• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮೈಸೂರಿನ NTM ಶಾಲೆ ಧ್ವಂಸ : ಕೆಡವಿದ ಸ್ಮಾರಕದ ಮೇಲೆ ಚರಿತ್ರೆಯ ಸಮಾಧಿ!

ನಾ ದಿವಾಕರ by ನಾ ದಿವಾಕರ
February 9, 2022
in ಅಭಿಮತ
0
ಮೈಸೂರಿನ NTM ಶಾಲೆ ಧ್ವಂಸ : ಕೆಡವಿದ ಸ್ಮಾರಕದ ಮೇಲೆ ಚರಿತ್ರೆಯ ಸಮಾಧಿ!
Share on WhatsAppShare on FacebookShare on Telegram

ಕೆಡವಿ ಕಟ್ಟುವುದು ಮಾನವ ಇತಿಹಾಸದ ಪರಂಪರೆಯಾಗಿಯೇ ಬೆಳೆದುಬಂದಿರುವ ವಿದ್ಯಮಾನ. ಬದಲಾಗುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸ್ಥಿತ್ಯಂತರಗಳಿಗನುಗುಣವಾಗಿ ಹಳೆಯದನ್ನು ಕೆಡವಿ ಹೊಸತನ್ನು ಕಟ್ಟುವ ಪ್ರಕ್ರಿಯೆಯಲ್ಲೇ ಮಾನವ ಸಮಾಜ ತನ್ನ ಅಭ್ಯುದಯದ ಹಾದಿಯನ್ನು ಗುರುತಿಸಿಕೊಂಡಿದೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಕೆಡವಿ ಕಟ್ಟುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆಧುನಿಕತೆಯ ಹಾದಿಯಲ್ಲಿ ಮುನ್ನಡೆಯುವ ಯಾವುದೇ ಸಮಾಜ ತನ್ನ ಗತ ಇತಿಹಾಸದ ಪಳೆಯುಳಿಕೆಗಳನ್ನು ಕೆಡವುತ್ತಲೇ ಹೊಸ ಜಗತ್ತನ್ನು ನಿರ್ಮಿಸಲು ಮುಂದಾಗುತ್ತದೆ. ಆದರೆ ಈ ಕೆಡವುವ ಪ್ರಕ್ರಿಯೆ ಬೌದ್ಧಿಕ ನೆಲೆಯಲ್ಲಿ ಅನಾವರಣಗೊಳ್ಳುವಾಗ ಮನ್ವಂತರದ ಹಾದಿಗಳಲ್ಲಿ ಇತಿಹಾಸದ ಮೌಲಿಕ ನೆಲೆಗಳೂ ಕೆಡವಲ್ಪಡುತ್ತವೆ. ಸಮಾಜ ತನ್ನ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು, ಮಾನವೀಯ ನೆಲೆಗಳನ್ನು ನಾಶಪಡಿಸಿಕೊಳ್ಳುತ್ತಾ, ಹೊಸತು ಸೃಷ್ಟಿಸುವ ಭರದಲ್ಲಿ ಚರಿತ್ರೆಯ ಹೆಜ್ಜೆಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಸಾಗುತ್ತದೆ.

