• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮೌಲ್ಯಗಳ ಪುನರ್‌ಸ್ಥಾಪನೆ ವರ್ತಮಾನದ ತುರ್ತು..

ನಾ ದಿವಾಕರ by ನಾ ದಿವಾಕರ
August 4, 2024
in Top Story, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ, ಶೋಧ
0
ಮೌಲ್ಯಗಳ ಪುನರ್‌ಸ್ಥಾಪನೆ ವರ್ತಮಾನದ ತುರ್ತು..
Share on WhatsAppShare on FacebookShare on Telegram

2024ರ ಚುನಾವಣೆಗಳು ಭಾರತದಲ್ಲಿ ಪ್ರಜಾಪ್ರಭುತ್ವ ಉಸಿರಾಡುತ್ತಿರುವುದನ್ನು ಖಚಿತಪಡಿಸಿವೆ

ADVERTISEMENT

 2024ರ ಲೋಕಸಭಾ ಚುನಾವಣೆಗಳು ಎರಡು ರೀತಿಯಲ್ಲಿ ನಿರ್ಣಾಯಕವಾಗಿ ಪರಿಣಮಿಸಿವೆ. ಮೊದಲನೆಯದು ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷದ ಆಧಿಪತ್ಯವನ್ನು ಜನಸಾಮಾನ್ಯರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದ್ದಾರೆ. ಜಾತಿ, ಧರ್ಮ ಮತ್ತಿತರ ಯಾವುದೇ ಭಾವನಾತ್ಮಕ ವಿಚಾರಗಳು ಜನಸಾಮಾನ್ಯರನ್ನು ಎಷ್ಟೇ ಭ್ರಮಾಧೀನರನ್ನಾಗಿ ಮಾಡಿದರೂ ಅಂತಿಮವಾಗಿ ಸಮಾಜದ ಕೆಳಸ್ತರದ ಜನತೆಗೆ ಅನ್ನ ನೀರು ವಸತಿ ಮತ್ತು ಉದ್ಯೋಗ ಈ ಜೀವನಾವಶ್ಯಕ ಅಂಶಗಳೇ ಪ್ರಧಾನವಾಗುತ್ತವೆ ಎನ್ನುವುದನ್ನು ಮತದಾರರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಎರಡನೆಯ ನಿರ್ಣಾಯಕ ಅಂಶ ಎಂದರೆ ಒಂದು ದೇಶ-ಒಂದು ಭಾಷೆ–ಒಂದು ಧರ್ಮ ಎಂಬ ಸಂಕುಚಿತ ಚಿಂತನಾ ಕ್ರಮವನ್ನು ಭಾರತದ ಬಹುಸಾಂಸ್ಕೃತಿಕ ಸಮಾಜ ಒಪ್ಪುವುದಿಲ್ಲ ಎಂಬ ಸಂದೇಶವನ್ನು  ರವಾನಿಸಿದ್ದಾರೆ. ಈ ಎರಡು ಅಮೂಲ್ಯ ಸಂದೇಶಗಳ ಜೊತೆಗೇ ಸಾಮಾನ್ಯ ಜನತೆಯೂ ಆಳ್ವಿಕೆಯ ವಿಧಾನವನ್ನು ಜಾಗ್ರತೆಯಿಂದ ಗಮನಿಸುತ್ತಿರುತ್ತದೆ ಎಂಬ ಸೂಕ್ಷ್ಮ ಸಂಗತಿಯನ್ನೂ 2024 ಸ್ಪಷ್ಟಪಡಿಸಿದೆ.

