ಕರ್ನಾಟಕದಲ್ಲಿ ಲಿಂಗಾಯತರು ಅಂದರೆ ಶ್ರೀಮಂತರುˌ ಭೂಹಿಡುವಳಿದಾರರುˌ ಶೋಷಕರು ಎನ್ನುವ ಅನೇಕ ಕತೆಗಳು ಮೊದಲಿನಿಂದ ವ್ಯವಸ್ಥಿತವಾಗಿ ಹರಡಲಾಗಿದೆ. ಅದು ಭಾಗಶಃ ನಿಜವೂ ಹೌದು. ಆದರೆ ಈ ಇಡೀ ಶೋಷಕ ವ್ಯವಸ್ಥೆಯ ಜನಕರು ಮಾತ್ರ ಈ ಆರೋಪದಿಂದ ತಪ್ಪಿಸಿಕೊಂಡು ಲಿಂಗಾಯತರ ಕೊರಳಿಗೆ ಆರೋಪದ ಉರುಳು ಹಾಕಿಸುವಲ್ಲಿ ಸಫಲರಾಗಿರುವುದಂತೂ ಸತ್ಯ. ಲಿಂಗಾಯತರು ಮೂಲದಲ್ಲಿ ದುಡಿಯುವ ವರ್ಗದ ಶೂದ್ರರು. ಕೃಷಿ ˌ ವ್ಯಾಪಾರˌ ಮುಂತಾದ ಕಾಯಕದಲ್ಲಿ ತೊಡಗಿಸಿಕೊಂಡವರು. ಬಹುಸಂಖ್ಯಾತರಾಗಿರುವುದರಿಂದ ಸಹಜವಾಗಿ ಭೂಹಿಡುವಳಿ ಮತ್ತು ರಾಜಕೀಯ ಪ್ರಾಬಲ್ಯವನ್ನು ಹೊಂದಿದ್ದಾರೆ. ಅದೇ ರೀತಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರು. ಲಿಂಗಾಯತವು ಒಂದು ಅವೈದಿಕ ಸ್ವತಂತ್ರ ಧರ್ಮವಾಗಿದ್ದು ಅದರಲ್ಲಿ ಅನೇಕ ಕಾಯಕವರ್ಗಗಳು ಸೇರಿಕೊಂಡಿವೆ. ಲಿಂಗಾಯತರಲ್ಲಿ ಅಂದಾಜು ಶೇಕಡ ೬೦% ರಷ್ಟು ಜನರು ಇಂದಿಗೂ ಬಡತನ ಅನುಭವಿಸುತ್ತಾರೆ. ಪಂಚಮಸಾಲಿ ಉಪವರ್ಗವೂ ಸೇರಿದಂತೆ ಎಲ್ಲಾ ಉಪವರ್ಗದಲ್ಲಿ ಬಡವರಿದ್ದಾರೆ.
ಇದನ್ನು ಮೊದಲು ಗುರುತಿಸಿದ ಎಚ್ ಜಿ ಹಾವನೂರು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಲಿಂಗಾಯತ ಧರ್ಮದ ಎಲ್ಲಾ ಉಪವರ್ಗಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿತು. ಲಿಂಗಾಯತ ಧರ್ಮದಲ್ಲಿ ಪಂಚಮಸಾಲಿ ಎನ್ನುವ ಕೃಷಿ ಅವಲಂಬಿತ ಉಪವರ್ಗವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು ಈಗ ಸಧ್ಯ ಅದು ೩ಬಿ ಪ್ರವರ್ಗದ ಅಡಿಯಲ್ಲಿ ಇತರ ಲಿಂಗಾಯತರೊಂದಿಗೆ ಮೀಸಲಾತಿ ಪಡೆಯುತ್ತಿದೆ. ಈಗ ತನಗೆ ೨ ಎ ಪ್ರವರ್ಗದಲ್ಲಿ ಮೀಸಲಾತಿ ನೀಡಬೇಕು ಎನ್ನುವುದು ಪಂಚಮಸಾಲಿಗಳ ಬೇಡಿಕೆ. ಪಂಚಮಸಾಲಿಗಳ ಈ ಬೇಡಿಕೆಗೆ ಮುಖ್ಯ ಕಾರಣವೇನೆಂದರೆ ತನಗಿಂತಲೂ ಶ್ರೀಮಂತರಾಗಿರುವ ಲಿಂಗಾಯತ ಬಣಜಿಗರು ಮತ್ತು ಲಿಂಗಾಯತ ಗಾಣಿಗರು ಹಿಂದೂ ಬಣಜಿಗರು ಮತ್ತು ಗಾಣಿಗರೊಂದಿಗೆ ತಾವೂ ಕೂಡ ೨ಎ ಪ್ರವರ್ಗದಡಿಯಲ್ಲಿ ಮೀಸಲಾತಿ ಅನುಭವಿಸುತ್ತಿರುವುದು. ಹಾಗಾಗಿ ಅವರಿಗಿಂತ ತಮ್ಮ ಜನರು ಬಡವರಿರುವುದರಿಂದ ತಮಗೂ ೨ಎ ಪ್ರವರ್ಗಕ್ಕೆ ಸೇರಿಸಬೇಕು ಎನ್ನುವುದು ಪಂಚಮಸಾಲಿಗಳ ಬಹುದಿನದ ಬೇಡಿಕೆ.