ADVERTISEMENT

ಇಂತಹ ಒಂದು ಪ್ರಕ್ರಿಯೆ ಇಂದು ಭಾರತದಲ್ಲಿ ಜಾರಿಯಲ್ಲಿದೆ. ಮತೀಯ ನೆಲೆಗಳಲ್ಲಿ ಧೃವೀಕರಣಗೊಳ್ಳುತ್ತಿರುವ ಸಾಂಸ್ಕೃತಿಕ ರಾಜಕಾರಣ ಮತ್ತು ಮತಾಂಧತೆ ಚರಿತ್ರೆಯ ಪಳೆಯುಳಿಕೆಗಳನ್ನು ನಾಶಪಡಿಸುವ ಮತ್ತು ಪಾರಂಪರಿಕ ಸ್ಥಾವರ-ಜಂಗಮಗಳನ್ನು ಇಲ್ಲವಾಗಿಸುವ ವಿಕೃತ ಮನಸ್ಥಿತಿಯನ್ನು ಯುವ ಪೀಳಿಗೆಯಲ್ಲೂ ಸೃಷ್ಟಿಸಿಬಿಟ್ಟಿದೆ. ಇಂತಹ ವಿಕೃತಿಗೆ ಬಲಿಯಾಗಿರುವುದು ಮೈಸೂರಿನ ಇತಿಹಾಸ ಪ್ರಸಿದ್ಧ ಮಹಾರಾಣಿ ಎನ್‍ಟಿಎಂ ಶಾಲೆ. ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ 1881ರಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಕಟ್ಟಿದ ಶಾಲೆಯೊಂದು ಈಗ ಇತಿಹಾಸದ ತೊಟ್ಟಿಗೆ ಸೇರಿದೆ. 140 ವರ್ಷಗಳ ಕಾಲದ ಮೈಸೂರಿನ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದ ಒಂದು ಶಾಲೆಯನ್ನು, ವಿವೇಕಾನಂದರ ಸ್ಮಾರಕ ಕಟ್ಟುವ ಸಲುವಾಗಿ ಕೆಡವಲಾಗಿದೆ.

ಈ ಶಾಲೆ ಮೂಲತಃ ಅರಮನೆಯ ಆವರಣದಲ್ಲಿ ಆರಂಭವಾಗಿ ನಂತರ, ಮಹಾರಾಣಿ ಹೆಣ್ಣುಮಕ್ಕಳ ಶಾಲೆಯ ಆವರಣದಲ್ಲಿ ಕೆಲವು ದಶಕಗಳ ಕಾಲ ಕಾರ್ಯನಿರ್ವಹಿಸಿ ನಂತರ 50 ವರ್ಷಗಳ ಹಿಂದೆ ತನ್ನದೇ ಆದ ಒಂದು ಸ್ಥಾವರವನ್ನು ಗಳಿಸಿಕೊಂಡಿತ್ತು. ಈ ಹೆಜ್ಜೆಗುರುತುಗಳಲ್ಲೇ ಎನ್‍ಟಿಎಂ ಶಾಲೆಯ ಚಾರಿತ್ರಿಕ ಮಹತ್ವವನ್ನು ಗುರುತಿಸಬೇಕಿದೆ. ಇಂದು ಈ ಶಾಲೆಯನ್ನು ಮತ್ತೊಂದು ಶಾಲೆಯಲ್ಲಿ ವಿಲೀನಗೊಳಿಸುವ ಮೂಲಕ ಚರಿತ್ರೆಯ ಅಕ್ಷರಗಳನ್ನು ಅಳಿಸಿಹಾಕಲಾಗುತ್ತಿದೆ. ತಾತ್ಕಾಲಿಕವಾಗಿ ಮಹಾರಾಣಿ ಶಿಕ್ಷಕರಿಯರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸಲಾಗಿದ್ದು, ಈ ಚಾರಿತ್ರಿಕ ಶಾಲೆಯ ಮೂಲ ಸ್ವರೂಪವನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸುವುದಾಗಿ ಆಡಳಿತ ವ್ಯವಸ್ಥೆ ಭರವಸೆ ನೀಡಿದೆ.

