ಗಾಲಿ ಜನಾರ್ದನ ರೆಡ್ಡಿ ಅಂದ್ರೆ ಕರ್ನಾಟಕ ರಾಜಕೀಯದಲ್ಲಿ ಕಲರ್ ಫುಲ್ ರಾಜಕಾರಣ ನೆನಪಿಗೆ ಬರುತ್ತೆ. ಹೆಲಿಕಾಪ್ಟರ್ನಲ್ಲಿ ಓಟಾಟ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ರಾಜಕಾರಣಿಗಳೇ ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ. ಇದೀಗ ಮತ್ತೊಮ್ಮೆ ಅದೇ ರೀತಿಯಲ್ಲಿ ರಾಜ್ಯ ರಾಜಕಾರಣಿಗಳ ಮನಸ್ಸಿಗೆ ಚಂಚಲತೆ ತಂದೊಡ್ಡಿರುವುವು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಿರ್ಧಾರ. ನನಗೆ ಬಿಜೆಪಿ ಪಕ್ಷ ತಾಯಿ ಇದ್ದಂತೆ ಎಂದು ಹೇಳುತ್ತಿದ್ದ ಜನಾರ್ದನ ರೆಡ್ಡಿ, ಕ್ರಿಸ್ಮಸ್ ದಿನದಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಈಗಾಗಲೇ ಮನೆ ಮಾಡಿರುವ ರೆಡ್ಡಿ, ಗಂಗಾವತಿಯಿಂದಲೇ ಚುನಾವಣೆಗೂ ಸ್ಪರ್ಧೆ ಮಾಡ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಜನಾರ್ದನ ರೆಡ್ಡಿ ಭಾರತೀಯ ಜನತಾ ಪಾರ್ಟಿಯನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡ್ತಾರಾ..? ಅದು ಸಾಧ್ಯವೇ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ.
ಅಣ್ಣ, ತಮ್ಮ, ಸ್ನೇಹಿತನಿಗೂ ಆಹ್ವಾನ ಇಲ್ಲ – ರೆಡ್ಡಿ
ಬಿಜೆಪಿ ಪಕ್ಷವನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡ್ತಿದ್ದಾರಾ..? ಅಂದ್ರೆ ಇಲ್ಲ ಎಂದು ನೇರವಾಗಿಯೇ ಹೇಳಬಹುದು. ಯಾಕಂದ್ರೆ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷಕ್ಕೆ ಯಾವುದೇ ಹಾನಿ ಮಾಡ್ತಿಲ್ಲ. ಸ್ವತಃ ತನ್ನ ಸಹೋದರರಾದ ಹಾಲಿ ಬಿಜೆಪಿ ಶಾಸಕರು ಕರುಣಾಕರ ರೆಡ್ಡಿ ಹಾಗು ಸೋಮಶೇಖರ ರೆಡ್ಡಿ ಅವರನ್ನು KRPP (Kalyana Rajya Pragathi Party) ಪಕ್ಷಕ್ಕೆ ಆಹ್ವಾನ ಕೊಡ್ತಿಲ್ಲ. ಅಷ್ಟೇ ಅಲ್ಲದೆ ತನ್ನ ನೆಚ್ಚಿನ ಸ್ನೇಹಿತ ಹಾಲಿ ಬಿಜೆಪಿ ಸರ್ಕಾರದ ಸಾರಿಗೆ ಮಂತ್ರಿ ಶ್ರೀರಾಮುಲು ಅವರನ್ನೇ ಕರೆಯುವುದಿಲ್ಲ ಎಂದಿದ್ದಾರೆ. ಇನ್ನು ಬಿಜೆಪಿ ನಾಯಕರೂ ಕೂಡ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆಯನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಈ ನಡುವೆ ಜನಾರ್ದನ ರೆಡ್ಡಿ ಪಕ್ಷ ಘೋಷಣೆ ಮಾಡಿದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಬಹುಪರಾಕ್ ಹೇಳಿದ್ದರು. ಇದು ಕೆಜೆಪಿ ರೀತಿಯಲ್ಲಿ ಬಿಜೆಪಿಗೆ ಇಕ್ಕಟ್ಟು ತರುತ್ತಾ ಅನ್ನೋ ಪ್ರಶ್ನೆಯನ್ನು ಸೃಷ್ಟಿಸಿದೆ.
