ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳು
ವಾಸ್ತವವೆಂದರೆ ಭಾರತವು ಬುಡಕಟ್ಟು ಪ್ರದೇಶಗಳು ಮತ್ತು ವಿವಿಧ ಸಮುದಾಯಗಳಲ್ಲಿ ವ್ಯಾಪಕವಾಗಿರುವ ದ್ವಂದ್ವ ವ್ಯವಸ್ಥೆಗಿಂತಲೂ ಹೆಚ್ಚಾಗಿ ಹಲವು ಕುಟುಂಬ ಕಾನೂನುಗಳ ವ್ಯವಸ್ಥೆಗಳೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ. ಏಕರೂಪತೆಯನ್ನು ಒತ್ತಾಯಿಸುವುದರಿಂದ ಉಂಟಾಗಬಹುದಾದ ಅಪಾಯಗಳು ಮತ್ತು ವೈಯಕ್ತಿಕ ಕಾನೂನುಗಳ ವಿಷಯದಲ್ಲಿ ಸ್ವಯಂಪ್ರೇರಿತ ಸುಧಾರಣೆಗಳ ಅಗತ್ಯವನ್ನು ಕಾನೂನು ಆಯೋಗವು ಈಗಾಗಲೇ ಗಮನಸೆಳೆದಿದೆ. ಏಕರೂಪ ನಾಗರಿಕ ಸಂಹಿತೆಯ ಮತ್ತೊಂದು ಸಮಸ್ಯೆಯೆಂದರೆ ಅದರ ಮೇಲೆ ಒಂದೇ ಒಂದು ಕರಡು ಈವರೆಗೂ ಸಿದ್ಧವಾಗಿಲ್ಲ. ಇದು ಯಾವ ರೂಪವನ್ನು ತೆಗೆದುಕೊಳ್ಳುತ್ತದೆ, ಅದು ಯಾವ ನಿಬಂಧನೆಗಳನ್ನು ಒಳಗೊಳ್ಳುತ್ತದೆ ಮತ್ತು ಇದು ವಿವಿಧ ಸಮುದಾಯಗಳ ಅಸ್ತಿತ್ವದಲ್ಲಿರುವ ಕಾನೂನುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸುವಂತಹ ಸಮಗ್ರ ಕರಡು ಲಭ್ಯವಿಲ್ಲ. ಹಾಗಾಗಿ ಬಹುಸಂಖ್ಯಾತರ ಹಿಂದೂ ಕಾನೂನುಗಳ ಪರವಾಗಿ ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನುಗಳನ್ನು ಸಂಹಿತೆಯು ರದ್ದುಗೊಳಿಸುತ್ತದೆ ಎಂಬ ಶಂಕೆ ಗಾಢವಾಗಿದೆ .
ಮತ್ತೊಂದು ದೃಷ್ಟಿಯಿಂದ ನೋಡಿದಾಗ ಏಕರೂಪ ನಾಗರಿಕ ಸಂಹಿತೆಯು ಹಿಂದೂ ಕಾನೂನುಗಳ ಮೇಲೂ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2 (2) ಅದರ ನಿಬಂಧನೆಗಳು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳುತ್ತದೆ. ಇದೇ ಕಾಯ್ದೆಯ ಸೆಕ್ಷನ್ 5 (5) ಮತ್ತು 7 ಸಾಂಪ್ರದಾಯಿಕ ಆಚರಣೆಗಳು ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳನ್ನು ಮೀರುತ್ತವೆ ಎಂದು ಹೇಳುತ್ತದೆ. ಏನಾಸಂ ಅಂತಹ ವಿನಾಯಿತಿಗಳಿಗೆ ಅವಕಾಶ ನೀಡುವುದಿಲ್ಲ. ಹಲವಾರು ಕ್ರಿಮಿನಲ್ ಕಾನೂನುಗಳೊಂದಿಗೆ ವೈಯಕ್ತಿಕ ಕಾನೂನುಗಳು ಜೊತೆಗಿರುವುದರಿಂದಲೂ ಗೊಂದಲ ಹೆಚ್ಚಾಗುತ್ತದೆ. ಉದಾಹರಣೆಗೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 125 ಸಹ ಹೆಂಡತಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶವನ್ನು ಒದಗಿಸುತ್ತದೆ. ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ರಕ್ಷಣೆಗಾಗಿ ದಂಡನಾತ್ಮಕ ಕಾನೂನುಗಳು ವೈಯಕ್ತಿಕ ಕಾನೂನುಗಳ ವ್ಯಾಪ್ತಿಯನ್ನು ಅತಿಕ್ರಮಿಸುತ್ತವೆ. ಮುಸ್ಲಿಮರು ಸೇರಿದಂತೆ ಜನಸಂಖ್ಯೆಯ ದೊಡ್ಡ ಭಾಗವು ಈಗಾಗಲೇ ನಾಗರಿಕ ವಿವಾದಗಳನ್ನು ಪರಿಹರಿಸಲು ಕಾನೂನಿನ ವಿವಿಧ ವಿಭಾಗಗಳನ್ನು ಆಶ್ರಯಿಸಿದೆ. ಧಾರ್ಮಿಕ ವೈಯುಕ್ತಿಕ ಕಾನೂನುಗಳ ಮೇಲಿನ ಅವಲಂಬನೆ ಕ್ರಮೇಣ ಕ್ಷೀಣಿಸುತ್ತಿದೆ. ಏನಾಸಂ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಏನಾಸಂ ಭಾರತದಲ್ಲಿನ ವಿವಿಧ ವೈಯುಕ್ತಿಕ ಕಾನೂನುಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದೂ ಯೋಚಿಸಬೇಕಿದೆ.
