲ್ಲ?
೯. ಇಂದಿನ ಲಿಂಗಾಯತ ಪೀಳಿಗೆಯ ಹಿರಿಯರುˌ ತಾತ-ಮುತ್ತಾತಂದಿರುˌ ಅಜ್ಜ-ಅಜ್ಜಿಯರು ಮತ್ತು ತಂದೆ-ತಾಯಿಯರು ಪ್ರತಿದಿನ ತಮ್ಮ ಮನೆಗಳಲ್ಲಿ ಇಷ್ಟಲಿಂಗವನ್ನು ಏಕೆ ಪೂಜಿಸುತ್ತಿದ್ದರು ಮತ್ತು ಮಠಗಳಿಗೆ ಏಕೆ ಭೇಟಿ ಕೊಡುತ್ತಿದ್ದರು?

೧೦. ಕಾಲಾನುಕಾಲದಿಂದ ಲಿಂಗಾಯತ ಮಠಗಳಲ್ಲಿ ಅನ್ನ ದಾಸೋಹದ ಮನೆಗಳು ಮತ್ತು ಮತ್ತು ಅಕ್ಷರ ದಾಸೋಹ ನೀಡುವ ಶಾಲೆಗಳು ಏಕಿವೆ? ಅಂದರೆ ಲಿಂಗಾಯತರು ಲಿಂಗಾಯತತೇರರಿಗೂ ಕೂಡ ಅನ್ನ ಮತ್ತು ಅಕ್ಷರ ದಾಸೋಹ ನೀಡುತ್ತಿರುವದರ ಹಿನ್ನೆಲೆ ಏನು?
೧೧. ತಾವು ಹಿಂದೂಗಳೆಂದು ವಾದಿಸುವ ಲಿಂಗಾಯತರು ಹಿಂದೂ ಧರ್ಮದ ರಿವಾಜಿನಂತೆ ಸತ್ತಾಗ ಅಗ್ನಿ ಸಂಸ್ಕಾರಕ್ಕೆ ಒಳಗಾಗುವುದಿಲ್ಲವೇಕೆ?
೧೨. ಹಿಂದೂ ಧರ್ಮದ ಕುರಿತು ಪುಂಖಾನುಪುಂಖವಾಗಿ ಪ್ರಚಾರ ಮಾಡುವ ಬ್ರಾಹ್ಮಣ ಮಠಗಳಲ್ಲಿ ಲಿಂಗಾಯತ ಮಠಗಳಂತೆ ಎಲ್ಲಾ ಹಿಂದೂಗಳಿಗೆ ಸಾಮೂಹಿಕ ಶಿಕ್ಷಣ ಹಾಗು ಅನ್ನ ದಾಸೋಹ ಹಾಗು ಸಹಪಂಕ್ತಿ ಭೋಜನ ವ್ಯವಸ್ಥೆ ಏಕಿಲ್ಲ?
೧೩. ಎಲ್ಲರನ್ನು ಹಿಂದೂಗಳೆಂದು ಪ್ರಚೋದಿಸುವ ಬ್ರಾಹ್ಮಣರ ಕುಟುಂಬಗಳಲ್ಲಿ ಲಿಂಗಾಯತರು ಮತ್ತು ಇತರ ಶೂದ್ರ ಸಮುದಾಯಗಳಲ್ಲಿ ಕಾಣಬರುವ ಬಸವರಾಜˌ ಮಾರಪ್ಪ ˌ ಬೀರಪ್ಪ ಎನ್ನುವ ಹೆಸರುಗಳು ಕಾಣಬರುವುದಿಲ್ಲವೇಕೆ?
೧೪. ಲಿಂಗಾಯತರನ್ನೂ ಒಳಗೊಂಡಂತೆ ಇತರ ಶೂದ್ರ ವರ್ಗದವರನ್ನು ಹಿಂದೂಗಳೆಂದು ಕರೆಯುವ ಬ್ರಾಹ್ಮಣರು ಲಿಂಗಾಯತರ ಪುಣ್ಯಕ್ಷೇತ್ರಗಳಾದ ಕೂಡಲಸಂಗಮˌ ಶರಣರ ಕ್ಷೇತ್ರಗಳುˌ ಹಾಗು ಶೂದ್ರರ ದೇವಸ್ಥಾನಗಾದ ಮಾರಮ್ಮ ˌ ಬೀರಪ್ಪ ˌ ಮುಂತಾದ ದೇವಸ್ಥಾನಕ್ಕೆ ಭೇಟಿಕೊಡುವುದಿಲ್ಲವೇಕೆ?