ಐವತ್ತು ವರ್ಷಗಳ ಕಾಲ, ಮೂರು ಪೀಳಿಗೆಯ ಬಡ ಹೆಣ್ಣುಮಕ್ಕಳಿಗೆ, ಕನ್ನಡ ಮಾಧ್ಯಮದ ಶಿಕ್ಷಣ ಒದಗಿಸಿದ್ದ ಒಂದು ಶಾಲಾ ಕಟ್ಟಡವನ್ನು ವಿವೇಕ ಸ್ಮಾರಕಕ್ಕಾಗಿ ನೆಲಸಮ ಮಾಡುವ ಮೂಲಕ ಜಿಲ್ಲಾಡಳಿತ ತನ್ನ ಅವಿವೇಕವನ್ನು ಪ್ರದರ್ಶಿಸಿದೆ. ಹಾಗೆಯೇ ಶಿಕ್ಷಣವೊಂದೇ ಸಮಾಜದ ಮುನ್ನಡೆಗೆ ಸಾಧನ ಎಂದು ಬೋಧಿಸಿದ, ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಿರ್ಮಿಸುವ ಸ್ಮಾರಕಕ್ಕೆ, ಹೆಣ್ಣುಮಕ್ಕಳ ಶಿಕ್ಷಣದ ದೇಗುಲವನ್ನು ನಾಶಪಡಿಸುವ ಮೂಲಕ ಮೈಸೂರಿನ ರಾಮಕೃಷ್ಣ ಮಠ ತನ್ನ ಸಾಂಸ್ಕೃತಿಕ ಕ್ರೌರ್ಯ ಮತ್ತು ಬೌದ್ಧಿಕ ದಾರಿದ್ರ್ಯವನ್ನು ಪ್ರದರ್ಶಿಸಿದೆ. ಶಾಲಾ ಕಟ್ಟಡವನ್ನು ಮೂಲ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆಯಷ್ಟೇ, ಶಾಲೆಯ ಚಾರಿತ್ರಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗುವುದು ಎಂದು ಹೇಳುವುದು ಇದೇ ಬೌದ್ಧಿಕ ದಾರಿದ್ರ್ಯದ ಮತ್ತೊಂದು ಸ್ವರೂಪ.

ಒಂದು ಶಾಲೆಯ ಅಸ್ತಿತ್ವಕ್ಕೆ ಎರಡು ಆಯಾಮಗಳಿರುತ್ತವೆ. ಚಾರಿತ್ರಿಕ ಪರಂಪರೆಯನ್ನು ಹೊಂದಿರುವ ಒಂದು ಶಾಲೆಗೆ ಬೌದ್ಧಿಕವಾಗಿ, ಜಂಗಮ ಸ್ವರೂಪದ ಅಸ್ತಿತ್ವ ಚಿರಂತನವಾಗಿರುತ್ತದೆ. ಮತ್ತೊಂದೆಡೆ ಸ್ಥಾವರ ರೂಪದಲ್ಲಿ ಇಂತಹ ಒಂದು ಶಾಲೆ ತನ್ನದೇ ಆದ ಪಾರಂಪರಿಕ ಅಸ್ತಿತ್ವವನ್ನು ಹೊಂದಿರುತ್ತದೆ. ಮಹಾರಾಣಿ ಎನ್ ಟಿ ಎಂ ಹೆಣ್ಣು ಮಕ್ಕಳ ಶಾಲೆಯ ಪರಂಪರೆ ಇರುವುದು ಅದರ ಆಶಯಗಳಲ್ಲಿ. ಭಾರತದ ಶ್ರೇಣೀಕೃತ-ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣವೇ ಮರೀಚಿಕೆಯಾಗಿದ್ದಂತಹ ಕಾಲಘಟ್ಟದಲ್ಲಿ ರಾಜಪ್ರಭುತ್ವವೊಂದು ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆಯನ್ನು ತೆರೆಯುವುದು ಮತ್ತು ಕನ್ನಡ ಮಾಧ್ಯಮದಲ್ಲಿ ನಡೆಸುವುದು ಈ ಪರಂಪರೆಯ ದ್ಯೋತಕ. ಈ ಶಾಲೆಯ ಆರಂಭ ಒಂದು ಜೋಪಡಿಯಲ್ಲೇ ಆಗಿದ್ದರೂ, ಅದು ಐವತ್ತು ವರ್ಷಗಳಿಂದ ಮೂರು ಪೀಳಿಗೆಯ ಹೆಣ್ಣುಮಕ್ಕಳ ಶೈಕ್ಷಣಿಕ ನೆಲೆಯಾಗಿ ಒಂದು ಸ್ಥಾವರದಲ್ಲಿ ವಿಜೃಂಭಿಸಿದೆ. ಈ ಸ್ಥಾವರವನ್ನು ಸಂರಕ್ಷಿಸುವುದು ಇತಿಹಾಸ ಪ್ರಜ್ಞೆ ಇರುವ ಒಂದು ಸರ್ಕಾರದ ಮತ್ತು ಸಮಾಜದ ನೈತಿಕ ಕರ್ತವ್ಯ.