 2024ರ ಫಲಿತಾಂಶಗಳು ಬಿಜೆಪಿಯ ನೈತಿಕ ಸೋಲು ಎನ್ನುವುದನ್ನು ಒಪ್ಪಲೇಬೇಕಿದೆ. “ ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌ “ ಘೋಷಣೆಯೊಂದಿಗೆ ಚುನಾವಣಾ ಕಣವನ್ನು ಪ್ರವೇಶಿಸಿದ ಬಿಜೆಪಿ ತನ್ನ ಸಂಭಾವ್ಯ ಸರ್ಕಾರದ ಸಂಭಾವ್ಯ ಸಚಿವ ಸಂಪುಟವನ್ನೂ ನಿರ್ಧರಿಸಿರುವ ರೀತಿಯಲ್ಲಿ ಭಾರತದ ಜನತೆ ಎದುರಿಸಬೇಕಾದ ʼನವ ವಿಕಸಿತ ಭಾರತದʼ ನವೀನ ಆಳ್ವಿಕೆಯ ನೀತಿಗಳನ್ನೂ ಮುಂದಿಟ್ಟಿತ್ತು. ಈ ರಾಜಕೀಯ ದಾರ್ಷ್ಟ್ಯಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಆದರೆ ಈ ಜನಾದೇಶದ ಗೆಲುವನ್ನು ಪ್ರಜಾಪ್ರಭುತ್ವದ ಗೆಲುವು ಎನ್ನಲು ಸಾಧ್ಯವೇ ? ಈ ಪ್ರಶ್ನೆಗೆ ಮುಂದಿನ ದಿನಗಳು ಉತ್ತರ ಹೇಳುತ್ತವೆ. ಏಕೆಂದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸಾಂವಿಧಾನಿಕ ಅಡಿಪಾಯವನ್ನು ಸಡಿಲಗೊಳಿಸುವ ಪ್ರಯತ್ನಗಳೊಂದಿಗೆ ಸ್ವಾತಂತ್ರ್ಯದ ಪೂರ್ವಸೂರಿಗಳ ಕನಸಿನ ಸಂಸದೀಯ ಪ್ರಜಾಪ್ರಭುತ್ವದ ತಳಪಾಯವನ್ನೂ ಶಿಥಿಲಗೊಳಿಸುವ ಪ್ರಯತ್ನಗಳೂ ನಡೆದಿವೆ. ಕೊಂಚ ಮಟ್ಟಿಗೆ ಯಶಸ್ವಿಯಾಗಿರುವುದೂ ವಾಸ್ತವ.

 ಮರುಹುಟ್ಟೋ  ? ಮರುಸ್ಥಾಪನೆಯೋ ?

 ಈ ಸಡಿಲಗೊಂಡಿರುವ ತಳಪಾಯವನ್ನು ಮರಳಿ ಮೂಲ ಸ್ಥಿತಿಗೆ ತರಬೇಕಾದರೆ ಭವಿಷ್ಯದ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್‌ ಸ್ಥಾಪನೆಯಾಗಬೇಕು. ಇದು ದೇಶದ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ವಿವೇಚನೆಯನ್ನು ನಿರ್ಧರಿಸುವ ಸಂಸತ್ತಿನಲ್ಲಿ ಪ್ರತಿಧ್ವನಿಸಬೇಕು. ಡಿಸೆಂಬರ್‌ 2023ರಲ್ಲಿ ವಿರೋಧ ಪಕ್ಷಗಳ 140 ಸಂಸದರನ್ನು ಅಮಾನತಿನಲ್ಲಿರಿಸಿ ಅನುಮೋದಿಸಲಾದ ಹೊಸ ಮೂರು ಕ್ರಿಮಿನಲ್‌ ಕಾಯ್ದೆಗಳು ಜುಲೈ 1 ರಿಂದ ಜಾರಿಯಾಗಿವೆ. ಈ ಕಾನೂನುಗಳಲ್ಲಿರಬಹುದಾದ ನ್ಯೂನತೆಗಳನ್ನು, ಲೋಪದೋಷಗಳನ್ನು ಅಥವಾ ಕೊರತೆಗಳನ್ನು ಸರಿಪಡಿಸಿ ಭಾರತದ ಪ್ರಜಾಪ್ರಭುತ್ವವನ್ನು ಸುಸ್ಥಿತಿಯಲ್ಲಿರಿಸಲು ಯಾವ ಪ್ರಯತ್ನಗಳು ನಡೆಯುತ್ತವೆ ? ಸಬಲೀಕರಣಗೊಂಡಿರುವ ವಿರೋಧ ಪಕ್ಷಗಳು ಏಕಾಭಿಪ್ರಾಯದಿಂದ ಈ ನಿಟ್ಟಿನಲ್ಲಿ ಸರ್ಕಾರವನ್ನು ಮಣಿಸಲು ಸಾಧ್ಯವೇ ?  ಬಿಜೆಪಿಯೊಡನೆ ಕೈಜೋಡಿಸಿರುವ ತೆಲುಗುದೇಶಂ ಮತ್ತು ಜೆಡಿಯು ಪಕ್ಷಗಳು ತಮ್ಮ ಪ್ರಾದೇಶಿಕ ಸಂಕುಚಿತತೆಯನ್ನು ಮೀರಿ, ದೇಶದ ಸಾರ್ವಭೌಮತ್ವವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರಲು ಸಾಧ್ಯವೇ ? ಈ ಜಟಿಲ ಪ್ರಶ್ನೆಗಳು ನಮ್ಮ ಮುಂದಿವೆ.

