ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನವನ್ನೂ ಉಳಿಸಿಕೊಳ್ಳಲು ಅಶಕ್ತರಾದ ಕೇಶವಪ್ರಸಾದ್ ಮೌರ್ಯ ಅವರನ್ನು ಬಿಜೆಪಿ ಹೈಕಮಾಂಡ್, ಉತ್ತರ ಪ್ರದೇಶ ಉಪಮುಖ್ಯಮಂತ್ರಿಯಾಗಿ ಮುಂದುವರೆಸಿದೆ. ಯೋಗಿ ನೇತೃತ್ವದ ಸಚಿವ ಸಂಪುಟದಲ್ಲಿ ಮೌರ್ಯ ಅವರಿಗೆ ಸ್ಥಾನ ನೀಡಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಬಿಸಿ ಮತಗಳನ್ನು ಸೆಳೆಯುವ ತಂತ್ರ ಬುಜೆಪಿ ಹೈಕಮಾಂಡಿದ್ದು.
ಅಪ್ನಾ ದಳ (ಕಮೇರವಾಡಿ) ಪಕ್ಷದ ಪಲ್ಲವಿ ಪಟೇಲ್ ಅವರ ವಿರುದ್ದ ಕೇಶವಪ್ರಸಾದ್ ಮೌರ್ಯ ಚುನಾವಣೆಯನ್ನು ಸೋತಿದ್ದರು. ಈ ಕಾರಣಕ್ಕೆ ಬಹುತೇಕ ಬಿಜೆಪಿ ನಾಯಕರು, ಕೇಶವ ಪ್ರಸಾದ್ ಮೌರ್ಯ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಅವರನ್ನು ಸಂಸತ್ತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದರು. ಆದರೆ, ಅವರ ಆಗ್ರಹವನ್ನು ಸಾರಸಗಟಾಗಿ ತಿರಸ್ಕರಿಸಿರುವ ಮೌರ್ಯ, ತಾನು ರಾಜ್ಯ ರಾಜಕಾರಣದಿಲ್ಲಿಯೇ ಮುಂದುವರೆಯುವುದಾಗಿ ಹೇಳಿದ್ದಾರೆ.
ಯಾದವಯೇತರ ಮತ ಬ್ಯಾಂಕ್ ಸೆಳೆಯಲು ಸಮಾಜವಾದಿ ಪಕ್ಷ ತೀವ್ರವಾಗಿ ಪ್ರಯತ್ನ ಪಡುತ್ತಿದೆ. ಬಿಜೆಪಿಯ ಒಬಿಸಿ ಮುಖಂಡ ಎಂದೇ ಪ್ರಖ್ಯಾತರಾಗಿರುವ ಮೌರ್ಯ ಅವರು, ಈ ಮತಬ್ಯಾಂಕ್ ಅನ್ನು ಬಿಜೆಪಿಯೊಂದಿಗೆ ಉಳಿಸಿಕೊಳ್ಳಲು ಸಹಕಾರಿ ಎಂದು ಹೈಕಮಾಂಡ್ ಅರಿತಿದೆ. ಒಂದು ವೇಳೆ, ಮುಂದಿನ ಲೋಕಸಭಾ ಚುನಾವಣೆವರೆಗೆ ಮೌರ್ಯ ಅವರು ರಾಜಕಾರಣದ ಹಿನ್ನೆಲೆಗೆ ಸರಿದುಬಿಟ್ಟರೆ, ಒಬಿಸಿ ಮತಗಳು ಕೈತಪ್ಪುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ, ಒಬಿಸಿ ನಾಯಕನ ಮುಖವನ್ನು ಮತದಾರರು ಪ್ರತಿದಿನ ಗಮನಿಸುವಂತೆ ಅವರನ್ನು ಡಿಸಿಎಂ ಆಗಿ ಮುಂದುವರೆಸಲಾಗಿದೆ.