 19ನೆಯ ಶತಮಾನದ ರಾಜಪ್ರಭುತ್ವದ ಕೊಡುಗೆಯಾದ ಎನ್‍ಟಿಎಂ ಶಾಲೆ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಒಂದು ಸ್ಥಾವರವನ್ನು ನಿರ್ಮಿಸಿಕೊಂಡಿತ್ತು. ಈ ಸ್ಥಾವರವನ್ನು ಧ್ವಂಸ ಮಾಡುವುದು ಮತ್ತು ಈ ವಿಧ್ವಂಸಕ ಕೃತ್ಯವನ್ನು ಸ್ಥಳಾಂತರ ಎಂದು ಸರಳೀಕರಿಸುವುದು ಸೂಕ್ಷ್ಮ ಸಂವೇದನೆ ಇಲ್ಲದ, ಇತಿಹಾಸ ಪ್ರಜ್ಞೆ ಇಲ್ಲದ ಬೌದ್ಧಿಕ ದೀವಾಳಿತನವನ್ನು ಪ್ರದರ್ಶಿಸುತ್ತದೆ. ಈ ಸ್ಥಾವರವನ್ನು ಕೆಡವಿ, ಜಂಗಮ ಸನ್ಯಾಸಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಭವ್ಯ ಸ್ಮಾರಕವನ್ನು ನಿರ್ಮಿಸಲು ಮುಂದಾಗಿರುವ ರಾಮಕೃಷ್ಣ ಮಠ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗೆ ಅಪಚಾರ ಎಸಗಿರುವುದೇ ಅಲ್ಲದೆ, ಸಾವಿರಾರು ಹೆಣ್ಣುಮಕ್ಕಳ ಹೆಜ್ಜೆ ಗುರುತುಗಳನ್ನು ಒಮ್ಮೆಲೆ ಅಳಿಸಿಹಾಕುವ ಮೂಲಕ, ತನ್ನ ಸಾಂಸ್ಕೃತಿಕ ಕ್ರೌರ್ಯವನ್ನು ಪ್ರದರ್ಶಿಸಿದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಭೂಮಿಯೂ ಒಂದು ಮಾರುಕಟ್ಟೆ ಸರಕಾಗಿರುವುದರಿಂದ, ಒಂದು ಶಾಲೆಯ ನೆಲೆಯೂ ಸಹ ಹರಾಜು ಹಾಕಬಹುದಾದ ಕಟ್ಟಡದಂತೆಯೇ ಕಾಣುವುದು ಸಹಜ.