ಈ ಲಿಂಗಾಯತ ಬಣಜಿಗˌ ಗಾಣಿಗ ಮತ್ತು ಪಂಚಮಸಾಲಿಗಳ ಮೀಸಲಾತಿ ಪೈಪೋಟಿಯ ನಡುವೆ ಇದರ ಯಾವುದೂ ಗೊಡವೆ ಇಲ್ಲದೆ ೩ಬಿ ಮೀಸಲಾತಿಯಲ್ಲಿ ತೃಪ್ತವಾಗಿರುವ ಇನ್ನೂ ಅನೇಕ ಚಿಕ್ಕಪುಟ್ಟ ಬಡ ಲಿಂಗಾಯತ ಉಪವರ್ಗಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಲಿಂಗಾಯತ ಆದಿ ಬಣಜಿಗರುˌ ಲಿಂಗಾಯತ ಲಾಳಗೊಂಡರುˌ ಲಿಂಗಾಯತ ಕೂಡುವಕ್ಕಲಿಗರುˌ ಗೌಡ ಲಿಂಗಾಯತರು ಇತ್ಯಾದಿ. ಈ ಉಪವರ್ಗಗಳು ರಾಜಕೀಯˌ ಆರ್ಥಿಕˌ ಶೈಕ್ಷಣಿಕ ಅಥವಾ ಇನ್ನುಳಿದ ಪ್ರಾಬಲ್ಯವನ್ನು ಹೊಂದಿಲ್ಲ. ಸಂಖ್ಯೆಯಲ್ಲೂ ಗೌಣವಾಗಿರುವುದರಿಂದ ಈ ಉಪವರ್ಗಗಳು ರಾಜಕೀಯ ಒತ್ತಡವನ್ನು ಅನುಸರಿಸುವಂತಿಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಅತ್ಯಂತ ಅಲ್ಪಸಂಖ್ಯೆಯ ವೀರಶೈವ ಆರಾಧ್ಯ ಜಂಗಮರು ಮಾತ್ರ ಇಡೀ ಲಿಂಗಾಯತ ಸಮುದಾಯದ ಮೇಲೆ ಯಜಮಾನಿಕೆಯನ್ನು ಸ್ಥಾಪಿಸಿಕೊಂಡಿದ್ದು ಲಿಂಗಾಯತರ ಗುರುಗಳೆಂದು ಬಿಂಬಿಸಿಕೊಂಡು ಪೌರೋಹಿತ್ಯ ವೃತ್ತಿಯಿಂದ ಇವರಲ್ಲಿ ಬಹುತೇಕರು ಆರ್ಥಿಕವಾಗಿ ಅತ್ಯಂತ ಸಬಲರಾಗಿದ್ದಾರೆ.