 ಮೊದಲನೆಯದಾಗಿ 2024ರ ಫಲಿತಾಂಶಗಳನ್ನು ಪ್ರಜಾಪ್ರಭುತ್ವದ ಗೆಲುವು ಎಂದು ಅರ್ಥೈಸಿದರೆ ಅದು ಅರ್ಧಸತ್ಯವಾಗುತ್ತದೆ. ಏಕೆಂದರೆ- ಚುನಾವಣೆಗಳು ನಡೆದ ರೀತಿ, ಚುನಾವಣಾ ಆಯೋಗ ಅನುಸರಿಸಿದ ನೀತಿಗಳು, ಪ್ರಚಾರದಲ್ಲಿ ಕಂಡುಬಂದಂತಹ ದ್ವೇಷಾಸೂಯೆಗಳ ಛಾಯೆ, ಗೆಲುವು ಸಾಧಿಸಿದ ಅಭ್ಯರ್ಥಿಗಳ ಪೈಕಿ 251 ಸಂಸದರು ಕ್ರಿಮಿನಲ್‌ ಆರೋಪಗಳನ್ನು ಎದುರಿಸುತ್ತಿರುವುದು, ಈ ಅನುಪಾತವು 2009ರ ಶೇಕಡಾ 30 ರಿಂದ 2024ರಲ್ಲಿ ಶೇಕಡಾ 46ಕ್ಕೆ ಏರಿರುವುದು, ಶೇಕಡಾ 93ರಷ್ಟು ಸಂಸದರು ಕೋಟ್ಯಧಿಪತಿಗಳಾಗಿರುವುದು, ಪುನರಾಯ್ಕೆಯಾಗಿರುವ ಶೇಕಡಾ 29ರಷ್ಟು ಸಂಸದರ ಆಸ್ತಿ ದುಪ್ಪಟ್ಟಾಗಿರುವುದು, ಕಳೆದ 15 ವರ್ಷಗಳಲ್ಲಿ ಸಂಸದರ ಸರಾಸರಿ ಆಸ್ತಿಯ ಪ್ರಮಾಣ 15 ಪಟ್ಟು ಹೆಚ್ಚಾಗಿರುವುದು-  ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಸಮಾನತೆಯಿಂದ ತುಂಬಿ ತುಳುಕುತ್ತಿರುವ ದೇಶದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ ಎಂದು ಹೇಗೆ ಹೇಳಲು ಸಾಧ್ಯ ?

