ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ,”ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಎನ್ನುವ ನಿಮ್ಮ ವಾದದ ಪ್ರಕಾರ ಮುಸ್ಲಿಂ ಟೋಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?,”ಎಂದು ಅತಿ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತ ಪಡಿಸಿ, ರವಿ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ.
ಸಿ ಟಿ ರವಿ ಅವರ ಫೇಸ್ ಬುಕ್ ವಾಲ್ ಗೊಮ್ಮೆ ಇಣುಕಿದರೆ ಸಾಕು, ನೆಟ್ಟಿಗರ ಆಕ್ರೋಶ ಯಾವ ಪರಿಯಲ್ಲಿದೆ ಎನ್ನುವುದು ತಿಳಿಯುತ್ತಿದೆ. ರವಿ ಅವರ ಈ ಒಂದು ಪೋಸ್ಟ್ ನಿಂದ ಇಡೀ ಬಿಜೆಪಿಯನ್ನೇ ಗುರಿಯಾಗಿಸಿಕೊಂಡ ನೆಟ್ಟಿಗರು; ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್, ಸಚಿವ ಆರ್ ಅಶೋಕ ಮುಂತಾದ ಬಿಜೆಪಿ ನಾಯಕರು ಮುಸ್ಲಿಂ ಟೋಪಿ ಧರಿಸಿದ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಮನಬಂದಂತೆ ರವಿ ಹಾಗೂ ಬಿಜೆಪಿ ಪಾಳಯದ ಚಳಿ ಬಿಡಿಸುತ್ತಿದ್ದಾರೆ.
ವೀರನಗೌಡ ಬಿ. ಎಚ್ ಎನ್ನುವವರು ರವಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿ, “ಕರುಬರು ಅಷ್ಟೇ ಕಂಬಳಿ ಹಾಕಬೇಕು ಅಂತ ಯಾವ ನಾಲಾಯಕ ಹೇಳಿದ್ದು ನಿಮಗೆ? ಮೊದಲು ಕಂಬಳಿ ಬಗ್ಗೆ ಬುರುಡೆ ಬೊಮ್ಮಾಯಿಯವರು ಮಾತಾಡಿದ್ದಾರೆ. ಕಂಬಳಿ ಹೊದ್ದು ಬೆಳೆದವರಿಗೆ ಕಂಬಳಿ ಹಾಕಲು ಯೋಗ್ಯತೆ ಬೇಕು ಅಂತ ಹೇಳಿದ್ದಕ್ಕೆ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ. ಈ ಹಿಂದೆ ಬೊಮ್ಮಾಯಿ ಕೂಡ ಮುಸ್ಮಿಂ ಟೋಪಿ ಹಾಕಿದ್ದರು. ಅವರು ಯಾರಿಗೆ ಹುಟ್ಟಿರಬೇಕು ಅಂತ ನೀವೆ ಹೇಳಿ?” ಎಂದು ಕುಟುಕಿದ್ದಾರೆ.
“ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಯಾಗಿದ್ದವರು. ಸಾರ್ಥಕ ಆಯ್ತು… ಯಾವ ದೇವರು ಹೊಟ್ಟೆಯೊಳಗೆ ಸೇರಿದ್ರೋ…” ಎಂದು ಸ್ವಾರ್ಣಾ ಭಟ್ ಪೋಸ್ಟ್ ಹಾಕಿದ್ದಾರೆ. ಶ್ರೀಶೈಲ್ ಕೂಡಗಿ ಎನ್ನುವವರು ಪ್ರತಿಕ್ರಿಯಿಸಿ, “ನಾನು ಕೂಡ ಒಬ್ಬ ಕಟ್ಟರ್ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತ. ರಾಜಕೀಯವಾಗಿ ವಿರೋಧಿಸುವುದನ್ನು ಕಲಿಯಿರಿ. ಓರ್ವ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ಯಾರಿಗೆ ಹುಟ್ಟಿರಬೇಕು ಎಂದು ನೀವು ಕೇಳುವುದು ಸಭ್ಯತೆಯ ಎಲ್ಲೆಯನ್ನು ಮೀರಿದಂತೆ ಕಾಣುತ್ತದೆ. ಸಂಸ್ಕಾರ ಬಿಟ್ಟು ಅಹಂಕಾರ ನಮ್ಮದಾದರೆ ಸಂಹಾರ ಆ ದೇವರು ನಮಗೆ ಕೊಡುವ ಉತ್ತರವಾಗಿರುತ್ತದೆ” ಎಂದಿದ್ದಾರೆ.
“ರೀ ಸಿ ಟಿ ರವಿಯವರೇ, ನಿಮ್ಮ ರಾಜಕೀಯ ಏನೇ ಇರಲಿ. ನಿಮ್ಮ ಪದ ಬಳಕೆ ಇಷ್ಟೊಂದು ಕೀಳು ಮಟ್ಟವೇ? ನಿಮ್ಮಂಥವರು ರಾಜಕಾರಣಕ್ಕೆ ಕಪ್ಪು ಚುಕ್ಕೆ. ನಾಚಿಕೆ ಆಗಬೇಕು ನಿಮ್ಮ ನಡವಳಿಕೆಗೆ” ಎಂದು ಕುಮಾರಸ್ವಾಮಿ ಎಂಪಿ ಎನ್ನುವವರು ತಿರುಗೇಟು ನೀಡಿದ್ದಾರೆ. ಕಾಂತರಾಜು ಎನ್ನುವವರು ಪ್ರತಿಕ್ರಿಸಿದ್ದು, “ರವಿ ಅಣ್ಣ, ಜಾತಿ ಧರ್ಮ ಬಿಟ್ಟು ನಿಮ್ಮ ಸಾಧನೆ ಏನು ಎನ್ನುವುದನ್ನು ಮೊದಲು ಜನರಿಗೆ ತಿಳಿಸಿ. ಅದರಲ್ಲೂ ಚಿಕ್ಕಮಂಗಳೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ವಿವರಿಸಿ,” ಎಂದು ವಾಗ್ದಾಳಿ ನಡೆಸಿದ್ದಾರೆ.
