ಬೆಳಗಾವಿ ರಾಜಕಾರಣ ಈಗಾಗಲೇ ಎರಡು ಕುಟುಂಬಗಳ ನಡುವಿನ ಸಮರಸ್ಯ ಹಾಳಾಗುವುದಕ್ಕೆ ಕಾರಣವಾಗಿದೆ. ಬೆಳಗಾವಿ ರಾಜಕಾರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಸತೀಶ್ ಜಾರಕಿಹೊಳಿ ನಡುವೆ ಸಮರ ಶುರುವಾಗಿದೆ. ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ಕೂಡ ಬೆಳಗಾವಿ ಜಿಲ್ಲೆಯ ಮೇಲೆ ಹಿಡಿತ ಪಡೆದುಕೊಳ್ಳಲು ಯತ್ನಿಸುತ್ತಲೇ ಇದ್ದಾರೆ. ಈ ನಡುವೆ ದಿವಂಗತ ನಾಯಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಕೂಡ ರಾಜಕಾರಣದಲ್ಲಿ ಶಕ್ತಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಶೇಷವಾಗಿ ನಮ್ಮ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಶುಭಕೋರಿದ್ದಾರೆ.
ಉತ್ತರ ಕರ್ನಾಟಕ ರಾಜಕಾರಣದ ಬಗ್ಗೆ ಚರ್ಚೆ..!
ಈಗಾಗಲೇ ರಾಜ್ಯ ಬಿಜೆಪಿ ಉತ್ತರ ಕರ್ನಾಟಕ ಭಾಗದಲ್ಲಿ ಕಳಪೆ ಪ್ರದರ್ಶನ ಮಾಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪುಟಿದೇಳುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉತ್ತರ ಕರ್ನಾಟಕ ರಾಜಕೀಯದ ಮೇಲೆ ಬಿಗಿ ಹಿಡಿತ ಸಾಧಿಸುವ ಉಮೇಧಿನಲ್ಲಿರುವ ವಿಜಯೇಂದ್ರ, ರಮೇಶ್ ಕತ್ತಿ ಅವರನ್ನು ಕರೆದು ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿ ಕತ್ತಿ, ಬೆಳಗಾವಿ ಅಧಿವೇಶನದ ಬಗ್ಗೆ ಚರ್ಚೆ ಆಯ್ತು. ಮುಂಬರುವ ಲೋಕಸಭಾ ಚುನಾವಣೆ ಬಗ್ಗೆಯೂ ಚರ್ಚೆ ಆಯ್ತು. ವರಿಷ್ಠರು ಏನು ಕ್ರಮ ತೆಗೆದುಕೊಳ್ತಾರೆ, ಅದರ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ದೇಶಕ್ಕಾಗಿ, ನರೇಂದ್ರ ಮೋದಿ ಅವರಿಗಾಗಿ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಅದರ ಬಗ್ಗೆ ಸಾಕಷ್ಟು ವಿಷಯ ಚರ್ಚೆ ಮಾಡಿದ್ದೇವೆ. ಇದಕ್ಕಿಂತ ಹೆಚ್ಚಿನ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಸಂಸತ್ ಸ್ಥಾನದ ಟಿಕೆಟ್ ಕೇಳಿ ಪಡೆಯೋದಿಲ್ಲ..!
