ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜೂ. 29 ಮತ್ತು 30ರಂದು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಹುಲ್ ಗಾಂಧಿ ಅವರು ಜೂನ್ 29-30 ರಂದು ಮಣಿಪುರಕ್ಕೆ ಭೇಟಿ ನೀಡಲಿದ್ದು, ಇದೇ ವೇಳೆ ಇಂಫಾಲ್ ಮತ್ತು ಚುರಚಂದಪುರದಲ್ಲಿ ಪರಿಹಾರ ಶಿಬಿರಗಳಿಗೆ ತೆರಳಿ ಅಲ್ಲಿನ ಸಂತ್ರಸ್ತರ ಜೊತೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

ಪರಿಶಿಷ್ಟ ಪಂಗಡ ಮೀಸಲಾತಿ ವಿವಾದದಿಂದ ಮೇ 3ರಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಮೈತಿಯಿ ಸಮುದಾಯ ಹಾಗೂ ಬುಡಕಟ್ಟಿನ ಕುಕಿ ಸಮುದಾಯದ ನಡುವೆ ಸಂಘರ್ಷ ಭುಗಿಲೆದಿದ್ದೆ. ರಾಜ್ಯಾದ್ಯಂತ ಹಿಂಸಾತ್ಮಕ ಘರ್ಷಣೆಗಳು ನಡೆದು ಇದುವರೆಗೆ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಂದಾಜು 3,000 ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಹಿಂಸಾಚಾರ ಪೀಡಿತ ಸ್ಥಳಗಳಿಂದ ಬೇರೆಡೆ ತೆರಳಿ ಆಶ್ರಯ ಪಡೆದಿದ್ದಾರೆ.
ಈ ಹಿಂಸಾಚಾರದ ಬಳಿಕ ಕಾಂಗ್ರೆಸ್ ನಾಯಕರು ಮಣಿಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಸುಮಾರು ಎರಡು ತಿಂಗಳಿನಿಂದ ಮಣಿಪುರದ ಪರಿಸ್ಥಿತಿ ಚಿಂತಾಕನಕವಾಗಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಹತೋಟಿಗೆ ಬರುವುದು ಮುಖ್ಯವಾಗಿದ್ದು, ಸಮಾಜವು ಸಂಘರ್ಷದಿಂದ ಶಾಂತಿಯತ್ತ ಸಾಗಲು ಸಂತೈಸುವ ಕೈಗಳ ಅಗತ್ಯವಿದೆ. ಇದೊಂದು ಮಾನವೀಯ ದುರಂತವಾಗಿದ್ದು, ದ್ವೇಷವಲ್ಲ ಪ್ರೀತಿಯ ಶಕ್ತಿಯಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ವೇಣುಗೋಪಾಲ್ ಟ್ವೀಟರ್ ನ ಮೂಲಕ ತಿಳಿಸಿದ್ದಾರೆ.

ಇನ್ನು ಮೊದಲಿನಿಂದಲೂ ಮಣಿಪುರದ ಸದ್ಯದ ಪರಿಸ್ಥಿತಿಗೆ ಬಿಜೆಪಿ ಮತ್ತು ಅದರ ಒಡೆದು ಆಳುವ ರಾಜಕೀಯ ಕಾರಣವೆಂದು ಕಾಂಗ್ರೆಸ್ ಆರೋಪ ಮಾಡಿಕೊಂಡು ಬಂದಿದ್ದು, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಹಾಗೇ ಸಮಾಜವಾದಿ ಪಕ್ಷ ಮತ್ತು ಇತರರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಆಗ್ರಹಿಸಿದ್ದರು






