ಇದು ಹೊಸ ಫ್ಲೈ ಓವರ್ ಅಂತ ಹುಮ್ಮಸ್ಸಿನಿಂದ ಸೇತುವೆ ಹತ್ತುವ ಮುನ್ನ ಸ್ವಲ್ಪ ಯೋಚಿಸಿ. 40 ಕೋಟಿ ಖರ್ಚಿನಲ್ಲಿ ನಿರ್ಮಾಣವಾದ ಉಕ್ಕಿನ ಸೇತುವೆ ಬಗ್ಗೆ ಆರಂಭದಲ್ಲೇ ಸಾಲು ಸಾಲು ಕಂಪ್ಲೇಟ್ ಬಂದಿದೆ. ಘನ ವಾಹನಗಳು ಸೇತುವೆ ಮೇಲೆ ಹೋಗುವಾಗ ಎದೆ ಝಲ್ ಎನಿಸುವ ಶಬ್ಧ ಕೇಳಿಸುತ್ತಿದೆ. ಈ ಮೂಲಕ ಮತ್ತೊಮ್ಮೆ ಬಿಬಿಎಂಪಿ ಅಧಿಕಾರಿಗಳ ಮತ್ತೊಂದು ಮಹಾ ಯಡವಟ್ಟು ಕಾಮಗಾರಿ ಬಯಲಾಗಿದೆ.
ನಗರದ ಶಿವಾನಂದ ಸರ್ಕಲ್ ನಲ್ಲಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ BBMP ಎಡವಟ್ಟು
ಅದು ಸುಮಾರು 5 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ. ಕೋರ್ಟ್ ಕಟಕಟೆಯಲ್ಲಿ ಪ್ರಕರಣ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಎಲ್ಲಾ ಇತ್ಯರ್ಥಗೊಂಡು ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡುವ ಪ್ರಸಂಗ ಎದುರಾಗಿತ್ತು. ಅಂತೆಯೇ ಪಾಲಿಕೆ ಕೂಡ ಕಾಮಗಾರಿ ಮುಗಿಸಿ ಟೆಸ್ಟಿಂಗ್ ಗೆ ಅಂತ ಫ್ಲೈ ಓವರ್ ಓಪನ್ ಮಾಡಿ ಕೊಟ್ಟಿತ್ತು. ಆದರೆ ಓಪನ್ ಆಗಿ ವಾರದಲ್ಲೇ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್ ವಾಹನ ಓಡಾಟಕ್ಕೆ ಯೋಗ್ಯವಲ್ಲಾ ಎಂಬ ಆರೋಪ ಕೇಳಿ ಬಂದಿದೆ. ಹೌದು, ಶಿವಾನಂದ ಸರ್ಕಲ್ ನಲ್ಲಿರುವ ಉಕ್ಕಿನ ಸೇತುವೆಯ ಪ್ರಾಯೋಗಿಕ ಸಂಚಾರದಲ್ಲೇ ಬಿಬಿಎಂಪಿ ಎಡವಟ್ಟು ಮಾಡಿದೆ ಅಂತ ಸಾರ್ವಜನಿಕರು ಆರೋಪ ಹೊರೆಸಿದ್ದಾರೆ. ಆಗಸ್ಟ್ 15ರಂದು ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಮಾಡಿದ್ದ ಪಾಲಿಕೆ, ಸೇತುವೆಯ ಒಂದು ಬದಿಯ ರಸ್ತೆಯಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕೊಟ್ಟಿದೆ.