ಅದಕ್ಕೆ ಮುಖ್ಯ ಕಾರಣ ಲಿಂಗಾಯತ ಮತ್ತು ವೀರಶೈವ ಪರಂಪರೆಯ ಬಹುತೇಕ ಮಠಗಳ ಮಠಾಧೀಶರು ಇದೇ ಉಪವರ್ಗಕ್ಕೆ ಸೇರಿದವರಾಗಿರುವುದರಿಂದ ಮಠಗಳ ಆಯಕಟ್ಟಿನ ಸ್ಥಾನಗಳು ಮತ್ತು ಮಠಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿನ ಸ್ಥಾನಗಳಷ್ಟೆ ಅಲ್ಲವೆ ಲಿಂಗಾಯತ ಶಿಷ್ಯವರ್ಗ ನಡೆಸುವ ಸಂಸ್ಥೆಗಳಲ್ಲೂ ಈ ಜಂಗಮ ವರ್ಗ ತಮ್ಮ ಪ್ರಾಬಲ್ಯ ಹೊಂದಿದೆ. ಇಷ್ಟಿದ್ದೂ ಈ ವರ್ಗ ಲಿಂಗಾಯತರಿಗೆ ಸಿಗುವ ಅಲ್ಪಸಂಖ್ಯಾತ ಸ್ಥಾನಮಾನವನ್ನು ಉಗ್ರವಾಗಿ ವಿರೋಧಿಸುತ್ತದೆ ಮತ್ತು ಅಷ್ಟೇ ಉಗ್ರವಾಗಿ ತಮ್ಮನ್ನು ಪರಿಶಿಷ್ಟ ವರ್ಗದ ಬೇಡ ಜಂಗಮ ಕೋಟಾದಡಿಯಲ್ಲಿ ಮೀಸಲಾತಿ ನೀಡಬೇಕೆಂದು ಚುನಾಯಿತ ಸರಕಾರಗಳನ್ನು ಹೆದರಿಸುತ್ತದೆ. ಈ ಎಲ್ಲಾ ಅಂಶಗಳು ಮೊದಲಿನಿಂದ ಪಂಚಮಸಾಲಿಗಳು ೨ಎ ಅಡಿಯಲ್ಲಿ ಮೀಸಲಾತಿ ಕೇಳಲು ಪ್ರಚೋದನೆ ಮಾಡಿವೆ ಎಂದರೆ ತಪ್ಪಾಗಲಾರದು. ಆದರೆ ಪಂಚಮಸಾಲಿಗಳ ಮೀಸಲಾತಿ ಹೋರಾಟ ೨೦೧೮ ರ ನಂತರ ಅತ್ಯಂತ ತೀವ್ರವಾಗಲು ಕಾರಣಗಳು ಬೇರೆಯವೆ ಇವೆ. ಪಂಚಮಸಾಲಿಗಳ ೨ಎ ಮೀಸಲಾತಿಯ ಹಳೆ ಬೇಡಿಕೆಯನ್ನು ಬಡಿದೆಬ್ಬಿಸಿ ರಂಪಾಟ ಮಾಡಿಸಲು ವೈದಿಕ ಪಟ್ಟಭದ್ರ ಹಿತಾಸಕ್ತಿಗಳು ತೆರೆಮರೆಯಲ್ಲಿ ಸಾಕಷ್ಟು ಕುತಂತ್ರ ಮಾಡಿರುವುದು ಅಲ್ಲಗಳೆಯಲಾಗದು.
ವೀರಶೈವ ಜಂಗಮರ ಬೇಡಜಂಗಮ ಪರಿಶಿಷ್ಟ ಮೀಸಲಾತಿ ಬೇಡಿಕೆಯನ್ನು ಹೊರತುಪಡಿಸಿ ಲಿಂಗಾಯತ ಧರ್ಮದ ಎಲ್ಲಾ ಉಪವರ್ಗಗಳು ಇತರ ಹಿಂದುಳಿದ ವರ್ಗದಡಿಯಲ್ಲಿ ಮೀಸಲಾತಿಗಾಗಿ ಬೇಡಿಕೆ ಇಡುತ್ತಿರುವುದು ನ್ಯಾಯಸಮ್ಮತವಾದದ್ದೆ. ಆದರೆ ಪಂಚಮಸಾಲಿಗಳ ಇಂದಿನ ಮೀಸಲಾತಿ ಹೊರಾಟದ ಹಿಂದಿನ ಹುನ್ನಾರಗಳನ್ನು ಮತ್ತು ಅದರಿಂದ ಇಡೀ ಲಿಂಗಾಯತ ಸಮುದಾಯಕ್ಕೆ ಬಂದೊದಗಬಹುದಾದ ಅಪಾಯಗಳನ್ನು ನಾವು ಈಗ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಹಾಗೆ ನೋಡಿದರೆ ಕಳೆದ ಏಳೆಂಟು ವರ್ಷಗಳಲ್ಲಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ತನ್ನ ಅರ್ಥವನ್ನು ಕಳೆದುಕೊಂಡಿದೆ. ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮ ಮತ್ತು ಸಂಸ್ಥೆಗಳಿಂದ ಹಿಡಿದು ಸರಕಾರಿ ಸೇವಾ ಸಂಸ್ಥೆಗಳಾದ ಸಾರಿಗೆˌ ರೈಲುˌ ವಾಯುಯಾನˌ ಮುಂತಾದವುಗಳು ಬಿಜೆಪಿಯನ್ನು ಆರ್ಥಿಕವಾಗಿ ಬೆಂಬಲಿಸುವ ಖಾಸಗಿ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿವೆ. ಉಳಿದ ಅನೇಕ ಸರಕಾರಿ ಸೇವಾ ಇಲಾಖೆಗಳು ಖಾಸಗಿ ಉದ್ಯಮಿಗಳಿಗೆ ಗುತ್ತಿಗೆಯಾಧಾರದಲ್ಲಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರಿ ಕ್ಷೇತ್ರಗಳಲ್ಲಿ ಉದ್ಯೋಗಳೆ ಇಲ್ಲದಿದ್ದಾಗ ಮೀಸಲಾತಿಯ ಪ್ರಶ್ನೆಯೆ ಉದ್ಭವಿಸಲಾರದು.
