ಬಿಹಾರದ ಆಡಳಿತವನ್ನು ಈ ಹಿಂದಿನಿಂದಲೂ ʼಜಂಗಲ್ ರಾಜ್ʼ ಎಂದು ಕರೆಯುತ್ತಿದ್ದರು. ಕೋವಿಡ್ ವಿಚಾರದಲ್ಲಿ ನಡೆದ ಎರಡು ಘಟನೆಗಳು ಈ ಅನ್ವರ್ಥನಾಮವನ್ನು ಸಮರ್ಥಿಸಿಕೊಳ್ಳುವಂತೆ ಮಾಡಿವೆ. ಸಚಿವರೊಬ್ಬರ ಆಗಮನದ ಸಿದ್ದತೆಯಲ್ಲಿ ಓರ್ವ ರೋಗಿ ಮೃತಪಟ್ಟಿದ್ದರೆ, ಇನ್ನೊಂದೆಡೆ ಮೃತ ಕರೋನಾ ಸೋಂಕಿತನ ದೇಹವನ್ನು ಬೇರೆ ಯಾವುದೋ ಕುಟುಂಬಕ್ಕೆ ನೀಡಿ ಆಸ್ಪತ್ರೆಯೊಂದು ಎಡವಟ್ಟು ಮಾಡಿಕೊಂಡಿದೆ.
ಸಂಪೂರ್ಣ ದೇಶವೇ ಕೋವಿಡ್ ಎರಡನೇ ಅಲೆಗೆ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಬಿಹಾರದ ಆರೋಗ್ಯ ಸಚಿವರಾದ ಮಂಗಲ್ ಪಾಂಡೆ ಅವರು ನಳಂದಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಭೇಟಿ ಮಾಡುವ ಸಂದರ್ಭದಲ್ಲಿ ಓರ್ವ ರೋಗಿ ಸಾವನ್ನಪ್ಪಿದ್ದಾನೆ. ಸಂಪೂರ್ಣ ಆಸ್ಪತ್ರೆಯ ಸಿಬ್ಬಂದಿಗಳು ಸಚಿವರ ಭೇಟಿಗೆ ಸಿದ್ದತೆಯಲ್ಲಿ ತೊಡಗಿದ್ದರಿಂದ ಯಾರೂ ರೋಗಿಯನ್ನು ನೋಡುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ಇದರಿಂದಾಗಿ ಆಂಬುಲೆನ್ಸ್ನಲ್ಲಿ ಬಂದಿದ್ದ ರೋಗಿಯು ಅಲ್ಲಿನ ಸ್ಟ್ರೆಚರ್ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ.
ಆಸ್ಪತ್ರೆಯ ಮುಂಭಾಗದಲ್ಲಿಮೃತ ವ್ಯಕ್ತಿಯ ಪತ್ನಿ ಹಾಗೂ ಮಗನ ಆಕ್ರಂಧನ ಮುಗಿಲು ಮುಟ್ಟಿತ್ತು. ಮೃತ ವ್ಯಕ್ತಿಯ ಮಗ ಅಭಿಮನ್ಯು ಕುಮಾರ್ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ದ ಕಣ್ಣೀರಿಟ್ಟಿದ್ದಾರೆ.
“ಮೊದಲು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದೆವು, ಅಲ್ಲಿ ಬೆಡ್ ಖಾಲಿ ಇಲ್ಲ ಎಂಬ ಕಾರಣಕ್ಕೆ ಎನ್ಎಂಸಿಎಚ್ ಆಸ್ಪತ್ರೆಗೆ ಅಪ್ಪನನ್ನು ಕರೆತಂದೆವು. ಇಲ್ಲಿ ಎರಡು ತಾಸು ಕಾದರೂ ಆಸ್ಪತ್ರೆಯ ಸಿಬ್ಬಂದಿಗಳು ಅಡ್ಮಿಟ್ ಮಾಡಿಕೊಳ್ಳಲಿಲ್ಲ,” ಎಂದು ಹೆಳಿದ್ದಾರೆ.
