ರಾಜ್ಯದ ಜನಪ್ರತಿನಿಧಿಗಳ ಮುಖ್ಯಸ್ಥನಾಗಿರುವ ಸಿಎಂ ಸಿದ್ದರಾಮಯ್ಯ ನಿನ್ನೆ ಇಡೀ ದಿನ ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ರು. ಜನರ ನೋವುಗಳಿಗೆ ಸ್ಪಂದಿಸಿದ ರೀತಿ ರಾಜ್ಯದ ಜನರ ಮನಸೂರೆಗೊಳ್ಳುವಂತೆ ಮಾಡಿದೆ. ಮುಖ್ಯಮಂತ್ರಿ ಸರ್ಕಾರಿ ನಿವಾಸ ಕೃಷ್ಣಾದಲ್ಲಿ ನಡೆದ ಜನತಾ ದರ್ಶನದಲ್ಲಿ ಭಾಗಿಯಾಗಲು ರಾಜ್ಯದ ಮೂಲೆ ಮೂಲೆಗಳಿಂದಲೂ ಜನರು ಸಮಸ್ಯೆ ಹೊತ್ತು ಬಂದಿದ್ದರು. ಬೇಡಿಕೆಗಳ ಅರ್ಜಿ ಹಿಡಿದುಕೊಂಡು ಬಂದ ಜನರಿಗೆ ಸಿಎಂ ಸಿದ್ದರಾಮಯ್ಯ ನಿರಾಸೆ ಮಾಡಲಿಲ್ಲ. ಕೃಷ್ಣಾ ಕಚೇರಿಯಿಂದಲೇ ರಾಜ್ಯ ಎಲ್ಲಾ ಜಿಲ್ಲಾಧಿಕಾರಿಗಗಳ ಜೊತೆಗೆ ಸಂಪರ್ಕ ಸಾಧಿಸಿದ ಮುಖ್ಯಮಂತ್ರಿ, ಜನತಾ ದರ್ಶನಕ್ಕೆ ಆಗಮಿಸಿದ ಜನರ ಕಷ್ಟಗಳಿಗೆ ಸ್ಪಂದಿಸಿದ್ರು. ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಸೂಚಿಸಿದರು.
ಶಿಕ್ಷಕನ ಸಂಕಷ್ಟಕ್ಕೆ ಮಿಡಿದ ಸಿಎಂ ಸಿದ್ದರಾಮಯ್ಯ..!
ಜನರ ಬೇಡಿಕೆ, ಮನವಿಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸ್ಥಳದಲ್ಲೇ ಸಮಸ್ಯೆ ಇತ್ಯರ್ಥ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸುತ್ತಲೇ ಅರ್ಜಿಗಳನ್ನು ಸ್ವೀಕಾರ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ, ದಿನಪೂರ್ತಿ ಲವಲವಿಕೆಯಿಂದಲೇ ಜನರ ಸಂಕಷ್ಟಗಳಿಗೆ ಸ್ಪರ್ಧಿಸುವ ಕೆಲಸ ಮಾಡಿದರು. ಜನರ ಮಧ್ಯೆ ನಿಂತು ಅಹವಾಲು ಆಲಿಸಲು ಮುಂದಾದಾಗ ನೂಕು ನುಗ್ಗಲಾಗಿದ್ರಿಂದ ಸಿಎಂ ಒಂದೇ ಕಡೆ ಕುಳಿತು ಜನರ ಮನವಿಗೆ ಸ್ಪಂದಿಸಿದ್ರು. ಕನಕಪುರದಿಂದ ಓರ್ವ ಶಿಕ್ಷಕರು ಮಗನಿಗೆ ಕಿಡ್ನಿ ಸಮಸ್ಯೆ ಇದೆ, ವರ್ಗಾವಣೆ ಕೊಡಿಸಿ ಎಂದು ಬೇಡಿಕೆ ಇಟ್ಟಿದ್ದರು. ಕೂಡಲೇ ವರ್ಗಾವಣೆಗೆ ಸೂಚಿಸಿದ್ದಾರೆ. ವಿಜಯನಗರದಿಂದ ಒಬ್ಬರು ರೈತರು ಪಹಣಿ ವಿಚಾರಕ್ಕೂ ನನ್ನ ಬಳಿ ಬರಬೇಕಾ..? ಎಂದು ವಿಜಯನಗರ ಡಿಸಿಗೆ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ದೂರ..!