ಇಂತಹ ದುರಿತ ಕಾಲದಲ್ಲಿ ಹಿಂದಿನಿಂದ ಶೋಷಿತರ ಮೀಸಲಾತಿ ವ್ಯವಸ್ಥೆಯನ್ನು ದ್ವೇಷಿಸುತ್ತಲೆ ಬಂದಿರುವ ಬ್ರಾಹ್ಮಣರು ಭಾರತದಲ್ಲಿ ಅತ್ಯಂತ ಕನಿಷ್ಟ ಸಂಖ್ಯೆಯಲ್ಲಿದ್ದರೂ ಕೂಡ ಅತ್ಯಂತ ಗರಿಷ್ಟ ಪ್ರಮಾಣದ ಅಂದರೆ ಶೇ. ೧೦% ರಷ್ಟು ಸಿಂಹಪಾಲು ಮೀಸಲಾತಿಯನ್ನು ಆರ್ಥಿಕ ದುರ್ಬಲ ವರ್ಗ ಎನ್ನುವ ಕೋಟಾ ಸೃಷ್ಟಿಸಿಕೊಂಡು ಹೊಡೆದುಕೊಂಡಿದ್ದಾರೆ. ಅದಕ್ಕಾಗಿ ಅವರು ಯಾವುದೇ ಪಾದಯಾತ್ರೆಯಾಗಲಿˌ ಸತ್ಯಾಗ್ರಹವಾಗಲಿˌ ಹೋರಾಟವಾಗಲಿ ಮಾಡಲಿಲ್ಲ. ಅದಕ್ಕೆ ಸರ್ವೋಚ್ಛ ನ್ಯಾಯಾಲಯ ಕೂಡ ಅನುಮೋದನೆ ನೀಡಿಯಾಗಿದೆ. ಬ್ರಾಹ್ಮಣರು ಯಾವುದೇ ಬೇಡಿಕೆಯನ್ನಿಡದೆˌ ಎಲ್ಲೂ ಚರ್ಚಿಸದೆˌ ಸರಕಾರದ ಮೇಲೆ ಪ್ರಭಾವ ಬಿರಿ ಗರಿಷ್ಟ ಪ್ರಮಾಣದ ಮೀಸಲಾತಿ ಹೊಡೆದುಹೊಂಡು ಕುಳಿತಿರುವುದು ಈ ದೇಶದ ಶೂದ್ರ ಜನರಿಗೆ ಒಂದು ಪಾಠವಾಗಲೆಯಿಲ್ಲ ಎನ್ನುವುದು ಅತ್ಯಂತ ದುರಂತದ ಸಂಗತಿಯಾಗಿದೆ. ಇದನ್ನು ನೋಡಿಯೂ ಪಂಚಮಸಾಲಿ ಮೀಸಲಾತಿ ಬೇಡಿಕೆಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರಾಜಕೀಯ ಪುಢಾರಿಗಳು ಬ್ರಾಹ್ಮಣರಿಗೆ ಕೇಳದೆ ಮೀಸಲಾತಿ ಸಿಕ್ಕಿದ್ದು ಹೇಗೆ ಎಂದು ಯಾವತ್ತು ಪ್ರಶ್ನಿಸದೆ ಇರುವುದು ಅಪಾರ ಗುಮಾನಿಯನ್ನು ಹುಟ್ಟಿಸಿದೆ.