೧೫. ಲಿಂಗಾಯತರು ಹಿಂದೂಗಳಾದರೆ ತಾವು ಹಿಂದೂಗಳೆಂದು ಎಂದಿಗೂ ಬಹಿರಂಗವಾಗಿ ಹೇಳಿಕೊಳ್ಳದ ಬ್ರಾಹ್ಮಣ ಧರ್ಮಿಯರು ತಮ್ಮ ಮನೆಗಳಲ್ಲಿ ಲಿಂಗಾಯತರ ವಚನ ಸಾಹಿತ್ಯವನ್ನು ಪರಾಯಣ ಮಾಡುವುದಾಗಲಿˌ ಪ್ರಚಾರ ಮಾಡುವುದಾಗಲಿ ಅಥವಾ ಇಷ್ಟಲಿಂಗವನ್ನು ಧಾರಣೆ ಮಾಡಿಕೊಳ್ಳುವುದಾಗಲಿ ಏಕೆ ಮಾಡುವದಿಲ್ಲ?
ಇವುಗಳ ಜೊತೆಗೆ ಇನ್ನೊಂದಷ್ಟು ಪ್ರಶ್ನೆಗಳನ್ನು ಹೀಗೆ ಹುಟ್ಟಿಕೊಳ್ಳುತ್ತವೆ.
೧. ಲಿಂಗಾಯತರು ಮತ್ತು ವೀರಶೈವರ ಕಲ್ಯಾಣಕ್ಕಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಕಳೆದ ೧೫ ವರ್ಷಗಳ ಅವಧಿಯಲ್ಲಿ ಯಾವ ಯಾವ ರಚನಾತ್ಮಕ ಕೆಲಸ ಕಾರ್ಯಗಳನ್ನು ಮಾಡಿದೆ?
೨. ಧಾರ್ಮಿಕ ಸಂಘಟನೆಯಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಕೇವಲ ಕ್ಯಾಪಿಟೇಷನ್ ಕುಳಗಳು ಹಾಗು ಶ್ರೀಮಂತ ರಾಜಕಾರಣಿಗಳು ಮಾತ್ರ ಏಕೆ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ?
೩. ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವ ಲಿಂಗಾಯತ ರಾಜಕಾರಣಿಗಳು ತಮ್ಮತಮ್ಮ ರಾಜಕೀಯ ಪಕ್ಷಗಳಿಂದ ಹಿಂದೂ ಹೆಸರಿನಲ್ಲಿ ಟಿಕೆಟ್ ಆಗಲಿ ಮಂತ್ರಿ ಸ್ಥಾನವಾಗಲಿ ಪಡೆದುಕೊಳ್ಳದೆ ಲಿಂಗಾಯತ ಕೋಟಾದಲ್ಲಿ ಏಕೆ ಪಡೆದುಕೊಳ್ಳುತ್ತಾರೆ?
೪. ಲಿಂಗಾಯತ ಹೆಸರಿನಲ್ಲಿ ಸೀಟುಗಳು ಮತ್ತು ಮಂತ್ರಿ ಸ್ಥಾನ ಪಡೆಯುವ ಲಿಂಗಾಯತ ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ನಂತರ ಸಾಮಾನ್ಯ ಬಡ ಲಿಂಗಾಯತರಿಗಾಗಿ ಏನೇನು ಕೆಲಸ ಕಾರ್ಯಗಳು ಮಾಡಿದ್ದಾರೆ?
೬. ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಸಮುದಾಯವಾಗಿರುವ ಲಿಂಗಾಯತರಲ್ಲಿ ಹಿಂದೊಮ್ಮೆ ಹೆಚ್ಚಿನ ಸಂಖ್ಯೆಯ ಶಾಸಕರಿರುತ್ತಿದ್ದರು. ಈಗ ವಿಧಾನಸಭೆಯಲ್ಲಿ ಕೇವಲ ೫೨-೫೪ ಶಾಸಕರಿದ್ದಾರೆ. ಹೀಗೆ ಶಾಸಕರ ಸಂಖ್ಯೆ ಕುಗ್ಗಲು ಕಾರಣಗಳೇನು?