ವಿವಾಹಗಳ ಮೇಲೆ ಏನಾಸಂ ಪರಿಣಾಮ
ಒಂದು ಸಾಮಾನ್ಯ ಕಾನೂನು ಸಂಹಿತೆಯ ಮುಖಾಂತರ ವಿವಾಹಕ್ಕೆ ಕನಿಷ್ಠ ಕಾನೂನುಬದ್ಧ ವಯಸ್ಸನ್ನು ನಿಗದಿಪಡಿಸಬಹುದು, ದ್ವಿಪತ್ನಿತ್ವ ಮತ್ತು ಬಹುಪತ್ನಿತ್ವವನ್ನು ರದ್ದುಗೊಳಿಸಬಹುದು ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸಬಹುದು. ಹಿಂದೂ, ಬೌದ್ಧ, ಹಾಗೂ ಜೈನ ಧರ್ಮಗಳಲ್ಲಿ ವಿವಾಹಗಳನ್ನು ಹಿಂದೂ ವಿವಾಹ ಕಾಯ್ದೆ (ಎಚ್ಎಂಎ), 1955 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಮುಸ್ಲಿಮರ ವಿವಾಹ ಕಾಯ್ದೆಗಳಲ್ಲಿ ಪ್ರಮುಖವಾಗಿ ಮುಸ್ಲಿಂ ವೈಯಕ್ತಿಕ (ಶರಿಯತ್) ಅನ್ವಯಿಸುವ ಕಾಯ್ದೆ, 1937 ಜಾರಿಯಲ್ಲಿದ್ದು ಇದರನ್ವಯ ಶರಿಯತ್ ಅಥವಾ ಇಸ್ಲಾಮಿಕ್ ಕಾನೂನುಗಳು ವಿವಾಹ, ವಿಚ್ಛೇದನ ಮತ್ತು ಜೀವನಾಂಶಕ್ಕೆ ಮಾರ್ಗದರ್ಶನ ನೀಡುತ್ತದೆ. ಕ್ರೈಸ್ತ ಧರ್ಮದವರ ವಿವಾಹಗಳನ್ನು ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ 1872 ನಿಯಂತ್ರಿಸುತ್ತದೆ. ಸಿಖ್ ಧರ್ಮದಲ್ಲಿ ಎಲ್ಲ ರೀತಿಯ ವಿವಾಹಗಳನ್ನೂ ಆನಂದ್ ಕರಜ್ ಎಂದು ಗುರುತಿಸಲ್ಪಡುವ ಸಿಖ್ ವಿವಾಹ ಪದ್ಧತಿಯ ಪ್ರಕಾರ ನಡೆಸಲಾಗುತ್ತದೆ. ಈ ವಿವಾಹಗಳು ಆನಂದ್ ವಿವಾಹ (ತಿದ್ದುಪಡಿ) ಕಾಯ್ದೆ 2012ರಿಂದ ನಿಯಂತ್ರಿಸಲ್ಪಡುತ್ತದೆ. ಪಾರ್ಸಿಗಳಲ್ಲಿ ವಿವಾಹಗಳನ್ನು ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ, 1936 ನಿಯಂತ್ರಿಸುತ್ತದೆ.
ಏನಾಸಂ ಜಾರಿಗೊಳಿಸುವ ಮೂಲಕ ವಿವಿಧ ಧರ್ಮಗಳಲ್ಲಿ ಅನುಸರಿಸಲಾಗುತ್ತಿರುವ ವಿವಾಹ ಕಾಯ್ದೆಯ ಕೆಲವು ನಿಬಂಧನೆಗಳನ್ನು ರದ್ದುಪಡಿಸಲು ಸಾಧ್ಯವಾಗಬಹುದು. ಇವುಗಳಲ್ಲಿ ಪ್ರಮುಖವಾಗಿ :
- ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2(2) ಪರಿಶಿಷ್ಟ ಪಂಗಡಗಳನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವ ನಿಬಂಧನೆಗಳು.
