ಕೇಂದ್ರ ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳಿಗೆ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ತನ್ನ ನಿಷ್ಕ್ರಿಯತೆಯಿಂದ ಸರ್ಕಾರವು ಜನರ ಪ್ರಾಣಹಾನಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
“ದುರ್ಬಲ ವರ್ಗಗಳಿಗೆ NYAY ಯೋಜನೆಯ ರಕ್ಷಣೆಯೊಂದಿಗೆ ಸಂಪೂರ್ಣ ಲಾಕ್ಡೌನ್ ಮಾಡುವುದೇ ಕರೋನಾದ ಹರಡುವಿಕೆಯನ್ನು ತಡೆಯುವ ಏಕೈಕ ಮಾರ್ಗ” ಎಂದು ರಾಹುಲ್ ಗಾಂಧಿ ಇಂದು ಟ್ವೀಟ್ ಮಾಡಿದ್ದಾರೆ.
ಭಾರತ ಸರ್ಕಾರವು ತನ್ನ ನಿಷ್ಕ್ರಿಯತೆಯಿಂದಾಗಿ ಅಮಾಯಕ ಜನರನ್ನು ಕೊಲ್ಲುತ್ತಿದೆ ಎಂದು ರಾಹುಲ್ ಆರೋಪ ಮಾಡಿದ್ದಾರೆ.
ಭಾರತ ಸರ್ಕಾರದ ಕಾರ್ಯತಂತ್ರಗಳೆಲ್ಲವೂ ವಿಫಲವಾಗಿರುವುದರಿಂದ ಸಂಪೂರ್ಣ ಲಾಕ್ಡೌನ್ ಮಾಡದೆ ಬೇರೆ ಉಪಾಯವೇ ಇಲ್ಲವೆಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ವೈರಸನ್ನು ಎಲ್ಲಾಕಡೆಯೂ ಹರಡಲು ಸರ್ಕಾರ ಬಿಟ್ಟಿದೆ. ಇದು ಭಾರತದ ವಿರುದ್ಧ ನಡೆದ ಅಪರಾಧ ಎಂದು ಅವರು ಹೇಳಿದ್ದಾರೆ.
ಈ ಮೂಲಕ NYAY (ಕನಿಷ್ಟ ವೇತನ ಯೋಜನೆ)ಯ ಚರ್ಚೆಯನ್ನು ರಾಹುಲ್ ಗಾಂಧಿ ಮತ್ತೆ ಮುನ್ನೆಲೆಗೆ ತಂದಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯ ವೇಳೆ ಕಾಂಗ್ರೆಸ್ ಈ ಮಹತ್ವದ ಯೋಜನೆಯನ್ನು ತನ್ನ ಪ್ರಣಾಳಿಕೆಯಲ್ಲಿ ಮುಖ್ಯ ಅಂಶವಾಗಿ ಅಳವಡಿಸಿಕೊಂಡಿತ್ತು. ಆರ್ಥಿಕ ಕೆಳಸ್ತರದ ಕುಟುಂಬಗಳಿಗೆ ವಾರ್ಷಿಕ 72,000 ರುಪಾಯಿ ಆದಾಯದ ಖಾತರಿಯನ್ನು ಈ ಯೋಜನೆ ನೀಡುತ್ತದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೇರಳದಲ್ಲಿ ಜಾರಿಗೆ ತರುವುದಾಗಿ ಕೇರಳ ಚುನಾವಣಾ ಮತ ಪ್ರಚಾರದ ವೇಳೆ ಭರವಸೆ ನೀಡಿದ್ದರು.
ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಮತ್ತು ಇತ್ತೀಚಿನ ಕರೋನಾ ಸಾಂಕ್ರಾಮಿಕದ ಮೂಲಕ ಕುಸಿದಿರುವ ಭಾರತದ ಆರ್ಥಿಕತೆಯನ್ನು ಮೇಲೆತ್ತಲು ಇದೊಂದೇ ದಾರಿ ಎಂದು ರಾಹುಲ್ ಗಾಂಧಿ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಕಳೆದ ವಾರ, ಗಾಂಧಿ ಅವರು ಕೋವಿಡ್ ಎರಡನೇ ತರಂಗದಲ್ಲಿ ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೂ ಸಹ ಕೇಂದ್ರ ಸರ್ಕಾರ ಹೊಣೆಗಾರಿಕೆಯನ್ನು ಹೊತ್ತಿಲ್ಲ ಎಂದು ಕೇಂದ್ರವನ್ನು ಗುರಿಯಾಗಿಸಿಕೊಂಡಿದ್ದರು.