
ವಿಜಯಪುರ ನಗರದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ನಡೆದಿದ್ದು, ತೆರೆದ ವಾಹನದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ, ಸಂಸದರಾದ ಜಗದೀಶ ಶೆಟ್ಟರ್, ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಹಾಗೂ ಇತರ ನಾಯಕರು ಭಾಗಿಯಾಗಿದ್ದರು. ಗಾಂಧಿಚೌಕ್ನಲ್ಲಿ ವಿಜಯೇಂದ್ರ ಹಾಗೂ ಇತರ ನಾಯಕರಿಗೆ ಭರ್ಜರಿ ಸ್ವಾಗತ ನೀಡಲಾಯ್ತು. ಕ್ರೇನ್ ಹಾಗೂ ಜೆಸಿಬಿಗಳನ್ನು ಬಳಸಿ ಪುಷ್ಪವೃಷ್ಟಿ ಮಾಡಿ ನಾಯಕರನ್ನು ಬರಮಾಡಿಕೊಂಡಿದ್ದಾರೆ ಬಿಜೆಪಿ ಕಾರ್ಯಕರ್ತರು.

ಜನಾಕ್ರೋಶ ಯಾತ್ರೆಯಲ್ಲಿ ಎ.ಎಸ್ ಪಾಟೀಲ್ ನಡಹಳ್ಳಿ ಭಾಷಣ ಮಾಡಿ, ಕರ್ನಾಟಕದ ನಿಜವಾದ ರಾಜಕೀಯ ಚಾಣಕ್ಯ ವಿಜಯೇಂದ್ರ ಎಂದಿದ್ದಾರೆ. 17 ಶಾಸಕರನ್ನ ಕರೆ ತಂದು ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದೇ ವಿಜಯೇಂದ್ರ ಎಂದಿರುವ ನಡಹಳ್ಳಿ, 17 ರಲ್ಲಿ 15 ಸೀಟ್ ಗೆಲ್ಲುವಂತೆ ಮಾಡಿದ್ದು ವಿಜಯೇಂದ್ರ ರಾಜಕೀಯ ಸಂಘಟನೆ ಎಂದು ಕೊಂಡಾಡಿದ್ದಾರೆ. ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಕಾಂಗ್ರೆಸ್ನ ಎಲ್ಲ ನಾಯಕರಿಗೆ ವಯಸ್ಸಾಗಿದೆ. ಜೆಡಿಎಸ್ ಪಕ್ಷದಲ್ಲಿ ಯುವಕರ ನಾಯಕತ್ವ ಇಲ್ಲ. ಯುವಕರ ನಾಯಕತ್ವ ಇರುವ ಪಕ್ಷ ಬಿಜೆಪಿ ಮಾತ್ರ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 140 ಸೀಟ್ ಗೆಲ್ಲಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್ ಪಾಟೀಲ್ ನಡಹಳ್ಳಿ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಸಂಸದ ರಮೇಶ್ ಜಿಗಜಿಣಗಿ ಭಾಷಣ ಮಾಡಿ, ಕಾರ್ಯಕರ್ತರು ಯಾವುದೇ ವಿಚಾರ ಮಾಡಬೇಡಿ. ಪಕ್ಷ ದೊಡ್ಡದು, ಜಿಗಜಿಣಗಿ ದೊಡ್ಡವ ಅಲ್ಲ ಎಂದು ಹೇಳುವ ಮೂಲಕ ಯತ್ನಾಳ್ ಹೆಸರು ಬಳಸದೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಎಲ್ಲರೂ ಒಟ್ಟಾಗಿ ವಿಜಯೇಂದ್ರ ಕೈ ಬಲ ಪಡೆಸೋಣ ಎಂದು ಕರೆ ನೀಡಿದ್ದಾರೆ. ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತರು ಕಾಂಗ್ರೆಸ್ ಬಿಟ್ಟು ಬರಬೇಕು. ದಲಿತರಿಗೆ ಕಾಂಗ್ರೆಸ್ ಸುಡುವ ಮನೆಯಾಗಿದೆ. ಎಷ್ಟು ದಿನ ಅದೇ ಮನೆಯಲ್ಲಿ ಇರುತ್ತಿರಿ ಎಂದು ಪ್ರಶ್ನಿಸಿದ್ದಾರೆ ಚಲವಾದಿ ನಾರಾಯಣಸ್ವಾಮಿ.
ವಿಜಯಪುರದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಬಿಜೆಪಿ ರಾಜಾಧ್ಯಕ್ಷ ವಿಜಯೆಂದ್ರ, ಪಕ್ಷದ ಕಾರ್ಯಕರ್ತರು ನಮ್ಮ ಶಕ್ತಿ. ವಿಜಯಪುರದಲ್ಲಿ ಯಾತ್ರೆ ಯಶಸ್ವಿಯಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ನಿಮ್ಮನ್ನ ನೋಡಿದ ಮೇಲೆ ಯಾತ್ರೆ ಯಶಸ್ಸಿಯಾಗಿದೆ. ಮುಖ್ಯಮಂತ್ರಿಗಳಿಗೆ ವಿಜಯಪುರಕ್ಕೆ ಬಂದು ನೋಡಿ. ನಿಮ್ಮ ವಿರುದ್ಧ ಜನ ಹೇಗೆ ಬಿದಿಗಿಳಿದಿದ್ದಾರೆ ನೋಡಿ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗ್ತಾಯಿದೆ. ರಾಜ್ಯ ಸರ್ಕಾರ ಹಿಂದುಳಿದ ಸಮಾಜವನ್ನು ಮರೆತಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ಕೊಡೋದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ನೀವು ಮುಸ್ಲಿಮರ ಮುಖ್ಯಮಂತ್ರಿಯಾ..? ರಾಜ್ಯದ ಮುಖ್ಯಮಂತ್ರಿಯಾ..? ಎಂದು ಪ್ರಶ್ನೆ ಮಾಡಿದ್ದಾರೆ ವಿಜಯೆಂದ್ರ.

ಬೇರೆ ಯಾವುದೇ ಸಮಾಜದ ಜನರಿಗೆ ಇಲ್ಲದ ಯೋಜನೆ ಅವರಿಗೆ ಮಾತ್ರ ಯಾಕೆ..? ಎಂದಿರುವ ವಿಜಯೇಂದ್ರ, ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಹಾಕಿದವರ ಪರವಾಗಿ ಸರ್ಕಾರ ಇದೆ. ಅದಕ್ಕೆ ಬಿಜೆಪಿ ಒಪ್ಪಲ್ಲ. ದೇಶದಲ್ಲಿ ಕೋಟ್ಯಾಂತರ ಕಾರ್ಯಕರ್ತರು ದೇಶಕ್ಕಾಗಿ ದುಡಿಯುತ್ತಿದ್ದಾರೆ. ಯುಪಿಎ ಸರ್ಕಾರದ ಸಾಲು ಸಾಲು ಹಗರಣ ನಡೆದವು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ 25 ಸಾವಿರಕ್ಕೆ ಟಿಸಿ ಬರ್ತಾಯಿತ್ತು. ಆದರೆ ಈಗ ಅದನ್ನ ಮೂರು ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದ ವಿಜಯೆಂದ್ರ ವಾಗ್ದಾಳಿ ಮಾಡಿದ್ದಾರೆ.