ಈ ಹೋರಾಟ ಮತ್ತು ಅದರ ಹಿಂದಿನ ಹುನ್ನಾರಗಳು
ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿ ಪುಢಾರಿಯೊಬ್ಬರು ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಬೇಕು ಎಂಬ ಅಸಂಬದ್ಧ ಹೇಳಿಕೆ ನೀಡಿ ತನ್ನಲ್ಲಿರುವ ಬ್ರಾಹ್ಮಣ್ಯದ ಗುಲಾಮಗಿರಿತನˌ ಮತ್ತು ಅಜ್ಞಾನವನ್ನು ಪ್ರದರ್ಶಿಸಿದ್ದರು. ೨೦೧೮ ರ ನಂತರ ತೀವ್ರಗೊಂಡ ಪಂಚಮಸಾಲಿ ಮೀಸಲಾತಿ ಹೋರಾಟದ ರಾಜಕೀಯ ದಾಳವಾಗಿ ಬಿಜೆಪಿ ತನ್ನ ಶಾಸಕರೊಬ್ಬರನ್ನು ದಾಳವಾಗಿ ಬಳಸಿತು ಎನ್ನುವ ಗುಮಾನಿ ಕೂಡ ಹುಟ್ಟಿಕೊಳ್ಳುತ್ತದೆ. ೨೦೧೭ ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಬೇಕೆಂಬ ಹೋರಾಟ ಆರಂಭಗೊಂಡಾಗ ಅತ್ಯಂತ ಹೆಚ್ಚು ಭಯಭೀತರಾಗಿದ್ದು ಸಂಘ ಪರಿವಾರದ ಸಾಂಪ್ರದಾಯವಾದಿ ಬ್ರಾಹ್ಮಣರು. ಆ ಹೋರಾಟವನ್ನು ಶತಾಯಗತಾಯ ವಿಫಲಗೊಳಿಸಲು ಅಂದೇ ಸಂಘಿಗಳು ಸಂಕಲ್ಪ ತೊಟ್ಟಿದ್ದರು ಎನ್ನಲು ಅನೇಕ ಸಾಂದರ್ಭಿಕ ಘಟನೆಗಳು ಸಾಕ್ಷಿಯನ್ನೊದಗಿಸುತ್ತವೆ. ಜೊತೆಯಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾದಾಗುವುದನ್ನು ತಡೆಯಲು ಇದೇ ಸಂಘಿ ಪಟಾಲಂ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದ್ದವು.
ಕೊನೆಗೆ ಯವಸ್ಸಿನ ನೆಪವನ್ನು ಮುಂದೆಮಾಡಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವುದು ಮತ್ತು ಬಿಜೆಪಿ ಹಾಗು ಲಿಂಗಾಯತ ಮತದಾರರ ಮೇಲೆ ಯಡಿಯೂರಪ್ಪ ಹೊಂದಿರುವ ಹಿಡಿತವನ್ನು ಸಂಪೂರ್ಣವಾಗಿ ಹುಡಿಗೊಳಿಸುವುದು ಹಾಗು ಮತ್ತೊಂದು ಕಡೆ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಹೋರಾಟವನ್ನು ಹಾಳುಗೆಡುವುದು ಸಂಘಿಗಳ ಹುನ್ನಾರವಾಗಿತ್ತು. ಅದಕ್ಕಾಗಿ ಬಹುಸಂಖ್ಯಾತ ಪಂಚಮಸಾಲಿ ಉಪವರ್ಗದ ವಾಚಾಳಿ ಬಿಜೆಪಿ ಶಾಸಕನೊಬ್ಬನನ್ನು ದಾಳವಾಗಿ ಬಳಸಿ ಸಂಘಿಗಳು ಈ ಪಂಚಮಸಾಲಿ ಮೀಸಲಾತಿ ಹೋರಾಟದ ಸೂತ್ರವನ್ನು ಹಿನ್ನೆಲೆಯಲ್ಲಿ ನಿಂತೆ ನಿಯಂತ್ರಿಸಿದರು ಎನ್ನಲು ಎಲ್ಲಾ ರೀತಿಯ ಸಾಂದರ್ಭಿಕ ಘಟನೆಗಳು ಪುಷ್ಟಿಯನ್ನೊದಗಿಸುತ್ತವೆ. ಧಾರವಾಡ ಭಾಗದ ಪಂಚಮಸಾಲಿ ಶಾಸಕರೊಬ್ಬರನ್ನು ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ಕರ್ನಾಟಕ ಮೂಲದ ಸಂಘಕ್ಕೆ ಆಪ್ತನಾಗಿರುವ ಕೇಂದ್ರದ ಮಂತ್ರಿಯೊಬ್ಬ ಮೌಖಿಕ ಆದೇಶ ನೀಡಿದ್ದನೆನ್ನುವ ಸುದ್ದಿ ಅಲ್ಲಲ್ಲಿ ಕೇಳಿಬಂದಿತ್ತು. ಅದಕ್ಕೆ ಪುಷ್ಟಿಯೊದಗಿಸುವಂತೆ ಹೋರಾಟದುದ್ದಕ್ಕೂ ಮುಂಚೂಣಿಯಲ್ಲಿರುವ ಬಿಜೆಪಿ ಶಾಸಕರು ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರಕಾರವನ್ನು ಯಾವತ್ತೂ ಉಗ್ರವಾಗಿ ಟೀಕಿಸಲಿಲ್ಲ ಅಥವಾ ಕನಿಷ್ಟ ಜೋರು ಧ್ವನಿಯಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಲಿಲ್ಲ. ಬದಲಿಗೆ ಅಧಿಕಾರದಲ್ಲಿ ಇರದೆ ಇರುವ ಯಡಿಯೂರಪ್ಪ ಮತ್ತು ಅವರ ಮಗನನ್ನು ವಾಚಾಮಗೋಚರವಾಗಿ ಬೈಯಲಾಯಿತು ಮತ್ತು ಹಿಂದುತ್ವದ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಯಿತು. ಇದೆಲ್ಲವೂ ಒಂದು ವ್ಯವಸ್ಥಿತ ಹುನ್ನಾರ ಎನ್ನಿಸವುದು ಸಹಜ.
ಪಂಚಮಸಾಲಿ ಹೋರಾಟ ನ್ಯಾಯಯುತವಾದದ್ದೆ ಆದರೂ ಅದು ಬಳಸಿದ ಮಾರ್ಗ ಮತ್ತು ಅದರ ಮುಂಚೂಣಿ ನಾಯಕತ್ವವು ಅದನ್ನು ತಪ್ಪು ಹಾದಿಯಲ್ಲಿ ನಡೆಸಿತು. ಸಮಾಜದ ಮುಖಂಡರಾದ ಮುರಗೇಶ್ ನಿರಾಣಿˌ ಸಿ ಸಿ ಪಾಟೀಲˌ ಮುಂತಾದವರನ್ನು ಅದು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಒಂದುಕಡೆಯಾದರೆ ಆ ಚಳುವಳಿಯ ನಾಯಕರ ಪರಮ ವಾಚಾಳಿತನ ಹೋರಾಟವನ್ನು ಹದಗೆಡಿಸಿತು. ಒಂದು ಕಡೆ ಲಿಂಗಾಯತ ಧರ್ಮದ ಪರಮ ಶತೃ ಆಗಿರುವ ಹಿಂದುತ್ವದ ಪ್ರತಿಪಾದಕರು ಈ ಚಳುವಳಿಯ ಮುಂದಾಳತ್ವ ವಹಿಸಿದ್ದು ಮತ್ತು ಅವರು ಉಳಿದ ಪಂಚಮಸಾಲಿ ಸಮಾಜದ ನಾಯಕರು ಮತ್ತು ಹರಿಹರ ಪೀಠವನ್ನು ವಾಚಾಮಗೋಚರವಾಗಿ ಹಾಗು ಅಷ್ಟೇ ಅನಾಗರಿಕವಾಗಿ ಟೀಕಿಸಿದ್ದು ಮತ್ತು ಉಳಿದ ಲಿಂಗಾಯತ ಉಪವರ್ಗಗಳ ಕುರಿತು ಉದ್ದಕ್ಕೂ ಹಗುರವಾಗಿ ಮಾತನಾಡಿದ್ದು ಇಡೀ ಹೋರಾಟದ ಉದ್ದೇಶವನ್ನೆ ಬುಡಮೆಲು ಮಾಡಿದಂತಿತ್ತು. ಈ ಬೆಳವಣಿಗೆಗಳಿಂದ ಪಂಚಮಸಾಲಿಗಳನ್ನು ಉಳಿದ ಲಿಂಗಾಯತ ವರ್ಗಗಳು ಸಂಶಯದಿಂದ ನೋಡುವಂತಾಗಿ ಇಡೀ ಲಿಂಗಾಯತ ಸಮುದಾಯದಲ್ಲಿ ಅಘಾದವಾದ ಬಿರುಕನ್ನು ಮೂಡಿಸಿದ್ದು ಸುಳ್ಳಲ್ಲ. ಹೀಗಾಗಿ ಇದು ಮುಂದಿನ ದಿನಗಳಲ್ಲಿ ಪಂಚಮಸಾಲಿ ರಾಜಕಾರಣಿಗಳಿಗೆ ಬಹುದೊಡ್ಡ ನಷ್ಟವನ್ನು ತರಬದಲ್ಲುದು. ಏಕೆಂದರೆ ರಾಜಕಾರಣ ಕೇವಲ ಒಂದು ಸಮುದಾಯದವನ್ನು ನೆಚ್ಚಿಕೊಂಡು ಮಾಡಲಾಗುವುದಿಲ್ಲ.