ಭಾರಿ ವಾಹನಗಳ ಸಂಚಾರದ ವೇಳೆ ಸ್ಟೀಲ್ ಬ್ರಿಡ್ಜ್ ಶೇಕ್ ಆಗುತ್ತಂತೆ
ಇದೀಗ ಪ್ರಾಯೋಗಿಕ ಸಂಚಾರದಲ್ಲೇ ಬಿಬಿಎಂಪಿ ಕಳಪೆ ಕಾಮಗಾರಿ ಬಟಾಬಯಲು. ಒಂದೇ ಸಮನೆ ವಾಹನ ಸಂಚಾರ ಮಾಡಿದ್ರೆ ಸಾಕು ಸ್ಟೀಲ್ ಬ್ರಿಡ್ಜ್ ಫುಲ್ ವೈಬ್ರೇಟ್ ಆಗ್ತಿದೆ. ಈ ಮೂಲಕ ಬಿಬಿಎಂಪಿ ಕಾಮಗಾರಿಯಲ್ಲಿ ಕಳಪೆ ಎಂಬುದಾಗಿ ಸಾಬೀತಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಸಾಲು ಸಾಲು ಕಂಪ್ಲೇಟ್ ನೀಡಿದ್ದಾರೆ. ಕೇವಲ ವೈಬ್ರೇಷನ್ ಅಲ್ಲ.. ರಸ್ತೆ ತುಂಬಾ ಉಬ್ಬು ನಿರ್ಮಾಣ ಎಂದು ಕಿಡಿ ಕಾರಿದ್ದಾರೆ. ಉಕ್ಕಿನ ಸೇತುವೆಯ ಪ್ರತಿ 20 ಮೀಟರ್ ಗೆ ಬ್ರಿಡ್ಜ್ ಜಾಯಿಂಟ್ ಇದೆ. ಇಲ್ಲಿ ಪಾಲಿಕೆ ಅವೈಜ್ಞಾನಿಕವಾಗಿ ಹಂಪ್ಸ್ ನಿರ್ಮಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿದೆ. ಆಸ್ಫಾಲ್ಟ್ ಮಾಡುವ ವೇಳೆ ರಸ್ತೆ ಉಬ್ಬಾಗಿರುವ ಬಗ್ಗೆ ಬಿಬಿಎಂಪಿ ಸ್ಪಷ್ಟೀಕರಣ ನೀಡಿದ್ದು, ವಾಹನ ಸಂಚಾರ ಶುರುವಾಗಿ ಕ್ರಮೇಣವಾಗಿ ಇದು ರಸ್ತೆಯ ಡಾಂಬರೀಕರಣಕ್ಕೆ ಸಮಕ್ಕೆ ತಗ್ಗಲಿದೆ ಎಂದು ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಚೀಫ್ ಇಂಜಿನಿಯರ್ ಲೋಕೇಶ್, ನಾವು ಪ್ರಾಯೋಗಿಕವಾಗಿ ಉಕ್ಕಿನ ಸೇತುವೆಯ ಒಂದು ರಸ್ತೆ ಓಪನ್ ಮಾಡಿದ್ದೇವೆ. ರಸ್ತೆ ಉಬ್ಬು, ಶೇಕ್ ಮತ್ತು ವೈಬ್ರೇಷನ್ ಬಗ್ಗೆ ಸಾರ್ವಜನಿಕರು ಕಂಪ್ಲೇಟ್ ಮಾಡುತ್ತಿದ್ದಾರೆ. ರಸ್ತೆ ಉಬ್ಬು ನಿರ್ಮಾಣವಾಗಿಲ್ಲ, ಕ್ರಮೇಣ ಆಸ್ಫಾಲ್ಟಿಂಗ್ ತಗ್ಗಿ ರಸ್ತೆಗೆ ಸಮವಾಗಲಿದೆ. ಬ್ರಿಡ್ಜ್ ಶೇಕ್ ಆಗಿಲ್ಲ, ಘನ ವಾಹನಗಳು ಹೋಗುವಾಗ ವೈಬ್ರೇಷನ್ ಆಗುತ್ತಿದೆ. ಅದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಇವೆಲ್ಲವನ್ನೂ ಪತ್ತೆ ಹಚ್ಚಲೆಂದೇ ನಾವು ಪ್ರಾಯೋಗಿಕ ಸಂಚಾರಕ್ಕೆ ಓಪನ್ ಮಾಡಿರುವುದು ಎಂದರು. ಪರ ವಿರೋಧಗಳ ನಡುವೆ ಇನ್ನೇನು ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಉಕ್ಕಿನ ಸೇತುವೆಯನ್ನು ಸಿಎಂ ಉದ್ಘಾಟನೆ ಸಾಧ್ಯತೆ ಇದೆ. ಆದರೆ ಟೆಸ್ಟಿಂಗ್ ವೇಳೆ ಸಾರ್ವಜನಿಕರಿಂದ ಇಂಥಾ ದೂರು, ಅಪವಾದಗಳು ಕೇಳಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.