೬. ಲಿಂಗಾಯತರು ನಿಜವಾಗಿಯೂ ಹಿಂದೂಗಳಾಗಿದ್ದರೆ ಬೆಂಗಳೂರು ಮಹಾನಗರಪಾಲಿಕೆಯಲ್ಲಿ (ಬಿಬಿಎಂಪಿ) ಕೇವಲ ಬೆರಳೆಣಿಕೆಯ ೧ ಅಥವಾ ೨ ಜನ ಲಿಂಗಾಯತರು ಮಾತ್ರ ಪಾಲಿಕೆ ಸದಸ್ಯರಿರುತ್ತಾರೇಕೆ?
೮. ಕೆಲವು ರಾಜಕೀಯ ಪಕ್ಷಗಳ ನಾಯಕರುˌ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗು ಸುದ್ದಿ ವಾಹಿನಿಗಳವರು ಲಿಂಗಾಯತ ಧರ್ಮದ ನಂಬಿಕೆ ಹಾಗು ತತ್ವ ಸಿದ್ಧಾಂತಗಳನ್ನು ಅವಮಾನಿಸಿದಾಗ ಅಥವಾ ಅವುಗಳ ಬಗ್ಗೆ ತಪ್ಪುತಪ್ಪಾದ ವಿಶ್ಲೇಷಣೆ ಮಾಡಿದಾಗ ಲಿಂಗಾಯತ ರಾಜಕಾರಣಿಗಳು ಪ್ರತಿಭಟಿಸದೆ ಮೌನವಾಗಿರುವುದೇಕೆ?
೯. ಲಿಂಗಾಯತ ಮಠಾಧೀಶರುˌ ಸಾಹಿತಿಗಳುˌ ಸಾಮಾಜಿಕ ಹೋರಾಟಗಾರರುˌ ನಟರು ಇತ್ಯಾದಿಗಳ ಕೊಲೆˌ ಅಥವಾ ಅವರ ಚಾರಿತ್ರ್ಯವಧೆˌ ಅವಮಾನಗಳುˌ ಬಂಧನಗಳಾದಾಗ ಲಿಂಗಾಯತ ರಾಜಕಾರಣಿಗಳು ಸ್ವಾಭಿಮಾನ ಇಲ್ಲದವರಂತೆ ಮೌನವಾಗಿರುವುದೇಕೆ? ಲಿಂಗಾಯತ ರಾಜಕಾರಣಿಗಳಿಗೆ ಸ್ವಾಭಿಮಾನದ ಕೊರತೆಯೆ ಅಥವಾ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡಲಾಗುತ್ತಿದೆಯೆ?
೧೧. ತಮ್ಮನ್ನು ತಾವು ಲಿಂಗಾಯತರೆಂದು ಹೇಳಿಕೊಂಡು ರಾಜಕೀಯ ಸೌಲಭ್ಯ ಪಡೆಯುತ್ತಿರುವ ರಾಜಕಾರಣಿಗಳಲ್ಲಿ ಎಷ್ಟು ಜನ ಇಷ್ಟಲಿಂಗ ದೀಕ್ಷೆ ಹೊಂದಿ ಪ್ರತಿದಿನ ಇಷ್ಟಲಿಂಗ ಯೋಗ ಮಾಡುತ್ತಾರೆ? ಲಿಂಗಾಯತರೆಂದು ಕರೆದುಕೊಳ್ಳುವ ಸಾಮಾನ್ಯ ಜನರಿಗೂ ಈ ಪ್ರಶ್ನೆ ಅನ್ವಯಿಸುತ್ತದೆ.
ಇನ್ನೊಂದಷ್ಟು ಅಂತಿಮ ಸುತ್ತಿನ ಪ್ರಶ್ನೆಗಳ.

೧. ತಾವು ಲಿಂಗಾಯತರು ಎನ್ನುವ ತಮ್ಮದೇ ಹೆಮ್ಮೆಯ ಗುರುತನ್ನು ಗೌರವಿಸದ ಜನರು, ಇನ್ನು ತಮ್ಮದಲ್ಲದ ಮತ್ತು ಅದು ಧರ್ಮ ಹೌದೊ ಅಲ್ಲವೊ ಎನ್ನುವುದನ್ನೂ ನಿಖರವಾಗಿ ಹೇಳಲಾಗದ ಎರವಲು ಧರ್ಮಕ್ಕೆ ನ್ಯಾಯ ಒದಗಿಸಬಲ್ಲರೆ?
