ಹಿಜಾಬ್ ವಿವಾದ (Hijab Row) ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಈ ವಿವಾದ ಸೃಷ್ಟಿಯಾಗಲು ಮತ್ತು ಉಲ್ಬಣಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ (Raghupathi Bhat) ಕಾರಣ ಎಂದು ಆರೋಪಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಆತ ಶಾಸಕನಾಗಲು ಅಸಮರ್ಥ ಎಂದು ಆರೋಪಿಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ (Abdul Majid) ಫೆಬ್ರವರಿ 17 ರಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಸ್ಯೆ ಉಲ್ಬಣಗೊಳ್ಳಲು ಶಾಸಕರು ನೈತಿಕ ಹೊಣೆಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕು. ರಘುಪತಿ ಭಟ್ ಅವರು ಶಾಸಕರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾದ ಕಾರಣ ಈ ವಿಷಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದವಾಗಲು ಕಾರಣವಾಗಿದೆ ಇದಕ್ಕೆಲ್ಲ ಶಾಸಕ ಭಟ್ ಅವರೇ ಕಾರಣ ಎಂದು ಆರೋಪಿಸಿದೆ.
ನಾವು ಜವಾಬ್ದಾರಿಯುತ ರಾಜಕಾರಣ ಮಾಡುತ್ತೇವೆ, ರಾಜಕೀಯ (politics) ಮಾಡಲು ವಿದ್ಯಾರ್ಥಿ ಸಮುದಾಯದ ಭವಿಷ್ಯದೊಂದಿಗೆ ಆಟವಾಡುವ ಅಗತ್ಯವಿಲ್ಲ ಎಂದರು ಬಿಜೆಪಿ ಮಾಡಿರುವ ಆರೋಪಕ್ಕೆ ಕಿಡಿಕಾರಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದಾಗ ಶಾಸಕರು ಮಧ್ಯಪ್ರವೇಶಿಸಲಿಲ್ಲ ಆದರೆ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಪ್ರವೇಶ ನಿರಾಕರಿಸಿದಾಗ ಭಟ್ ಕ್ರಿಯಾಶೀಲರಾದರು. ಆಗ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘಟನೆಯಿಂದ (Campus Front of India) ಸಹಾಯವನ್ನು ಕೋರಿದರು.

ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬಹುದಿತ್ತು ಆದರೆ ಶಾಸಕರು ಆ ಕ್ರಮವನ್ನು ಅನುಸರಿಸಲಿಲ್ಲ ಎಂದು ಮಾಜಿದ್ ಆರೋಪಿಸಿದ್ದಾರೆ. ಶಾಸಕರ ಮುಸ್ಲಿಂ ವಿರೋಧಿ ಧೋರಣೆಯಿಂದಾಗಿ ವಿದ್ಯಾರ್ಥಿ ಸಮುದಾಯದ ಭವಿಷ್ಯ ಅತಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.
SDPI ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ರಘುಪತಿ ಭಟ್
ಹಿಜಾಬ್ ವಿಚಾರದಲ್ಲಿ ಎಸ್ಡಿಪಿಐನಂಥ ಸಂಘಟನೆಗಳಿಗೆ ಉತ್ತರ ಹೇಳುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದ ಮುಸ್ಲಿಮರು ಪ್ರಶ್ನೆ ಕೇಳಿದರೆ ಉತ್ತರಿಸುತ್ತೇನೆ. ಹೊರಗಿನಿಂದ ಬಂದವರಿಗೆ ಏಕೆ ಉತ್ತರಿಸಬೇಕು. ಎಸ್ಡಿಪಿಐನಿಂದ ಪ್ರಶಂಸಾ ಪತ್ರ ಪಡೆಯುವ ಅಗತ್ಯ ನನಗಿಲ್ಲ. ಕಾಂಗ್ರೆಸ್ ನಾಯಕರ ಬೆಂಬಲವೂ ನಮಗಿದೆ ಎಂದು ಶಾಸಕ ರಘುಪತಿ ಭಟ್ ಎಸ್ಡಿಪಿಐ ಹೇಳಿಕೆಗೆ ತಿರುಗೇಟು ನೀಡಿದದ್ಧಾರೆ.
ಈಗ ಬಂದಿರುವುದು ಮಧ್ಯಂತರ ಆದೇಶವಷ್ಟೇ. ಅದು ಸಂಪೂರ್ಣ ತೀರ್ಪಲ್ಲ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಬಗ್ಗೆ ನಮಗೆ ಗೌರವವಿದೆ. ಕೋರ್ಟ್ನ ನಿರ್ಣಯದ ಬಗ್ಗೆ ಆಶಾಭಾವವಿದೆ. ದೇಶದಲ್ಲಿ ಸಂವಿಧಾನವಿದೆ. ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಕೂಡ ನಮಗೆ ನ್ಯಾಯ ಒದಗಿಸಲಿದೆ ಎನ್ನುವ ಆಶಾಭಾವವಿದೆ ಎಂದು ಹೇಳಿದ್ದಾರೆ.