ಲೋಕಸಭೆ ಸದಸ್ಯತ್ವ ಮರುಸ್ಥಾಪನೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ (ಆಗಸ್ಟ್ 11) ಸಂಜೆ ತಾವು ಸಂಸತ್ತಿಗೆ ಆಯ್ಕೆಯಾದ ಕೇರಳದ ವಯನಾಡು ಕ್ಷೇತ್ರಕ್ಕೆ ನೀಡಿರುವ ಭೇಟಿ ಭಾನುವಾರವೂ (ಆಗಸ್ಟ್ 12) ಮುಂದುವರಿದಿದೆ.
ಎರಡನೇ ದಿನವಾದ ಭಾನುವಾರ ರಾಹುಲ್ ಅವರು ವಿವಿಧ ಸಮುದಾಯಗಳ ಜನರೊಂದಿಗೆ ಮಾತುಕತೆ ನಡೆಸಿದರು. ವಯನಾಡಿನಲ್ಲಿ ಕ್ಯಾನ್ಸರ್ ಕೇಂದ್ರದಲ್ಲಿ ವಿದ್ಯುತ್ ಸೌಲಭ್ಯವನ್ನು ಉದ್ಘಾಟಿಸಿದರು.
ಬಳಿಕ ರಾಹುಲ್ ಗಾಂಧಿ ಅವರು ಕೋಯಿಕ್ಕೋಡ್ನ ಶಾಲೆಯೊಂದರಲ್ಲಿ ಅಂಗವೈಕಲ್ಯ ನಿರ್ವಹಣಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿದ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ಸಂಜೆ 5.30ಕ್ಕೆ ವಯನಾಡ್ ತಲುಪಿದ ರಾಹುಲ್ ಅವರನ್ನು ಜಯಘೋಷಗಳೊಂದಿಗೆ ಯುಡಿಎಫ್ ನಾಯಕರು ಸಂಭ್ರಮದಿಂದ ಬರಮಾಡಿಕೊಂಡರು.
ಕಲ್ಪೆಟ್ಟದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಣಿಪುರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
“ಅವರು (ಮೋದಿ) 2 ಗಂಟೆ 13 ನಿಮಿಷಗಳ ಕಾಲ ಸಂಸತ್ನಲ್ಲಿ ಮಾತನಾಡಿದರು. ನಕ್ಕರು, ನಗೆ ಚಟಾಕಿ ಹಾರಿಸಿದರು, ಅವರ ಮಂತ್ರಿಗಳು ನಕ್ಕರು, ಹಾಸ್ಯ ಮಾಡಿದರು, ಎಲ್ಲರೂ ಬಹಳ ಸಂತೋಷದಿಂದಿದ್ದರು. ಎಲ್ಲದರ ಬಗ್ಗೆ ಎರಡು ಗಂಟೆ ಮಾತನಾಡಿದರು. ಕಾಂಗ್ರೆಸ್ ಬಗ್ಗೆ, ಇಂಡಿಯಾ ಮೈತ್ರಿಕೂಟದ ಬಗ್ಗೆ ಚರ್ಚೆ ಮಾಡಿದರು. ಆದರೆ, ಮಣಿಪುರದ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದು ಕೇವಲ ಎರಡು ನಿಮಿಷ ಮಾತ್ರ” ಎಂದು ಟೀಕಿಸಿದರು.
