ಎಂಜಿನಿಯರಿಂಗ್ ಪಧವೀದರರು ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡಲು ಅರ್ಹರು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ತಿದ್ದುಪಡಿ ಜಾರಿಗೊಳಿಸಲು ಮುಂದಾಗಿದೆ.
ಹೀಗಾಗಿ, ಎಂಜಿನಿಯರಿಂಗ್ ಪದವಿಧರರು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಬರೆಯಲು ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕೇಡರ್ ಮತ್ತು ನೇಮಕಾತಿ (ಸಿ & ಆರ್) ನಿಯಮಗಳ ತಿದ್ದುಪಡಿ ತರಲು ಚಿಂತನೆ ನಡೆಸಿದೆ.
ಸರ್ಕಾರಿ ಶಾಲೆಗಳಲ್ಲಿ ನೇಮಕಗೊಳ್ಳಲು ಟಿಇಟಿಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿರುವುದರಿಂದ, ಇಲಾಖೆಯ ಕ್ರಮ ಎಂಜಿನಿಯರಿಂಗ್ ಪದವೀಧರರಿಗೆ ಪ್ರಯೋಜನವಾಗಲಿದೆ.
ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ 20ಸಾವಿರ ಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಎಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಯೋಚಿಸಿದೆ.
ಶಿಕ್ಷಣ ಇಲಾಖೆಯು ಎರಡು ವರ್ಷಗಳ ಹಿಂದೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಿದಾಗ, ಕೇವಲ 3 ಸಾವಿರ ಶಿಕ್ಷಕರನ್ನು ಮಾತ್ರ ನೇಮಿಸಲಾಗಿತ್ತು. ಹಿಂದಿನ ನಿಯಮಗಳಲ್ಲಿ, ಇಂಜಿನಿಯರಿಂಗ್ ಪದವೀಧರರು ಟಿಇಟಿಗೆ ಹಾಜರಾಗಲು ಯಾವುದೇ ಅವಕಾಶವಿರಲಿಲ್ಲ, ಆದರೆ ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೋಧನೆಗೆ ಬಿಎಡ್ ಪದವಿ ಕಡ್ಡಾಯವಾಗಿದ್ದರೂ, ಎಂಜಿನಿಯರಿಂಗ್ ಪದವೀಧರರಿಗೆ ಈ ನಿಯಮದಿಂದ ವಿನಾಯಿತಿ ನೀಡುವುದು ಬಹುತೇಕ ಖಚಿತವಾಗಿದೆ. ಎಂಜಿನಿಯರಿಂಗ್ ಪದವೀಧರರಿಗೆ ಗಣಿತ ಮತ್ತು ವಿಜ್ಞಾನದಂತಹ ವಿಷಯಗಳು ಸುಲಭವಾಗಿರುವುದರಿಂದ ಈ ವರ್ಷದಿಂದ TET ತೇರ್ಗಡೆಯಾಗುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
TET ಅರ್ಹರ ಸಂಖ್ಯೆ ಇಳಿಕೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2021 TET ಪರೀಕ್ಷೆಯು ವಿಳಂಬವಾಗಿದೆ. ಇದರಿಂದಾಗಿ, ಶಿಕ್ಷಣ ಇಲಾಖೆಯು 2022 ಕ್ಕೆ TET ಪರೀಕ್ಷೆಗಳನ್ನು ನಡೆಸಲು ಯೋಜಿಸಿದೆ. ಇತ್ತೀಚೆಗೆ TET ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಅಂಕಿಅಂಶಗಳಲ್ಲಿ ತಿಳಿದುಬಂದಿದ್ದು, 2021ರ TET ಪರೀಕ್ಷಾ ಸಂದರ್ಭದಲ್ಲಿ, ಪತ್ರಿಕೆ 1 ಮತ್ತು ಪತ್ರಿಕೆ 2 ಎರಡಕ್ಕೂ ಹಾಜರಾಗುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 2,31,886 ಇದೆ. ಈ ಪೈಕಿ 4,074 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದಾರೆ, ಅಂದರೆ ಶೇ. 19% ಮಂದಿ ಮಾತ್ರ ಟಿಇಟಿ ಪರೀಕ್ಷೆಯಲ್ಲಿ ಅರ್ಹರಾಗಿರುತ್ತಿದ್ದಾರೆ ಎಂಬ ಮಾಹಿತಿಯಿದೆ.