ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ (ಜನವರಿ 5) ಮಧ್ಯಾಹ್ನ ಪಂಜಾಬಿನ ಬಟಿಂಡಾದಿಂದ ಫಿರೋಜ್ಪುರದ ಹುಸೇನಿವಾಲಾ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಹೋಗುವ ನಡುವೆ ಫ್ಲೈಓವರ್ ಮೇಲೆ 15-20 ನಿಮಿಷ ಕಾಯಬೇಕಾಯಿತು. ‘ಇದಕ್ಕೆ ಪಂಜಾಬ್ ಸರ್ಕಾರದ ಭದ್ರತಾ ಲೋಪ ಕಾರಣ’ ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆರೋಪಿಸುತ್ತಿದೆ. ‘ಫಿರೋಜ್ಪುರದಲ್ಲಿ ಮೋದಿ ರ್ಯಾಲಿಗೆ ಜನ ಬಂದಿರಲಿಲ್ಲ. ಅಲ್ಲಿ ಖಾಲಿ ಕುರ್ಚಿಗಳು ರಾಜಾಜಿಸುತ್ತಿದ್ದವು. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ರ್ಯಾಲಿ ರದ್ದು ಮಾಡಲಾಗಿದೆ. ರ್ಯಾಲಿ ರದ್ದು ಮಾಡಲು ಬಿಜೆಪಿ ನಾಯಕರಿಗೆ ನೆಪ ಬೇಕಿತ್ತು. ಹಾಗಾಗಿ ಪಂಜಾಬ್ ಸರ್ಕಾರದ ಮೇಲೆ ಭದ್ರತಾ ಲೋಪದ ಆರೋಪ ಹೊರಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಹೇಳುತ್ತಿದೆ.
ಹಾಗಾದರೆ ವಾಸ್ತವವಾಗಿ ಬಟಿಂಡಾ ಮತ್ತು ಫಿರೋಜ್ಪುರದ ನಡುವೆ ನಡೆದ ಘಟನೆಯಾದರೂ ಏನು? ಅಲ್ಲಿ ರಸ್ತೆ ತಡೆ ನಡೆಸುತ್ತಿದ್ದುದು ಯಾವ ಕಾರಣಕ್ಕೆ? ಯಾರು? ಎಂಬ ಬಗ್ಗೆ ರಾಷ್ಟ್ರೀಯ ದೈನಿಕ ‘ಇಂಡಿಯನ್ ಎಕ್ಸ್ ಪ್ರೆಸ್’ ಸಮಗ್ರವಾದ ವರದಿ ಮಾಡಿದೆ. ಅದರ ಸಾರಾಂಶವನ್ನು ‘ಪ್ರತಿಧ್ವನಿ’ ಕನ್ನಡಿಗ ಓದುಗರ ಮುಂದಿಡುತ್ತಿದೆ.
ಪ್ರತಿಭಟನೆ ನಡೆಸುತ್ತಿದ್ದ ರೈತರು ಯಾರು?
ಸುರ್ಜಿತ್ ಸಿಂಗ್ ಫೂಲ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಕ್ರಾಂತಿಕಾರಿ (ಪೂಲ್) ಸಂಘಟನೆಗೆ ಸೇರಿದ ಸುಮಾರು 400ರಿಂದ 500 ರೈತರು ಬಟಿಂಡಾ ಮತ್ತು ಫಿರೋಜ್ಪುರದ ನಡುವೆ ಇರುವ ಪಿಯಾರಿಯಾನಾ ಗ್ರಾಮದ ಬಳಿಯ ಫ್ಲೈಓವರ್ ಮೇಲೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ಭಾರತೀಯ ಕಿಸಾನ್ ಯೂನಿಯನ್ ಕ್ರಾಂತಿಕಾರಿ (ಪೂಲ್) ದೆಹಲಿಯ ಗಡಿಗಳಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಒಂದು ವರ್ಷ ಸತತವಾಗಿ ಪ್ರತಿಭಟನೆ ಮಾಡಿ ಯಶಸ್ವಿಯಾದ ಸಂಯುಕ್ತ ಕಿಸಾನ್ ಮೋರ್ಚಾದ (SKM) ಭಾಗವಾಗಿದೆ. ಇದು ಪಂಜಾಬ್ನ ಮಾಲ್ವಾ ಪ್ರದೇಶದ 9 ಜಿಲ್ಲೆ ಹಾಗೂ ಮಜಾ ಪ್ರದೇಶದ 2 ಜಿಲ್ಲೆಗಳಲ್ಲಿ ಸಕ್ರೀಯವಾಗಿದೆ. 7 ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿದೆ. ಒಟ್ಟಾರೆ ರಾಜ್ಯಾದ್ಯಂತ 25 ಸಾವಿರದಿಂದ 30 ಸಾವಿರ ಸದಸ್ಯರನ್ನು ಹೊಂದಿದೆ.