“ಸರ್, ಪದಬಳಕೆಯ ಮೇಲೆ ಹಿಡಿತವಿರಲಿ. ನೀವು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಈ ರೀತಿ ಮಾತುಗಳು ಸಮಾಜದಲ್ಲಿ ಶಾಂತಿ ಸಹಬಾಳ್ವೆ ಕದಡುತ್ತವೆ. ನಿಮಗೆಲ್ಲ ರಾಜಕೀಯ ತತ್ವ, ಸಿದ್ಧಾಂತಗಳೇ ಗೊತ್ತಿಲ್ಲ. ನಿಮ್ಮಂಥವರಿಗೆ ಸಮಾಜ ಸೇವೆ ಹೆಸರಿನಲ್ಲಿ ರಾಜಕೀಯ ಏಕೆ ಬೇಕು?” ಎಂದು ಮಹೇಶಗೌಡ್ ಪ್ರಶ್ನಿಸಿದ್ದಾರೆ.
ದೇವರಾಜ್ ಪಾಟೀಲ್ ಎನ್ನುವವರು ಪ್ರತಿಕ್ರಿಯಿಸಿ, “ಈ ನಿಮ್ಮ ನೀಚ ಹೇಳಿಕೆಯಿಂದ ನಿಮ್ಮ ಆಲೋಚನೆ ಮಟ್ಟ ಎಲ್ಲಿದೆ ಎಂದು ತೋರಿಸುತ್ತದೆ. ಯಡಿಯೂರಪ್ಪ, ಜಗದೀಶ ಶೆಟ್ಟರ್, ಮೋದಿ ಅವರು ಮುಸ್ಲಿಂ ಹಬ್ಬದ ದಿನಗಳಲ್ಲಿ ಸಹಜವಾಗಿ ಮುಸ್ಲಿಂ ಸಮುದಾಯದ ವಸ್ತ್ರ ಉಡುಪುಗಳನ್ನು ಧರಿಸಿದ್ದಾರೆ. ಇದು ಬಹುತ್ವ ಭಾರತ. ಬುದ್ಧ, ಬಸವ ,ಸ್ವಾಮಿ ವಿವೇಕನಾಂದ, ಅಂಬೇಡ್ಕರ್ ರ ಭಾರತ ಕಣೋ. ಇಲ್ಲಿ ಯಾರಿಗೆ ಯಾರು ಹುಟ್ಟಿರುವುದಿಲ್ಲ. ಹಾಗೆ ನೋಡಿದ್ರೆ ಸ್ವಾಮಿ ವಿವೇಕಾನಂದರು ತಮ್ಮ ಬರವಣಿಗೆಯಲ್ಲಿ ಮಹಮ್ಮದ್ ಪೈಗಂಬರ್ ರ ಬಗ್ಗೆ ತುಂಬಾ ಹೊಗಳಿದ್ದಾರೆ. ನಿಮ್ಮ ಪ್ರಕಾರ ಸ್ವಾಮಿ ವಿವೇಕನಾಂದರು ಮುಸ್ಲಿಂರಿಗೆ ಹುಟ್ಟಿದ್ದಾರಾ? ನಿಮ್ಮ ಹೇಳಿಕೆ ಸರಿ ಇಲ್ಲ ರವಿ ಸರ್. ರಾಜ್ಯದಲ್ಲಿ ಮಾನ್ಯ ಸಿದ್ದರಾಮಯ್ಯನವರ ವರ್ಚಸ್ಸು ನೋಡಿ ತಾವು ಹತಾಶರಾದ್ದಂತೆ ಕಾಣುತ್ತಿದ್ದು, ನಿಮ್ಮ ಮನಸ್ಥಿತಿ ಕುಗ್ಗಿ ಈ ರೀತಿ ಮಾತನಾಡುತ್ತಿದ್ದೀರಿ” ಅಂತ ತಿರುಗೇಟು ನೀಡಿದ್ದಾರೆ.
ಇನ್ನು, ದಿನೇಶ್ ದೊಡ್ಡಮನೆ ಎನ್ನುವವರು, ಅಯೋಗ್ಯ ಚೀಟಿ ರವಿ ಹಿರಿಯ ನಾಯಕ, ಮಾಜಿ ಸಿಎಂಗೆ ಯಾವ ರೀತಿ ಗೌರವ ನೀಡಬೇಕು ಎನ್ನುವುದನ್ನು ನಿಮ್ಮ ಆರ್ ಎಸ್ ಎಸ್ ಕಲಿಸಿಲ್ಲವೇ? ಅಥವಾ ಅಲ್ಲಿ ಕಲಿಸುವುದು ಇದೇನಾ?” ಎಂದು ಕುಟುಕಿದ್ದಾರೆ.
ಒಟ್ಟಾರೆ ಸಿ ಟಿ ರವಿ ಅವರ ಈ ಒಂದು ಪೋಸ್ಟ್ ಆರ್ ಎಸ್ ಎಸ್, ಬಿಜೆಪಿ ಹಾಗೂ ಪಕ್ಷದ ನಾಯಕರನ್ನು ತೀವ್ರ ಮುಜುಗರಕ್ಕೆ ಒಳಗಾಗುವಂತೆ ಮಾಡಿದೆ.