ನಾನು ಬರೆದ ”ಬಾಂಬೆ ಡೇಸ್” ಪುಸ್ತಕ ಬಿಡುಗಡೆ ಮಾಡದಂತೆ ಒತ್ತಡ ಬರುತ್ತಿದೆ. ಆದರೂ ಚುನಾವಣೆಯೊಳಗೆ ಯಾವಾಗ ಬೇಕಾದರೂ ಬಿಡುಗಡೆಯಾಗಬಹುದು ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶನಿವಾರ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕದಲ್ಲಿ ಮೈತ್ರಿ ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆ, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ದಿನಗಳವರೆಗೂ ದಾಖಲಿಸಿದ್ದೇನೆ. ಬಾಂಬೆಗೆ ಬಂದಿದ್ದವರು ಬಿಡುಗಡೆ ಮಾಡಬೇಡಿ ಅಂತಿದ್ದಾರೆ, ಅಷ್ಟೇ ಏಕೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಕೆಲವರಿಂದಲೂ ಒತ್ತಡ ಇದೆ ಎಂದರು.
ಪುಸ್ತಕ ಬಿಡುಗಡೆಯಾದರೆ ಮೂರೂ ಪಕ್ಷಗಳ ನಾಯಕರು ಬೆತ್ತಲಾಗುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಮೂವರ ಬಣ್ಣ ಬಯಲಾಗಲಿದೆ ಎಂದರು.
ನಾವು ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದೇವೆ ಎಂಬ ಅಪಪ್ರಚಾರ ನಡೆದಿದೆ. ಯಾರಿಗೂ ಬ್ಲಾಕ್ ಮೇಲ್ ಮಾಡಲು ಪುಸ್ತಕ ಬರೆದಿಲ್ಲ. ವಸ್ತುಸ್ಥಿತಿಯನ್ನ ಜನರಿಗೆ ತಿಳಿಸಲು ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ ಎಂದರು.