ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಭಾರೀ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಯತ್ತ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇಬ್ಬರೂ ಬೇರೆ ಬೇರೆ ವಿಮಾನಗಳಲ್ಲಿ ತೆರಳಿರುವ ಬೆಳವಣಿಗೆಯೇ ಕಾಂಗ್ರೆಸ್ ಒಳರಾಜಕೀಯದ ಬಗ್ಗೆ ಹೊಸ ಕುತೂಹಲ ಹುಟ್ಟಿಸಿದೆ.

ಕಾಂಗ್ರೆಸ್ ಹೈಕಮಾಂಡ್ ನಾಯಕತ್ವದ ಜೊತೆ ನಡೆಯಲಿರುವ ಸಭೆಗಳು ಇದೀಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿವೆ. “ಸಿಎಂ ಸ್ಥಾನ ಬದಲಾವಣೆ ಆಗುತ್ತಾ?”, “ಡಿಕೆ ಶಿವಕುಮಾರ್ಗೆ ಗ್ರೀನ್ ಸಿಗ್ನಲ್ ಸಿಗುತ್ತಾ?”, “ಸಿದ್ದರಾಮಯ್ಯ ಹೈಕಮಾಂಡ್ ಮಾತಿಗೆ ಸ್ಥಾನ ಬಿಡ್ತಾರಾ?” ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ.

ಕಾಂಗ್ರೆಸ್ ಸರ್ಕಾರ ರಚನೆಯಾದ ಆರಂಭದಿಂದಲೇ “ಮೂರು ವರ್ಷ ಸಿದ್ದರಾಮಯ್ಯ, ಎರಡು ವರ್ಷ ಡಿಕೆ ಶಿವಕುಮಾರ್” ಎಂಬ ಪವರ್ ಶೇರಿಂಗ್ ಒಪ್ಪಂದದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಲೇ ಬಂದಿದೆ. ಅಧಿಕೃತವಾಗಿ ಇದನ್ನು ಯಾರೂ ಒಪ್ಪಿಕೊಂಡಿಲ್ಲವಾದರೂ, ಇದೀಗ ಮತ್ತೆ ಅದೇ ಫಾರ್ಮುಲಾ ಮುನ್ನೆಲೆಗೆ ಬಂದಿದೆ.ಡಿಕೆ ಶಿವಕುಮಾರ್ ದೆಹಲಿ ಭೇಟಿಗೆ ವಿಶೇಷ ಮಹತ್ವ ಸಿಕ್ಕಿದ್ದು, ಹೈಕಮಾಂಡ್ ಜೊತೆ ನಾಯಕತ್ವ ಬದಲಾವಣೆ ಕುರಿತು ನಿರ್ಣಾಯಕ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಒಳವಲಯದಲ್ಲಿ “ಡಿಕೆಶಿಗೆ ಈ ಬಾರಿ ಗುಡ್ ನ್ಯೂಸ್ ಸಿಗಬಹುದೇ?” ಎಂಬ ಕುತೂಹಲವೂ ಜೋರಾಗಿದೆ.

ಇದರ ನಡುವೆ ಸಚಿವ ಕೆ ಎನಗ ರಾಜಣ್ಣ ನೀಡಿರುವ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. “ಪರಮೇಶ್ವರ್ ಮುಖ್ಯಮಂತ್ರಿ ಆಗಲಿ” ಎಂಬ ರಾಜಣ್ಣ ಮಾತು ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ತಿರುವು ನೀಡಿದೆ. ಗೃಹ ಸಚಿವ ಜಿ ಪರಮೇಶ್ವರ ಹೆಸರು ಸಿಎಂ ರೇಸ್ನಲ್ಲಿ ಕೇಳಿಬಂದಿರುವುದು ರಾಜಕೀಯ ಲೆಕ್ಕಾಚಾರಗಳನ್ನು ಮತ್ತಷ್ಟು ಗೊಂದಲಗೊಳಿಸಿದೆ.
ಕಾಂಗ್ರೆಸ್ ವಲಯದಲ್ಲಿ ಮತ್ತೊಂದು ಚರ್ಚೆ ಏನೆಂದರೆ, ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರ ಶಕ್ತಿ ಪ್ರದರ್ಶನದ ಮೂಲಕ ಹೈಕಮಾಂಡ್ಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂಬುದು. ಸರ್ಕಾರ ರಚನೆ ವೇಳೆ ನೀಡಿದ್ದ ಭರವಸೆ ಈಡೇರಬೇಕು ಎಂಬ ಒತ್ತಡವನ್ನು ಡಿಕೆಶಿ ಬಣ ಮುಂದಿರಿಸುತ್ತಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ರಾಜಕೀಯ ಬಲವನ್ನು ಹೈಕಮಾಂಡ್ ಮುಂದೆ ಪ್ರದರ್ಶಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸಚಿವರಾದ ಜಿ ಪರಮೇಶ್ವರ, ಸತೀಶ್ ಜಾರಕಿಹೋಳಿ ಹಾಗೂ ಹೆಚ್ ಸಿ ಮಹದೇವಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ ಎಂಬ ಚರ್ಚೆಯೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಒಂದು ಕಡೆ ಸರ್ಕಾರದ ಸ್ಥಿರತೆ, ಮತ್ತೊಂದೆಡೆ ಒಳಬಣಗಳ ಸಮತೋಲನ — ಈ ಎರಡನ್ನೂ ಕಾಯ್ದುಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ಸವಾಲಾಗಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ತರಬೇಕಾ ಅಥವಾ ಈಗಿನ ಸ್ಥಿತಿಯನ್ನೇ ಮುಂದುವರಿಸಬೇಕಾ ಎಂಬ ಗೊಂದಲದಲ್ಲಿದೆ ಎನ್ನಲಾಗುತ್ತಿದೆ.ಇದೀಗ ಎಲ್ಲರ ಕಣ್ಣು ದೆಹಲಿಯ ಸಭೆಗಳತ್ತ ನೆಟ್ಟಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ರಾಜ್ಯ ರಾಜಕೀಯದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ.






