ನವದೆಹಲಿ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ (AITC) ಪಕ್ಷದ ಹೆಸರು ಹಾಗೂ ‘ಹೂವು ಮತ್ತು ಹುಲ್ಲು’ ಮೀಸಲು ಚುನಾವಣಾ ಚಿಹ್ನೆಯನ್ನು ಎರಡೂ ಬಣಗಳು ಬಳಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಬಣ ಹಾಗೂ ಅರೂಪ್ ರಾಯ್–ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣಗಳು ತಾವೇ ನಿಜವಾದ ತೃಣಮೂಲ ಕಾಂಗ್ರೆಸ್ ಎಂದು ಹಕ್ಕು ಮಂಡಿಸಿರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ. ಪಕ್ಷದ ಸಂಘಟನಾ ನಿಯಂತ್ರಣ, ರಾಷ್ಟ್ರೀಯ ಕಾರ್ಯಕಾರಿಣಿಯ ಅಧಿಕಾರ ಮತ್ತು ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳ ನಡುವೆ ವಿವಾದ ಮುಂದುವರಿದಿದೆ.

ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೇಜಿನಗರ್ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ. ವಿವಾದದ ಕುರಿತು ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾ 15ರ ಅಡಿಯಲ್ಲಿ ಸಮಗ್ರ ತೀರ್ಮಾನ ಕೈಗೊಳ್ಳಲು ಸಮಯ ಬೇಕಾಗಿರುವುದರಿಂದ, ಉಪಚುನಾವಣೆ ನಡೆಯುವವರೆಗೆ ಎರಡೂ ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಮುಕ್ತ ಚಿಹ್ನೆ ನೀಡುವ ಮಧ್ಯಂತರ ವ್ಯವಸ್ಥೆಯನ್ನು ಆಯೋಗ ಮಾಡಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಎರಡೂ ಬಣಗಳು ಪರ್ಯಾಯ ಹೆಸರು ಮತ್ತು ಚಿಹ್ನೆಗಳ ಆಯ್ಕೆಗಳನ್ನು ಸಲ್ಲಿಸಿದ ಬಳಿಕ, ಶುಕ್ರವಾರ ಆಯೋಗವು ತಾತ್ಕಾಲಿಕ ಹೆಸರು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿದೆ.ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರನ್ನು ಹಾಗೂ ‘ಫುಟ್ಬಾಲ್ ಆಟಗಾರ’ ಚಿಹ್ನೆಯನ್ನು ನೀಡಲಾಗಿದೆ.

ಅರೂಪ್ ರಾಯ್ ಅಧ್ಯಕ್ಷರಾಗಿರುವ, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಹಾಗೂ ‘ಎನ್ವಲಪ್’ (ಲಕೋಟೆ) ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ. ಈ ಹೆಸರು ಮತ್ತು ಚಿಹ್ನೆಗಳು ಮುಂಬರುವ ಉಪಚುನಾವಣೆಗಳ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ಅನ್ವಯಿಸಲಿವೆ.
ಅಂತಿಮ ತೀರ್ಮಾನ ಬರುವವರೆಗೆ ಎರಡೂ ಬಣಗಳು ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಹೆಸರನ್ನು ಅಥವಾ ಪಕ್ಷದ ಸಾಂಪ್ರದಾಯಿಕ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ಬಳಸುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಎರಡೂ ಬಣಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಹಾಗೂ ಉಪಚುನಾವಣೆಯಲ್ಲಿ ಮತದಾರರಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಮಧ್ಯಂತರ ಕ್ರಮದ ಉದ್ದೇಶವಾಗಿದೆ ಎಂದು ಆಯೋಗ ತಿಳಿಸಿದೆ.
ಪಕ್ಷದ ನಿಜವಾದ ಸಂಘಟನಾ ನಿಯಂತ್ರಣ ಯಾರ ಬಳಿ ಇದೆ ಎಂಬುದರ ಕುರಿತು ಚುನಾವಣಾ ಆಯೋಗವು ಮುಂದಿನ ಹಂತದಲ್ಲಿ ಪ್ಯಾರಾ 15ರ ಅಡಿಯಲ್ಲಿ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅಲ್ಲಿಯವರೆಗೆ ಎರಡೂ ಬಣಗಳು ಪ್ರತ್ಯೇಕ ಗುರುತಿನೊಂದಿಗೆ ಉಪಚುನಾವಣೆಯನ್ನು ಎದುರಿಸಲಿವೆ. ಈ ಬೆಳವಣಿಗೆಯಿಂದ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ತೃಣಮೂಲ ಕಾಂಗ್ರೆಸ್ನ ಹೆಸರು ಮತ್ತು ಚುನಾವಣಾ ಚಿಹ್ನೆ ಕುರಿತ ವಿವಾದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.