ಆದರೆ ರಾಮಕೃಷ್ಣ ಮಠ ಈ ಸ್ಥಾವರವನ್ನು ಕೆಡವುವ ಮೂಲಕ ಚರಿತ್ರೆಯನ್ನೇ ಸಮಾಧಿ ಮಾಡಿದೆ. ಶಾಲೆ ಎನ್ನುವುದು ಸಮಾಜ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಒಂದು ಜಂಗಮ ರೂಪಿ ಸ್ಥಾವರ.  ಚಾರಿತ್ರಿಕವಾಗಿ ತನ್ನದೇ ಆದ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಹೊಂದಿದ್ದ ಜ್ಞಾನ ಪರಂಪರೆಯ ಒಂದು ಕಟ್ಟಡವನ್ನು ಕೆಡವಿ,  ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳ ಸ್ಮಾರಕವನ್ನು ನಿರ್ಮಿಸಿದರೆ ಅದು ಒಂದು ಬೌದ್ಧಿಕ ಸಮಾಧಿಯಾಗಿಯೇ ಕಾಣುತ್ತದೆ. ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖ ಉಪನ್ಯಾಸಗಳನ್ನು ನೀಡುವ ರಾಮಕೃಷ್ಣ ಮಠದ ವಿವೇಕಾನುಯಾಯಿಗಳಿಗೆ ಒಂದು ಚಾರಿತ್ರಿಕ ಶಿಕ್ಷಣ ಸಂಸ್ಥೆಯ ಹಿಂದೆ, ಸುದೀರ್ಘ ಸಾಂಸ್ಕೃತಿಕ ಪರಂಪರೆಯೂ ಇದೆ ಎಂಬ ವಿವೇಕ, ಪರಿಜ್ಞಾನ ಇರಬೇಕಿತ್ತಲ್ಲವೇ ? ಈ ಶಾಲೆಯ ಕಟ್ಟಡವನ್ನು ಉಳಿಸಿಕೊಂಡೇ ವಿವೇಕ ಸ್ಮಾರಕ ನಿರ್ಮಿಸುವ ಅವಕಾಶಗಳು ಇದ್ದಾಗಲೂ, ರಾತ್ರೋರಾತ್ರಿ ಕಟ್ಟಡವನ್ನು ಧ್ವಂಸ ಮಾಡುವ ಮೂಲಕ ಜಿಲ್ಲಾಡಳಿತ, ರಾಮಕೃಷ್ಣ ಮಠದ ಈ ಸಾಂಸ್ಕೃತಿಕ ಕ್ರೌರ್ಯಕ್ಕೆ ಅಧಿಕೃತ ಮಾನ್ಯತೆ ನೀಡಿಬಿಟ್ಟಿದೆ.

ಧ್ವಂಸಗೊಂಡ ಐತಿಹಾಸಿಕ ಹೆಣ್ಣುಮಕ್ಕಳ ಶಾಲೆಯ ಕಟ್ಟಡವನ್ನು ಕೇವಲ ಸಿಮೆಂಟು ಗಾರೆಗಳ ಗುಪ್ಪೆಯಂತೆ ಕಾಣುವ ಇತಿಹಾಸ ತಜ್ಞರು, ಕನ್ನಡದ ಪರಿಚಾರಕರು ಮತ್ತು ಪ್ರಜ್ಞಾವಂತರಿಗೆ, ಈ ಕಟ್ಟಡದ ಗೋಡೆ ಗೋಡೆಗಳಲ್ಲೂ ಅಂತರ್ಗತವಾಗಿರುವ ಚರಿತ್ರೆಯ ಹೆಜ್ಜೆಗಳನ್ನು ಗುರುತಿಸುವ ವ್ಯವಧಾನ ಇರಬೇಕಲ್ಲವೇ ? ರಾಮಕೃಷ್ಣ ಮಠ ಒಂದು ವಾಣಿಜ್ಯೋದ್ಯಮವಾಗಿ, ಶಿಕ್ಷಣ ಮತ್ತು ಅಧ್ಯಾತ್ಮವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಂಸ್ಕೃತಿಕ ಸಂಸ್ಥೆಯಂತೆ ನೆಲೆಗೊಂಡಿದೆ. ವಿವೇಕಾನಂದರ ಅಧ್ಯಾತ್ಮ ಬೋಧನೆಗೂ, ರಾಮಕೃಷ್ಣ ಮಠದ ಅಧ್ಯಾತ್ಮ ಮಾರುಕಟ್ಟೆಗೂ ಇರುವ ಅಂತರವನ್ನು ಗುರುತಿಸುವಷ್ಟು ಪ್ರಜ್ಞೆ ಪ್ರಜ್ಞಾವಂತ ಸಮಾಜದಲ್ಲಿ ಇರಬೇಕಲ್ಲವೇ ? ಕೆಡವಲಾಗಿರುವ ಶಾಲಾ ಕಟ್ಟಡದ ಕಣಕಣಗಳಲ್ಲೂ ಮೈಸೂರಿನ ಲಕ್ಷಾಂತರ ಬಡ ಹೆಣ್ಣುಮಕ್ಕಳ ಚಾರಿತ್ರಿಕ ಹೆಜ್ಜೆ ಗುರುತುಗಳನ್ನು ಕಾಣಬೇಕಾದ ಪ್ರಜ್ಞಾವಂತಿಕೆ ನಮ್ಮಲ್ಲಿರಬೇಕಲ್ಲವೇ ?

