ಬಿಜೆಪಿ ಜೊತೆಗೆ ಕೈಜೋಡಿಸಿರುವ ಜೆಡಿಎಸ್ ನಾಯಕರಿಗೆ ಜಾತ್ಯಾತೀಯ ಎಂದು ಹೇಳಿಕೊಳ್ಳೋಕ್ಕೆ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾ.ದಳದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದ ಮಳವಳ್ಳಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, “ಮುಂದಿನ ದಿನದಲ್ಲಿ ಹುಟ್ಟಿದ್ರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಅಂತಾ ದೇವೇಗೌಡರು ಹೇಳಿದ್ದರು. ಜೆಡಿಎಸ್-ಬಿಜೆಪಿ ಈಗ ಒಂದಾಗಿದ್ದು, ಜೆಡಿಎಸ್ ಅವರು ಕೋಮುವಾದಿ ಬಿಜೆಪಿ ಜೊತೆ ಸೇರಿದ್ದಾರೆ. ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನ ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರ. ನೀವು ಜಾತ್ಯತೀತ ಅಂತಾ ಇಟ್ಕೊಳ್ಳೋಕೆ ನೈತಿಕತೆ ಇಲ್ಲ. ಹೀಗಾಗಿ ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ ಎಂದು ಆಗ್ರಹಿಸಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಶ್ರಮಿಸಿದೆವು, ಅದಕ್ಕೆ 136 ಸೀಟ್ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ ಜೆಡಿಎಸ್ ಡೋಂಗಿಗಳಂತೆ ಹೇಳ್ತಾವೆ ಎಂದು ಟೀಕಿಸಿದರು.
![](https://pratidhvani.com/wp-content/uploads/2024/02/WhatsApp-Image-2024-02-18-at-15.01.03-1024x677.webp)
ಈ ಸಲ ಕನಿಷ್ಠ 20 ಸ್ಥಾನ ಗೆದ್ದು ಕಾಂಗ್ರೆಸ್ ಸಂಸದರನ್ನ ಲೋಕಸಭೆಗೆ ಕಳಿಸುತ್ತೇವೆ. ಉಪಕಾರ ಮಾಡಿದವರನ್ನ ಮರೆಯುತ್ತೀರ? ಎಂದು ಪ್ರಶ್ನೆ ಮಾಡಿದ ಅವರು, 155 ಕೋಟಿ ಹೆಣ್ಣು ಮಕ್ಕಳು ಇವತ್ತು ಉಚಿತವಾಗಿ ಬಸ್ಸಿನಲ್ಲಿ ಓಡಾಡ್ತಿದ್ದಾರೆ. ಹಿಂದೆ ಯಾರಾದ್ರೂ ಮಾಡಿದ್ರ? ಬಿಜೆಪಿ ಹೆಚ್ಡಿಕೆ, ದೇವೇಗೌಡರು ಮಾಡಿದ್ರ? ಇದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅನ್ನೋದನ್ನ ಮರೆಯಬೇಡಿ. ಯಾರು ಹಸಿದು ಮಲಗಬಾರದು ಅಂತಾ ಅನ್ನಭಾಗ್ಯ ಅಕ್ಕಿ ಕೊಟ್ಟವರು ಯಾರು? ಕೇಂದ್ರದ ಅಸಹಕಾರದ ನಡುವೆಯೂ ಯೋಜನೆ ಅನುಷ್ಠಾನ ಮಾಡಿದ್ದು, ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್ಗೆ ಮತ ಕೊಡಬೇಡಿ ಎಂದು ಪರೋಕ್ಷವಾಗಿ ಲೋಕಸಭಾ ಚುನಾವಣೆ ಪ್ರಚಾರ ನಡೆಸಿದರು.
ನಮ್ಮ ಗ್ಯಾರಂಟಿಗಳನ್ನ ಜಾರಿಗೆ ತಂದ್ರೆ ದಿವಾಳಿ ಆಗುತ್ತೆ ವಿಫಲವಾಗುತ್ತೆ ಅಂದ್ರು, ಮೊನ್ನೆ ಬಜೆಟ್ ಮಂಡಿಸಿದ್ದೇನೆ. ಆ ಬಜೆಟ್ ನಲ್ಲಿ 52 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೀನಿ. ಅಶೋಕ್, ಬೊಮ್ಮಾಯಿ ಬಜೆಟ್ ಪುಸ್ತಕ ಓದಿಕೊಳ್ಳಪ್ಪ. ಸುಖಾ ಸುಮ್ಮನೇ ಬಜೆಟ್ ಟೀಕೆ ಮಾಡಬೇಡಿ. ಸಂಪೂರ್ಣ 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ರೆ ಅದು ಕಾಂಗ್ರೆಸ್ ಸರ್ಕಾರ. ಬಿಜೆಪಿ, ಜೆಡಿಎಸ್ಗೆ ಓಟ್ ಹಾಕ್ತೀರ? ಜೆಡಿಎಸ್ನವರು ಕಳೆದ 39 ಗೆದ್ದಿದ್ದರು, ಈಗ 19 ಜನ ಗೆದ್ದಿದ್ದಾರೆ. ಮುಂದೆ ಅದು ಶೂನ್ಯ ಆಗುತ್ತೆ, ಜೆಡಿಎಸ್ ಶಾಸಕರು ಪಕ್ಷ ಬಿಡ್ತಾರೆ ಅಂತಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಪಕ್ಷ, ಶಾಸಕರ ಉಳಿಸಿಕೊಳ್ಳಲು ದೇವೇಗೌಡ, ಹೆಚ್ಡಿಕೆ ಬಿಜೆಪಿ ಜೊತೆ ಮೈತ್ರಿ ಆಗಿದ್ದಾರೆ. ಹಿಂದೆ ನಮ್ಮ ಜೊತೆ ಇದ್ದವರು. ಇವಾಗ ಕೋಮುವಾದಿಗಳ ಜೊತೆ ಸೇರಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮಂಡ್ಯ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎಂದರು.
