ಕಳೆದ ಕೆಲವು ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಪ್ರಬಲವಾದ ಯಾದವರ ವಿರುದ್ಧ ಪ್ರಚಾರವನ್ನು ಹೆಚ್ಚಿಸುವ ಮೂಲಕ ಒಟ್ಟು ಮತದಾರರಲ್ಲಿ ಶೇಕಡಾ ಮೂವತ್ತಕ್ಕಿಂತ ಹೆಚ್ಚಿರುವ ಹಿಂದುಳಿದ ವರ್ಗಗಳ ಮತವನ್ನು ತನ್ನ ಪರವಾಗಿ ಕ್ರೋಢೀಕರಿತ್ತು. ರಾಜ್ಯ ರಾಜಕೀಯದಲ್ಲಿ ಕುರ್ಮಿ, ಲೋಧ್, ರಜಪೂತ್, ಪಾಲ್ಸ್, ಸೈನಿ, ಕಶ್ಯಪ್, ಮೌರ್ಯ ಮತ್ತು ಇತರ ಹಲವು ಸಮುದಾಯಗಳನ್ನು ಒಳಗೊಂಡಿರುವ ಅತ್ಯಂತ ಹಿಂದುಳಿದ ವರ್ಗಗಳು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದು ಪ್ರಧಾನಿ ನೇತೃತ್ವದ ಬಿಜೆಪಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆದುಕೊಳ್ಳಲಿವೆ ಎಂದು ಆ ಸಮುದಾಯಗಳು ಭಾವಿಸಿಕೊಂಡಿದ್ದವು. ಇದೀಗ ಮತ್ತೊಮ್ಮೆ ಯುಪಿ ಚುನಾವಣೆಯ ಹೊಸ್ತಿಲಲ್ಲಿ ನಿಂತಿದ್ದು ಯಾದವೇತರ ಇತರೆ ಹಿಂದುಳಿದ ವರ್ಗದ ಬೆಂಬಲವನ್ನು ಸಮಾಜವಾದಿ ಪಕ್ಷ ಪಡೆಯಲು ಯಶಸ್ವಿಯಾಗಲಿದೆಯೇ ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಹುಟ್ಟಿದೆ.
ಬಿಜೆಪಿ ನಾಯಕರ ಇತ್ತೀಚಿನ ವಲಸೆಯು ಇಂತಹ ಪ್ರಶ್ನೆ ಹುಟ್ಟಲು ಬಹುಮುಖ್ಯ ಕಾರಣವಾಗಿದೆ. ಯಾಕೆಂದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ ಎಲ್ಲಾ ಹಾಲಿ ಬಿಜೆಪಿ ಶಾಸಕರು ಹಿಂದುಳಿದ ಸಮುದಾಯಗಳಿಗೆ ಸೇರಿದವರು. ರಾಜ್ಯದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ನಾಲ್ಕು ಸಹೋದ್ಯೋಗಿಗಳ ರಾಜೀನಾಮೆಗಳು ಗರಿಷ್ಠ ಗಮನ ಸೆಳೆದಿದ್ದರೂ, ಹೆಚ್ಚಿನ ಹಿಂದುಳಿದ ವರ್ಗಗಳ ನಾಯಕರಲ್ಲಿ ಇಂತಹ ಪ್ರವೃತ್ತಿಯು ಕಳೆದ ವರ್ಷ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲೇ ತೋರಿತ್ತು. ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ದೂರು ಯಾದವೇತರ OBC ಸಮುದಾಯಗಳಿಗೆ ಸೇರಿದ ನಾಯಕರಿಂದ ಮತ್ತು ಸ್ವಲ್ಪ ಮಟ್ಟಿಗೆ ಬ್ರಾಹ್ಮಣ ಮತ್ತು ಜಾಟ್ಗಳಲ್ಲದ ದಲಿತರಿಂದ ಹೊರಹೊಮ್ಮಿತ್ತು.
