ಬೆಂಗಳೂರು : ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿನ ನಾಯಕತ್ವದ ವಿಚಾರ ಬದಿಗೆ ಸರಿಯುವ ಹೊತ್ತಿಗೆಯೇ ಬಿಜೆಪಿಯಲ್ಲಿ ರೆಬಲ್ ಟೀಂ ಮತ್ತೆ ಸಕ್ರಿಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆಯಾದ ದಿನದಿಂದಲೂ ಈವರೆಗೂ ಅತೃಪ್ತ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ವಿಜಯೇಂದ್ರ ನಾಯಕತ್ವವನ್ನು ವಿರೋಧಿಸಿ ಹೇಳಿಕೆಗಳನ್ನು ನೀಡುವ ಮೂಲಕ ಬಹಿರಂಗವಾಗಿ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುವುದಾಗಿ ಹಾದಿ ಬೀದಿಯಲ್ಲಿ ಮಾತನಾಡುತ್ತ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಾವು ಯಾವುದೇ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ. ಅವರಿಂದ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯದಾಗುವುದಿಲ್ಲ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಎದುರಿಸುವಲ್ಲಿ, ವೈಫಲ್ಯಗಳ ಬಗ್ಗೆ ಹೋರಾಡುವಲ್ಲಿ ವಿಜಯೇಂದ್ರ ನಾಯಕತ್ವ ಸಫಲವಾಗುವುದಿಲ್ಲ ಎನ್ನುವುದು ರೆಬಲ್ ಟೀಂನ ವಾದವಾಗಿದೆ. ಅಲ್ಲದೇ ಸರ್ಕಾರದ ವಿರುದ್ಧ ಹೋರಾಟಗಳನ್ನು ಸಂಘಟಿಸುವುದರಲ್ಲಿ ವಿಜಯೇಂದ್ರ ಯಶಸ್ವಿಯಾಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿನ ಪ್ರಸ್ತುವ ವಿದ್ಯಮಾನಗಳ ಬಗ್ಗೆಯೂ ರೆಬಲ್ ನಾಯಕರು ಬಿಜೆಪಿ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ.

ಹೀಗಾಗಿಯೇ ಕಳೆದ ಕೆಲ ದಿನಗಳಿಂದ ಸೈಲೆಂಟಾಗಿದ್ದ ಬಿಜೆಪಿ ಅತೃಪ್ತ ನಾಯಕರ ತಂಡ ಇದೀಗ ಮತ್ತೆ ತನ್ನ ಕೆಲಸ ಪ್ರಾರಂಭಿಸಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ದ ಆಗಾಗ ಕೆಂಡ ಕಾರುವ ಈ ಟೀಂ ರಾಜ್ಯ ಬಿಜೆಪಿಯ ವಿರುದ್ಧ ದೂರನ್ನು ಹೊತ್ತು ದೆಹಲಿಗೆ ಹಾರಿದೆ. ಬಿಜೆಪಿಯ ಹೈಕಮಾಂಡ್ನ ಕೆಲ ಪ್ರಮುಖ ನಾಯಕರನ್ನು ಭೇಟಿಯಾಗಿ ವಿಜಯೇಂದ್ರ ನಾಯಕತ್ವದ ವಿರುದ್ದ ದೂರನ್ನು ನೀಡಿದೆ. ಅಲ್ಲದೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆಯೂ ಮನವಿ ಮಾಡಿದ್ದು, ಮುಂಬರುವ ಎಲ್ಲ ಚುನಾವಣೆಗಳ ಹಿತದೃಷ್ಟಿಯಿಂದ ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಿದ್ದಾರೆ.

ಪ್ರಮುಖವಾಗಿ ದಾವಣಗೆರೆಯಿಂದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್, ಕುಮಾರ ಬಂಗಾರಪ್ಪ, ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಸೇರಿದಂತೆ ಹಲವು ರೆಬಲ್ಸ್ ನಾಯಕರು ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ನಂತೆಯೇ ಬಿಜೆಪಿಯಲ್ಲಿಯೂ ಒಳ ಬೇಗುದಿ ಹೆಚ್ಚಾಗಿದೆ, ಈ ಹಿನ್ನೆಲೆಯಲ್ಲಿ ಭಿನ್ನಮತದ ಕಾವು ಪಕ್ಷದ ವರಿಷ್ಠರ ಅಂಗಳಕ್ಕೆ ತಲುಪಿದೆ.
ಇತ್ತ ಅತೃಪ್ತ ನಾಯಕರು ವರಿಷ್ಠರನ್ನು ಭೇಟಿಯಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಪುತ್ರನ ಪಟ್ಟಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಬರಬಾರದು, ವಿಜಯೇಂದ್ರ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಖುದ್ದು ಪುತ್ರನ ಪರ ಯಡಿಯೂರಪ್ಪ ಅಖಾಡಕ್ಕಿಳಿದಿದ್ದು, ದಿಢೀರ್ ಮಾಜಿ ಸಿಎಂ ದೆಹಲಿಯ ವಿಮಾನ ಹತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ 2ದಿನಗಳಿಂದ ದೆಹಲಿಯ ಕರ್ನಾಟಕ ಭವನದಲ್ಲಿಯೇ ಠಿಕಾಣಿ ಹೂಡಿರುವ ನಾಯಕರು ಸಾಧ್ಯವಾದಷ್ಟು ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಪ್ಲಾನ್ ಮಾಡಿದ್ದಾರೆ.

ಅಲ್ಲದೇ ಇದೇ ರಬೆಲ್ ಗುಂಪಿನ ಇನ್ನೋರ್ವ ನಾಯಕ ಹಾಗೂ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಯಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ವಿಜಯೇಂದ್ರ ವಿರುದ್ಧ ದೂರಿನ ಪಟ್ಟಿಯನ್ನು ಹೊತ್ತು ತೆರಳಿರುವ ರೆಬಲ್ ನಾಯಕರ ಮನವಿಗೆ ಬಿಜೆಪಿ ಹೈಕಮಾಂಡ್ ನಾಯಕರು ಮಣೆ ಹಾಕ್ತಾರಾ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.