ಈ ಕುರಿತಾಗಿ ಸಚಿವ ಮಂಗಲ್ ಪಾಂಡೆ ಅವರನ್ನು ಕೇಳಿದಾಗ, ನಾವು ಜೀವ ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಇಂತಹ ಸುದ್ದಿ ತಿಳಿದಾಗ ನೋವಾಗುತ್ತದೆ, ಎಂದು ಹೇಳಿ ಹೊರಟು ಹೋಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಬಿಹಾರದ ಸರ್ಕಾರಿ ಆಸ್ಪತ್ರೆಯೊಂದು ಮಾಡಿದ ಎಡವಟ್ಟಿನಿಂದ ಜೀವಂತವಾಗಿರುವ ಕೋವಿಡ್ ಸೋಂಕಿತನು ಮೃತನೆಂದು ಘೋಷಿಸಲಾಗಿದೆ. ಜೀವಂತವಾಗಿರುವ ರೋಗಿಯ ಕುಟುಂಬಕ್ಕೆ ಯಾವುದೋ ಬೇರೆ ವ್ಯಕ್ತಿಯ ಮೃತದೇಹವನ್ನು ನೀಡಿ ಸಾಗ ಹಾಕಲಾಗಿದೆ.
ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಪಾಟ್ನಾದ ಆಸ್ಪತ್ರೆಗಳ ಪರಿಸ್ಥಿತಿಯ ಕುರಿತು ಜನರು ಆಕ್ರೋಶಗೊಂಡಿದ್ದಾರೆ. ಪಾಟ್ನಾದ ಮಹ್ಮದ್ಪುರದ ನಿವಾಸಿಯಾದ ಚುನ್ನು ಕುಮಾರ್ ಎಂಬ ಕೋವಿಡ್ ರೋಗಿಯು ಜೀವಂತವಿರುವಾಗಲೇ ಮೃತನೆಂದು ಆಸ್ಪತ್ರೆಯು ಘೋಷಿಸಿದೆ. ಬೇರೆ ಯಾವುದೋ ವ್ಯಕ್ತಿಯ ಮೃತ ದೇಹವನ್ನು ಚುನ್ನುಕುಮಾರ್ ಅವರ ಸಹೋದರನಿಗೆ ನೀಡಲಾಗಿದೆ.
ಈ ವಿಚಾರ ಬೆಳಕಿಗೆ ಬರುತ್ತಿಂದ್ದಂತೆಯೇ ಜಿಲ್ಲಾಧಿಕಾರಿ ಚಂದ್ರಸೇಖರ್ ಸಿಂಗ್ ಅವರು ಇದರ ಕುರಿತು ವಿಚಾರಣೆ ನಡೆಸಿ 24 ಗಂಟೆಗಳ ಒಳಗಾಗಿ ವರದಿ ನೀಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಒಟ್ಟಿನಲ್ಲಿ, ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಕೋವಿಡ್ ನಡುವೆ ಬದುಕು ಸಾಗಿಸಿತ್ತಿದ್ದರೆ, ಸಚಿವರಿಗೆ ಸ್ವಾಗತ ಮತ್ತು ಆಸ್ಪತ್ರೆಯ ಎಡವಟ್ಟುಗಳಿಂದ ಜನರು ಪರಿತಪಿಸುವಂತಾಗಿದೆ. ಕೋವಿಡ್ ನಂತಹ ಸಂಕಷ್ಟಕರ ಸಂದರ್ಭದಲ್ಲಿ ಮಂತ್ರಿ, ಶಾಸಕ ಎಂದು ಸ್ವಾಗತಕ್ಕೆ ಸಿದ್ದತೆ ಮಾಡಿಕೊಳ್ಳದೇ ಜನರ ಸಂಕಷ್ಟಗಳಿಗೆ ಆಸ್ಪತ್ರೆಗಳು ನೆರವಾಗಬೇಕಿದೆ.