ಉತ್ತರ ಪ್ರದೇಶದಲ್ಲಿ ಅತ್ಯಂತ ಪ್ರಮುಖವಾಗಿರುವ ಕಚ್ಚಿ, ಕುಶ್ವಾಹ, ಶಕ್ಯ, ಮೌರ್ಯ, ಸೈನಿ, ಮಾಲಿ ಸಮುದಾಯಗಳನ್ನು ಕೇಶವ ಪ್ರಸಾದ್ ಅವರು ಪ್ರತಿನಿಧಿಸುತ್ತಾರೆ. ಈ ಸಮುದಾಯಗಳು ಒಟ್ಟು ಒಬಿಸಿಯ ಶೇ. 6.69ರಷ್ಟು ಮತಗಳನ್ನು ಹೊಂದಿವೆ. ಸಂಪೂರ್ಣ ರಾಜ್ಯದಲ್ಲಿ ಶೇ. 43.13ರಷ್ಟು ಜನರು ಒಬಿಸಿ ಸಮುದಾಯಗಳಿಗೆ ಸೇರುತ್ತಾರೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಈ ಸಂಖ್ಯೆ ಶೇ. 54.05ರಷ್ಟಿದೆ ಎಂದು 2001ರ ಸಾಮಾಜಿಕ ನ್ಯಾಯ ಸಮಿತಿ ವರದಿ ತಿಳಿಸಿದೆ.

ಬಿಜೆಪಿಗೆ ಕುರ್ಮಿ ಸಮುದಾಯವನ್ನು ಪ್ರತಿನಿಧಿಸುವ ಸಮರ್ಪಕ ನಾಯಕ ಇನ್ನೂ ಲಭಿಸಿಲ್ಲ. ಈ ಸಮುದಾಯವು ಈಗ ಸಮಾಜವಾದಿ ಪಕ್ಷದ ಪ್ರಮುಖ ಮತಬ್ಯಾಂಕ್ ಆಗಿದೆ. ಯಾದವರನ್ನು ಹೊರತುಪಡಿಸಿದರೆ, ಕುರ್ಮಿ ಸಮುದಾಯವು ಒಬಿಸಿ ಅಡಿ ಬರುವ ಎರಡನೇ ಅತಿ ದೊಡ್ಡ ಸಮುದಾಯ. ಈ ಕಾರಣದಿಂದಾಗಿಯೇ, ಹಿಂದಿನ ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲವರು ಈ ಬಾರಿ ಎಸ್.ಪಿ. ಅಭ್ಯರ್ಥಿ ಎದುರು ಸೋಲನ್ನಪ್ಪಿದ್ದಾರೆ. ಇವರಲ್ಲಿ ಕೇಶವಪ್ರಸಾದ್ ಮೌರ್ಯ ಕೂಡಾ ಒಬ್ಬರು.
ಚುನಾವಣೆಗೂ ಮೊದಲೇ ಬಿಜೆಪಿ ತೊರೆದಿದ್ದ ಕೇಶವಪ್ರಸಾದ್ ಮೌರ್ಯ ಆಪ್ತರಾದ ಸ್ವಾಮಿಪ್ರಸಾದ್ ಮೌರ್ಯ, ಕೇಶವಪ್ರಸಾದರನ್ನು ಅಸಹಾಯಕ ನಾಯಕ ಎಂದು ಕರೆದಿದ್ದರು. ಇನ್ನು, ಬಿಜೆಪಿಯ ಮಿತ್ರಪಕ್ಷವಾದ ಅಪ್ನಾ ದಳ (ಸೋನೆಲಾಲ್)ನ ಮತದಾರರು ಕೂಡಾ ಬಿಜೆಪಿಗೆ ಸಹಕಾರ ನೀಡಲಿಲ್ಲ. ಇದು ಕೇಶವಪ್ರಸಾದ್ ಮೌರ್ಯ ಅವರಿಗೆ ಮುಳುವಾಗಿ ಪರಿಣಮಿಸಿತು.
ಇಷ್ಟಾದರೂ, ಕೇಶವಪ್ರಸಾಧ್ ಮೌರ್ಯ ಅವರು ತಮ್ಮ ಡಿಸಿಎಂ ಹುದ್ದೆಯನ್ನು ಜಾತಿ ಲೆಕ್ಕಾಚಾರದ ಆಧಾರದಲ್ಲಿ ಉಳಿಸಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ವೇಳೆ, ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತದೆಯೋ, ಅಥವಾ ರಾಜ್ಯ ರಾಜಕಾರಣದಲ್ಲಿಯೇಅವರು ಮುಂದುವರೆಯುತ್ತಾರೆಯೋ ಎಂದು ನೋಡಬೇಕಿದೆ.