ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, ದೇಶಾದ್ಯಂತ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕ ಕಾಂಗ್ರೆಸ್ ಸಮಿತಿಯ ವತಿಯಿಂದಲೂ ನಗರದ ಶಿವಾನಂದ ವೃತ್ತದ ಪೆಟ್ರೋಲ್ ಬಂಕ್ ಮುಂಭಾಗ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಗುಂಡುರಾವ್ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಎಐಸಿಸಿ ಆದೇಶದ ಮೇರೆಗೆ ಐದು ದಿನ ಕೆಪಿಸಿಸಿ ವತಿಯಿಂದ ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಕರೋನಾ ಸಂಕಷ್ಟದ ಮಧ್ಯೆ ಬೆಲೆ ಏರಿಕೆ ಹಿನ್ನೆಲೆ, ಅಚ್ಛೇ ದಿನ್ ಬರಲಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ನರಕ ನೋಡುತ್ತಿದ್ದೇವೆ. ಇಂತಹ ನರಕದ ದಿನಗಳನ್ನು ನಾವು ಹಿಂದೆಂದೂ ಕಂಡಿರಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮನಮೋಹನ ಸಿಂಗ್ ಅವರ ಸರ್ಕಾರದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿಯವರು ಹಾಹಾಕಾರ ಸೃಷ್ಟಿ ಮಾಡಿದ್ದರು ಮೋದಿ ಅವರೇ ಪ್ರತಿಭಟನೆ ನಡೆಸಿದ್ದರು. ಬಳಿಕ ಅವರು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು ಅಚ್ಛೇದಿನ್ ಬರಲಿದೆ ಎಂದು ಹೇಳಿದ್ದರು. ಆದರೆ ಈವತ್ತು ನರಕದ ದಿನಗಳು ಬಂದಿವೆ. ಹಿಂದೆ ನಾವು ಈ ರೀತಿ ನರಕ ನೋಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂಕಷ್ಟವಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಜನ ಸಾಮಾನ್ಯರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ ಅವರು ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಆಗುತ್ತದೆ.
ಸಾಮಾನ್ಯ ಜನರು ಸಣ್ಣ ವಾಹನ ಇಟ್ಟುಕೊಂಡಿರುತ್ತಾರೆ. ಅವರ ಪರಿಸ್ಥಿತಿ ಏನು? ಲಾಕ್ ಡೌನ್ ನಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉತ್ಪಾದನೆ ನಿಂತು ಹೋಗಿದೆ. ಜನರ ರಕ್ತ ಹೀರುತ್ತಿರುವ ನರೇಂದ್ರ ಮೋದಿಯವರಿಗೆ ನಾಚಿಕೆ ಆಗುವುದಿಲ್ಲವೇ ? ನಮ್ಮ ರಾಜ್ಯದಿಂದ 1 ಲಕ್ಷ 19 ಸಾವಿರ ಕೋಟಿ , ಅಬಕಾರಿ ಸುಂಕ , 14 ಸಾವಿರ ಕೋಟಿ ಮಾರಾಟ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು. ಇಷ್ಟೊಂದು ತೆರಿಗೆ ತೆಗೆದುಕೊಂಡು ಮತ್ತೆ ಪೆಟ್ರೋಲ್ ಮೇಲೆ ತೆರಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ಅಧಿಕಾರ ಮಾಡುತ್ತಿದ್ದಾರೆ. ಮೋದಿಯವರು ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುವ ತಿಗಣೆಯಂತೆ ಆಗಿದ್ದಾರೆ. ರಾವಣನ ಶ್ರೀಲಂಕಾದಲ್ಲಿ ಪೆಟ್ರೋಲ್ ದರ 59 ರೂ. ರಾಮನ ಭಾರತದಲ್ಲಿ ಬೆಲೆ 100 ರೂ. ರಾವಣ ರಾಜ್ಯ ಬಡವರ ಪರವಾಗಿದೆ. ರಾಮ ರಾಜ್ಯದಲ್ಲಿ ಬಡವರ ರಕ್ತ ಹೀರಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೈಕ್ ನಲ್ಲಿ ಓಡಾಡುವ ಯುವಕರು ಅಚ್ಚೇ ದಿನ್ ಬರುತ್ತದೆ ಎನ್ನುತ್ತಿದ್ದರು. ಈಗ ಅವರೇ ಶಾಪ ಹಾಕುತ್ತಿದ್ದಾರೆ. ಮೋದಿ ಕೇವಲ ಭಾವನಾತ್ಮಕವಾಗಿ ಮಾತನಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೋಮುವಾದ ಬಿತ್ತುವುದೇ ಬಿಜೆಪಿ ಕೆಲಸ. ಜಿಡಿಪಿ ದರ ಇಳಿಮುಖವಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದರು. ಮೋದಿ ಪ್ರಧಾನಿಯಾಗಿ 7 ವರ್ಷ ಆಗಿದೆ 14 ಕೋಟಿ ಜನರಿಗೆ ಉದ್ಯೋಗ ಕೊಡಲಿಲ್ಲ. ಬಡವರಿಗೆ ಅಕ್ಕಿ ಕೊಡುವುದಕ್ಕೇ ಆಗದ ಇಂಥ ಕೆಟ್ಟ ಸರ್ಕಾರವನ್ನ ನಾನು ನೋಡಿರಲಿಲ್ಲ. ರಾಮನ ಹೆಸರು ಹೇಳುವ ಬಿಜೆಪಿಯವರಿಗೆ ಸಾಮಾನ್ಯ ಜನರ ಕಷ್ಟ ಅರ್ಥ ಆಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.