
ಬೆಂಗಳೂರು :ಸರ್ಕಾರೀ ಜಮೀನನ್ನು ಒತ್ತುವರಿ ಮಾಡಿಕೊಂಡು ಕಾಫಿ ಇನ್ನಿತರೆ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ಕಂದಾಯ ಭೂಮಿಯನ್ನು ಗುತ್ತಿಗೆ ನೀಡುವ ಸರ್ಕಾರದ ತೀರ್ಮಾನವು ಅನುಷ್ಠಾನ ಗೊಳ್ಳಲು ಕಂದಾಯ ಇಲಾಕೆ ಮುಂದಾಗಿದೆ. ಓತ್ತುವರಿದಾರರಿಗೇ ಗುತ್ತಿಗೆ ನೀಡುವ ಪ್ರಕ್ರಿಯೆಗೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಸಿ ಎನ್ ಮೀನಾ ನಾಗರಾಜ್ ಅವರು ಗುರುವಾರ ಪ್ರಕಟಣೆ ಹೊರಡಿಸಿದ್ದಾರೆ.

ಈ ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ಅವರು ಗುತ್ತಿಗೆ ಪಡೆಯಬಯಸುವ ಒತ್ತುವರಿದಾರರಿಗೆ ಅರ್ಜಿಗಳನ್ನು ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದ್ದಾರೆ.ರಾಜ್ಯದಲ್ಲಿ ಸರ್ಕಾರೀ ಅಂಕಿ ಅಂಶಗಳ ಪ್ರಕಾರವೇ ಒಟ್ಟು 76,844 ಎಕರೆ ಭುಮಿಯನ್ನು ಒತ್ತುವರಿ ಮಾಡಿಕೊಂಡು ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ಹಾಸನ ಜಿಲ್ಲೆಯಲ್ಲಿ 29,348 ಎಕರೆ ಕೊಡಗು 26,250, ಚಿಕ್ಕಮಗಳೂರಿನಲ್ಲಿ 20,844 ಉಡುಪಿಯಲ್ಲಿ 398 ಎಕರೆ ಸೇರಿದ್ದು ರೈತರು ಅನಧಿಕೃತ ಸಾಗುವಳಿಯನ್ನು ಮಾಡುತ್ತಿದ್ದಾರೆ.
ಅವರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ಸಿಕ್ಕಿದ್ದು 1_1_2005 ರ ಪೂರ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಜಮೀನನ್ನು ಗುತ್ತಿಗೆ ನೀಡುವ ಬಗ್ಗೆ ನಿಗಧಿತ ನಮೂನೆ 9 ರಲ್ಲಿ ಅರ್ಜಿಯನ್ನು ತಹಸೀಲ್ದಾರ್ ಅವರ ಕಚೇರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೀನಾ ನಾಗರಾಜ್ ಅವರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ತರೀಕೆರೆ ತಾಲ್ಲೂಕುಗಳ ತಹಸೀಲ್ದಾರ್ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆದಿರುವ ಜಮೀನನ್ನು ಗುತ್ತಿಗೆ ನೀಡುವ ಸಲುವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.ಪ್ಲಾಂಟೇಷನ್ ಜಮೀನು ಒತ್ತುವರಿದಾರರು ಇದರ ಸದುಪಯೋಗಪಡಿಸಿಕೊಳ್ಳಲು ತಿಳಿಸಿರುವ ಜಿಲ್ಲಾಧಿಕಾರಿಗಳು ನಿಗಧಿತ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕ್ಯೂಆರ್ ಕೋಡ್ ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಸಂಪರ್ಕಿಸಿದಾಗ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದರಲ್ಲದೆ , ರಾಜ್ಯ ಸರ್ಕಾರವೇ ಬೆಂಗಳೂರಿನಲ್ಲಿ ಪ್ರಕಟಣೆ ಹೊರಡಿಸಿದ್ದು ಇದು ಇಡೀ ರಾಜ್ಯಕ್ಕೆ ಅನ್ವಯ ಆಗುತ್ತದೆ ಎಂದು ಹೇಳಿದರು. ಕೊಡಗಿನಲ್ಲಿ ಈವರೆಗೆ ಯಾವುದೇ ಅರ್ಜಿ ಸಲ್ಲಿಕೆ ಆಗಿಲ್ಲ ಎಂದೂ ತಿಳಿಸಿದರು.
ಈ ಒತ್ತುವರಿ ಮಾಡಿಕೊಂಡಿರುವವರಲ್ಲಿ ಶೇಕಡಾ 95 ರಷ್ಟು ರೈತರು ಐದು ಎಕರೆ ಭೂಮಿಯೊಳಗೆ ಒತ್ತುವರಿ ಮಾಡಿಕೊಂಡಿದ್ದು ಒತ್ತುವರಿ ಭೂಮಿಯನ್ನು ಸಕ್ರಮ ಮಾಡಿಕೊಡಲು ಸರ್ಕಾರದ ಮೇಲೆ ದಶಕಗಳಿಂದಲೇ ಒತ್ತಡ ಹೇರುತಿದ್ದರು.ಆದರೂ ಸರ್ಕಾರ ಅರ್ಜಿ ಜೊತೆಗೆ ಕೇಳಿರುವ ದಾಖಲೆಗಳನ್ನು ಒದಗಿಸಲು ಒತ್ತುವರಿದಾರರಿಗೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಒತ್ತುವರಿದಾರರಿಗೆ ಇದರ ಲಾಭ ಸಿಗುವುದಿಲ್ಲ ಎಂದು ಬೆಳೆಗಾರರು ಹೇಳುತ್ತಿದ್ದಾರೆ.
ಈ ಹಿಂದೆ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದರು.ಅಂದಿನ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ಚಿಕ್ಕಮಗಳೂರಿಗೇ ಬಂದು ಬೆಳೆಗಾರರ ಜೊತೆ ಸಮಾಲೋಚನೆ ನಡೆಸಿ ಒತ್ತುವರಿ ಭೂಮಿ ಲೀಸ್ ಗೆ ನೀಡಲು ಸ್ಲಾಬ್ ನಿಗಧಿ ಪಡಿಸಿದ್ದರು.
ಅಲ್ಲದೆ ಸರಳವಾದ ನಿಯಮಾವಳಿಗಳನ್ನೂ ರೂಪಿಸಿ ಅಂದಿನ ಸರ್ಕಾರದ ಒಪ್ಪಿಗೆಯನ್ನೂ ಪಡೆದಿದ್ದರು.ಇದೀಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಲವು ಷರತ್ತುಗಳನ್ನು ವಿಧಿಸಿರುವುದರಿಂದ ಎಲ್ಲರೂ ಅದನ್ನು ಪೂರೈಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಳೆಗಾರ ಸಂಘಟನೆ ಕೆಜಿಎಫ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು ಇದರಿಂದ ಸಾವಿರಾರು ಕಾಫಿ ಬೆಳೆಗಾರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.