ಈ ರೈತರು ಪ್ರತಿಭಟನೆ ನಡೆಸುತ್ತಿದ್ದುದು ಏಕೆ?
ಭಾರತೀಯ ಕಿಸಾನ್ ಯೂನಿಯನ್ ಕ್ರಾಂತಿಕಾರಿ (ಪೂಲ್) ಪ್ರಧಾನ ಕಾರ್ಯದರ್ಶಿ ಬಲದೇವ್ ಸಿಂಗ್ ಝಿರಾ ಅವರ ಪ್ರಕಾರ, ರೈತರು ಬುಧವಾರ ಪಂಜಾಬಿನ ಮೂರು ಸ್ಥಳಗಳಲ್ಲಿ ರಸ್ತೆ ತಡೆ ನಡೆಸುತ್ತಿದ್ದರು. ಆ ಪೈಕಿ ಬಟಿಂಡಾ ಮತ್ತು ಫಿರೋಜ್ಪುರದ ನಡುವೆ ಇರುವ ಪಿಯಾರಿಯಾನಾ ಗ್ರಾಮದ ಬಳಿ ನಡೆಯುತ್ತಿದ್ದ ಪ್ರತಿಭಟನೆಯೂ ಒಂದು. ಇದೇ ರೀತಿ ಹರಿಕಾ ಮತ್ತು ಕುಲಗರ್ಹಿಯಲ್ಲಿ ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ವತಿಯಿಂದ ರಸ್ತೆ ತಡೆ ನಡೆಸಲಾಗುತ್ತಿತ್ತು. ಫಿರೋಜ್ಪುರದಲ್ಲಿ ಪ್ರಧಾನಿ ಮೋದಿ ರ್ಯಾಲಿಗೆ ಬಿಜೆಪಿ ಬೆಂಬಲಿಗರು ಬರದಂತೆ ತಡೆಯುವುದು ಇದರ ಉದ್ದೇಶವಾಗಿತ್ತು.
ಮೋದಿ ಈ ರಸ್ತೆಯಲ್ಲಿ ಪ್ರಯಾಣಿಸುವ ಬಗ್ಗೆ ಗೊತ್ತಿತ್ತಾ?
ಬಲದೇವ್ ಸಿಂಗ್ ಝಿರಾ ಅವರ ಪ್ರಕಾರ ಪ್ರತಿಭಟನಾನಿರತ ರೈತರಿಗೆ ಈ ಮಾಹಿತಿ ಇರಲಿಲ್ಲ. ಅವರು ಪ್ರಧಾನಿ ಮೋದಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ ಎಂದುಕೊಂಡಿದ್ದರು. ‘ನಮ್ಮ ಉದ್ದೇಶ ಬಿಜೆಪಿ ಬೆಂಬಲಿಗರನ್ನು ತಡೆಯುವುದೇ ಹೊರತು ಪ್ರಧಾನಿಯನ್ನಲ್ಲ’ ಎನ್ನುತ್ತಾರೆ ಅವರು. ಯಾವಾಗ ಪ್ರಧಾನಿ ಬಟಿಂಡಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಹುಸೇನಿವಾಲಾಗೆ ಹೋಗಬೇಕೆಂದು ನಿರ್ಧರಿಸಿದರೋ ಆಗ ಫಿರೋಜ್ಪುರದ ಹಿರಿಯ ಪೊಲೀಸ್ ಅಧೀಕ್ಷಕ ಹರ್ಮನ್ದೀಪ್ ಸಿಂಗ್ ನಮಗೆ ಮಾಹಿತಿ ನೀಡಿದರು. ಆದರೆ ನಾವು ಅವರ ಮಾತನ್ನು ನಂಬಲಿಲ್ಲ. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ರ್ಯಾಲಿಗೆ ಹೋಗಲು ಅವಕಾಶ ಮಾಡಿಕೊಡಲೆಂದು ನಮ್ಮ ಬಳಿ ಸುಳ್ಳು ಹೇಳುತ್ತಿದ್ದಾರೆ ಎಂದುಕೊಂಡೆವು. ಪ್ರಧಾನಿಯವರು ನಿಜವಾಗಿ ಆ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ ಎಂದು ನಮಗೆ ತಿಳಿದಿದ್ದರೆ ನಾವು ನಮ್ಮ ಧರಣಿಯನ್ನು ಹಿಂತೆಗೆದುಕೊಳ್ಳುತ್ತಿದ್ದೆವು ಎಂದು ಕೂಡ ಅವರು ಹೇಳಿದ್ದಾರೆ.