ಸ್ಥಳಾಂತರಗೊಂಡ ಶಾಲೆ ನಾಳೆ ಮತ್ತೊಂದು ಶಾಲೆಯಲ್ಲಿ ವಿಲೀನವಾಗುತ್ತದೆ. ಮತ್ತೊಂದು ದಿನ ನಿಶ್ಶೇಷವಾಗಿ ಇತಿಹಾಸದ ಹಾಳೆಗಳಲ್ಲಿ ಉಲ್ಲೇಖನೀಯವಾಗಿ ಉಳಿದುಬಿಡುತ್ತದೆ. ಎನ್‍ಟಿಎಂ ಹೆಣ್ಣುಮಕ್ಕಳ ಶಾಲೆ ಕೇವಲ ರಾಜಪರಂಪರೆಯ ದ್ಯೋತಕವಲ್ಲ, ರಾಜಪ್ರಭುತ್ವದಲ್ಲಿ ಅಪರೂಪಕ್ಕೆ ಕಾಣಬಹುದಾದ ಜನೋಪಯೋಗಿ ಪರಂಪರೆಯ ದ್ಯೋತಕ. ನಿರಂಕುಶಾಧಿಕಾರದಲ್ಲಿ ಸ್ಥಾಪನೆಯಾದ ಒಂದು ಜನೋಪಯೋಗಿ ಸಂಸ್ಥೆಯನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಶಪಡಿಸುವುದು ನಾಚಿಕೆಗೇಡಿನ ವಿಚಾರವಲ್ಲವೇ ? ಮೈಸೂರಿನ ಸಮಸ್ತ ಜನತೆಯೂ ಇಂದು ನಾಚಿ ತಲೆತಗ್ಗಿಸುವಂತಾಗಿದೆ. ಒಂಬತ್ತು ವರ್ಷಗಳ ಸುದೀರ್ಘ ಹೋರಾಟದ ಮೂಲಕ ಮೈಸೂರಿನ ಕನ್ನಡ ಪರ ಮನಸುಗಳು ಈ ಸ್ಥಾವರವನ್ನು, ಅದರ ಜಂಗಮ ಸ್ವರೂಪವನ್ನು ಉಳಿಸಿಕೊಳ್ಳಲು ಹೋರಾಡಿವೆ. ಈ ಹೋರಾಟಗಳನ್ನು ವಿಫಲಗೊಳಿಸುವ ಷಡ್ಯಂತ್ರಗಳ ನಡುವೆಯೇ ಮೈಸೂರಿನ ಪ್ರಜ್ಞಾವಂತ ಜನತೆ ಎನ್‍ಟಿಎಂ ಶಾಲೆಯ ಉಳಿವಿಗೆ ಶ್ರಮಿಸಿದೆ. ಆದರೆ ಕೊನೆಗೂ ಸಾಂಸ್ಕೃತಿಕ ರಾಜಕಾರಣದ ಕ್ರೌರ್ಯ ವಿಜಯಿಯಾಗಿದೆ.