ಎರಡನೆಯದಾಗಿ ಬಿಜೆಪಿಯ ನೈತಿಕ ಸೋಲಿಗೆ ಅಥವಾ ಕಾಂಗ್ರೆಸ್‌ ಪಕ್ಷದ ಪುನರುತ್ಥಾನಕ್ಕೆ ಕಾರಣವಾದ ಬಡತನ, ಹಸಿವು, ನಿರುದ್ಯೋಗ ಮತ್ತು ಶ್ರೀಸಾಮಾನ್ಯನ ನಿತ್ಯ ಬದುಕಿನ ಸಂಕಟಗಳ ಮೂಲ ಯಾವುದು ಎಂಬ ಪ್ರಶ್ನೆ ಚುನಾವಣೆಗಳುದ್ದಕ್ಕೂ ಎಲ್ಲಿಯೂ ಚರ್ಚೆಗೊಳಗಾಗಲಿಲ್ಲ.  1990ರ ಅನಂತರದಲ್ಲಿ ಭಾರತದ ಆರ್ಥಿಕತೆ ವಿಶ್ವಮಾನ್ಯತೆಯನ್ನು ಪಡೆಯುವ ಮಟ್ಟಿಗೆ ಬೆಳೆದಿದ್ದು ʼವಿಶ್ವಗುರುʼ ಪಟ್ಟ ಅಲಂಕರಿಸಲು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಮೂರೂವರೆ ದಶಕದ ಆರ್ಥಿಕ ನೀತಿಗಳು ಬಹುಸಂಖ್ಯಾತ ಜನರನ್ನು ಬಡತನ-ನಿರ್ಗತಿಕತೆಯ ಅಂಚಿಗೆ ದೂಡಿರುವುದು ಚರಿತ್ರೆಯ ವಿಡಂಬನೆಯೇ ಸರಿ. ಆದರೆ ಈ ಅಸಮಾನತೆ ಮತ್ತು ಸಂಪನ್ಮೂಲಗಳ ಅಸಮಾನ ಹಂಚಿಕೆಗೆ ಮೂಲ ಕಾರಣವಾದ ನವ ಉದಾರವಾದಿ ಬಂಡವಾಳಶಾಹಿ, ಕಾರ್ಪೊರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳು ಚುನಾವಣಾ ಸಂಕಥನಗಳ ಕೇಂದ್ರ ವಸ್ತು ಆಗಲೇ ಇಲ್ಲ. ನಾಳೆಗಳನ್ನು ಎಣಿಸುತ್ತಿರುವ ಅಸಂಖ್ಯಾತ ಜನತೆಗೆ ಪ್ರಜಾಪ್ರಭುತ್ವ ಎನ್ನುವುದು ಗಗನಕುಸುಮವಾಗಿಯೇ ಉಳಿದುಬಿಡುವ ಸಾಧ್ಯತೆಗಳಿವೆ. ಹಾಗೆಯೇ ನವ ಉದಾರವಾದ ಮತ್ತು ಜಾಗತೀಕರಣ ಅವರನ್ನು ಇನ್ನೂ ಭ್ರಮಾಧೀನಗೊಳಿಸುವ ಸಾಧ್ಯತೆಗಳೂ ಇವೆ.

 ಹಾಗಾಗಿ 2024ರ ಫಲಿತಾಂಶಗಳನ್ನು ಪ್ರಜಾಪ್ರಭುತ್ವ ಮೌಲ್ಯಗಳ ಗೆಲುವಿನ ಹೆಜ್ಜೆ ಎಂದು ಹೇಳಬಹುದೇ ಹೊರತು ನೇರವಾಗಿ ಪ್ರಜಾಪ್ರಭುತ್ವದ ಗೆಲುವು ಎನ್ನಲಾಗುವುದಿಲ್ಲ. ಈ ಹಾದಿಯಲ್ಲಿ ಭಾರತ ಇನ್ನೂ ಬಹುದೂರ ಸಾಗಬೇಕಿದೆ. ಭವಿಷ್ಯದ ದೃಷ್ಟಿಯಿಂದ ನಮ್ಮನ್ನು ಕಾಡಬೇಕಿರುವುದು, ಮೋದಿ-ಶಾ ಜೋಡಿಯಿಂದ ಭಾರತೀಯ ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಹಾನಿಯಾಗುವುದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆ ಅಲ್ಲ . ಬದಲಾಗಿ ಇನ್ನೂ ಬಿಗಿಯಾಗಲಿರುವ ಕಾರ್ಪೋರೇಟ್‌ ಮಾರುಕಟ್ಟೆಯ ಹಿಡಿತದಿಂದ, ಸಮಾಜದಲ್ಲಿ ಇನ್ನೂ ಸಕ್ರಿಯವಾಗಿ-ಕ್ರಿಯಾಶೀಲವಾಗಿರುವ ಬಲಪಂಥೀಯ ಮತಾಂಧತೆ, ಪ್ರಾಚೀನ ಪಿತೃಪ್ರಧಾನ ಧೋರಣೆ ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಹಿಡಿತದಿಂದ ಹೇಗೆ ಬಿಡಿಸಿಕೊಳ್ಳುವುದು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಏಕೆಂದರೆ ಭಾರತದ ಸಂವಿಧಾನಕ್ಕೆ ಗ್ರಾಂಥಿಕವಾಗಿ ಯಾವುದೇ ಅಪಾಯ ಇಲ್ಲದೆ ಹೋದರೂ, ಮೌಲಿಕವಾಗಿ ಅದನ್ನು ಶಿಥಿಲಗೊಳಿಸುವ ವಿಧಾನಗಳನ್ನು ಭಾರತದ ಆಳುವ ವರ್ಗಗಳು ಅರಿತಿವೆ. ಈ ನಿಟ್ಟಿನಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.

