ಮಂಗಳೂರಿನಲ್ಲಿ ನಡೆದಿದ್ದ ಕೋಟೆ ಕಾರು ಬ್ಯಾಂಕ್ ದರೋಡೆ ಪ್ರಕರಣವನ್ನು (Mangalore robbery case)ದಕ್ಷಿಣ ಕನ್ನಡ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ದರೋಡೆ ನಡೆದ ಕೇವಲ ನಾಲ್ಕು ದಿನದಲ್ಲಿ 18 ಕೆಜಿ ಚಿನ್ನದ (18 kg gold) ಸಮೇತ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ಸಂಪೂರ್ಣ ಚಿನ್ನವನ್ನು ರಿಕವರಿ ಮಾಡಲಾಗಿದೆ.

ಕೇವಲ ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ಮಟ್ಟದಲ್ಲಿ ಸಂಚಲ ಮೂಡಿಸಿದ್ದ ಪ್ರಕರಣ ಇದಾಗಿದ್ದು, ಕೇವಲ 5 ನಿಮಿಷದಲ್ಲಿ ಬರೋಬ್ಬರಿ 18.3 ಕೆಜಿ ಚಿನ್ನಾಭರಣ ಕದ್ದು ಖದೀಮರು ಎಸ್ಕೇಪ್ ಆಗಿದ್ದರು. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು 8 ತಂಡಗಳನ್ನು ರಚಿಸಿ ಖದೀಮರಿಗೆ ಖೆಡ್ಡ ತೋಡಿದೆ.
ಈ ದರೋಡೆ ನಡೆಸಲು ಈ ಖತರ್ನಾಕ್ ಖದೀಮರ ತಂಡ ಬರೋಬ್ಬರಿ 6 ತಿಂಗಳಿಂದ ಸ್ಕೆಚ್ ರೂಪಿಸಿತ್ತು ಎಂಬ ಮಾಹಿತಿಯನ್ನು ವಿಚಾರಣೆಯ ವೇಳೆ ಪೊಲೀಸರು ಕಂಡುಕೊಂಡಿದ್ದಾರೆ. ಇನ್ನು ಅಪಾರ ಚಿನ್ನದ ಜೊತೆಗೆ ಈ ಕೃತ್ಯಕ್ಕೆ ಬಳಸಲಾಗಿದ್ದ ಮಚ್ಚು , ಪಿಸ್ತೋಲ್ , ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದ್ದು, ಸಂಪೂರ್ಣ ಚಿನ್ನವನ್ನು ರಿಕವರಿ ಮಾಡಿರುವ ಹಿನ್ನಲೆ ಚಿನ್ನ ಕಳೆದುಕೊಂಡಿದ್ದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.