೨. ಲಿಂಗಾಯತರು ತಮಗೆ ರಾಜಕೀಯ ಲಾಭ ಕೊಡುತ್ತದೆನ್ನುವ ಕಾರಣಕ್ಕೆ ತಾವು ಹಿಂದೂಗಳೆಂದು ಕರೆದುಕೊಳ್ಳುವ ಎರವಲು ಧರ್ಮದಿಂದಲೆ ತಮ್ಮ ಮಕ್ಕಳನ್ನು ಗುರುತಿಸಿಕೊಳ್ಳುವ ಪರಂಪರೆಯನ್ನು ಮುಂದುವರೆಸುತ್ತಾರಾ?
೩. ತಾವು ಲಿಂಗಾಯತ ಎಂದು ಹೇಳಿಕೊಳ್ಳುವವರು ಲಿಂಗಾಯತ ಧರ್ಮದ ಕುರಿತ ಸಾಹಿತ್ಯವಾಗಲಿ ಮತ್ತು ಶರಣರು ಬರೆದ ವಚನಗಳಾಗಲಿ ಓದಿದ್ದಾರಾ?
೪. ಬಸವಾದಿ ಶಿವಶರಣರು ಕೈಗೊಂಡ ವಚನ ಚಳುವಳಿಯನ್ನು ಹತ್ತಿಕ್ಕಿ ೧೨ ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಶರಣರು ಬರೆದ ವಚನ ಕಟ್ಟುಗಳಿಗೆ ಬೆಂಕಿಹಾಕಿˌ ಸಾವಿರಾರು ಶರಣರನ್ನು ಏಕೆ ಹತ್ಯೆ ಮಾಡಲಾಯಿತು ಎನ್ನುವ ಬಗ್ಗೆ ಲಿಂಗಾಯತರೆಂದು ಹೇಳಿಕೊಳ್ಳುವವರಿಗೆ ತಿಳಿದಿದೆಯೇ?
೫. ಲಿಂಗಾಯತರು ಕೇವಲ ತಾವು ಇಷ್ಟಪಡುವ ನಿರ್ದಿಷ್ಟ ರಾಜಕಾರಣಿಗಾಗಿ ತಮ್ಮ ಭವ್ಯ ಪರಂಪರೆ ಮತ್ತು ತಾವು ಲಿಂಗಾಯತರೆಂಬ ಹೆಮ್ಮೆಯ ಗುರುತನ್ನು ಬಿಟ್ಟುಬಿಡುತ್ತಾರೆಯೆ? ಅಂದರೆ ಲಿಂಗಾಯತರ ಅತ್ಯಮೂಲ್ಯ ಮತವು ಸಮಾಜದ ವಿಕೃತಿಗಳನ್ನು ಪ್ರಶ್ನಿಸಲು ಬಳಕೆಯಾಗಬೇಕೆ ಅಥವಾ ಯಾವುದಾದರೂ ರಾಜಕೀಯ ಪಕ್ಷಕ್ಕೆ ಅಥವಾ ರಾಜಕಾರಣಿಗೆ ಗುಲಾಮರಾಗಲು ಬಳಕೆಯಾಗಬೇಕೆ?
ಲಿಂಗಾಯತರು ಈ ಮೇಲಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾದರೆˌ ದಯವಿಟ್ಟು ಅವರು ಅವುಗಳನ್ನು ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸಿ ಹೇಳಬೇಕು. ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ಸಿಗದಿದ್ದರೆ ಆ ಉತ್ತರಗಳನ್ನು ಹುಡುಕಲು ಲಿಂಗಾಯತ ಧರ್ಮ ತತ್ವಶಾಸ್ತ್ರವನ್ನು ಹಾಗು ವಚನ ಸಾಹಿತ್ಯವನ್ನು ಓದಿ ತಮ್ಮದೇಯಾದ ಸ್ವಂತದ ಹೆಮ್ಮೆಯ ಗುರುತನ್ನು ಅರಿಯುವ ಪ್ರಯತ್ನ ಮಾಡಬೇಕು.
~ಡಾ. ಜೆ ಎಸ್ ಪಾಟೀಲ.