ಕಾಂಗ್ರೆಸ್ನಲ್ಲಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತ ರಾಜ್ಯದಲ್ಲಿ ವಿರೋಧ ಪಕ್ಷ ಮಾಡಬೇಕಿದ್ದ ಕೆಲಸವನ್ನು ಸ್ವಪಕ್ಷೀಯರೇ ಮಾಡುತ್ತಿದ್ದಾರೆ. ಈಗಾಗಿ ಕೊಂಚ ನಿರಾಳವಾಗಿರುವ ಬಿಜೆಪಿ ಪಾಳಯಕ್ಕೆ ಕಾಂಗ್ರೆಸ್ ಮಣ್ಣು ಮುಕ್ಕಿಸುವ ಕೆಲಸ ಶುರು ಮಾಡಿದೆ. ಸರ್ಕಾರ ರಚನೆ ಆಗಿ 4 ತಿಂಗಳು ಕಳೆದರೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ದಿಕ್ಕು ಕಾಣದ ಹಡಗಿನಂತೆ ಬಿಜೆಪಿ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಮತ್ತೊಂದು ಕಡೆ ನಾಯಕರು ತೆರೆಮರೆಗೆ ಸರಿದು ಪಕ್ಷದಿಂದಲೇ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಮಾತ್ರ ಡಿನ್ನರ್ ಮೀಟ್ ನೆಪದಲ್ಲಿ ಕಮಲಕ್ಕೆ ಬಿಸಿನೀರು ಸುರಿಯುವ ಕೆಲಸಕ್ಕೆ ಸಜ್ಜಾಗ್ತಿದೆ.
ಲಿಂಗಾಯತ ಸಿಎಂ ಕುರಿತು ಶಾಮನೂರು ಹೇಳಿಕೆ ಚರ್ಚೆ..!
ಕಾಂಗ್ರೆಸ್ ಸರ್ಕಾರಕ್ಕೆ ಇಕ್ಕಟ್ಟು ಸೃಷ್ಟಿಸಿದ ಲಿಂಗಾಯತ ಲಡಾಯಿ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ಡಿನ್ನರ್ ಸಭೆ ಆಯೋಜನೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಸಿದ್ದರಾಮಯ್ಯ ಸಭೆ ಕರೆದ ಉದ್ದೇಶವೇ ಬೇರೆ ಎನ್ನುವುದು ಕಾಂಗ್ರೆಸ್ ನಾಯಕರ ಮಾತು. ಜಾತಿಗಣತಿ ಬಿಡುಗಡೆ ಮಾಡಿದ್ರೆ ಲೋಕಸಭೆಯಲ್ಲಿ ಲಾಭ ಆಗುವ ಸಾಧ್ಯತೆಗಳಿವೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಏನೆಲ್ಲಾ ಮಾಡ್ಬೇಕು. ಸಚಿವರು ಜನತಾ ದರ್ಶನ ಮಾಡುವ ಮೂಲಕ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ಬೇಕು ಅನ್ನೋ ಸೂಚನೆ ರವಾನೆ ಆಗಿದೆ ಎನ್ನಲಾಗಿದೆ.
ಚಳಿಗಾಲದ ಅಧಿವೇಶನಕ್ಕೂ ಸರ್ಕಾರದ ತಯಾರಿ..
ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲದ ಅಧಿವೇಶ ನಡೆಸುವ ದಿನಾಂಕ ಘೋಷಣೆ ಆಗಲಿದ್ದು, ವಿರೋಧ ಪಕ್ಷದ ನಾಯಕನಿಲ್ಲದೆ ಸೊರಗಿರುವ ಬಿಜೆಪಿಯನ್ನು ಮತ್ತಷ್ಟು ವೀಕ್ ಮಾಡ್ಬೇಕು. ಹಾಗು ಬಿಜೆಪಿ ಹಾಗು ಜೆಡಿಎಸ್ ಮೈತ್ರಿಯಿಂದ ಕೆಲವೊಂದು ಕಡೆ ಕಾಂಗ್ರೆಸ್ಗೆ ಲಾಭ ಆಗಲಿದ್ದು, ಆ ಲಾಭವನ್ನು ಕೈಜಾರದಂತೆ ನೋಡಿಕೊಳ್ಳಬೇಕು. ಇನ್ನು ಕೆಲವೊಂದು ಕಡೆ ಇಬ್ಬರ ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟ ಆಗುವ ಸಾಧ್ಯತೆ ಇರುವ ಕಡೆ ಬದಲಿ ವ್ಯವಸ್ಥೆ ಏನು ಮಾಡ್ಬೇಕು..? ಅನ್ನೋ ಬಗ್ಗೆ ಸಚಿವರೇ ಮುಂದಾಳತ್ವ ತೆಗೆದುಕೊಂಡು ಲೋಕಸಭೆಗೆ ತೊಂದರೆ ಆಗದಂತೆ ಯೋಜನೆ ರೂಪಿಸಲು ಸಿಎಂ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಡಿನ್ನರ್ ಸಭೆ ಬಗ್ಗೆ ಕಾಂಗ್ರೆಸ್ ಹಬ್ಬಿಸಿದ ಸುಳ್ಳು..
ಶಾಮನೂರು ಶಿವಶಂಕರಪ್ಪ ಸಿಎಂ ಸ್ಥಾನದ ಬಗ್ಗೆ ಹೇಳಿದ್ದ ಹೇಳಿಕೆ ಬಗ್ಗೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ ಎಂದೇ ಎಲ್ಲರನ್ನು ನಂಬಿಸಲಾಗಿತ್ತು. ಇದನ್ನು ಕಾಂಗ್ರೆಸ್ ನಾಯಕರೇ ಮಾಧ್ಯಮಗಳ ಎದುರು ಹರಡಿದ್ರು. ಆದರೆ ಶಾಮನೂರು ಶಿವಶಂಕರಪ್ಪ ಅವರನ್ನೇ ಸಭೆಗೆ ಆಹ್ವಾನ ಮಾಡದೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ ಅನ್ನೋದನ್ನು ನಂಬುವುದಾದ್ರು ಹೇಗೆ..? ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲೇ ಇದ್ದಾರೆ. ಇನ್ನು ಗುರುವಾರ ಸಚಿವ ಸಂಪುಟ ಸಭೆ ಬಳಿಕ ಸಚಿವರನ್ನು ಮಾತ್ರ ಔತಣಕೂಟಕ್ಕೆ ಆಹ್ವಾನ ಮಾಡಲಾಗಿತ್ತು. ಈ ಸಭೆಯಲ್ಲಿ ಕೇವಲ ಲೋಕಸಭೆ ಚುನಾವಣೆ ಹಾಗು ನಾಯಕತ್ವ ಇಲ್ಲದ ಬಿಜೆಪಿಯನ್ನು ಕಟ್ಟಿಹಾಕುವ ಬಗ್ಗೆ ಮಾತ್ರವೇ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನುವುದು ಆಪ್ತ ಮೂಲಗಳಿಂದ ಸಿಕ್ಕಿರುವ ಪಕ್ಕಾ ಮಾಹಿತಿ. ಅದಕ್ಕೇ ಹೇಳೋದು ಬಹಿರಂಗವಾಗಿ ಹೇಳಿದ್ದು ರಾಜಕೀಯದಲ್ಲಿ ಸುಳ್ಳು ಅಂತಾ.
ಕೃಷ್ಣಮಣಿ