 ಸಮಾನತೆ ಮತ್ತು ಸಂಪನ್ಮೂಲ ವಿತರಣೆ

 ಸಂವಿಧಾನದ ಆಶಯಗಳಾದ ಸಮಾನತೆ, ಭ್ರಾತೃತ್ವ, ಜಾತ್ಯತೀತತೆಯನ್ನು ಕಾಪಾಡುವುದೇ ಅಲ್ಲದೆ, ಭಾರತೀಯ ಪ್ರಜಾಪ್ರಭುತ್ವದ ಅಂತಃಸತ್ವ ಎನ್ನಬಹುದಾದ ಒಕ್ಕೂಟ ಸಂರಚನೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳು ಯಾವ ನೀತಿಗಳನ್ನು ಅನುಸರಿಸುತ್ತವೆ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ಒಕ್ಕೂಟ ಸಂರಚನೆಗೆ (Federal structure) ಸಂಚಕಾರ ಬರುವುದೇ ಆದರೆ ಅದು ಮೂಲತಃ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯಿಂದಲೇ ಎರಗುತ್ತದೆ. ಏಕೆಂದರೆ ಬಂಡವಾಳಶಾಹಿಗೆ ತನ್ನ ಬಾಹುಗಳನ್ನು ವಿಸ್ತರಿಸಿ, ಕಾರ್ಪೊರೇಟ್‌ ಸಾಮ್ರಾಜ್ಯವನ್ನು ವಿಸ್ತರಿಸಬೇಕಾದರೆ ಬಲಿಷ್ಠ ಕೇಂದ್ರೀಕೃತ ಆಡಳಿತ ಅತ್ಯವಶ್ಯವಾಗುತ್ತದೆ. ತಮ್ಮ ರಾಜ್ಯಗಳ ಸ್ವಹಿತಾಸಕ್ತಿಯ ಸಂಕುಚಿತತೆಯನ್ನು ದಾಟಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಎನ್‌ಡಿಎ ಮಿತ್ರಪಕ್ಷಗಳು ಯೋಚಿಸದೆ ಹೋದರೆ ಕಾರ್ಪೋರೇಟ್‌ ಬಂಡವಾಳವು ರಾಜ್ಯಗಳನ್ನೂ ಆಡಳಿತಾತ್ಮಕವಾಗಿ ಬಲಹೀನಗೊಳಿಸುತ್ತದೆ.

 ಈ ಅಪಾಯವನ್ನು ಸಮರ್ಥವಾಗಿ ಎದುರಿಸಲು ಅಥವಾ ಇದರಿಂದ ಪಾರಾಗಲು ಬೇಕಾದ ಆಡಳಿತಾತ್ಮಕ ಪರಿಹಾರೋಪಾಯ ಮಾರ್ಗಗಳನ್ನು ರಾಹುಲ್-ಖರ್ಗೆ ನೇತೃತ್ವದ ಕಾಂಗ್ರೆಸ್‌ ಗುರುತಿಸಿದೆಯೇ ? INDIA ಒಕ್ಕೂಟವು ಕೇಂದ್ರದಲ್ಲಿ ಅಥವಾ ಕೆಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರ ಹಿಡಿಯುವ ಉದ್ದೇಶದಿಂದಲೇ ರಚನೆಯಾಗಿದ್ದರೂ, ಇದನ್ನೂ ದಾಟಿದಂತೆ ಭಾರತದ ಪ್ರಜಾಪ್ರಭುತ್ವಕ್ಕೆ ಆಗಿರುವ ಪೆಟ್ಟುಗಳನ್ನು ಮತ್ತು ಸಂವಿಧಾನಾತ್ಮಕ ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳನ್ನು ನಿವಾರಿಸಲು ಒಂದು ಸಮಾನ ಕಾರ್ಯಯೋಜನೆಯನ್ನು ರೂಪಿಸಿದೆಯೇ ? ಭಾರತದ ಪ್ರಜಾಪ್ರಭುತ್ವ ಅವಸಾನವಾಗುತ್ತಿರುವುದು ಆಳ್ವಿಕೆಯ ಕೇಂದ್ರಗಳಲ್ಲಿ ಮತ್ತು ಅದನ್ನು ನಿರ್ದೇಶಿಸುವ ಆರ್ಥಿಕತೆಯ ನೆಲೆಗಳಲ್ಲಿ. ಬಂಡವಾಳಶಾಹಿಯು ಸದಾ ಪ್ರೋತ್ಸಾಹಿಸುವ ಹಣಕಾಸು ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಕ್ರೂರ ದಬ್ಬಾಳಿಕೆಯ ಮಾದರಿಗಳನ್ನು ದಾಟಿ, ಒಂದು ಜನಕೇಂದ್ರಿತ ನೀತಿಯನ್ನು INDIA ಒಕ್ಕೂಟ ಹೊಂದಿರಲು ಸಾಧ್ಯವೇ ?

