ಪೆಟ್ರೋಲ್, ಡಿಸೇಲ್, ಖಾತ್ಯ ತೈಲಗಳ ಬೆಲೆ ಏರಿಕೆ ನಂತರ ಈಗ ಜೀವರಕ್ಷಕ ಔಷಧಗಳ ಸರದಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಸುಮಾರು 800 ಔಷಧಿಗಳ ದರ ಏರಿಕೆ ಮಾಡಲಿದೆ. ಇದು ದೇಶದ ಜನತೆಗೆ ಕೇಂದ್ರ ಸರ್ಕಾರದ ಯುಗಾದಿ ಹಬ್ಬದ ಉಡುಗೊರೆ.
ಬೆಲೆ ಏರಿಕೆ ಪ್ರಮಾಣ ಶೇ.10.7ರಷ್ಟಾಗಲಿದೆ. ಇದು ಸರಾಸರಿ ಪ್ರಮಾಣ. ಕೆಲವು ಔಷಧಗಳ ಬೆಲೆ ಶೇ.20ರಷ್ಟರವರೆಗೂ ಏರಬಹುದು, ಕೆಲವುಗಳ ಬೆಲೆಯು ಶೇ.5ರಷ್ಟೂ ಇರಬಹುದು.
ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್ಪಿಪಿಎ) ಬೆಲೆ ಏರಿಕೆ ಮಾಡುವ ನಿರ್ಧಾರವನ್ನು ಶುಕ್ರವಾರ ಪ್ರಕಟಿಸಿದೆ. ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಶೇ.10.7ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಕೆಲವು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಓಐಇಒ ನಲ್ಲಿ ಸುಮಾರು 800 ನಿಗದಿತ ಔಷಧಿಗಳ ದರಗಳು ಏಪ್ರಿಲ್ 1 ರಿಂದ ಶೇ.10.7 ರಷ್ಟು ಏರಿಕೆಯಾಗುತ್ತವೆ.
ಔಷಧಗಳ(ಬೆಲೆ ನಿಯಂತ್ರಣ) ಆದೇಶ, 2013 ರ ನಿಬಂಧನೆಗಳ ಪ್ರಕಾರ ಮುಂದಿನ ಕ್ರಮಕ್ಕಾಗಿ ಇದನ್ನು ಸಂಬಂಧಪಟ್ಟ ಎಲ್ಲರ ಗಮನಕ್ಕೆ ತರಲಾಗಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಪ್ಯಾರಾಸುಟಮಲ್, ಅಜಿಥ್ರೊಮೈಸಿನ್, ಫೆನೋಬಾರ್ಬಿಟೋನ್, ಸಿಪ್ರೊಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್, ಫೆನಿಟೋಯಿನ್ ಸೋಡಿಯಂ ಮತ್ತು ಮೆಟ್ರೋನಿಡಜೋಲ್ ನಂತಹ ಅಗತ್ಯ ಔಷಧಗಳೂ ದುಬಾರಿಯಾಗಲಿವೆ.
ಆ್ಯಂಟಿಬಯೋಟಿಕ್ಸ್, ಉರಿಯೂತ ನಿವಾರಕ ಔಷಧಿಗಳು, ಕಿವಿ-ಮೂಗು ಮತ್ತು ಗಂಟಲು ಔಷಧಿಗಳು, ನಂಜುನಿರೋಧಕಗಳು, ನೋವು ನಿವಾರಕಗಳು, ಜಠರಗರುಳಿನ ಔಷಧಿಗಳು ಮತ್ತು ಆಂಟಿಫಂಗಲ್ ಔಷಧಿಗಳಂತಹ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ (ಎನ್ಇಎಲ್ಎಂ) ಸೇರ್ಪಡೆಗೊಂಡಿರುವ ಔಷಧಿಗಳ ಬೆಲೆಯಲ್ಲಿ ತೀವ್ರ ಏರಿಕೆ ಯಾಗಲಿದೆ.