ಗಮನಾರ್ಹವಾಗಿ, ಬಿಜೆಪಿ ತೊರೆದ ಹಿಂದುಳಿದ ಸಮುದಾಯಗಳಿಗೆ ಸೇರಿದ ಶಾಸಕರು ಬಿಜೆಪಿಯಿಂದ ‘ತಿರಸ್ಕೃತರಾಗಿರುವ’ ಬಗ್ಗೆ ಸಾಧ್ಯವಾದಷ್ಟು ಸ್ಪಷ್ಟವಾಗಿ ತಿಳಿಸಲು ಪ್ರಯತ್ನಿಸಿದ್ದು ಇತ್ತೀಚೆಗೆ ಬಿಜೆಪಿ ತೊರೆದ ಮೌರ್ಯ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯು ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯ’ಕ್ಕೆ ಸೇರಿರುವ ನಾಯಕರನ್ನು ನಿರ್ಲಕ್ಷಿಸಿದೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
![](https://pratidhvani.com/wp-content/uploads/2022/01/Screen-Shot-2022-01-13-at-7.01.01-PM-1024x419-1.png)
ರಾಜಕೀಯ ವೀಕ್ಷಕರ ಪ್ರಕಾರ ಹಿಂದುಳಿದ ಸಮುದಾಯಗಳಲ್ಲಿ ಬಿಜೆಪಿಯ ಬಗೆಗಿನ ಅಸಮಾಧಾನಕ್ಕೆ ಪ್ರಮುಖವಾಗಿ ಎರಡು ಅಂಶಗಳು ಕಾರಣವಾಗಿವೆ. ಮೊದಲನೆಯದಾಗಿ, ಎಲ್ಲರನ್ನೂ ಒಳಗೊಳ್ಳುವ ಪಕ್ಷವಾಗಿ ತನ್ನನ್ನು ಬಿಂಬಿಸಿಕೊಂಡ ಬಿಜೆಪಿ ಆ ಪ್ರಕಾರ ನಡೆದುಕೊಳ್ಳಲು ವಿಫಲವಾಗಿರುವುದು. ಎರಡನೆಯದು, ಸಂಘಪರಿವಾರದ ಹಿಂದುತ್ವದ ರಾಜಕೀಯ ಮಾರ್ಗವನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಕಾಳಜಿಗಳನ್ನು ಹಿಂದಕ್ಕೆ ತಳ್ಳಲಾಗಿದೆ ಎಂದು ಕೆಲವು ಸಮುದಾಯಗಳು ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿವೆ.
ಯಾದವರು ಮತ್ತು ಮುಸ್ಲಿಮರ ಪಕ್ಷವಾಗಿ ಎಸ್ಪಿ ಗುರುತಿಸಿಕೊಂಡಿದ್ದರಿಂದ ಮತ್ತು ಬಹುಜನ ಸಮಾಜ ಪಕ್ಷವು ಜಾಟವ್ರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ, ಬಿಜೆಪಿಯು ಇತರ ಹಿಂದುಳಿದ ಸಮುದಾಯಗಳ ಆಕಾಂಕ್ಷೆಗಳನ್ನು ಈಡೇರಿಸಬಹುದೆಂದು MBCಗಳು ಮತ್ತು ಜಾಟವೇತರರು ನಿರೀಕ್ಷಿಸಿದ್ದರು. ಆದರೆ ಅದು ಸರ್ಕಾರವನ್ನು ರಚಿಸಿದ ನಂತರ, ಈ ಗುಂಪುಗಳನ್ನು ಪ್ರತಿನಿಧಿಸುವ ನಾಯಕರಿಗೆ ಪ್ರಮುಖವಲ್ಲದ ಖಾತೆಗಳನ್ನು ನೀಡಲಾಯಿತು. ಹಾಗಾಗಿಯೇ ಈಗ ಅಖಿಲೇಶ್ ಯಾದವ್ರ ಮಿತ್ರರಾಗಿರುವ ರಾಜ್ಭರ್ ನಾಯಕ ಓಂ ಪ್ರಕಾಶ್ ರಾಜ್ಭರ್ ಎನ್ಡಿಎ ತೊರೆದಿದ್ದರು.