ಹೋಗಲಿˌ ಕೊನೆಗೆ ಪಂಚಮಸಾಲಿ ಉಪವರ್ಗಕ್ಕೆ ಮೀಸಲಾತಿ ಸಿಕ್ಕಿತೆ? ಅಥವಾ ಸಿಗುವ ಖಚಿತ ಭರವಸೆಯಾದರೂ ಇದೆಯೆ? ಈ ಪ್ರಶ್ನೆ ಮತ್ತು ಇದಕ್ಕೆ ಉತ್ತರ ಎರಡೂ ಅನಿಶ್ಚಿತ ಹಾಗು ನಿಘೂಡ. ಈಗಾಗಲೆ ಪಂಚಮಸಾಲಿಗಳಿಗೆ ಅದ್ಯಾವುದೊ ೨ಸಿ ಅಥವಾ ೨ಡಿ ಎಂಬ ಅಸ್ಪಷ್ಟವಾದ ಪ್ರವರ್ಗವನ್ನು ಸೃಷ್ಟಿಸುವ ನಾಟಕ ಸರಕಾರ ಮಾಡಿದಂತಿದೆ. ಆ ಪ್ರವರ್ಗವು ಕೇವಲ ಪಂಚಮಸಾಲಿಗಳಿಗೆ ಮಾತ್ರನಾ ಅಥವಾ ಇಡೀ ಲಿಂಗಾಯತ ಸಮುದಾಯಕ್ಕಾ? ಅದಕ್ಕೆ ನಿರ್ಧರಿಸಲಾದ ಶೇಕಡ ಮೀಸಲಾತಿಯ ಪ್ರಮಾಣವೆಷ್ಟು? ಆ ಶೇಕಡ ಪ್ರಮಾಣವನ್ನು ಯಾವ ಪ್ರವರ್ಗದಿಂದ ಕಿತ್ತಿಕೊಳ್ಳಲಾಗುತ್ತದೆ? ಈ ಯಾವ ಪ್ರಶ್ನೆಗಳಿಗೂ ಸ್ಪಷ್ಟವಾದ ಉತ್ತರಗಳಿಲ್ಲ. ಅಂದರೆ ಪಂಚಮಸಾಲಿ ಮೀಸಲಾತಿ ಹೋರಾಟವು ಲಿಂಗಾಯತ ಧರ್ಮದ್ರೋಹಿಗಳು ಹೆಣೆದ ವ್ಯವಸ್ಥಿತ ಪಿತೂರಿಯ ಭಾಗ ಮತ್ತು ಅದರ ಮೂಲಕ ಬಿಜೆಪಿಯನ್ನು ನಿಯಂತ್ರಿಸುವ ಸಾಂಪ್ರದಾಯವಾದಿ ಬ್ರಾಹ್ಮಣರು ತನಗೇನು ಬೇಕಾಗಿತ್ತೊ ಅದನ್ನು ಅವರು ಸುಲಭವಾಗಿ ಸಾಧಿಸಿದರುˌ ಆದರೆ ಎರಡು ವರ್ಷಗಳಿಂದ ಮೀಸಲಾತಿಯ ಆಶೆಯಿಂದ ಬೀದಿ ಬೀದಿಯಲ್ಲಿ ಬಳಲಿದ ಸಾಮಾನ್ಯ ಪಂಚಮಸಾಲಿ ಜನರಿಗೆ ಏನೂ ಸಿಗಲಿಲ್ಲ ಹಾಗು ಅದಕ್ಕೆ ದಾಳವಾಗಿ ಬಳಸಲ್ಪಟ್ಟ ಬಿಜೆಪಿಯ ಪಂಚಮಸಾಲಿ ನಾಯಕರು ಮಾತ್ರ ತನಗೆ ಬೇಕಾದ ಎಲ್ಲವನ್ನು ಪರೋಕ್ಷವಾಗಿ ಪಡೆದು ಆರ್ಥಿಕವಾಗಿ ಸದೃಢಗೊಂಡರು ಎನ್ನುವ ಸತ್ಯ ಬಯಲಾಗಲು ಇನ್ನೇನು ಹೆಚ್ಚು ಸಮಯ ಬೇಕಾಗುವುದಿಲ್ಲ.