ಹಲವು ವರ್ಷಗಳ ನಂತರ ನಿಗದಿತ ಔಷಧಿಗಳಲ್ಲಿ ಈ 10% ಹೆಚ್ಚಳವಾಗಿದೆ ಎಂದು ಹೇಳುವ ಮೂಲಕ ಸರ್ಕಾರದ ನಿರ್ಧಾರವನ್ನು ಔಷಧೀಯ ಉದ್ಯಮವು ಸ್ವಾಗತಿಸಿದೆ.
ಹಣದುಬ್ಬರದ ವಿಷವೃತ್ತ
ಸಗಟುದರ ಬೆಲೆ ಸೂಚ್ಯಂಕ ಏರಿಕೆಯಾಗಿದೆ ಎಂಬ ಕಾರಣಕ್ಕೆ ದರ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಗಟುದರ ಬೆಲೆ ಸೂಚ್ಯಂಕ ಏರಿಕೆಯಾಗಿದೆ ಎಂದರೆ ಹಣದುಬ್ಬರ ಹೆಚ್ಚಾಗಿದೆ ಎಂದೇ ಅರ್ಥ. ಹಣದುಬ್ಬರ ನಿಯಂತ್ರಿಸಬೇಕಾದ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಮತ್ತಷ್ಟು ಹಣದುಬ್ಬರ ಏರಲು ಕಾರಣವಾಗುತ್ತಿದೆ.
ಸಗಟುದರ ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಿದರೆ, ಚಿಲ್ಲರೆ ದರ ಬೆಲೆ ಸೂಚ್ಯಂಕವೂ ಏರುತ್ತದೆ. ಅಂದರೆ, ಚಿಲ್ಲರೆ ದರ ಹಣದುಬ್ಬರ ಮತ್ತಷ್ಟು ಜಿಗಿಯುತ್ತದೆ.
ಈಗಾಗಲೇ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ ಹಾಕಿಕೊಂಡಿರುವ ಗರಿಷ್ಠ ಮಿತಿಯಾದ ಶೇ.6ರ ಗಡಿದಾಟಿದೆ. ಈ ನಡುವೆ ಪೆಟ್ರೋಲ್, ಡೀಸೆಲ್, ಖಾದ್ಯ ತೈಲ ಸೇರಿದಂತೆ ಹಲವು ವಸ್ತುಗಳ ದರ ಏರಿಕೆಯಾಗಿರುವುದರಿಂದ ಮಾರ್ಚ್ ತಿಂಗಳ ಚಿಲ್ಲರೆ ದರ ಹಣದುಬ್ಬರ ಮತ್ತು ಸಗಟುದರ ಹಣದುಬ್ಬರ ಮತ್ತಷ್ಟು ಜಿಗಿಯಲಿದೆ. ಏಪ್ರಿಲ್ ತಿಂಗಳಲ್ಲಿ ಔಷಧಗಳ ದರ ಏರಿಕೆಯಾಗುವುದರಿಂದ ಮತ್ತು ಪೆಟ್ರೋಲ್ ಹಾಗೂ ಡಿಸೇಲ್ ದರ ಏರುತ್ತಲೇ ಇರುವುದರಿಂದ ಏಪ್ರಿಲ್ ತಿಂಗಳ ಹಣದುಬ್ಬರವು ನಿರೀಕ್ಷೆ ಮೀರಿ ಏರಿಕೆಯಾಗಲಿದೆ.
ಹಣದುಬ್ಬರ ಏರಿಕೆಯಾದಂತೆ ವಸ್ತುಗಳು ಗ್ರಾಹಕರ ಕೈಗೆಟುಕದಂತಾಗುತ್ತವೆ. ಸಹಜವಾಗಿ ಜನರ ಖರೀದಿ ಶಕ್ತಿ ಕುಂದುವುದರಿಂದ ಅದು ನೇರವಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ದೇಶದ ಜಿಡಿಪಿ ಬೆಳವಣಿಗೆ ಕುಗ್ಗುತ್ತದೆ.
ಹಣದುಬ್ಬರ ನಿಯಂತ್ರಣ ಮಾಡುವ ಇರಾದೆ ಸರ್ಕಾರಕ್ಕೆ ಇದ್ದರೆ, ಔಷಧಗಳ ದರ ಏರಿಕೆಯನ್ನು ಮಾಡಲೇಬಾರದಿತ್ತು.