ರೈತ ವಿರೋಧಿಯಾದ ಮೂರು ಕೃಷಿ ಕಾಯಿದೆಗಳನ್ನು ಜಾರಿಗೆ ತಂದ, ನಂತರ ಅವುಗಳನ್ನು ವಾಪಸ್ ಪಡೆಯಲು ಸತಾಯಿಸಿದ, ದೆಹಲಿ ಗಡಿಯಲ್ಲಿ ರೈತರಿಗೆ ಚಿತ್ರಹಿಂಸೆ ನೀಡಿದ ಬಿಜೆಪಿ ವಿರುದ್ಧ ನಮಗೆ ಸಾಕಷ್ಟು ಕೋಪವಿದೆ. ಹಾಗಾಗಿ ಬಿಜೆಪಿ ರ್ಯಾಲಿಗೆ ಅಡ್ಡಿಪಡಿಸಬೇಕು ಎಂದು ನಿರ್ಧರಿಸಿದ್ದೆವು. ರ್ಯಾಲಿಗೆ ಬಿಜೆಪಿ ಬೆಂಬಲಿಗರು ಹೋಗದಂತೆ ಎಲ್ಲಾ ಕಡೆಗಳಲ್ಲೂ ರಸ್ತೆ ತಡೆ ಆಯೋಜಿಸಿದ್ದೆವು. ಯಾವಾಗ ಪ್ರಧಾನಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಮನವರಿಕೆಯಾಯಿತೋ ಆಗ ಅವರಿಗೆ ಅವಕಾಶ ಮಾಡಿಕೊಟ್ಟೆವು ಎಂದು ಝಿರಾ ಹೇಳಿದ್ದಾರೆ.
ಪ್ರಧಾನಿ ರ್ಯಾಲಿ ವಿರುದ್ಧ ಪ್ರತಿಭಟನೆ ಉದ್ದೇಶವಿದೆಯೇ?
ಇದನ್ನು ಭಾರತೀಯ ಕಿಸಾನ್ ಯೂನಿಯನ್ ಕ್ರಾಂತಿಕಾರಿ (ಪೂಲ್) ಪ್ರಧಾನ ಕಾರ್ಯದರ್ಶಿ ಬಲದೇವ್ ಸಿಂಗ್ ಝಿರಾ ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ವತಿಯಿಂದ ಹೆದ್ದಾರಿಗಳು ಮತ್ತು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುವ ಯೋಜನೆ ಇತ್ತು. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು, ಅದಕ್ಕಾಗಿ ಕಾನೂನು ತರಬೇಕು, ಪ್ರತಿಭಟನೆಯ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಪ್ರತಿಭಟನೆ ವೇಳೆ ಸತ್ತ ರೈತರ ಕುಟುಂಬದವರಿಗೆ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವ ಕುರಿತು ಚರ್ಚಿಸಬೇಕು ಎಂಬ ನಮ್ಮ ಬೇಡಿಕೆಗಳ ಬಗ್ಗೆ ಮಾರ್ಚ್ 15ರಂದು ಪ್ರಧಾನಿ ಭೇಟಿ
ಆಗಲು ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಉದ್ದೇಶಿತ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ರಾಜ್ಯದ ಅತಿದೊಡ್ಡ ರೈತ ಸಂಘ, ಭಾರತೀಯ ಕಿಸಾನ್ ಯೂನಿಯನ್ (ಉಗ್ರಹಣ) ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿತ್ತು. ಅಂದಾಜು 1 ಲಕ್ಷ ಯೂನಿಯನ್ ಸದಸ್ಯರು “ಗೋ ಬ್ಯಾಕ್ ಮೋದಿ” ಎಂಬ ಫಲಕಗಳನ್ನು ಹಿಡಿದು ವಿವಿಧ ಸ್ಥಳಗಳಲ್ಲಿ ಪ್ರಧಾನಿಯವರ ಪ್ರತಿಕೃತಿಗಳನ್ನು ಸುಟ್ಟಿದ್ದರು.