- ಇದೇ ಕಾಯ್ದೆಯ ಸೆಕ್ಷನ್ 5(5)7 ಅನ್ವಯ ಕೆಲವು ಸಾಂಪ್ರದಾಯಿಕ ಆಚರಣೆಗಳು ಕಾನೂನು ನಿಬಂಧನೆಗಳನ್ನು ಮೀರಲು ಅವಕಾಶ ನೀಡುವ ನಿಯಮಗಳು.
- ಮುಸ್ಲಿಂ ಕಾಯ್ದೆಯಲ್ಲಿರುವ ಕನಿಷ್ಠ 15 ವರ್ಷ ಅಥವಾ ಪ್ರೌಢಾವಸ್ಥೆಯ ವಿವಾಹ ಯೋಗ್ಯ ವಯಸ್ಸಿನ ಮಿತಿ.
- ಬಹುಪತ್ನಿಯನ್ನು ಹೊಂದಿರುವ ಮುಸ್ಲಿಂ ಪುರುಷ ಎಲ್ಲ ಪತ್ನಿಯರನ್ನೂ ಸಮಾನವಾಗಿ ಕಾಣುವುದಾದರೆ ನಾಲ್ವರು ಪತ್ನಿಯರನ್ನು ಹೊಂದಲು ಇರುವ ಹಕ್ಕು.
- ಮುಸ್ಲಿಂ ಪುರುಷ ಮುಸ್ಲಿಮೇತರ ಮಹಿಳೆಯನ್ನು ವಿವಾಹವಾಗುವುದು ನಿಯಮಬಾಹಿರ ಪರಿಗಣಿಸಿದರೂ ವಿವಾಹಿತ ಮಹಿಳೆ ಇಸ್ಲಾಂಗೆ ಮತಾಂತರ ಹೊಂದಿದರೆ ವಿವಾಹವನ್ನು ಊರ್ಜಿತಗೊಳಿಸಬಹುದಾದ ನಿಯಮ.
- ಕ್ರೈಸ್ತ ಸಮುದಾಯದ ವ್ಯಕ್ತಿ ಅನ್ಯ ಜಾತಿಯ ಅಥವಾ ಅನ್ಯ ಧರ್ಮದ ವ್ಯಕ್ತಿಯೊಡನೆ ವಿವಾಹವಾದರೆ, ಆ ವ್ಯಕ್ತಿಯನ್ನು ನಿಯಂತ್ರಿಸುವ ವೈಯುಕ್ತಿಕ ಕಾನೂನು ಕ್ರೈಸ್ತರೊಂದಿಗಿನ ವಿವಾಹವನ್ನು ನಿಷೇಧಿಸಿದ್ದರೆ ಅಂತಹ ವಿವಾಹಗಳು ನಿಷೇಧ ಎಂದು ಪರಿಗಣಿಸುವ ನಿಬಂಧನೆ.
- ಸಿಖ್ ಧರ್ಮದ ಆನಂದ್ ವಿವಾಹ (ತಿದ್ದುಪಡಿ) ಕಾಯ್ದೆ 2012ರ ಅಡಿ ನೋಂದಣಿಯಾದ ವಿವಾಹಗಳನ್ನು ಅನ್ಯ ರೀತಿಯಲ್ಲಿ ನೋಂದಾಯಿಸಲು ಸಾಧ್ಯವಿಲ್ಲ ಎನ್ನುವ ನಿಬಂಧನೆ.
- ಅನ್ಯ ಧಾರ್ಮಿಕ ನಂಬಿಕೆಯನ್ನು ಆಚರಿಸುವ ವ್ಯಕ್ತಿಯೊಡನೆ ವಿವಾಹವಾದರೆ ಪಾರ್ಸಿ ಮಹಿಳೆಯು ತಮ್ಮ ಧಾರ್ಮಿಕ ಆಚರಣೆಗಳು ಮತ್ತು ಪದ್ಧತಿಗಳ ಎಲ್ಲ ಹಕ್ಕುಗಳನ್ನೂ ಕಳೆದುಕೊಳ್ಳುವ ನಿಬಂಧನೆ.