ಸಮಾಜವಾದಿ ಪಕ್ಷದ ನಾಯಕ ಮತ್ತು ರಾಜಕೀಯ ವೀಕ್ಷಕ ಸುಧೀರ್ ಪನ್ವಾರ್ ಅವರು ಈ ಬಗ್ಗೆ ಮಾತನಾಡುತ್ತಾ “ಹಿಂದೂ ಗುರುತನ್ನು ಪ್ರತಿಪಾದಿಸಲು ಮಾತ್ರ ಕಾಳಜಿ ವಹಿಸುವ ನಾಯಕನು ಹಿಂದುಳಿದ ಜಾತಿಗಳ ಹಿತಾಸಕ್ತಿಗಳಿಗೆ ಸಹಜವಾಗಿಯೇ ವಿರೋಧಿಯಾಗುತ್ತಾನೆ” ಎಂದಿದ್ದಾರೆ. ಹಾಗಾಗಿಯೇ ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಹಿಂದುತ್ವ ಪ್ರೇರಿತ ರಾಜಕೀಯಕ್ಕೆ ಪ್ರತಿತಂತ್ರವಾಗಿ ಎಲ್ಲರನ್ನೂ ಒಳಗೊಳ್ಳುವ ರಾಜಕೀಯವನ್ನು ಅಖಿಲೇಶ್ ಯಾದವ್ರ ನಾಯಕತ್ವದಲ್ಲಿ ಮುನ್ನಲೆಗೆ ತರಲಾಯಿತು. ಈ ಯೋಜನೆಯ ಅಂಗವಾಗಿ ಸ್ವತಃ ಅಖಿಲೇಶ್ ಅವರೇ ತಮ್ಮ ಪಕ್ಷಕ್ಕೆ ಅಂಟಿಕೊಂಡಿರುವ ಮುಸ್ಲಿಮರ ಮತ್ತು ಯಾದವರ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚಲು MBCಗಳ ಬೆಂಬಲ ಕೋರಿದರು. ಇದು ಮೇಲ್ಜಾತಿ ಗುಂಪುಗಳು, ಯಾದವೇತರ ಒಬಿಸಿಗಳು ಮತ್ತು ಜಾಟವೇತರ ದಲಿತರಿಂದ ಕೂಡಿದ ಬಿಜೆಪಿಯ ಸಾಮಾಜಿಕ ತಳಹದಿಯಲ್ಲಿ ಬಿರುಕು ಮೂಡಿಸಲು ಯಶಸ್ವಿಯಾಯಿತು.
![](https://pratidhvani.com/wp-content/uploads/2022/01/Screen-Shot-2021-12-13-at-8.37.15-PM-1024x588-1.png)
ಆದರೆ ಅಖಿಲೇಶ್ ಅವರು ಯಾದವೇತರ ಒಬಿಸಿಗಳು ಮತ್ತು ದಲಿತರಿಗೆ ತಮ್ಮ ಕಾಳಜಿ ಪ್ರಾಮಾಣಿಕವೆಂದು ಮನವರಿಕೆ ಮಾಡುವುದು ಸುಲಭವೇನಲ್ಲ.
ನಮ್ಮ ಮತಕ್ಕಾಗಿ ಬಿಜೆಪಿಯವರು ನಮ್ಮನ್ನು ಬಳಸಿಕೊಂಡಿದ್ದಾರೆ ಎಂಬ ಭಾವನೆ ಈ ಸಮುದಾಯಗಳಿಗೆ ಇವೆಯಾದರೂ ಬೇರೆ ಉತ್ತಮ ಪರ್ಯಾಯವಿಲ್ಲ ಎನ್ನುವ ಭಾವನೆ ಈಗಲೂ ಈ ವರ್ಗದವರಲ್ಲಿದೆ. ಕನೌಜ್ನ ತಿರ್ವಾ ವಿಧಾನಸಭಾ ಕ್ಷೇತ್ರದಲ್ಲಿ ಲೋಧ್ ಸಮುದಾಯಕ್ಕೆ ಸೇರಿದ ಅರವಿಂದ್ ಕುಮಾರ್ ಅವರು ದಿ ವೈರ್ ಜೊತೆ ಮಾತಾನಾಡುತ್ತಾ “ಕನಿಷ್ಠ, ಈ ಆಡಳಿತದಲ್ಲಿ ಪೊಲೀಸರು ನಮ್ಮಿಂದ ಸುಲಿಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಎಸ್ಪಿ ಆಡಳಿತದಲ್ಲಿ ಪೊಲೀಸರು ಬಡವರಿಂದ ಹಣ ವಸೂಲಿ ಮಾಡುವ ಮೂಲಕ ಕುಖ್ಯಾತರಾಗಿದ್ದರು. ಯಾದವರಿಂದ ಮಾತ್ರ ಪೊಲೀಸರು ದೂರ ಉಳಿಯುತ್ತಿದ್ದರು. ಆ ಅಭ್ಯಾಸಗಳು ಈಗ ನಿಂತುಹೋಗಿವೆ ”ಎಂದು ಹೇಳಿದ್ದಾರೆ.
ಬಿಲ್ಹೌರ್ ವಿಧಾನಸಭಾ ಕ್ಷೇತ್ರದ ಕುರ್ಮಿ ಸಮುದಾಯದ ಶಶಾಂಕ್ ವರ್ಮಾ “ಅಖಿಲೇಶ್ ಸಾಫ್ ಚಾವಿ ವಾಲಾ ನೇತಾ (ಕ್ಲೀನ್ ಇಮೇಜ್ ಹೊಂದಿರುವ ನಾಯಕ). ಆದರೆ ಪಕ್ಷದಲ್ಲಿ ಅವರಿಗಿಂತ ಕೆಳಗಿರುವವರು ನಿಜವಾದ ದಂಗೆಕೋರರು” ಎಂದು ಹೇಳುತ್ತಾರೆ. “ಎಸ್ಪಿ ನಾಯಕರು ಈಗ ವಿನಯಪೂರಿತರಾಗಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬಂದ ಮರುಕ್ಷಣವೇ ಗೂಂಡಾಗಿರಿಯ ತಮ್ಮ ಎಂದಿನ ದಾರಿಗೆ ಮರಳುತ್ತಾರೆ ಎಂಬುದು ನಮಗೆ ಗೊತ್ತಿದೆ” ಎಂದೂ ಅವರು ಹೇಳುತ್ತಾರೆ.
ಅದೇನೇ ಇದ್ದರೂ, ಅಖಿಲೇಶ್ ಜಾತಿಗಳನ್ನು ಮೀರಿ ಜನಪ್ರಿಯವಾಗಿದ್ದಾರೆ. ಅಖಿಲೇಶ್ ಅಧಿಕಾರಾವಧಿಯು ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ ಎಂದು ಉತ್ತರ ಪ್ರದೇಶದ ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಯುಪಿ ಚುನಾವಣೆಯಲ್ಲಿ ಗೆಲ್ಲಲು ಜಾತಿ ಮಟ್ಟದ ಧ್ರುವೀಕರಣವು ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಎಸ್ಪಿ ಗೆಲ್ಲಲು, ಅದು ಬಿಜೆಪಿಯ ಸಾಮಾಜಿಕ ತಳಹದಿಯನ್ನು ತೀವ್ರವಾಗಿ ಕೆಡಿಸಬೇಕು ಮತ್ತು ಬಿಜೆಪಿ ಇತರ ಹಿಂದುಳಿದ ವರ್ಗಗಳನ್ನು ಸಾಮಾಜಿಕವಾಗಿ ಮೇಲೆ ಬರಲು ಬಿಡುತ್ತಿಲ್ಲ ಎಂಬುವುದನ್ನು ಸಶಕ್ತವಾಗಿ ಜನರ ಮುಂದಿಡಬೇಕು.
SP ಯ ಪ್ರಸ್ತುತ ಯೋಜನೆಗಳನ್ನು ಮತ್ತು ಪ್ರಚಾರ ಸಭೆಗಳನ್ನು ಗಮನಿಸಿದರೆ ಈ ದಿಸೆಯಲ್ಲಿ ಅದು ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು. ಆದರೆ ಬಿಜೆಪಿಯನ್ನು ಸೋಲಿಸಲು ಯಾರ ಮತಗಳ ಅಗತ್ಯವಿದೆಯೋ ಅವರನ್ನು ಅಖಿಲೇಶ್ ಯಶಸ್ವಿಯಾಗಿ ಮನವೊಲಿಸುವರೇ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.