ನವದೆಹಲಿ: 22 ನೇ ಭಾರತ-ರಷ್ಯಾ ಅಂತರ-ಸರ್ಕಾರಿ ಆಯೋಗದ ಮಿಲಿಟರಿ ಮತ್ತು ಮಿಲಿಟರಿ ತಾಂತ್ರಿಕ ಸಹಕಾರ ಸಚಿವರ ಸಭೆ ಹಿನ್ನೆಲೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಆಂಡ್ರೇ ಬೆಲೌಸೊವ್ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ರಷ್ಯಾದ ರಕ್ಷಣಾ ಸಚಿವರು ಇಂದು ಮಾಣೆಕ್ಷಾ ಕೇಂದ್ರದಲ್ಲಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರೊಂದಿಗೆ 22 ನೇ ಭಾರತ-ರಷ್ಯಾ ಅಂತರ-ಸರ್ಕಾರಿ ಆಯೋಗದ ಮಿಲಿಟರಿ ಮತ್ತು ಮಿಲಿಟರಿ ತಾಂತ್ರಿಕ ಸಹಕಾರ ಸಚಿವರ ಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅದಕ್ಕೂ ಮುನ್ನ
ಇಬ್ಬರು ರಾಷ್ಟ್ರೀಯ ಯುದ್ದ ಸ್ಮಾರಕ್ಕಕ್ಕೆ ಭೇಟಿ ನೀಡಿದ್ದರು.
ಎಸ್- 400 ಕ್ಷಿಪಣಿ ವ್ಯವಸ್ಥೆಗಳ ಖರೀದಿ, ಸುಖೋಯ್-30 ಎಂಕೆಐ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ರಷ್ಯಾದಿಂದ ಇತರ ಮಿಲಿಟರಿ ಸಾಧನಗಳನ್ನು ಖರೀದಿಸುವುದರಲ್ಲಿ ಭಾರತದ ಆಸಕ್ತಿ ಕುರಿತು ಉಭಯ ನಾಯಕರು ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ.
ರಷ್ಯಾದಿಂದ ಭಾರತಕ್ಕೆ, ಯುದ್ಧೋಪಕರಣಗಳ ತ್ವರಿತ ಪೂರೈಕೆ ಹಾಗೂ ಎರಡೂ ದೇಶಗಳ ನಡುವಿನ ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಗುರಿ ಇದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದರು.
ಭಾರತ-ರಷ್ಯಾದ 23ನೇ ವಾರ್ಷಿಕ ಶೃಂಗಸಭೆಗಾಗಿ ಅಧ್ಯಕ್ಷ ವ್ಹಾದಿಮಿರ್ ಪುಟಿನ್ ಅವರು ಇಂದು ಮತ್ತು ನಾಳೆ ಭಾರತದಲ್ಲಿ ಇರಲಿದ್ದು, ಅವರ ನಿಯೋಗದಲ್ಲಿ ಆಂಡ್ರೆ ಬೆಲೊಸೊವ್ ಕೂಡ ಇದ್ದಾರೆ.