ಸುಷ್ಮಾ ಸ್ವರಾಜ್ ತಾಯಿ, ಬಿಎಸ್ವೈಗೆ ತಂದೆ ಸ್ಥಾನ..!
ಈ ಹಿಂದೆಯೇ ಹೇಳಿದಂತೆ ಜನಾರ್ದನ ರೆಡ್ಡಿ ನಮಗೆ ಸುಷ್ಮಾ ಸ್ವರಾಜ್ ಅವರು ತಾಯಿ ಸ್ಥಾನದಲ್ಲಿ ಕೈ ಹಿಡಿದು ನಡೆಸಿದ್ದಾರೆ ಎಂದು ಹೇಳಿಕೊಳ್ತಿದ್ರು. ಇದೀಗ ಹೊಸ ಪಕ್ಷ ಘೋಷಣೆ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಹುಪರಾಕ್ ಹೇಳಿರುವ ರೆಡ್ಡಿ, ಅವರು ತಂದೆ ಸ್ಥಾನದಲ್ಲಿ ಇರಲಿದ್ದಾರೆ ಎಂದಿದ್ದಾರೆ. ಅಂದರೆ KRPP (Kalyana Rajya Pragathi Party) ಪಕ್ಷವನ್ನು ಹಿಂದೆ ನಿಂತು ಪೋಷಣೆ ಮಾಡ್ತಾರಾ..? ಅನ್ನೋ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಆದರೆ ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಮಾಡಿದ್ದಾಗ ಇಡೀ ಬಿಜೆಪಿಯಿಂದ ಯಾರೊಬ್ಬರೂ ಹೋಗದಿದ್ದಾಗಲೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿಯಾಗಿದ್ದರು ಎನ್ನುವುದು ವಿಶೇಷ. ಇನ್ನು 2013ರಲ್ಲಿ ಬಿ.ಎಸ್ ಯಡಿಯೂರಪ್ಪ ಸ್ಥಾಪನೆ ಮಾಡಿದ್ದ KJP ಪಕ್ಷದ ರೀತಿಯಲ್ಲೇ ಬಿಜೆಪಿಗೆ ಜನಾರ್ದನ ರೆಡ್ಡಿ ಮುಳುವಾಗ್ತಾರಾ ಅನ್ನೋ ಪ್ರಶ್ನೆಗೆ ಇಲ್ಲ ಎನ್ನುತ್ತಿದೆ ಪ್ರತಿಧ್ವನಿ ಮೂಲಗಳು. ಹಾಗಿದ್ರೆ ಪಕ್ಷ ಸ್ಥಾಪನೆ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಗಂಗಾವತಿಯಿಂದ ಸ್ಪರ್ಧೆ ಗೆಲುವು ಸಾಧ್ಯತೆ, ಕಲ್ಯಾಣದಲ್ಲಿ ಕಮಲಕ್ಕೆ ಸಾಥ್..!
