ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಎರಡನೇ ಹಂತದ ಚುನಾವಣೆಗೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಕಲಬುರಗಿ (Kalburgi) ಏರ್ಪೋರ್ಟ್ಗೆ ಆಗಮಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi), ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ (Vijayapura) ತೆರಳಿದ್ರು. ಅದಕ್ಕೂ ಏರ್ಪೋರ್ಟ್ನಲ್ಲಿ ಶಾಸಕರು, ಸಚಿವರು, ಪಕ್ಷದ ಮುಖಂಡರ ಜೊತೆ ಮಹತ್ವದ ಸಭೆ ನಡೆಸಿದ್ರು. ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಅಜಯ್ಸಿಂಗ್, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವು ಮುಖಂಡರ ಭಾಗಿಯಾಗಿದ್ದರು.

ವಿಜಯಪುರದಲ್ಲಿ ನಡೆದ ಚುನಾವಣಾ ಪ್ರಚಾರ ಱಲಿ (Rally) ಭಾಗವಹಿಸಿದ ರಾಹುಲ್ ಗಾಂಧಿ, ಗೃಹ ಲಕ್ಷ್ಮೀ ಯೋಜನೆ ಟೀಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ರು. ಗೃಹ ಲಕ್ಷ್ಮಿ ಯೋಜನೆಯಿಂದ ದಿವಾಳಿ ಆಗುತ್ತೆ ಎಂದಿದ್ದ ಪ್ರಧಾನಿ ಹೇಳಿಕೆಗೆ ಟಾಂಗ್ ಕೊಟ್ಟಿರುವ ರಾಹುಲ್, ಆ ರೀತಿ ಆಗಲ್ಲ, ಮಹಿಳೆಯರಿಗೆ ಅನೂಕುಲವಾಗಿದೆ ಮೋದಿಯವರೆ, ಇದನ್ನ ತಿಳಿದುಕೊಳ್ಳಿ. ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ರೂಪಾಯಿ ಹಣ ಸಿಗುತ್ತದೆ. ಮಹಿಳೆಯರು ಈ ದೇಶ, ಕುಟುಂಬಗಳ ರಕ್ಷಣೆ ಮಾಡ್ತಿದ್ದಾರೆ. ಪುರುಷರು 8 ಗಂಟೆ ಕೆಲಸ ಮಾಡಿದ್ರೆ, ಮಹಿಳೆಯರು 16 ಗಂಟೆ ಕೆಲಸ ಮಾಡ್ತಾರೆ.. ಮಹಿಳೆಯರು ಮಕ್ಕಳನ್ನ ನೋಡಿಕೊಳ್ತಾರೆ, ಅಡುಗೆ ಮಾಡ್ತಾರೆ. ಇದಕ್ಕಾಗಿ ನಾವು ಬಡ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ಕೊಡ್ತಿದ್ದೇವೆ ಎಂದಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ದೇಶದಲ್ಲಿ ಇಂಡಿ ಅಲೈಯನ್ಸ್ (I.N.D.I.A) ಅಧಿಕಾರಕ್ಕೆ ಬರುತ್ತದೆ. ಆಗ ಬಡ ಕುಟುಂಬಗಳ ಲಿಸ್ಟ್ ರೆಡಿಯಾಗುತ್ತದೆ. ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಯನ್ನ ಆಯ್ಕೆ ಮಾಡುತ್ತೇವೆ. ಅವರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡ್ತೇವೆ. ಕರ್ನಾಟಕ ಸರ್ಕಾರ 24 ಸಾವಿರ ಕೊಡುತ್ತೆ, ಕೇಂದ್ರದಿಂದ ನಾವು ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡ್ತೇವೆ. ಕರ್ನಾಟಕದಲ್ಲಿ ಮಹಿಳೆಯರಿಗೆ 1 ಲಕ್ಷ 24 ಸಾವಿರ ರೂಪಾಯಿ ಸಿಗುತ್ತದೆ ಎಂದಿದ್ದಾರೆ. ಬ್ಯಾಂಕ್ ಅಕೌಂಟ್ನಲ್ಲಿ ಕಟಾ.. ಕಟ್. ಕಟಾ.. ಕಟ್ ಅಂತ ಹಣ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ ಎಂದಿರುವ ರಾಹುಲ್ ಗಾಂಧಿ, ಭಾರತದಲ್ಲಿ ಒಂದು ಪಾರ್ಟಿ, ಒಬ್ಬ ವ್ಯಕ್ತಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಮುಗಿಸಲು ಹೊರಟಿದ್ದಾರೆ. ಸಂವಿಧಾನದಿಂದ ಭಾರತದ ಜನರಿಗೆ ಅಧಿಕಾರ ಮತ್ತು ಹಕ್ಕು, ಸ್ವಾತಂತ್ರ್ಯ ಸಿಕ್ಕಿದೆ. ಮೊದಲು ರಾಜ ಮಹಾರಾಜರು ಅಧಿಕಾರ ನಡೆಸ್ತಿದ್ರು. ಆದರೆ ಸಂವಿಧಾನ ಹಿಂದುಳಿದವರಿಗೆ, ದಲಿತರಿಗೆ ಅಧಿಕಾರ ನೀಡಿದೆ. ಆದರೆ ನರೇಂದ್ರ ಮೋದಿ ಸಂವಿಧಾನವನ್ನ ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಅವರು ಗೆದ್ದರೆ ಸಂವಿಧಾನ ಮುಗಿಸುತ್ತಾರೆ, ನಾಶ ಮಾಡ್ತಾರೆ ಎಂದು ಜನರನ್ನು ಎಚ್ಚರಿಸಿದ್ದಾರೆ.






