ನವದೆಹಲಿ: ಕರ್ನಾಟಿಕ್ ಸಂಗೀತದ ದಿಗ್ಗಜ ಹಾಗೂ ‘ಭಾರತ ರತ್ನ’ ಪುರಸ್ಕೃತ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತ್ಯುತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾವುಕರಾದ ಘಟನೆ ನಡೆದಿದೆ. ಸುಬ್ಬುಲಕ್ಷ್ಮಿ ಅವರ ಗಾನಸುಧೆಯನ್ನು ಆಲಿಸುತ್ತಿದ್ದ ವೇಳೆ ಸಚಿವೆ ಕಣ್ಣೀರಿಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕರ್ನಾಟಿಕ್ ಸಂಗೀತದಲ್ಲಿ ‘ಭಕ್ತಿ’ಯೇ ಜೀವಂತ ಆತ್ಮ ಎಂದು ಬಣ್ಣಿಸಿದರು. ವಿವಿಧ ಭಾಷೆಗಳು ಹಾಗೂ ಧಾರ್ಮಿಕ ಪರಂಪರೆಗಳು ಶಾಸ್ತ್ರೀಯ ಸಂಗೀತದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಹೇಳಿದರು.“ಕರ್ನಾಟಿಕ್ ಸಂಗೀತದಲ್ಲಿನ ಭಕ್ತಿ ಈ ಪರಂಪರೆಯ ಜೀವಂತ ಆತ್ಮವಾಗಿದೆ. ಹಲವು ಭಾಷಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳು ಒಂದೇ ಸಂಗೀತ ಕಚೇರಿಯಲ್ಲಿ ನದಿಗಳು ಸಾಗರ ಸೇರುವಂತೆ ಒಂದಾಗುತ್ತವೆ” ಎಂದು ಸಚಿವೆ ವಿವರಿಸಿದರು.

ದಕ್ಷಿಣ ಭಾರತದಲ್ಲಿ ಬೆಳೆದ ಭಕ್ತಿ ಪರಂಪರೆ 12, 13 ಮತ್ತು 14ನೇ ಶತಮಾನಗಳಲ್ಲಿ ಉತ್ತರ ಭಾರತಕ್ಕೂ ಹರಡಿತು. ಇದರ ಪ್ರಭಾವ ಹಿಂದುಸ್ತಾನಿ ಭಜನೆಗಳ ಮೇಲೂ ಕಂಡುಬಂದಿದೆ ಎಂದು ಅವರು ಹೇಳಿದರು.ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಠಿಣ ಸಂಗೀತ ಸಾಧನೆ, ವಿನಯತೆ ಹಾಗೂ ಕಲೆಯ ಮೇಲಿನ ಅಪಾರ ಬದ್ಧತೆಯನ್ನು ನಿರ್ಮಲಾ ಸೀತಾರಾಮನ್ ಸ್ಮರಿಸಿದರು.ಅಪಾರ ಜನಪ್ರಿಯತೆ ಹಾಗೂ ಸಾಧನೆಯ ನಡುವೆಯೂ ಸುಬ್ಬುಲಕ್ಷ್ಮಿ ಅವರು ಕೊನೆಯವರೆಗೂ ತಮ್ಮನ್ನು ಸಂಗೀತದ ವಿದ್ಯಾರ್ಥಿಯೆಂದೇ ಭಾವಿಸಿದ್ದರು. ಅವರ ಗಾಯನ ಪ್ರತಿಭೆಯ ಹಿಂದೆ ಕಠಿಣ ಪರಿಶ್ರಮ ಮತ್ತು ಬೌದ್ಧಿಕ ಶಿಸ್ತು ಇತ್ತು ಎಂದು ಸಚಿವೆ ಹೇಳಿದರು.
ಮಹಾತ್ಮ ಗಾಂಧೀಜಿ ಅವರಿಗಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಹಾಡಿದ್ದ ‘ಹರಿ ತುಮ್ ಹರೋ’ ಭಜನೆಯ ಪ್ರಸಂಗವನ್ನೂ ಅವರು ನೆನಪಿಸಿಕೊಂಡರು. ಭಜನೆಯ ಸರಿಯಾದ ಉಚ್ಚಾರಣೆಗಾಗಿ ಸುಬ್ಬುಲಕ್ಷ್ಮಿ ಅವರು ಇಡೀ ರಾತ್ರಿ ಅಭ್ಯಾಸ ನಡೆಸಿದ್ದರು ಎಂದು ತಿಳಿಸಿದರು.

ಸುಬ್ಬುಲಕ್ಷ್ಮಿ ಅವರ ಪರೋಪಕಾರಿ ಗುಣಗಳನ್ನು ಕೂಡ ಸಚಿವೆ ಕೊಂಡಾಡಿದರು. ಸಂಗೀತ ಕಾರ್ಯಕ್ರಮಗಳಿಂದ ಬಂದ ಆದಾಯವನ್ನು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಾಗೂ ವಿವಿಧ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುತ್ತಿದ್ದರು ಎಂದು ಹೇಳಿದರು.
1916ರ ಸೆಪ್ಟೆಂಬರ್ 16ರಂದು ಮಧುರೈನಲ್ಲಿ ಜನಿಸಿದ ಮಧುರೈ ಶಣ್ಮುಖವಡಿವು ಸುಬ್ಬುಲಕ್ಷ್ಮಿ ಅವರು 20ನೇ ಶತಮಾನದ ಪ್ರಮುಖ ಕರ್ನಾಟಿಕ್ ಸಂಗೀತ ಗಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅವರ ಸಂಗೀತ ಭಾಷೆ, ಜಾತಿ, ಪ್ರದೇಶ ಹಾಗೂ ಧರ್ಮದ ಗಡಿಗಳನ್ನು ಮೀರಿ ದೇಶ-ವಿದೇಶಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿತು.
1966ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಗಾಯನ ನೀಡಿದ ಅವರು, 1974ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದರು. 1998ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಪುರಸ್ಕಾರಕ್ಕೂ ಭಾಜನರಾದರು.ತಮ್ಮ ಸಂಗೀತ ಸಾಧನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಅವರು 2004ರ ಡಿಸೆಂಬರ್ 11ರಂದು ಚೆನ್ನೈನಲ್ಲಿ ನಿಧನರಾದರು.






