ಎಲ್ಲಾ ಸಂಸ್ಥೆಗಳು ಈಗ ಆರ್ ಎಸ್ಎಸ್ (RSS) ಹಿಡಿತದಲ್ಲಿರುವ ಕಾರಣ ಸಂವಿಧಾನ ಅರ್ಥಹೀನವಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಆರೋಪಿಸಿದ್ದಾರೆ.
ದೆಹಲಿಯ ನಗರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಗೆ ಬಿದ್ದ ರಾಜಕಾರಣಿಗಳೂ ಇದ್ದಾರೆ. ಅವರು ಪೂರ್ತಿಯಾಗಿ ಅಧಿಕಾರವನ್ನು ಪಡೆಯುವ ಬಗ್ಗೆ ಯೋಚಿಸುತ್ತಾರೆ. ನಾನು ಅಧಿಕಾರದ ಕೇಂದ್ರದಲ್ಲಿ ಹುಟ್ಟಿದ್ದೇನೆ. ಆದರೆ ನನಗೆ ಅದರಲ್ಲಿ ಆಸಕ್ತಿ ಇಲ್ಲ. ಬದಲಿಗೆ ನಾನು ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ದಲಿತರ ಏಳಿಗೆಗಾಗಿ ಕಾನ್ಸಿರಾಮ್ ಜಿ ಅವರು ಧ್ವನಿ ಎತ್ತಿದ್ದರು. ಆದರೆ ಅದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿತ್ತು. ಐಟಿ .ಇಡಿ, ಸಿಬಿಐ ದಾಳಿಗೆ ಹೆದರಿ ಮಾಯಾವತಿಯವರು ದಲಿತರ ಧ್ವನಿಯಾಗಿ ಹೋರಾಡಲಿಲ್ಲ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ಕಾಂಗ್ರೆಸ್ ಪ್ರಸ್ತಾಪಕ್ಕೆ ಅವರು ಸ್ಪಂದಿಸಲಿಲ್ಲ.”ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಾಯಾವತಿಯವರಿಗೆ ಮೈತ್ರಿ ಮಾಡಿಕೊಳ್ಳುವಂತೆ ನಾವು ಸಂದೇಶ ನೀಡಿದ್ದೇವು. ಅಲ್ಲದೆ ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗುವಂತೆ ಕೇಳಿಕೊಂಡಿದ್ದೆವು. ಆದರೆ ಅವರು ನಮ್ಮೊಂದಿಗೆ ಮಾತನಾಡಲೇ ಇಲ್ಲ ಎಂದು ಹೇಳಿದ್ದಾರೆ.