ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತನಿಖೆ ಮಾಡಲು ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಈಗಾಗಲೇ ತನಿಖೆ ಆರಂಭವಾಗಿದ್ದು, ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬಾರದೆ ಅಲ್ಲೇ ಉಳಿದುಕೊಂಡರೆ ಕರೆದುಕೊಂಡು ಬರಲು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವ ಸಂಬಂಧ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ತನಿಖೆ ಮೇಲೆ ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿಗೆ ಅನುಮಾನ ಕಾಡುತ್ತಿದೆ. ಎಸ್ಐಟಿ ರಚನೆ ಮಾಡಿರುವುದು ಕೇವಲ ಲೋಕಸಭಾ ಚುನಾವಣೆಗಾಗಿ ಎನ್ನುವುದು ಕುಮಾರಸ್ವಾಮಿಯ ಪ್ರಬಲ ನಂಬಿಕೆ.
ಲೋಕಸಭಾ ಚುನಾವಣಾ ಕಣದಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಪಾರ್ಟಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಪ್ರಜ್ವಲ್ ಹೆಸರು ಬಳಸಲಾಗ್ತಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರು ಶಿಕ್ಷೆ ಆಗಲಿ, ವಿಡಿಯೋ ಮಾಡಿದವನು, ವಿಡಿಯೋ ಹಂಚಿದವನು ಎಲ್ಲರಿಗೂ ಶಿಕ್ಷೆ ಆಗಲಿದೆ ಎಂದಿದ್ದಾರೆ. ಜೊತೆಗೆ ಸಂತ್ರಸ್ತರನ್ನು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಎಲ್ಲಾ ಮಹಿಳೆಯರ ಮುಖವನ್ನು ಬ್ಲರ್ ಮಾಡದೆ ಹೊರಗಡೆ ಹರಿಯಬಿಡುತ್ತಿದ್ದಾರೆ. ಇವರಿಗೆ ಮಹಿಳೆಯರ ರಕ್ಷಣೆ ಮಾಡುವ ಉದ್ದೇಶವಿಲ್ಲ, ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಮೇ 7ರ ನಂತರ ಈ ಕೇಸ್ನ ಹೇಗೆ ನಡೆಸ್ತಾರೆ ಅನ್ನೋದನ್ನು ನೀವೇ ನೋಡಿ ಎಂದು ರಾಜ್ಯದ ಜನರಿಗೆ ತಿಳಿಸಿದ್ದಾರೆ.
ಪ್ರಜ್ವಲ್ಗೆ ಶಿಕ್ಷೆ ಆಗುವುದನ್ನು ತಪ್ಪಿಸುವ ಉದ್ದೇಶದಿಂದಲೇ ಎಸ್ಐಟಿ ರಚನೆ ಆಗಿದೆ ಎನ್ನುವ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ತನಿಖೆಗೆ ರಚನೆ ಆಗಿದ್ದ ವಿಶೇಷ ತನಿಖಾ ದಳ, ಎಷ್ಟು ಜನರಿಗೆ ಶಿಕ್ಷೆ ಕೊಡಿಸಿದೆ. ಯಾರಿಗೆ ಕಾನೂನು ಕ್ರಮ ಆಗಿದೆ. ಎಸ್ಐಟಿ ಅನ್ನೋದು ಕೇವಲ ಕಣ್ಣು ಹೊರೆಸುವ ತಂತ್ರ. ಈ ಪ್ರಕರಣದಲ್ಲೂ ಏನೂ ಆಗಲ್ಲ, ಕೇವಲ ಚುನಾವಣಾ ಗಿಮಿಕ್ ಆಗಿ ಕಾಂಗ್ರೆಸ್ ಸರ್ಕಾರ ಬಳಸಿಕೊಳ್ತಿದೆ ಎನ್ನುವುದು ಕುಮಾರಸ್ವಾಮಿ ಅವರ ನೇರ ಆರೋಪ. ಈ ಕೇಸ್ನಲ್ಲೂ ಕಾಂಗ್ರೆಸ್ ಸರ್ಕಾರ ಕೇವಲ ಪ್ರಚಾರದ ವಸ್ತುವಾಗಿ ಪ್ರಜ್ವಲ್ ಹೆಸರಿನ ವಿಡಿಯೋಗಳನ್ನು ಬಳಸಿಕೊಳ್ಳಲಾಗ್ತಿದೆ ಎಂದು ನೇರವಾಗಿ ಚಾಟಿ ಬೀಸಿದ್ದಾರೆ.
ಪ್ರಜ್ವಲ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟನೆ ಕೊಡಬೇಕು ಎಂದು ಕಾಂಗ್ರೆಸ್ ಪಾರ್ಟಿ ಆಗ್ರಹಕ್ಕೂ ಕುಮಾರಸ್ವಾಮಿ ಚಾಟಿ ಬೀಸಿದ್ದು, ನಿಮ್ಮದೇ ಪಕ್ಷದ ಹೆಚ್ ವೈ ಮೇಟಿ ಅವರ ಪ್ರಕರಣದ ಬಳಿಕ ಅವರ ಜೊತೆಗೆ ಚುನಾವಣಾ ಪ್ರಚಾರ ಮಾಡಿರುವ ಸಿದ್ದರಾಮಯ್ಯಗೆ ಯಾವ ನೈತಿಕತೆ ಇದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಪ್ರಕರಣದಲ್ಲಿ ಎಳೆದುತಂದು ಮಸಿ ಬಳಿಯುವ ಪ್ರಯತ್ನ ಆಗ್ತಿದೆ ಅಷ್ಟೆ. ಈ ವಿಡಿಯೋ ಮೂಲಕ ದೇಶದ ರಾಜ್ಯದ ಜನರ ದಾರಿ ತಪ್ಪಿಸುವುದಷ್ಟೇ ನಿಮ್ಮ ಉದ್ದೇಶ ಎಂದು ವಾಗ್ದಾಳಿ ನಡೆಸಿದ್ದಾರೆರ. ಇನ್ನು ಮೇ 7 ರ ನಂತರ ಈ ಚುನಾವಣಾ ಕಾವು ಕಡಿಮೆ ಆಗುತ್ತದೆ. ಆ ಬಳಿಕ ವಿಡಿಯೋ ಹಾಗು ಎಸ್ಐಟಿ ತನ್ನಷ್ಟಕ್ಕೆ ತಾನೇ ಸೈಲೆಂಟ್ ಆಗುತ್ತದೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.
ಕೃಷ್ಣಮಣಿ