ಇದು ಸಾಧ್ಯವಾದರೆ ಮಾತ್ರ ಪ್ರಜಾಪ್ರಭುತ್ವದ ಅವಸಾನವನ್ನು ತಡೆಗಟ್ಟಲು ಸಾಧ್ಯ. ಇಲ್ಲವಾದರೆ ಇದೇ ಸಂವಿಧಾನದ ಅಡಿಯಲ್ಲೇ, ಇದೇ ಪ್ರಜಾಪ್ರಭುತ್ವ ಮಾದರಿಯ ಚೌಕಟ್ಟಿನೊಳಗೇ, ತಳಮಟ್ಟದ ಸಮಾಜವನ್ನು ಮತ್ತಷ್ಟು ಅಂಚಿಗೆ ನೂಕುವ ವಿಧಾನಗಳನ್ನು ನಮ್ಮ ರಾಜಕೀಯ ವ್ಯವಸ್ಥೆ ರೂಢಿಸಿಕೊಂಡಿದೆ, ಅನುಸರಿಸುತ್ತಲೂ ಬಂದಿದೆ. ಸಾಮಾಜಿಕ-ಆರ್ಥಿಕ ಸಮಾನತೆಯ ಸಾಂವಿಧಾನಿಕ ಆಶಯವನ್ನು ಸಾಕಾರಗೊಳಿಸಬೇಕಾದರೆ ದೇಶದ ಸಂಪತ್ತು ಮತ್ತು ಸಂಪನ್ಮೂಲಗಳ ಸಮಾನ ವಿತರಣೆ, ಕನಿಷ್ಠ ನ್ಯಾಯಯುತ ವಿತರಣೆಯಾದರೂ ಆಗಬೇಕಲ್ಲವೇ ? ರಾಹುಲ್‌ ಗಾಂಧಿ ತಮ್ಮ ಪ್ರಚಾರದ ವೇಳೆ ಈ ಸೂಕ್ಷ್ಮವನ್ನು ಪ್ರಸ್ತಾಪಿಸಿದ್ದರಿಂದಲೇ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದ್ದನ್ನು ಗಮನಿಸಿದ್ದೇವೆ. ಅಂದರೆ ಸಾರ್ವಜನಿಕ ನಿರೂಪಣೆಗಳನ್ನು ಸೃಷ್ಟಿಸುವಂತಹ ಸಮಾಜವೇ ತಳಮಟ್ಟದ ಸಮಾಜದ ಅಭಿಪ್ರಾಯಗಳನ್ನೂ ತಾನೇ ಉತ್ಪಾದಿಸುವ ಮೂಲಕ, “ ನವ ವಿಕಸಿತ ಭಾರತದ ” ಅಭಿವೃದ್ಧಿ ಕಾರ್ಯಸೂಚಿಗಳನ್ನು ನಿಷ್ಕರ್ಷೆ ಮಾಡುತ್ತದೆ ಎಂದಾಯಿತಲ್ಲವೇ ? ಇದನ್ನು ಹಿಮ್ಮೆಟ್ಟಿಸದ ಹೊರತು ನಿಜಾರ್ಥದಲ್ಲಿ ಪ್ರಜಾಪ್ರಭುತ್ವದ ಅವಸಾನವನ್ನು ತಡೆಗಟ್ಟಲಾಗುವುದಿಲ್ಲ. ಅಲಂಕಾರಿಕ ಪ್ರಯತ್ನಗಳು ಜನರನ್ನು ಮತ್ತಷ್ಟು ಭ್ರಮಾಧೀನರಾಗಿಸುತ್ತವೆ.