ಲೋಕಸಭಾ ಚುನಾವಣೆಯ ಟಿಕೆಟ್ ಕೇಳಿದ್ದೀರಾ..? ಅನ್ನೋ ಪ್ರಶ್ನೆಗೆ ಯಾರನ್ನೂ ಟಿಕೆಟ್ ಕೇಳುವ ಗೋಜಿಗೆ ಹೋಗಿಲ್ಲ. ಟಿಕೆಟ್ ಕೇಳಿ ಪಡೆಯುವ ಹವ್ಯಾಸ ಕೂಡ ಇಲ್ಲ. ಕಳೆದ ಬಾರಿ ಚಿಕ್ಕೋಡಿ ಸಂಸದನಾಗಿ ಕೆಲಸ ಮಾಡಿದ್ದೇನೆ. 2009 ರಿಂದ 2014ರ ವರೆಗೂ ಚಿಕ್ಕೋಡಿ ಸಂಸದನಾಗಿ ಕೆಲಸ ಮಾಡಿದ್ದೇನೆ. 2019ರಲ್ಲಿ ಟಿಕೆಟ್ ವಂಚನೆ ಆಯ್ತು. ರಾಜ್ಯಸಭಾ ಸದಸ್ಯನನ್ನಾಗಿ ಮಾಡ್ತೀನಿ ಅಂದ್ರು ಮಾಡಲಿಲ್ಲ. ಎಂಎಲ್ಸಿ ಮಾಡ್ತೀನಿ ಅಂದ್ರು ಮಾಡಲಿಲ್ಲ. ಆಸೆ ನನಗೆ ಇದೆ. ರಾಷ್ಟ್ರೀಯ ನಾಯಕರು ಯಾವುದನ್ನೂ ಮಾಡದಿರೋದು ಬೇಸರ ಇದೆ. ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಬದಲಾವಣೆ ಮಾಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ನನಗಿಂತ ಪಕ್ಷದ ಮುಖಂಡರು ಸರ್ವೆ ಮಾಡಿಸಿ ನಿರ್ಧಾರ ಮಾಡ್ತಾರೆ. ಎಲ್ಲಾ ಕ್ಷೇತ್ರದಲ್ಲಿ ಸರ್ವೆ ಮಾಡಿ ತೀರ್ಮಾನ ಮಾಡಲಿ. ಎಲ್ಲವೂ ವರಿಷ್ಠರಿಗೆ ಬಿಟ್ಟ ತೀರ್ಮಾನ ಎಂದಿದ್ದಾರೆ.
![](https://pratidhvani.com/wp-content/uploads/2023/11/0ee3431cfde3cfc34fcc5ac3d1fca13d1700111432315240_original-1024x768.jpg)
ವಿಜಯೇಂದ್ರ ಬ್ರಹ್ಮಾಸ್ತ್ರ ಬಳಕೆ ಮಾಡ್ತಿದ್ದಾರಾ..?
ಬೆಳಗಾವಿ ಅಧಿವೇಶನ ಸಮಯದಲ್ಲಿ ಬಿಜೆಪಿ ಬೃಹತ್ ಸಮಾವೇಶಕ್ಕೆ ತಯಾರಿ ಮಾಡಿಕೊಳ್ತಿದೆ. ಆದರೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಪಕ್ಷದಿಂದ ಅಂತರ ಕಾಯ್ದುಕೊಳ್ತಿರೋದು ಬಿಜೆಪಿಯ ನೂತನ ಅಧ್ಯಕ್ಷರಿಗೆ ತಲೆಬೇನೆ ತರಿಸಿದೆ. ಇನ್ನು ಬೆಳಗಾವಿಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ರಮೇಶ್ ಜಾರಕಿಹೊಳಿಗೆ ಪರ್ಯಾಯವಾಗಿ ಬೇರೊಬ್ಬರ ಆಯ್ಕೆ ಮಾಡುವುದು ವಿಜಯೇಂದ್ರಗೆ ಅನಿವಾರ್ಯ ಕೂಡ. ಎಲ್ಲಾ ಜಿಲ್ಲೆಗಳಲ್ಲೂ ತನಗೆ ಬೇಕಾದ ನಾಯಕರನ್ನು ಮುಂಚೂಣಿಗೆ ತಂದು ಪಕ್ಷದ ಕೆಲಸ ಕಾರ್ಯಗಳು ಆಗುವಂತೆ ಮಾಡಬೇಕಾದ ಜವಾಬ್ದಾರಿ ವಿಜಯೇಂದ್ರ ಹೆಗಲ ಮೇಲೆ ಇರುವ ಕಾರಣಕ್ಕೆ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಾರೆ. ಇನ್ನು ಮೊದಲಿಗೆ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕವೂ ಸರಿದಾರಿಗೆ ಬರುವ ಲಕ್ಷಣ ಕಾಣಸಿಗದ ಕಾರಣಕ್ಕೆ ವಿಜಯೇಂದ್ರ ಪರ್ಯಾಯ ಆಲೋಚನೆ ಮಾಡಿದ್ದಾರೆ ಎನ್ನಲಾಗ್ತಿದೆ. ಶತ್ರುವನ್ನು ಗೆಲ್ಲಲು ಬೇರೊಂದು ಅಸ್ತ್ರ ಬಳಕೆ ಮಾಡಿದ್ದಾರೆ ಎನ್ನಬಹುದು.
ಕೃಷ್ಣಮಣಿ