ಭಾರತದಂತಹ ವೈವಿಧ್ಯಮಯ ಸಂಸ್ಕೃತಿ ಇರುವ ದೇಶದಲ್ಲಿ ಹಿಂದೂ ಧರ್ಮದ ಒಳಗೇ ಪ್ರತಿಯೊಂದು ಜಾತಿಯಲ್ಲೂ ಸಹ ನಾನಾ ರೀತಿಯ ವಿವಾಹ ಪದ್ಧತಿಗಳು, ಆಸ್ತಿ ಹಂಚಿಕೆಯ ನಿಯಮಗಳು, ಉತ್ತರಾಧಿಕಾರದ ಕಾಯ್ದೆಗಳು, ವಾರಸುದಾರಿಕೆಯ ನಿಬಂಧನೆಗಳು ಜಾರಿಯಲ್ಲಿವೆ. ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಪದ್ಧತಿ ಮತ್ತು ಆಚರಣೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿಯೇ ಕಾಣುತ್ತದೆ. ಬಹುತೇಕ ಸಾಂಪ್ರದಾಯಿಕ ಕುಟುಂಬ ಕಾಯ್ದೆಗಳು ಹಾಗೂ ನಿಯಮಗಳು ಪಿತೃಪ್ರಧಾನತೆಯಿಂದಲೇ ಪ್ರಭಾವಿತವಾಗಿರುವುದೂ ಸಹ ವಾಸ್ತವ ಸಂಗತಿಯಾಗಿದೆ. ಹಾಗಾಗಿ ಎಲ್ಲ ಧರ್ಮಗಳ, ಜಾತಿಗಳ, ಬುಡಕಟ್ಟುಗಳ ಸಾಂಸ್ಕೃತಿಕ ಆಚರಣೆಗಳಲ್ಲೂ ಮಹಿಳೆ ನಿರ್ಲಕ್ಷಿತಳಾಗಿಯೇ ಕಾಣುತ್ತಾಳೆ. ಆದರೆ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಈ ಸಾಂಪ್ರದಾಯಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಪ್ರಕ್ರಿಯೆ ಡಾ. ಅಂಬೇಡ್ಕರ್ ಹೇಳಿದಂತೆ ಸ್ವಪ್ರೇರಣೆಯ ಆಂತರಿಕ ಪ್ರಯತ್ನಗಳೇ ಆಗಿರಬೇಕು. ಶಾಸನಾತ್ಮಕವಾಗಿ ಹೇರಲ್ಪಡುವ ಯಾವುದೇ ಕಾಯ್ದೆಗಳು ಬಹುಸಾಂಸ್ಕೃತಿಕ ನೆಲೆಗಳನ್ನು ಪ್ರಕ್ಷುಬ್ಧಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಏನಾಸಂ ಕೇವಲ ಒಂದು ರಾಜಕೀಯ ಕಾರ್ಯಸೂಚಿಯಾಗದೆ ಲಿಂಗ ತಾರತಮ್ಯಗಳನ್ನು ಹೋಗಲಾಡಿಸುವ, ಸಾಂವಿಧಾನಿಕ ಧಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವ, ಬಹುಸಾಂಸ್ಕೃತಿಕ ಸಂಪ್ರದಾಯಗಳನ್ನು ಕಾಪಾಡುವ, ಸಮಸ್ತ ಜನತೆಯನ್ನೂ ಒಳಗೊಳ್ಳುವ ಪ್ರಜಾಸತ್ತಾತ್ಮಕ ಧೋರಣೆ ಇರುವ ಒಂದು ಸಾಮಾಜಿಕ ಪ್ರಯತ್ನವಾಗಿ ಜನಸಾಮಾನ್ಯರ ಮನ್ನಣೆ ಪಡೆಯಬೇಕಿದೆ. ಈಗಾಗಲೇ ದೇಶದ ವಿವಿಧ ಮೂಲೆಗಳಿಂದ ಏನಾಸಂ ವಿರುದ್ಧ ಕೇಳಿಬರುತ್ತಿರುವ ಧ್ವನಿಗಳಲ್ಲಿ ಈ ಸೂಕ್ಷ್ಮವನ್ನು ಗಮನಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಈ ಸೂಕ್ಷ್ಮ ಧ್ವನಿಗಳಿಗೆ ಕಿವಿಯಾಗಬೇಕಿದೆ.
( ಈ ಲೇಖನಕ್ಕೆ ಮೂಲ ಆಧಾರ : ಪೂರ್ಣಿಮಾ ಜೋಷಿ ಅವರ The case against UCC – Hindu Business line 29 th June 2023 ಹಾಗೂ ಕೌಶಿಕ್ ದೇಕಾ ಅವರ How a UCC could impact marriages – India Today 28th June 2023 –ಲೇಖನಗಳು.)