ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗ(Sandalwood) ಕೆಲವರಿಗೆ ಕರ್ಮ ಭೂಮಿಯಾದರೆ ಇನ್ನೂ ಕೆಲವರಿಗೆ ಪ್ರಯೋಗ ಶಾಲೆಯಂತಾಗಿದೆ. ಕನ್ನಡದ ಕೆಲ ನಟ ನಟಿಯರು ಸೇರಿದಂತೆ ಪರ ಭಾಷೆ, ಪರ ರಾಜ್ಯದಿಂದ ಬಂದ ಕೆಲ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಮೊದಲು ಅವಕಾಶ ಪಡೆದು ಇಲ್ಲಿ ಜನಪ್ರಿಯತೆ ಪಡೆದ ಬಳಿಕ ಬೇರೆ ಭಾಷೆಗಳಿಗೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ.

ತಾವು ಯಾವ ಚಿತ್ರರಂಗದಲ್ಲಿ ಇರಬೇಕು, ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವ ಪಾತ್ರವನ್ನು ಒಪ್ಪಿಕೊಳ್ಳಬೇಕು ಎನ್ನುವುದು ಒಬ್ಬ ಕಲಾವಿದ ಅಥವಾ ಕಲಾವಿದೆಯ ಆಯ್ಕೆಯಾದರೂ ಕೂಡ ತಮ್ಮನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ ಕನ್ನಡ ಚಿತ್ರರಂಗ ಬಗ್ಗೆ ಕೃತಜ್ಞತಾ ಮನೋಭಾವ ಇರಬೇಕು ಎನ್ನುವುದು ಕನ್ನಡ ಸಿನಿ ಪ್ರೇಮಿಗಳ ಅಭಿಪ್ರಾಯವಾಗಿದೆ.

ಇನ್ನು ಕೆಲ ನಟ ನಟಿಯರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಸಿ, ತಮ್ಮ ವೈಯಕ್ತಿಕ ಕಾರಣಗಳಿಂದ ತಮಗೆ ಸ್ಯಾಂಡಲ್ವುಡ್ ತಂದು ಕೊಟ್ಟಿದ್ದ ಹೆಸರು, ಖ್ಯಾತಿ, ಕೀರ್ತಿ ಎಲ್ಲವನ್ನೂ ಕಳೆದುಕೊಂಡು. ಬಳಿಕ ಕನ್ನಡ ಚಿತ್ರರಂಗವನ್ನೇ ದೂಷಿಸುವವರು ಕೂಡ ಇದ್ದಾರೆ. ಇಂತವರು ಬೇರೆ ಭಾಷೆಗಳಲ್ಲಿ ಜನಪ್ರಿಯತೆ ಪಡೆಯುತ್ತಿದ್ದಂತೆ ಒಂದೆರಡು ಸಿನಿಮಾದ ಕೆಲಸಗಳು ಸಿಗುತ್ತಿದ್ದಂತೆ ಕನ್ನಡ ಚಿತ್ರರಂಗದ ಬಗ್ಗೆ ಏನೇನೋ ಮಾತನಾಡಲು ಆರಂಭಿಸುತ್ತಾರೆ. ತಮ್ಮ ಹೆಸರಿಗೆ ತಾವೇ ಡ್ಯಾಮೇಜ್ ಮಾಡಿಕೊಂಡು ಬಳಿಕ ಕನ್ನಡ ಚಿತ್ರರಂಗ ನೆರವಿಗೆ ಬರಲ್ಲಿಲ್ಲ ಎಂದು ದೂರುತ್ತಾರೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.

ಈ ರೀತಿಯ ಅಸಮಾಧಾನದಿಂದ ಕನ್ನಡ ಚಿತ್ರರಂಗದಿಂದ ಬಂದ ಅವಕಾಶಗಳನ್ನೂ ಕೂಡ ನಿರಾಕರಿಸುತ್ತಿದ್ದಾರೆ. ಕೆಲಸವಿಲ್ಲದೇ ಖಾಲಿ ಕುಳಿತಿದ್ದರೂ ಕೂಡ ಕೆಲ ನಟ ನಟಿಯರು ಕನ್ನಡ ಚಿತ್ರರಂಗದಿಂದ ಬರುವ ಆಫರ್ಗಳನ್ನು ತಮ್ಮ ಒಣ ಜಂಭದಿಂದ ನಿರಾಕರಿಸುತ್ತಿದ್ದಾರೆ. ತಪ್ಪು ಎಲ್ಲರೂ ಮಾಡುತ್ತಾರೆ ಅದನ್ನು ತಿದ್ದಿಕೊಂಡು ಮುಂದೆ ಹೋಗಲಿ ಈಗಾಗಲೇ ನಿಂತಿರುವ ಅವರ ವೃತ್ತಿ ಜೀವನಕ್ಕೆ ಹೊಸ ಬೂಸ್ಟ್ ಸಿಗಲಿ ಎನ್ನುವ ಕಾರಣಕ್ಕೆ ಕೆಲ ನಿರ್ದೇಶಕರು ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶಗಳನ್ನು ನೀಡಿದರೂ ಸಹ, ಕೆಲ ಕಲಾವಿದರು ಅದನ್ನು ನಿರಾಕರಿಸುತ್ತಿರುವುದು ವಿಪರ್ಯಾಸವೇ ಸರಿ.

ಈಗಲೂ ಕೂಡ ಒಂದು ಪಾತ್ರದ ಆಯ್ಕೆ ಕಲಾವಿದನ ಸ್ವಂತ ನಿರ್ಧಾರ ಎನ್ನುವುದನ್ನು ನಾವು ಒಪ್ಪಬಹುದು. ಆದರೆ ಯಾವುದೋ ಅಸಮಾಧಾನಕ್ಕೆ ಸಿಕ್ಕ ಅವಕಾಶವನ್ನು ಗಾಳಿಗೆ ತೂರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೂಡ ಇಲ್ಲಿ ಉದ್ಭವವಾಗುತ್ತದೆ. ಇನ್ನೂ ಎಷ್ಟೋ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬರಲು ಅಥವಾ ಸ್ಟಾರ್ ನಟರ ಜೊತೆ ನಟಿಸಲು ಒಂದು ಅವಕಾಶ ಸಿಕ್ಕರೆ ಸಾಕು ಎಂದು ಬಯಸುತ್ತಿರುತ್ತಾರೆ. ಹೀಗಾಗಿ ತಮ್ಮ ಸ್ವಂತ ಒಣ ಜಂಭಕ್ಕೆ ಅವಕಾಶಗಳನ್ನು ತಿರಸ್ಕರಿಸುವವರಿಗಿಂತ, ನಿರ್ದೇಶಕರು ಕೆಲಸ ಮಾಡಲು ಉತ್ಸುಕರಾಗಿರುವವರಿಗೆ ಅವಕಾಶ ಕೊಡಬೇಕು ಎನ್ನುವುದು ಸಿನಿ ಪ್ರಿಯರ ಅಭಿಪ್ರಾಯವಾಗಿದೆ.











