ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಸತತವಾಗಿ ಪ್ರಶ್ನೆ ಮಾಡಿಕೊಂಡು ಬರುತ್ತಿರುವ ಸಿದ್ದರಾಮಯ್ಯ ನವರು ಇಂದು ಕೊಂಚ ಹೆಚ್ಚಾಗಿಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅನ್ಯಾಯವನ್ನು ಮುಚ್ಚಿಹಾಕಲು ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತನ್ನನ್ನು ಆರಿಸಿ ಕಳಿಸಿರುವ ಕರ್ನಾಟಕಕ್ಕೆ ತಾನೇ ಮಾಡಿರುವ ಅನ್ಯಾಯವನ್ನು ಮುಚ್ಚಿಹಾಕಲು ವಾಸ್ತವಾಂಶವನ್ನು ತಿರುಚಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಬಿಜೆಪಿ ಪ್ರಜ್ಞಾವಂತ ಕನ್ನಡಿಗರಿಗೆ ಈ ಮೋಸವನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ಇದೆ ಎಂದಿದ್ದಾರೆ.
2020-21ರ ರಾಜಸ್ವ ಕೊರತೆ ಮತ್ತು ತೆರಿಗೆಯಲ್ಲಿ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾದ ಪಾಲಿನಲ್ಲಿ ಆಗಿರುವ ಅನ್ಯಾಯವನ್ನು ಸರಿದೂಗಿಸಲು 15ನೇ ಹಣಕಾಸು ಆಯೊಗ ರಾಜ್ಯಕ್ಕೆ ರೂ.5495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು. ನಿರ್ಮಲಾ ಸೀತಾರಾಮನ್ ಆ ಅನುದಾನಕ್ಕೆ ಕಲ್ಲು ಹಾಕಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಿಡಿಗಾರಿದ್ದಾರೆ.
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಕೇಂದ್ರದಿಂದ ಬರುವ ತೆರಿಗೆ ಪಾಲು ರೂ.31,180 ಕೋಟಿ ಎಂದು ಶಿಫಾರಸು ಮಾಡಿತ್ತು. 2020-21ರ ಕರ್ನಾಟಕದ ಬಜೆಟ್ ನಲ್ಲಿ ಈ ಪಾಲನ್ನು ರೂ.28.591ಕೋಟಿಗೆ ನಿಗದಿಪಡಿಸಲಾಗಿತ್ತು. ಕೊನೆಗೆ ಪರಿಷ್ಕೃತ ಅಂದಾಜಿನಲ್ಲಿ ತೆರಿಗೆ ಪಾಲನ್ನು ರೂ.20,053 ಕೋಟಿಗೆ ಇಳಿಕೆ ಮಾಡಲಾಗಿತ್ತು ಎಂದಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರವೇ 2020-21ರ ಸಾಲಿನ ರಾಜಸ್ವ ಕೊರತೆ ರೂ.19,485 ಎಂದು ಪರಿಷ್ಕರಿಸಿದ್ದರೂ, ಹಣಕಾಸು ಖಾತೆಯಂತ ಜವಾಬ್ದಾರಿ ಸ್ಥಾನದಲ್ಲಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಅದು ಮಿಗತೆಯಾಗಿ ಹೇಗೆ ಕಾಣಿಸಿದೆ ಎನ್ನುವುದನ್ನು ಅವರೇ ರಾಜ್ಯದ ಜನತೆಗೆ ವಿವರಣೆ ನೀಡಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಕೇವಲ ವಿಶೇಷ ಅನುದಾನದಲ್ಲಿ ಮಾತ್ರವಲ್ಲ GST ತೆರಿಗೆ ಪರಿಹಾರದಲ್ಲಿ ಕೂಡಾ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ನಷ್ಟ ಸರಿದೂಗಿಸಲು ರಾಜ್ಯ ಬಿಜೆಪಿ ಸರ್ಕಾರ ಸಾಲದ ಮೊರೆ ಹೋಗಬೇಕಾಯಿತು. ಹೀಗಿದ್ದರೂ ಮುಂಖ್ಯಮಂತ್ರಿ ಆಗಲೀ, ರಾಜ್ಯದ ಬಿಜೆಪಿ ಸಂಸದರಾಗಲಿ ಈ ಅನ್ಯಾಯದ ವಿರುದ್ಧ ಸಣ್ಣ ವಿರೋಧದ ದನಿಯನ್ನು ಎತ್ತದೆ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ ಎಂದು ಗುಡುಗಿದ್ದಾರೆ.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಹೇರಿರುವ ತೆರಿಗೆ ಕಾರಣ ಎಂಬ ಹಸಿಸುಳ್ಳನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಹೇರಿರುವ ಅಬಕಾರಿ ತೆರಿಗೆಯೇ ಕಾರಣವಾಗಿದೆ. ಅಬಕಾರಿ ಸುಂಕವನ್ನು ಡೀಸೆಲ್ ಮೇಲೆ ಲೀಟರಿಗೆ ರೂ.3.45ರಿಂದ 31.84ಕ್ಕೆ ಮತ್ತು ಪೆಟ್ರೋಲ್ ಮೇಲೆ ರೂ.9.21ರಿಂದ 32.98ಕ್ಕೆ ಏರಿಸಲಾಗಿದೆ ಎಂದು ಟ್ವೀಟಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಕರ್ನಾಟಕ ಕಾಂಗ್ರೆಸ್ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದೆ. ರಾಜ್ಯದ ಬಿಜೆಪಿ ನಾಯಕರು ಈ ಅನ್ಯಾಯವನ್ನು ಪ್ರತಿಭಟಿಸದಿರುವುದು ಮಾತ್ರವಲ್ಲ ಪರೋಕ್ಷವಾಗಿ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.