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಹನುಮ ಮಾಲೆ ಹಾಕಿಕೊಂಡು ಈಗಾಗಲೇ ಗೆಲುವಿಗೆ ರಣತಂತ್ರ ಹೂಡಿರುವ ಜನಾರ್ದನ ರೆಡ್ಡಿ, ಪರೋಕ್ಷವಾಗಿ ಕಮಲ ಪಾಳಯಕ್ಕೆ ಸಹಾಯ ಮಾಡಲು ಈ ರೀತಿಯ ಯೋಜನೆ ರೂಪಿಸಿದ್ದಾರೆ ಎನ್ನಲಾಗ್ತಿದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಕಾಂಗ್ರೆಸ್ ಬಗ್ಗುಬಡಿಯುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಷ್ಟೊಂದು ಪ್ರಬಾವ ಇಲ್ಲದ ಕಾರಣ ಮುಸ್ಲಿಂ ಸಮುದಾಯದ ಮತಗಳು ಸಾರಾಸಗಟಾಗಿ ಕಾಂಗ್ರಸ್ ಪಾಲಾದರೆ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶ ಆಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರದಲ್ಲಿ ಕಾಂಗ್ರೆಸ್ ಕೇಕೆ ಹಾಕಲಿದೆ. ಇದೇ ಕಾರಣಕ್ಕೆ ಜನಾರ್ದನ ರೆಡ್ಡಿಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣದಿಂದ ಈಗಾಗಲೇ ಜನಾರ್ದನ ರೆಡ್ಡಿ ಜಾತಿ, ಧರ್ಮ, ಬೇದಭಾವವಿಲ್ಲ, ಎಲ್ಲರ ಜೊತೆಗೂಡಿ ಚುನಾವಣೆ ಮಾಡೋಣ ಎಂದಿದ್ದು, ದರ್ಗಾ ಸೇರಿದಂತೆ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿರುವುದನ್ನು ಕಾಣಬಹಬುದು.
ಜನಾರ್ದನ ರೆಡ್ಡಿ ಕೇಸ್ಗಳು ಖುಲಾಸೆ ಆಗಿಲ್ಲ, ವಿಚಾರಣೆ ಬಾಕಿ ಉಂಟು..!!
ಜನಾರ್ದನ ರೆಡ್ಡಿ ಮೇಲೆ ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಗಳು ಚಾರ್ಜ್ಶೀಟ್ ಹಾಕಿಕೊಂಡು ಕೋರ್ಟ್ನಲ್ಲಿ ಶಿಕ್ಷೆ ಕೊಡಿಸಬೇಕು ಎನ್ನುವ ಕಾತರದಲ್ಲಿವೆ. ಪರಿಸ್ಥಿತಿ ಹೀಗಿರುವಾಗ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಪಕ್ಷ ಕಟ್ಟುವುದಕ್ಕೆ ಸಾಧ್ಯವೇ..? ಎನ್ನುವುದು ಸಾಮಾನ್ಯವಾಗಿ ಕೇಳಿಕೊಳ್ಳಬೇಕಿರುವ ಪ್ರಶ್ನೆ. ಹಾಗೊಂದು ವೇಳೆ ಬಿಜೆಪಿ ದ್ವೇಷ ರಾಜಕಾರಣ ಮಾಡುವುದಿಲ್ಲ ಎನ್ನುವುದಾದರೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಂಟಕ ಎಂದು ಗೊತ್ತಾದರೆ ಮುಂದೆ ಏನಾಗಬಹುದು ಎನ್ನುವುದನ್ನು ಊಹೆ ಮಾಡಿಕೊಂಡರೂ ಉತ್ತರ ಅಲ್ಲೇ ಸಿಗುತ್ತದೆ. ಇನ್ನು ಕಲ್ಯಾಣ ಕರ್ನಾಟಕ ಹೇಳಿಕೇಳಿ ನಿಜಾಮರ ಆಳ್ವಿಕೆಯಲ್ಲಿದ್ದ ಪ್ರದೇಶ. ಮುಸಲ್ಮಾನರ ಮತಗಳೇ ನಿರ್ಣಾಯಕ, ಹೀಗಿರುವಾಗ ಜನಾರ್ದನ ರೆಡ್ಡಿ ಬಿಜೆಪಿ ನಡೆಸಿರುವ ಪಾನ್ ಎಂದು ಖಡಾಖಂಡಿತವಾಗಿ ಹೇಳಬಹುದು ಅಲ್ಲವೇ..?
ಕೃಷ್ಣಮಣಿ