ಈಗ ಪಂಚಮಸಾಲಿಗಳ ಮೀಸಲಾತಿ ಬೇಡಿಕೆಯನ್ನು ಅನೇಕ ಹಿಂದುಳಿದ ವರ್ಗಗಳು ವಿರೋಧಿಸುತ್ತಿವೆ. ಪಂಚಮಸಾಲಿಗಳಿಗೆ ಸರಕಾರ ನೀಡಲು ಉದ್ದೇಶಿಸಿರುವ ಅಸ್ಪಷ್ಟ ಮೀಸಲಾತಿಗೆ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಸುದ್ದಿ ಕೂಡ ಬಂದಿದೆ. ಈ ತಡೆಯಾಜ್ಞೆಯ ತರಲು ಪಿತೂರಿ ಮಾಡಿದವರು ಯಾರು ಎನ್ನುವ ಸಂಗತಿ ಪಂಚಮಸಾಲಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಒಟ್ಟಾರೆ ಪಂಚಮಸಾಲಿಗರನ್ನು ಉಳಿದ ಲಿಂಗಾಯತ ಉಪವರ್ಗಗಳು ಮತ್ತು ಇತರ ಹಿಂದುಳಿದ ವರ್ಗದ ಜನರ ವಿರುದ್ಧ ಎತ್ತಿಕಟ್ಟಿ ಒಬ್ಬಂಟಿ ಮಾಡುವಲ್ಲಿ ಪುರೋಹಿತಶಾಹಿಗಳು ಯಶಸ್ವಿಯಾಗಿದ್ದಂತು ಸತ್ಯ. ಈಗ ಬಿಜೆಪಿ ಮತ್ತು ಸಂಘ ಪಂಚಮಸಾಲಿಗಳಿಗೆ ನಂಬಿಸಿ ಮೋಸ ಮಾಡುತ್ತಿದೆ ಎನ್ನುವ ಅರಿವು ಸಾಮಾನ್ಯ ಪಂಚಮಸಾಲಿಗಳಲ್ಲಿ ಇತ್ತೀಚಿಗೆ ಮೂಡುತ್ತಿರುವಂತಿದೆ. ಲಿಂಗಾಯತರಿಗೆ ಹಿಂದುಳಿದ ವರ್ಗಗಳ ಮೀಸಲಾತಿಯ ಜೊತೆಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವ ಅರಿವು ಮೂಡಿಸುವ ಕಾರ್ಯ ಲಿಂಗಾಯತ ಮಹಾಸಭೆ ಮಾಡುತ್ತಿದೆ. ಇದರಿಂದ ಇಡೀ ಪಂಚಮಸಾಲಿಗರು ಲಿಂಗಾಯತ ಧರ್ಮ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಂಚಮಸಾಲಿಗಳನ್ನೂ ಒಳಗೊಂಡಂತೆ ಇಡೀ ಲಿಂಗಾಯತ ಸಮುದಾಯದ ಪರಮ ವೈರಿಗಳೆಂದು ನಂಬಲಾಗಿರುವ ಬಿಜೆಪಿಯನ್ನು ನಿಯಂತ್ರಿಸುವ ಸಾಂಪ್ರದಾಯವಾದಿಗಳಿಗೆ ಬುದ್ದಿಕಲಿಸಬೇಕು ಎನ್ನುವ ಕೂಗು ಪಂಚಮಸಾಲಿಗಳಲ್ಲಿ ಕೇಳಿಬರುತ್ತಿದೆ. ಇದರ ಪರಿಣಾಮವನ್ನು ನಾವು ಮುಂಬರುವ ಚುನಾವಣಾ ಫಲಿತಾಂಶದಲ್ಲಿ ಕಾಣಬಹುದಾಗಿದೆ.
~ಡಾ. ಜೆ ಎಸ್ ಪಾಟೀಲ.