ಬೆಂಗಳೂರು: ತಲಘಟ್ಟಪುರ ಮೆಟ್ರೋ ನಿಲ್ದಾಣದ ಸಮೀಪ ಕನಕಪುರ ರಸ್ತೆಯಲ್ಲಿನ ಲಿಂಗಧೀರನಹಳ್ಳಿಯಲ್ಲಿ ಹಿರಿಯ ನಾಗರಿಕರಿಗಾಗಿ ನಿರ್ಮಿಸಲಾಗಿರುವ ಫೀಲ್ ಆಟ್ ಹೋಮ್ ಎರಡನೇ ಕೇಂದ್ರವನ್ನು ಇಂಧನ ಸಚಿವ ಕೆಜೆ ಜಾರ್ಜ್ ಉದ್ಘಾಟಿಸಿದರು.

ಬಿಸಿ ಶಿವಣ್ಣ ಪ್ರತಿಷ್ಠಾನ(ಬಿಸಿಎಸ್ಎಫ್)ವು ಅಲ್ಮಾನ್ಸ್ ಐಟಿ ಸೊಲ್ಯುಷನ್ಸ್ ಎಲ್ಎಲ್ಪಿ ಸಂಸ್ಥೆ ಹಾಗೂ ಮತ್ತಿತ್ತರ ದಾನಿಗಳ ನೆರವಿನೊಂದಿಗೆ ಹೊಸ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಕೆಜೆ ಜಾರ್ಜ್, ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ವೃದ್ಧಿಸುತ್ತಿದ್ದೆ. ವಿಶ್ವಸಂಸ್ಥೆಯ ಇತ್ತೀಚಿನ ವರದಿಯೊಂದು 2036ರ ಹೊತ್ತಿಗೆ ಭಾರತದಲ್ಲಿನ ಹಿರಿಯ ನಾಗರಿಕರ ಜನಸಂಖ್ಯೆ ಶೇ.15ಕ್ಕೆ ಏರಲಿದೆ ಎಂದು ವರದಿ ನೀಡಿದೆ.

ನಗರೀಕರಣ ಮತ್ತು ಸಾಮಾಜಿಕ ಸಂರಚನೆಯಲ್ಲಿನ ಬದಲಾವಣೆಗಳಿಂದಾಗಿ ವೃದ್ಧರು ಮಾನಸಿಕ ತಿರಸ್ಕಾರ ಮತ್ತು ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಪರದಾಡುವಂತೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಿರಿಯ ನಾಗರಿಕರು ತಮ್ಮ ಜೀವನವನ್ನು ಘನತೆ ಮತ್ತು ಒತ್ತಡ ಮುಕ್ತವಾಗಿ ಮುಂದುವರಿಸಲು ಅವರಿಗೆ ಸುರಕ್ಷಿತ ಮತ್ತು ಪೂರಕವಾದ ವಾತಾವರಣ ಕಲ್ಪಿಸಲು ಹಿರಿಯ ನಾಗರಿಕರ ವಾಸ್ತವ್ಯ ಮತ್ತು ಕಾಳಜಿ ಕೇಂದ್ರದ ಅಗತ್ಯವಿದೆ. ಫೀಲ್ ಆಟ್ ಹೋಮ್ನ ಈ ಆರೈಕೆ ಕೇಂದ್ರವು ಹಿರಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡನ್ನು ಗಮನಿಸಿ ವೈವಿಧ್ಯಮಯವಾದ ಸೇವೆಗಳು ಮತ್ತು ಸೌಲಭ್ಯಗಳನ್ನು ನೀಡುತ್ತದೆ ಎಂದು ಹೇಳಿದರು.