![](https://pratidhvani.com/wp-content/uploads/2024/02/DSC_5060-1024x602.webp)
ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈ ಹಿಂದೆಯೂ ನಾವು 165ರಲ್ಲಿ 158 ಭರವಸೆ ಈಡೇಸಿದೆವು. ನಾವು ಮಾಡಿದ ಕೆಲಸವನ್ನ ಜನರಿಗೆ ತಲುಪಿಸಲಿಲ್ಲ. ಹೀಗಾಗಿ ಕಳೆದ ಸಲ ಸೋಲಬೇಕಾಯ್ತು ನಾವು ಮಾಡದಿರೋದನ್ನ ಎಂದೂ ಹೇಳಲ್ಲ. ಬಿಜೆಪಿ, ಜೆಡಿಎಸ್ನವರ ರೀತಿ ಸುಳ್ಳು ಹೇಳಬೇಡಿ. ಕುಮಾರಸ್ವಾಮಿ ಎರಡು ಸಲ, ದೇವೇಗೌಡರು ಸಹ ಸಿಎಂ ಆಗಿದ್ರಿ. ಮಳವಳ್ಳಿಗೆ ನಿಮ್ಮ ಕೊಡುಗೆ ಏನು ಹೇಳಿ. ಬಿಜೆಪಿಯ ಕೊಡುಗೆ ಏನು ಹೇಳಿ. ನರೇಂದ್ರಸ್ವಾಮಿ ಹೇಳಿದ್ದನ್ನೆಲ್ಲ ಮಾಡಿಕೊಟ್ಟಿದ್ದೆ. ಏನು ಮಾಡದವರಿಗೆ ಮತಕೊಡಬೇಕ? ದೇಶದಲ್ಲಿ ಸುಳ್ಳು ಹೇಳುವ ಪ್ರಧಾನಿ ಅಂದ್ರೆ ಯಾರೇಳಿ. ಬಿಜೆಪಿಯ ಅನ್ವರ್ಥ ನಾಮ ಸುಳ್ಳು. ಸುಳ್ಳಿನ ಪಾರ್ಟಿ ಯಾವುದು ಅಂದ್ರೆ ಬಿಜೆಪಿ. ಸ್ವಾತಂತ್ರ್ಯ ನಂತರ ಸುಳ್ಳು ಹೇಳಿದ ಪ್ರಧಾನಿ ಅಂದ್ರೆ ಮೋದಿ.
15 ಲಕ್ಷ ಬಂತಾ, ಉದ್ಯೋಗ ಕೊಟ್ರ, ಅಚ್ಛೇ ದಿನ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಯ್ತ? ನಾವು ಎಲ್ಲಾ ವರ್ಗ, ಸಮಾಜಕ್ಕೂ ಸಮವಾಗಿ ಅನುದಾನ ಕೊಡ್ತೀವಿ. ತೆರಿಗೆ ವಿಚಾರದಲ್ಲಿ ಅನ್ಯಾಯ ಆಗಿದೆ ಅಂತಾ ನಾವು ಹೇಳ್ತಿದ್ದೇವೆ. ಕೇಂದ್ರ ಹೇಳುವ ಸುಳ್ಳನ್ನೇ ಇವರು ಹೇಳ್ತಾರೆ. ಇವರ ಜೊತೆಗೆ ಕುಮಾರಸ್ವಾಮಿ ಸಹ ಸೇರಿದ್ದಾರೆ. 100 ರೂಪಾಯಿಗೆ ನಮಗೆ ಸಿಕ್ತೀರೋದು ಬರೀ 13 ರೂ. ಮಾತ್ರ. ಈ ರೀತಿಯ ತೆರಿಗೆ ಅನ್ಯಾಯ ಆಗ್ತಿದೆ ಅಂದ್ರೆ ತಪ್ಪಾ? ನಮಗೆ ಅನ್ಯಾಯ ಆಗ್ತಿದೆ. ಕರ್ನಾಟಕದವರಿಗೆ ಸರಿಯಾಗಿ ತೆರಿಗೆ ಪಾಲು ಕೊಡ್ತಿಲ್ಲ. ಇದು ಕನ್ನಡಿಗರಿಗೆ ಮಾಡಿದ ದ್ರೋಹ ಅಲ್ವಾ?
ಈ ಅನ್ಯಾಯದ ವಿರುದ್ಧ ಹೋರಾಟ ಮಾಡೋದು ಬೇಡ್ವಾ? ಈ ಅನ್ಯಾಯ ಸರಿಪಡಿಸಬೇಕು ಅಂದ್ರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಸೋಲಿಸಿ. ಈ ಹಿಂದಿನಂತೆ ಮುಂದೆಯೂ ನಮಗೆ ಆಶೀರ್ವದಿಸಿ ಎಂದು ಒತ್ತಾಯಿಸಿದರು.
#Siddaramaiah #CMofKarnataka #Mandya #BJPJDS