ಬೆಂಗಳೂರು : ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಾಳೆ ನಡೆಸಲು ತೀರ್ಮಾನಿಸಿದ್ದ ಮುಷ್ಕರಕ್ಕೆ ರಾಜ್ಯ ಹೈಕೋರ್ಟ್ ಬ್ರೇಕ್ ಹಾಕಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಟ್ರೇಡ್ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿತ್ತು. ಆದರೆ ಹೈಕೋರ್ಟ್ ಅದಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಇನ್ನೂ ಈ ಸಾರಿಗೆ ನೌಕರರ ಮುಷ್ಕರ ನಡೆಸದಂತೆ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಸಿ.ವೇದಾವತಿ ಎಂಬ ಗೃಹೀಣಿ ಹಾಗೂ ಕಟ್ಟಡ ಕಾರ್ಮಿಕ ಹೆಚ್.ವಿ.ಶ್ರೀಧರ್ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಹೀಗಾಗಿ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಮೂರ್ತಿ ಸೂರಜ್ ಗೋವಿಂದರಾಜು ಮತ್ತು ನ್ಯಾಯಮೂರ್ತಿ ಮನ್ಮಧರಾವ್ ಅವರಿದ್ದ ನ್ಯಾಯಪೀಠ ಜಂಟಿ ಕ್ರಿಯಾ ಸಮಿತಿಗೆ ಶಾಕ್ ನೀಡಿದ್ದು, ಮುಷ್ಕರ ನಡೆಸದಂತೆ ಸೂಚಿಸಿದೆ.
ಇದನ್ನೂ ಓದಿ : “ಖಂಡಿತ ನಾಶ ಮಾಡದೆ ಬಿಡುವುದಿಲ್ಲ…” ಪೋಸ್ಟ್ ವೈರಲ್: ದಿಲೀಪ್ ರಾಜ್ ಪತ್ನಿಯ ಸಂದೇಶದ ಹಿಂದೆ ಏನರ್ಥ?
ನಾಲ್ಕು ನಿಗಮದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಈಗಾಗಲೇ ಶೇ 12.5ರಷ್ಟು ವೇತನ ಏರಿಕೆ ಮಾಡಿದೆ. ಹೀಗಿದ್ದರೂ ಈ ನಮಯದಲ್ಲಿ ನಿಮ್ಮ ಮುಷ್ಕರ ಸೂಕ್ತವಾದ ನಿರ್ಧಾರವಲ್ಲ. ಬದಲಿಗೆ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಯೋಗ್ಯ ನಿರ್ಧಾರ ಕೈಗೊಳ್ಳುವಂತೆ ನೌಕರರ ಸಂಘಕ್ಕೆ ನ್ಯಾಯಪೀಠ ಸೂಚನೆ ನೀಡಿದೆ.
ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದಂತೆ ಯಾವಾಗ ಸಭೆ ನಡೆಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮೇ 21ಕ್ಕೆ ಹೈಕೋರ್ಟ್ ಮುಂದೂಡಿದೆ. ನೌಕರರ ಸಂಘ, ಸಾರಿಗೆ ಸಚಿವರು, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆಗೆ ಹೈಕೋರ್ಟ್ ಸೂಚಿಸಿದೆ.






