ಬೆಂಗಳೂರು : ಆಪರೇಷನ್ ಸಿಂಧೂರದ ವೇಳೆ ಹುತಾತ್ಮರಾದ ಯೋಧರ ಕುರಿತು ಮಹತ್ಚದ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದೆ. ಪಾಕಿಸ್ತಾನದ ಒಳಗೆ ನುಗ್ಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ್ದ ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದವರಿಗೆ ಭಾರತ ಸರ್ಕಾರ ವಿಶೇಷ ಗೌರವ ಸಲ್ಲಿಸಿದೆ.

ಪ್ರಮುಖವಾಗಿ ಸೇನೆಯ ವಿವಿಧ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10 ನೇ ಪದಾತಿ ದಳದ ಸುಬೇದಾರ್ ಮೇಜರ್ ಪವನ್ ಕುಮಾರ್, 4 ನೇ ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳದ ರೈಫಲ್ಮ್ಯಾನ್ ಸುನಿಲ್ ಕುಮಾರ್, 5 ನೇ ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ವೀರ ಮರಣವನ್ನಪ್ಪಿದ್ದಾರೆ.
ಇನ್ನುಳಿದಂತೆ 851 ನೇ ಲೈಟ್ ರೆಜಿಮೆಂಟ್ನ ವಾಯುಸೇನೆ ತಂತ್ರಜ್ಞ ಎಂ. ಮುರಳಿ ನಾಯಕ್, 237 ನೇ ಫೀಲ್ಡ್ ವರ್ಕ್ಶಾಪ್ ಕಂಪನಿಯ ಹವಲ್ದಾರ್ ಸುನಿಲ್ ಕುಮಾರ್ ಸಿಂಗ್ ಮತ್ತು ಭಾರತೀಯ ವಾಯುಪಡೆಯ ನಂ. 39 ವಿಂಗ್ನ ಸಾರ್ಜೆಂಟ್ ಸುರೇಂದ್ರ ಕುಮಾರ್ ಆಪರೇಷನ್ ಸಿಂಧೂರ ವೇಳೆ ಹುತಾತ್ಮರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹೊರಗೆಡವಿದೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐವರು ಮತ್ತು ಭಾರತೀಯ ವಾಯುಸೇನೆಯ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಈ ಹುತಾತ್ಮರ ಹೆಸರುಗಳನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗುವುದು. ದೇಶಕ್ಕಾಗಿ ಅವರು ಮಾಡಿದ ಬಲಿದಾನವನ್ನು ಭಾರತೀಯರು ಎಂದೂ ಮರೆಯುವುದಿಲ್ಲ ಭಾರತೀಯ ಸೇನೆಯು ತಿಳಿಸಿದೆ.