 ತಳಮಟ್ಟದ ಪ್ರಜಾಪ್ರಭುತ್ವ ಮೌಲ್ಯಗಳು

 ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಸಂರಕ್ಷಿಸಿ ಭವಿಷ್ಯದ ತಲೆಮಾರಿಗಾಗಿ ಉಳಿಸುವ ಜವಾಬ್ದಾರಿ ಅಂತಿಮವಾಗಿ ಯಾರದು ? ಇದು ಕೇವಲ ಅಧಿಕಾರ ರಾಜಕಾರಣದ ಪ್ರಶ್ನೆಯೋ ಅಥವಾ ಜನಸಮುದಾಯಗಳಿಗೆ ಸಂಬಂಧಿಸಿದ ಪ್ರಶ್ನೆಯೋ ? ನಿಜ,  ಭಾರತದ ಪ್ರಜಾಪ್ರಭುತ್ವ ಪುನರುಜ್ಜೀವನಕ್ಕಾಗಿ ಹಪಹಪಿಸುತ್ತಿದೆ. ಏಕೆಂದರೆ ಏಳೂವರೆ ದಶಕಗಳ ಗಣತಂತ್ರದ ಆಳ್ವಿಕೆಯ ನಂತರವೂ ನಮ್ಮಲ್ಲಿ ಪ್ರಜಾಪ್ರಭುತ್ವವು ಮೌಲಿಕವಾಗಿ ತಳಮಟ್ಟದ ಸಮಾಜದಲ್ಲಿ ನೆಲೆಯಾಗಿಲ್ಲ. ಕಾಲಕಾಲಕ್ಕೆ ನಡೆಯುವ ಚುನಾವಣೆಗಳನ್ನು ಹೊರತುಪಡಿಸಿ ನೋಡಿದಾಗ, ಸಾಂಸ್ಥಿಕವಾಗಿ ಸಾಂಘಿಕವಾಗಿ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲೂ ಸಹ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು (Democratic ethos)  ಅಪವಾದವೆಂಬಂತೆ ಅಲ್ಲಲ್ಲಿ ಗುರುತಿಸಲು ಸಾಧ್ಯವಷ್ಟೇ. . ಸಂವಿಧಾನಕ್ಕೆ ನಿಷ್ಠೆ ತೋರುವ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧತೆ ಇರುವ ಯಾವ ಪಕ್ಷ/ಸಂಘಟನೆಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಜೀವಂತವಾಗಿದೆ ? ಇದು ಆತ್ಮಸಾಕ್ಷಿಯನ್ನು ಕಾಡಬೇಕಾದ ಪ್ರಶ್ನೆ.

 ತಳಮಟ್ಟದಿಂದ ದೆಹಲಿಯವರೆಗೆ ವಿಸ್ತರಿಸುವ ಪ್ರಜಾಪ್ರಭುತ್ವದ ಹಂದರದಲ್ಲಿ ಸಾಂಸ್ಥಿಕ ಅಥವಾ ಸಾಂಘಿಕ  ನೆಲೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸದೆಯೇ, ದೇಶದ ಆಳ್ವಿಕೆಯ ಕೇಂದ್ರಗಳಲ್ಲಿ ಪ್ರಜಾಪ್ರಭುತ್ವವನ್ನು ಕಾಣುವುದಾದರೂ ಹೇಗೆ ? ಕಾರ್ಯಾಂಗ, ಶಾಸಕಾಂಗ , ನ್ಯಾಯಾಂಗ ಹಾಗೂ ಮಾಧ್ಯಮ ವಲಯಗಳಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ತಳಮಟ್ಟದಿಂದಲೇ ಜನಸಾಮಾನ್ಯರ ಅಭಿವ್ಯಕ್ತಿಯ ನೆಲೆಯಲ್ಲಿ ಈ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕಾಗುತ್ತದೆ. ಇಂದು ಸಂವಿಧಾನ ಮತ್ತು ಪ್ರಜಾಸತ್ತೆಗಾಗಿ ಹೋರಾಡುತ್ತಿರುವ ಎಲ್ಲ ಪಕ್ಷ, ಸಂಘಟನೆಗಳೂ ಈ ಮೌಲಿಕ ಜವಾಬ್ದಾರಿಯನ್ನು ಅರಿತು, ತಳಸಮಾಜದಲ್ಲಿ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಪುನರ್‌ ಸೃಷ್ಟಿಸಬೇಕಿದೆ. ನಾಗರಿಕ ಸಮಾಜ ಎಂದು ಗುರುತಿಸಲಾಗುವ ಜನಸಮೂಹವೊಂದು ಏಳೂವರೆ ದಶಕಗಳ ಸಾಂವಿಧಾನಿಕ ಫಲಾನುಭವಿಯೂ ಆಗಿದೆ.