ಎನ್‍ಟಿಎಂ ಶಾಲೆಯ ಕಟ್ಟಡವನ್ನು ಕೆಡವುವ ಮೂಲಕ ಆಡಳಿತ ವ್ಯವಸ್ಥೆ ಮತ್ತು ರಾಮಕೃಷ್ಣ ಮಠ ಚರಿತ್ರೆಯ ಸಮಾಧಿಯನ್ನು ನಿರ್ಮಿಸಲು ಹೊರಟಿವೆ. ಈ ಸಮಾಧಿಯ ಮೇಲೆ ನಿರ್ಮಾಣವಾಗುವ ವಿವೇಕ ಸ್ಮಾರಕದ ಛಾಯೆಯಲ್ಲಿ ಇತಿಹಾಸದ ಭೂತ ಕಾಡುತ್ತಲೇ ಇರುತ್ತದೆ. ಅಳಿಸಿಹಾಕಲಾದ ಚರಿತ್ರೆಯ ಹೆಗ್ಗುರುತುಗಳು , ಕರಾಳ ನೆನಪಿನಂತೆ ವಿವೇಕಾನಂದರ ಪ್ರತಿಮೆಯ ಪ್ರಭಾವಳಿಯಾಗಿ ಕಾಡುತ್ತಲೇ ಇರುತ್ತವೆ. ಹಾಗೆಯೇ ಎನ್‍ಟಿಎಂ ಶಾಲೆಯ ಇತಿಹಾಸದ ಪುಟಗಳಲ್ಲಿ ವಿಶ್ವಾಸ ದ್ರೋಹದ ಛಾಯೆಯೂ ಶಾಶ್ವತವಾಗಿ ಉಳಿಯಲಿದೆ. ಜಾತಿ ಶ್ರೇಷ್ಠತೆ, ಅಂಧ ಮತಶ್ರದ್ಧೆ, ಮತಾಂಧತೆ ಮತ್ತು ಸಾಂಸ್ಕೃತಿಕಕ್ರೌರ್ಯದ ಸಮಕಾಲೀನ ಇತಿಹಾಸ ವಿವೇಕ ಸ್ಮಾರಕದ ಫಲಕಗಳಲ್ಲಿ ಸದಾ ಜ್ವಲಿಸುತ್ತಲೇ ಇರುತ್ತವೆ.

Tags: BJPCongress PartyCovid 19NTM ಶಾಲೆ ಧ್ವಂಸಕರೋನಾಕೋವಿಡ್-19ಚರಿತ್ರೆಯ ಸಮಾಧಿನರೇಂದ್ರ ಮೋದಿಬಿಜೆಪಿ
Previous Post

ಹಿಜಾಬ್‌ Vs ಕೇಸರಿ ಶಾಲು; ಇದು ಪ್ರತಿಧ್ವನಿ ಕಳಕಳಿ

Next Post

ಹಿಜಾಬ್-ಕೇಸರಿ ಸಂಘರ್ಷ ತಡೆಯಲು ಶಾಲಾ-ಕಾಲೇಜಿಗೆ ರಜೆ : ಆನ್‌ಲೈನ್ ಕ್ಲಾಸ್ ಕ್ಲಾಸ್ ನಡೆಸಲು ಖಾಸಗಿ ಶಾಲೆಗಳ ನಿರ್ಧಾರ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಹಿಜಾಬ್-ಕೇಸರಿ ಸಂಘರ್ಷ ತಡೆಯಲು ಶಾಲಾ-ಕಾಲೇಜಿಗೆ ರಜೆ : ಆನ್‌ಲೈನ್ ಕ್ಲಾಸ್ ಕ್ಲಾಸ್ ನಡೆಸಲು ಖಾಸಗಿ ಶಾಲೆಗಳ ನಿರ್ಧಾರ

ಹಿಜಾಬ್-ಕೇಸರಿ ಸಂಘರ್ಷ ತಡೆಯಲು ಶಾಲಾ-ಕಾಲೇಜಿಗೆ ರಜೆ : ಆನ್‌ಲೈನ್ ಕ್ಲಾಸ್ ಕ್ಲಾಸ್ ನಡೆಸಲು ಖಾಸಗಿ ಶಾಲೆಗಳ ನಿರ್ಧಾರ

Please login to join discussion

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

June 20, 2025
ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada