ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿ ಬಂಧನಕ್ಕೊಳಗಾಗಿರುವ ಸಾಗರ್ ಶರ್ಮ ಮೂಲತಃ ಮೈಸೂರಿನವ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ವೀಕ್ಷಕರ ಗ್ಯಾಲರಿಗೆ ಪಾಸ್ ಪಡೆದಿದ್ದ.
ಮೈಸೂರಿನ ಸಾಗರ್ ಶರ್ಮಾ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ ಅಂತ ತಿಳಿದುಬಂದಿದೆ. ಕೃತ್ಯ ಸಂಬಂಧ ಮಹಾರಾಷ್ಟ್ರದ ಲಾತೂರಿನ ಅಮೋಲ್ ಮತ್ತು ಹರಿಯಾಣದ ಹಿಸ್ಸಾರ್ನ ನೀಲಂ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ ಭವನದ ಪಕ್ಕದಲ್ಲಿರುವ ಸಾರಿಗೆ ಭವನದಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಲೋಕಸಭೆಯೊಳಗೆ ಕೃತ್ಯ ನಡೆಯುವ ವೇಳೆ ರಾಜೇಂದ್ರ ಅಗರ್ವಾಲ್ ಅವರು ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದರು. ಕೃತ್ಯ ನಡೆಯುವ ವೇಳೆ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರು ಭಾಷಣಕ್ಕೆ ಎದ್ದು ನಿಂತಿದ್ದರು. ತಕ್ಷಣವೇ ರಾಜೇಂದ್ರ ಅಗರ್ವಾಲ್ ಅವರು ಕಲಾಪವನ್ನು ಮುಂದೂಡಿದರು.
ವೀಕ್ಷಕರ ಗ್ಯಾಲರಿಯಿಂದ ಸಂಸದರ ಆಸನದ ಮೇಲೆ ಜಿಗಿದ ದುಷ್ಕರ್ಮಿಗಳನ್ನು ಸಂಸದರು ಸುತ್ತುವರೆದು ಹಿಡಿಯಲು ಯತ್ನಿಸುತ್ತಿರುವ ದೃಶ್ಯ ಲೋಕಸಭಾ ಟಿವಿ ಚಾನೆಲ್ನಲ್ಲಿ ದಾಖಲಾಗಿದೆ.