ಹಾಸನ ಮೂಲದ ಅಂಧ ವ್ಯಕ್ತಿಯೊಬ್ಬರು ಸಮಸ್ಯೆ ಹೇಳಿಕೊಳ್ಳಲು ಜನತಾ ದರ್ಶನಕ್ಕೆ ಹಾಜರಾಗಿದ್ದರು. ಅಂಕಲ್ ನನಗೆ ಬಿಜೆಪಿಯವರು ಕಿರುಕುಳ ಕೊಡ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಹಾಸನದ ಮಾಜಿ ಶಾಸಕ ಪ್ರೀತಂಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆ. ಜನತಾ ದರ್ಶನದಲ್ಲಿ ಸಿಎಂಗೆ ದೂರು ನೀಡಿದ್ದಾರೆ ಮಹೇಂದ್ರ. ಅನಾಥ ಮಕ್ಕಳಿಗಾಗಿ ಕೊಟ್ಟಿದ್ದ ಭೂಮಿ ಸಮಸ್ಯೆಯಾಗಿದೆ. ಸರ್ಕಾರಿ ನೌಕರೆಯಾಗಿರುವ ತನ್ನ ಪತ್ನಿಗೂ ಮಾಜಿ ಶಾಸಕರು ಕಿರುಕುಳ ಕೊಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೋಲಿಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಸನ ಡಿಸಿ ಸತ್ಯಭಾಮ, ಪ್ರಿನ್ಸಿಪಾಲ್ ಸೆಕ್ರೆಟರಿ ಜಿ.ಸಿ ಪ್ರಕಾಶ್ ಅವರಿಗೂ ದೂರು ಕೊಟ್ಟಿದ್ದೀನಿ ಅವರಿಂದಲೂ ನನಗೆ ನ್ಯಾಯ ಸಿಗಲಿಲ್ಲ. ನನಗೆ ಕೊಡಿಸಿ ಎಂದು ಸಿಎಂ ಬಳಿ ದೂರು ಕೊಟ್ಟರು. ಇದಕ್ಕೆ ಉತ್ತರಿಸಿದ ಸಿಎಂ ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಸಿಎಂ ಎದುರು ಬಂದ ವಿಶೇಷ ಮನವಿಗಳು..!
ಜಮೀನು ಒತ್ತುವರಿ, ಪಹಣಿ ಬದಲಾವಣೆ ಮುಂತಾದವುಗಳ ಬಗ್ಗೆಯೂ ದೂರುಗಳು ಬಂದಿದ್ದರು. ಈ ಸಮಸ್ಯೆಗೆ ರಾಮನಗರ ಡಿಸಿಗೆ ಸ್ಥಳದಲ್ಲೇ ತಾಕೀತು ಮಾಡಿದರು. ಕೆಲವೊಂದು ವಿಶೇಷ ದೂರುಗಳೂ ಸಿಎಂ ಸಿದ್ದರಾಮಯ್ಯ ಎದುರು ಬಂದವು. ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟಿದ್ದಾರೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡರು. ಕೂಡಲೇ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಹೃದಯದಲ್ಲಿ ರಂಧ್ರ ಇದೆ ಚಿಕಿತ್ಸೆಗೆ ದುಡ್ಡುಕೊಡಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಸ್ಪಂದಿಸಿದ ಸಿಎಂ ಸ್ಥಳದಲ್ಲೇ 2 ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದಾರೆ. ‘ಶಕ್ತಿ’ ಮಹಿಳೆಯರಿಗಾಗಿ ಮಾಡಿದ್ದೀರಿ, ಬಸ್ ಸಂಖ್ಯೆ ಹೆಚ್ಚಳ ಮಾಡಿ ಎಂದು ಅಜ್ಜಿಯೊಬ್ಬರು ಮನವಿ ಮಾಡಿಕೊಂಡರು. ಕುರುಬರಿಗೆ ಪೂಜೆಗೆ ಅವಕಾಶವಿತ್ತು. ಕೆಲವರು ಅವಕಾಶ ಕಸಿದುಕೊಂಡಿದ್ದಾರೆ. ಮತ್ತೆ ಕುರುಬರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
![](https://pratidhvani.com/wp-content/uploads/2023/11/ಕಡಕ್೨.jpg)
‘ಗ್ಯಾರಂಟಿ’ ಜೊತೆಗೆ ಕಾಂಗ್ರೆಸ್ಗೆ ಜನಬೆಂಬಲ ಗ್ಯಾರಂಟಿ
ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನತಾ ದರ್ಶನ ಜನರಿಗೆ ಭಾರೀ ಮಟ್ಟದ ಲಾಭ ಮಾಡಿಕೊಡುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಸಚಿವರು ಕೂಡ ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಗಳಿಗೆ ಭೇಟಿ ಕೊಡಬೇಕು. ಜನರು ಬೆಂಗಳೂರಿಗೆ ಅಲೆಯುವ ಹಾಗೆ ಮಾಡಬೇಡಿ. ಜನರ ಮನವಿಗಳ ವಿಲೇವಾರಿಗೆ ವಿಳಂಬ ಮಾಡದೆ, ಪರಿಹಾರ ಮಾಡಬೇಕು. ಭ್ರಷ್ಟಾಚಾರದಿಂದ ಜನರನ್ನು ಅಲೆಯುವಂತೆ ಮಾಡಬೇಡಿ, ಕರ್ತವ್ಯಲೋಪ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಎಷ್ಟೇ ಎತ್ತರದ ಅಧಿಕಾರಿಗಳಾದರೂ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದಿದ್ದಾರೆ. ಈ ಮೂಲಕ ಜನರು ಸರ್ಕಾರದ ವಿರುದ್ಧ ಮನಸ್ಸು ಬದಲಾವಣೆ ಮಾಡದಂತೆ ಸಿಎಂ ಎಚ್ಚರಿಕೆ ಕೂಡ ವಹಿಸಿದ್ದಾರೆ ಎನ್ನಬಹುದು.
ಕೃಷ್ಣಮಣಿ