 ಈ ಸಮಾಜದ ಜವಾಬ್ದಾರಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಶಿಕ್ಷಣ, ಅಧ್ಯಾತ್ಮ, ಉದ್ಯೋಗ, ವಾಣಿಜ್ಯ ವಲಯಗಳಲ್ಲಿರುವ ಮಿಲೆನಿಯಂ ಜನಸಂಖ್ಯೆಗೆ ಸರಿದಾರಿ ತೋರುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ಸಾಮಾಜಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನೂ ಒಳಗೊಂಡಂತೆ ಎಲ್ಲವನ್ನೂ ಸರಕೀಕರಣಗೊಳಿಸುತ್ತಿರುವ (Commodification) ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆ ಮತ್ತು ಅದಕ್ಕೆ ಪೂರಕವಾಗಿ ಸದೃಢವಾಗುತ್ತಿರುವ ಬಲಪಂಥೀಯ ರಾಜಕಾರಣ ಇವೆರಡನ್ನೂ ಒಟ್ಟಿಗೇ ಎದುರಿಸುವ ಸವಾಲು ಸಮಾಜದ ಮುಂದಿದೆ. ಈ ನಿಟ್ಟಿನಲ್ಲಿ ಯುವ ಸಮಾಜವನ್ನು ಸಜ್ಜುಗೊಳಿಸಬೇಕಿದೆ. ನೆಲಮಟ್ಟದಲ್ಲಿ ಪ್ರಜಾಪ್ರಭುತ್ವದ ಲಕ್ಷಣಗಳ (Democratic ethos) ಬಲವರ್ಧನೆ ಆಗದೆ ಹೊರತು, ಇದು ಸಾಧ್ಯವಾಗುವುದಿಲ್ಲ. ಜಾತಿ, ಧರ್ಮ, ಲಿಂಗತ್ವ ಹಾಗೂ ಅಂತಸ್ತಿನ ಗೋಡೆಗಳನ್ನು ಮುರಿದು ಹೊಸ ಜಗತ್ತನ್ನು ಕಟ್ಟುವ ಕೆಲಸ ಇಂದು ಜರೂರು ಆಗಬೇಕಿದೆ. ಆಗ ಮಾತ್ರ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವುದು, ಶಾಶ್ವತಗೊಳಿಸುವುದು ಸಾಧ್ಯವಾದೀತು.

( ಕೃಪೆ. ಸಮಾಜಮುಖಿ ಮಾಸಪತ್ರಿಕೆ ಆಗಸ್ಟ್‌ 2024)

Tags: BJPCongress Partyna divakaraPratidhvaniನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಜಂಬೂ ಸರ್ಕಸ್ ಟೀಸರ್ ಬಿಡುಗಡೆಸ್ನೇಹ ಪ್ರೀತಿಯ ಸುತ್ತ ಕಾಮಿಡಿ ಕಥಾನಕ.

Next Post

ಬೀದರ್‌ | ಆರು ಪಿಡಿಒಗಳ ವಿರುದ್ಧ ಕ್ರಮಕ್ಕೆ ಶಿಫಾರಸು

Related Posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
0

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನಿವೃತ್ತ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ...

Read moreDetails
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
Next Post

ಬೀದರ್‌ | ಆರು ಪಿಡಿಒಗಳ ವಿರುದ್ಧ ಕ್ರಮಕ್ಕೆ ಶಿಫಾರಸು

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada