ನವದೆಹಲಿ :
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ ಬಳಿಕ ಇದೀಗ ಚೈತ್ರ ನವರಾತ್ರಿ ಅಂಗವಾಗಿ ಮತ್ತೊಂದು ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಕನ್ನಡದ ಜನಪ್ರಿಯ ಗೀತೆಯೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರು ಭಕ್ತಿಭಾವವನ್ನು ವ್ಯಕ್ತಪಡಿಸಿದ್ದು, ಈ ನಡೆ ಕನ್ನಡಿಗರ ಗಮನ ಸೆಳೆದಿದೆ.

ಶ್ರೀ ಕೃಷ್ಣ ದೇವರಾಯ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬುತ್ತದೆ” ಎಂಬ ಅರ್ಥದ ಸಂದೇಶವನ್ನು ಕ್ಯಾಪ್ಷನ್ನಲ್ಲಿ ನೀಡಿದ್ದಾರೆ.

ಇದೀಗ ಮಾರ್ಚ್ 19ರಿಂದ ಆರಂಭವಾದ ಚೈತ್ರ ನವರಾತ್ರಿ ಹಿನ್ನೆಲೆಯಲ್ಲಿ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ದೇವಿ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುವ ಸಂಪ್ರದಾಯವಿದ್ದು, ಧೈರ್ಯ, ಪರಾಕ್ರಮ ಮತ್ತು ಸೌಂದರ್ಯದ ಪ್ರತೀಕವಾಗಿರುವ ಚಂದ್ರಘಂಟಾ ದೇವಿಗೆ ಕೆಂಪು ವಸ್ತ್ರ ಮತ್ತು ಹೂವುಗಳಿಂದ ವಿಶೇಷ ಪೂಜೆ ನಡೆಯುತ್ತದೆ.

1970ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಬಿ.ಆರ್. ಪಂತುಲು ನಿರ್ದೇಶಿಸಿದ್ದರು. ಟಿ.ಜಿ. ಲಿಂಗಪ್ಪ ಅವರ ಸಂಗೀತಕ್ಕೆ ಕೆ. ಪ್ರಭಾಕರ್ ಶಾಸ್ತ್ರಿ ಸಾಹಿತ್ಯ ರಚಿಸಿದ್ದರು. ಚಿತ್ರದಲ್ಲಿ Dr. Rajkumar ಶ್ರೀಕೃಷ್ಣ ದೇವರಾಯರಾಗಿ ಅಭಿನಯಿಸಿದರೆ, ಜಯಂತಿ ತಿರುಮಲಾಂಬ ದೇವಿಯಾಗಿ ಹಾಗೂ ಭಾರತಿ ವಿಷ್ಣುವರ್ಧನ್ ಚಿನ್ನಾದೇವಿಯಾಗಿ ಕಾಣಿಸಿಕೊಂಡಿದ್ದರು.ಪ್ರಧಾನಿ ಮೋದಿ ಕನ್ನಡದಲ್ಲಿ ಹಂಚಿಕೊಂಡ ಯುಗಾದಿ ಶುಭಾಶಯದ ಪೋಸ್ಟ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.






