ದೇಶದ ಒಕ್ಕೂಟ ರಾಜ್ಯಗಳೆಲ್ಲ ಕರೋನ ಅಲೆಗೆ ತೀವ್ರವಾಗಿ ಬಳಲುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತೊಂದು ಟೀಕೆಗೆ ಗುರಿಯಾಗಿದ್ದಾರೆ. ಇಡೀ ದೇಶಕ್ಕೆ ದೇಶವೇ ಆಕ್ಸಿಜನ್ , ಐಸಿಯು ಬೆಡ್, ಇನ್ನಿತರೆ ಮೆಡಿಕಲ್ ಕಿಟ್ ಇಲ್ಲದೆ ನರಳುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಹೊಸ ನಿವಾಸ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗಡುವು ವಿಧಿಸಿ ಈಗ ಸಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದು ಈ ಕುರಿತು ರಾಹುಲ್ ಗಾಂಧಿ ಕೂಡ ಟೀಕಿಸಿದ್ದಾರೆ.
ದೇಶ ಕರೋನ ಸಂಕಷ್ಟದಿಂದ ನಲುಗುತ್ತಿರುವ ಹೊತ್ತಲ್ಲಿ 13,450 ಕೋಟಿ ರೂಪಾಯಿ ಮೊತ್ತದ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಅಗತ್ಯ ಸೇವೆ ಎಂದು ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ್ದು ಪ್ರಧಾನಿ ನಿವಾಸವನ್ನು ನಿರ್ಮಾಣ ಮಾಡಲು ಗಡುವು ನಿಗದಿ ಮಾಡಿದ್ದಾರೆ. ಯೋಜನೆಗೆ ಪರಿಸರ ಬೋರ್ಡ್ ಅನುಮತಿಯನ್ನು ನೀಡಲಾಗಿದೆ. ಸೆಂಟ್ರಲ್ ವಿಸ್ತಾ ಯೋಜನೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿರುವ ಕಾರಣ ಯೋಜನೆಗೆ ಲಾಕ್ಡೌನ್ನಲ್ಲೂ ತಡೆ ಹಾಕುವಂತಿಲ್ಲ.
ಈ ಕುರಿತು ಟ್ವೀಟ್ ಮಾಡಿ ಟೀಕಿಸಿರುವ ರಾಹುಲ್ ಗಾಂಧಿ, “ಸೆಂಟ್ರಲ್ ವಿಸ್ತಾ ಯೋಜನೆಯಡಿ 13,450 ಕೋಟಿ ಬಿಡುಗಡೆ ಮಾಡಲಾಗಿದೆ, ಈ ಹಣವನ್ನು 45 ಕೋಟಿ ಭಾರತೀಯರಿಗೆ ಕರೋನ ಲಸಿಕೆ ಹಾಕಲು ಅಥವಾ ಒಂದು ಕೋಟಿ ಆಕ್ಸಿಜನ್ ಸಿಲಿಂಡರ್ಗೆ ಅಥವಾ ಆರು ಸಾವಿರದಂತೆ ಎರಡು ಕೋಟಿ ಕುಟುಂಬಕ್ಕೆ ನ್ಯಾಯ್ ನೀಡಲು ಮಾಡಿದ್ದಾರೆಯೇ. ಆದರೆ ಪ್ರಧಾನಿಯವರ ಅಹಂ ಜನರ ಜೀವಕ್ಕಿಂತ ದೊಡ್ಡದಾಗಿದೆ” ಎಂದು ಕಿಡಿಕಾರಿದ್ದಾರೆ.
ಇಡೀ ದೇಶವೇ ಕರೋನದಿಂದ ನರಳುತ್ತಿರುವ ಸಂಧರ್ಭದಲ್ಲಿ ಅಗತ್ಯವಿರುವ ಮೆಡಿಕಲ್ ಸಲಕರಣೆಗಳಿಗೆ ಮತ್ತು ಜನರ ಹಿತಾಸಕ್ತಿಗೆ ಉಪಯೋಗ ಮಾಡಬೇಕಾದ ಹಣವನ್ನು ಪ್ರಧಾನಿ ನಿವಾಸಕ್ಕೆ ಎಂದು ವ್ಯರ್ಥ ಮಾಡುತ್ತಿರುವುದನ್ನು ನೋಡಿದರೆ ಪ್ರಧಾನಿ ಅಹಂ ಜನರ ಜೀವಕ್ಕಿಂತ ದೊಡ್ಡದಾಗಿದೆ ಎಂಬುದು ರಾಹುಲ್ ಗಾಂಧಿಯ ಟ್ವೀಟ್ ತಿರುಳು.
ಈ ಟ್ವೀಟ್ ನ ಮೊದಲು ರಾಹುಲ್ ಗಾಂಧಿ ಅವರು, ಕೊವಿಡ್ ವಿರುದ್ಧ ಹೋರಾಡಲು ಲಾಕ್ ಡೌನ್ ಒಂದೇ ಅಸ್ತ್ರ. ನ್ಯಾಯ್ ಯೋಜನೆ ಜಾರಿ ಜತೆ ಲಾಕ್ ಡೌನ್ ಜಾರಿ ಮಾಡಿ. ಸರ್ಕಾರದ ನಿಷ್ಕ್ರಿಯತೆಯಿಂದ ಅಮಾಯಕರು ಸಾಯುತ್ತಿದ್ದಾರೆ. ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.