ʼ50 ಬಾರಿ ಅನರ್ಹಗೊಳಿಸಬಹುದು..ʼ
“ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ವಯನಾಡಿನೊಂದಿಗಿನ ನನ್ನ ಸಂಬಂಧ ಮುರಿದುಹೋಗುತ್ತದೆ ಎಂದು ಅವರು ಯೋಚಿಸುತ್ತಾರೆ. ಆದರೆ ಹಾಗಲ್ಲ. ಅವರು ರಾಹುಲ್ ಗಾಂಧಿ ಅನರ್ಹಗೊಳಿಸಿದರೆ ಜನರೊಂದಿಗಿನ ನನ್ನ ಸಂಬಂಧವು ಗಟ್ಟಿಯಾಗುತ್ತದೆ, ನೀವು ನನ್ನೊಂದಿಗೆ ನಿಂತಿದ್ದೀರಿ, ಅವರು ನನ್ನನ್ನು 50, 100 ಬಾರಿ ಅನರ್ಹಗೊಳಿಸಬಹುದು, ಆದರೆ ಅದು ವಯನಾಡ್ ಜೊತೆಗಿನ ನನ್ನ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರಾಖಂಡ | ರುದ್ರಪ್ರಯಾಗದಲ್ಲಿ ಭೂಕುಸಿತ ; ಐವರು ಯಾತ್ರಾರ್ಥಿಗಳು ಸಾವು
“ಬಿಜೆಪಿಯವರು ಕುಟುಂಬಗಳನ್ನು ವಿಭಜಿಸುತ್ತಾರೆ. ಮಣಿಪುರದಲ್ಲೂ ಅದನ್ನೇ ಮಾಡಿದ್ದಾರೆ. ನಾವು ಅದನ್ನು ಮರುನಿರ್ಮಾಣ ಮಾಡುತ್ತೇವೆ. ನೀವು ಎರಡು ತಿಂಗಳಲ್ಲಿ ಮಣಿಪುರಕ್ಕೆ ಬೆಂಕಿ ಹಚ್ಚಿದ್ದರೆ, ಐದು ವರ್ಷಗಳಲ್ಲಿ ನಾವು ಅದನ್ನು ಮರುನಿರ್ಮಾಣ ಮಾಡುತ್ತೇವೆ” ಎಂದು ರಾಹುಲ್ ತಿಳಿಸಿದರು.
ಕಾಂಗ್ರೆಸ್ ರಾಹುಲ್ ಅವರ ಮಾತುಗಳನ್ನು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ಮಣಿಪುರದ ಅನುಭವವನ್ನು ವಿವರಿಸಿದ ರಾಹುಲ್ ಗಾಂಧಿ, “ಬಿಜೆಪಿ ಮಣಿಪುರವನ್ನು ಕೊಂದಿತು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಿ, ಭಾರತ ಮಾತೆಯ ಹತ್ಯೆಯ ಬಗ್ಗೆ ಎರಡು ನಿಮಿಷ ಮಾತನಾಡಿದ್ದೀರಿ, ನಿಮಗೆ ಎಷ್ಟು ಧೈರ್ಯ? ಭಾರತದ ಕಲ್ಪನೆಯನ್ನು ಹೇಗೆ ಅಗೌರವಗೊಳಿಸುತ್ತೀರಿ? ಕಳೆದ ನಾಲ್ಕು ತಿಂಗಳಿನಿಂದ ನೀವು ಏನು ಮಾಡುತ್ತಿದ್ದೀರಿ? ನೀವು ಯಾಕೆ ಅಲ್ಲಿಗೆ ಹೋಗಿಲ್ಲ?, ಹಿಂಸಾಚಾರವನ್ನು ತಡೆಯಲು ನೀವು ಏಕೆ ಪ್ರಯತ್ನಿಸಲಿಲ್ಲ? ಏಕೆಂದರೆ ನೀವು ರಾಷ್ಟ್ರೀಯವಾದಿ ಅಲ್ಲ, ಭಾರತದ ಕಲ್ಪನೆಯನ್ನು ಕೊಲೆ ಮಾಡುವ ಯಾರೇ ಆದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ..ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ” ಎಂದು ರಾಹುಲ್ ತೀಕ್ಷ್ಣ ಮಾತುಗಳಿಂದ ಪ್ರಧಾನಿ ಮೋದಿ ಅವರನ್ನು ತಿವಿದರು.